Homeಅಂಕಣಗಳುಆಘಾತವಾಣಿ : ಅಟ್ಯಾಕ್ ಹನ್ಮಂತ

ಆಘಾತವಾಣಿ : ಅಟ್ಯಾಕ್ ಹನ್ಮಂತ

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.

ಜಯನಗರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಸಾವಿನಿಂದಾಗಿ ಮುಂದೂಡಲ್ಪಟ್ಟ ಚುನಾವಣೆಯ ಫಲಿತಾಂಶದಲ್ಲಿ ಹೀನಾಯವಾಗಿ ಸೋತುಹೋದ ಕಾರಣದಿಂದ ಸನ್ಮಾನ್ಯ ಧಡಿಯೂರಪ್ಪನವರ ಎದೆ ಧಸಕ್ ಪುಸುಕ್ ಎಂದ ಸುದ್ದಿ ಬಂದಿದೆ. ಈ ಚಿಂತಾಜನಕ ಸಂದರ್ಭದಲ್ಲಿ ಮನೆ ಸೇರಿಕೊಂಡಿರೋ ಧಡಿಯೂರಪ್ಪನವರು ನಾನು ಯಾರಿಗೂ ಮುಖ ತೋರಿಸೋದಿಲ್ಲವೆಂದು ಕಂಬಳಿ ಹೊದ್ದು ಕಾಲೆತ್ತಿಕೊಂಡು ಮಲಗಿದ್ದಾರೆ. ಮಾತನಾಡಿಸಿ ಪ್ರತಿಕ್ರಿಯೆ ಕೇಳಲು ಹೋದ ಮಾಧ್ಯಮದವರ ಮೇಲೆ ನಾಯಿ ಛೂಬಿಟ್ಟು ಓಡಿಸಲು ತಮ್ಮ ಸಹಾಯಕರಿಗೆ ತಿಳಿಸಿರುವ ಅವರು, ತಮ್ಮ ಪಕ್ಷದ ಮುಖಂಡರು ಬಂದರೆ ಅವರನ್ನು ನೆಲಕ್ಕೆ ಕೆಡವಿ, ಅವರ ಮುಖ ಮತ್ತು ಹೊಟ್ಟೆಗೆ ಕಚ್ಚಿ ಓಡಿಸಲು ತಮ್ಮ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆಂದು ಸುದ್ದಿಮೂಲಗಳು ಸ್ಪಷ್ಟ ಪಡಿಸಿವೆ. ಹಾಸಿಗೆ ಹಿಡಿದಿರುವ ಧಡಿಯೂರಪ್ಪನವರಿಗೆ ಸ್ಕೋಪಕ್ಕ ತಮ್ಮ ಸೆರಗಿನಿಂದ ಗಾಳಿ ಬೀಸಿಕೊಂಡು ಶುಶ್ರೂಷೆ ಮಾಡುತ್ತಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

****

ನೋಟ್ ಬ್ಯಾನ್‍ನಿಂದಾಗಿ ದೇಶದಲ್ಲಿ ಭಯೋತ್ಪಾದಕರು, ನಕ್ಸಲೈಟರೆಲ್ಲರೂ ಕೈಯಲ್ಲಿ ಕಾಸಿಲ್ಲದೆ ಸಾಮೂಹಿಕವಾಗಿ ಶಸ್ತ್ರತ್ಯಾಗ ಮಾಡಿ ತಪಸ್ಸಿಗೆ ಕುಳಿತುಬಿಟ್ಟಿದ್ದಾರೆ ಎಂದಿದ್ದ ಫೇಕಪ್ಪನ ಸುಳ್ಳು ಮತ್ತೊಮ್ಮೆ ಮಕಾಡೆ ಮಲಗಿದೆ. ನಕ್ಸಲೈಟರು ಫೇಕಪ್ಪನನ್ನು ಕೊಲ್ಲಲು ಸಂಚು ಮಾಡಿದ್ದಾರೆ, ಇದರ ಬಗ್ಗೆ ನಕ್ಸಲೈಟರು “ಪಕೋಡೇಂದ್ರ ಮಟ್ಯಾಶ್ ಸ್ವಾಹ” ಎಂಬ ಕಾದಂಬರಿಯನ್ನು ಬರೆದು, ಅದರಲ್ಲಿ ತಮ್ಮ ಒರಿಜಿನಲ್ ಹೆಸರುಗಳನ್ನೂ ಬರೆದು ಪೊಲೀಸರ ಕೈಗೆ ಸಿಗುವಂತೆ ಇಟ್ಟಿದ್ದಾರೆ ಎಂಬ ನಗೆಪಾಟಲು ಪ್ರಚಾರಕ್ಕೆ ಫೇಕಪ್ಪ ಇಳಿದಿರುವುದು ಇದಕ್ಕೆ ಪುಷ್ಟಿ ನೀಡಿದೆ. ನನ್ನನ್ನ ಸಾಯಿಸ್ತಾರೆ, ಆದ್ರಿಂದ ಓಟು ಕೊಡಿ ಅಂತ ಗೋಳಾಡ್ತಿರೋ ಫೇಕಪ್ಪನ 3ನೇ ದರ್ಜೆ ಡ್ರಾಮೇಬಾಜಿ ಸರ್ಕಸ್ಸಿಗೆ ಜನ ಬಿದ್ದೂ ಬಿದ್ದೂ ನಗುತ್ತಿದ್ದಾರೆಂದು ತಿಳಿದುಬಂದಿದೆ.

****

ಸಲ್ಮಾನ್ ಖಾನ್ ‘ಚುಲ್‍ಬುಲ್ ಪಾಂಡೆ’ ಅವತಾರದಲ್ಲಿ ದಬಾಂಗ್ ಚಿತ್ರದಲ್ಲಿ ರಂಜಿಸಿದ ನಂತರ ಅದೇ ರೇಂಜಿಗೆ ‘ಬೋಂಡಾ ಪಾಂಡೆ’ ಎಂದು ರಾಜ್ಯದಾದ್ಯಂತ ಫೇಮಸ್ಸಾಗಿರುವ ಆರುವಿ ದೋಶಪಾಂಡೆ ಬಗ್ಗೆ ಹೊಸ ಸುದ್ದಿಯೊಂದು ಲಭ್ಯವಾಗಿದೆ. ಉದ್ಯೋಗಕ್ಕಾಗಿ ನಮ್ಮನ್ನು ನೆಚ್ಚಿಕೊಳ್ಳಬೇಡಿ, ಬೋಂಡಾ ಬಜ್ಜಿ ಮಾರುವ ಗೌರವಯುತ ಕೆಲಸ ಮಾಡಿ ಕೋಟಿಗಟ್ಟಲೆ ಸಂಪಾದನೆ ಮಾಡಿ ಎಂದು ಶ್ರೀ ಬೋಂಡಾಪಾಂಡೆಯವರು ವದರಿದ್ದಾರೆ. ಈ ತಲೆಕೆಟ್ಟ ಹೇಳಿಕೆಯ ಗಮನಿಸಿದರೆ, ‘ಉದ್ಯೋಗ ಕೊಟ್ಟು ಸಾಯ್ರಿ’ ಎಂಬ ಜನರ ಬೇಡಿಕೆಗೆ ಪಕೋಡ ಮಾರಿ, ಪಂಚರ್ ಹಾಕಿ ಅಂತ ಬಡಬಡಿಸುತ್ತಿದ್ದ ಫೇಕೇಂದ್ರನೇನಾದ್ರೂ ಈ ‘ದೋಶಪಾಂಡೆ’ಯ ಆಯಕಟ್ಟಿನ ಭಾಗಕ್ಕೆ ಕಚ್ಚಿರಬಹುದಾ ಎಂಬ ಅನುಮಾನ ಎಲ್ಲೆಡೆ ವ್ಯಕ್ತವಾಗಿದೆ.

****

ಗೌರಿ ಲಂಕೇಶ್ ಹತ್ಯೆಯ ಒಬ್ಬೊಬ್ಬ ಪಾತಕಿಗಳನ್ನೂ ಎರಡೂ ಕಾಲಿಗೆ ಹಗ್ಗ ಕಟ್ಟಿ ಸತ್ತನಾಯಿಗಳಂತೆ ದರದರ ಎಳೆದು ತಂದು ರುಬ್ಬುತ್ತಿರುವ ರಾಜ್ಯದ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ ಜನರ ಪ್ರಶಂಸೆಗೆ ಪಾತ್ರವಾಗಿದೆ. ರೌಡಿಗಳು ಕೊಲೆಗಡುಕರ ಕೈಗೆ ಧರ್ಮದ ಹೆಂಡ ಕೊಟ್ಟು ತಮಗಾಗದವರನ್ನು ಕೊಲ್ಲಿಸೋ ಸಣಕಲು ತೊಡೆಯ ಹೇಡಿಪಡೆಗಳ ಪಂಚೆ ಲಳಲಳನೆ ಒದ್ದೆಯಾಗುತ್ತಿರುವುದು ಕೇಳಿಬರುತ್ತಿದೆ. ಗೌರಿಹತ್ಯೆಯ ಕೇಸಿನಲ್ಲಿ ಆ ಸೇನೆ ಈ ಸೇನೆ, ಈ ಜಾಗೃತಿ, ಆ ವಿಕೃತಿ ಅಂತ ಮಕಮೂತಿ ನೋಡದೇ ಎಸ್.ಐ.ಟಿ ತಂಡವು ಒಬ್ಬೊಬ್ಬರನ್ನೇ ಹಿಡಿದುತಂದು ಬೋನಿಗೆ ಬಿಸಾಕುತ್ತಿದ್ದರೆ, ಅತ್ತ ದಾಬೋಲ್ಕರ್, ಪನ್ಸಾರೆ ಕೊಲೆ ಕೇಸನ್ನು ಏನೋ ಕಿತ್ತು ದಬಾಕ್ತೀವಿ ಎಂದು ಕೈಗೆತ್ತಿಕೊಂಡ ಸಿಬಿಐ ಪೊಮೇರಿಯನ್‍ಗಳು ಸರ್ಕಾರಿ ದುಡ್ಡಲ್ಲಿ ಕುಷ್ಕ ಕಬಾಬ್ ಮುಕ್ಕಿಕೊಂಡು ಓತ್ಲಾ ಹೊಡೆಯುತ್ತಿದ್ದಾರೆಂದು ಜನರು ಆಡಿಕೊಂಡು ನಗುತ್ತಿರುವ ವರದಿಗಳು ಬರುತ್ತಿವೆ.

****

ಭೂಮಿಯ ಮೇಲೆ ಇನ್ನೆಲ್ಲೂ ಕಾಣಸಿಗದ ಮಾಸ್ಟರ್ ಪೀಸ್ ಮೆಂಟ್ಲು ಗಿರಾಕಿಗಳಾದ ಉತ್ತರ ಕೊರಿಯಾದ ಕಿಮ್‍ಜಾಂಗ್ ಉನ್ನೇಶ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪೇಶ ಅವರು ಸಿಂಗಪೂರ್‍ನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ‘ನಿನ್ ಮೇಲೆ ನಾನು ಬಾಂಬ್ ಹಾಕಲ್ಲ, ನನ್ ಮೇಲೆ ನೀನು ಬಾಂಬ್ ಹಾಕ್ಬೇಡ’ ಅಂತ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಐತಿಹಾಸಿಕ ತಲೆತಿಕ್ಕಲರ ಸಂಗಮದಲ್ಲಿ ನಮ್ ಹಾಫ್ ಮೆಂಟ್ಲು ಫೇಕಪ್ಪನೂ ಇದ್ದಿದ್ರೆ ಈ ಶುದ್ದ ಮುಠ್ಠಾಳರ ಸಮ್ಮೇಳನ ಸಂಪೂರ್ಣವಾಗುತ್ತಿತ್ತೆಂದು ತೇಜಾವರ ಶ್ರೀಗಳು ನಿದ್ದೆಯಲ್ಲೇ ಕಣ್ಣನ್ನೆಲ್ಲ ತೇವ ಮಾಡಿಕೊಂಡು ಕನವರಿಸಿಕೊಳ್ಳುತ್ತಿದ್ದರೆಂದು ಅವರ ಕಾರ್ ಡ್ರೈವರ್ ಫೇಸ್ಬುಕ್ಕಲ್ಲಿ ಪೋಸ್ಟ್ ಹಾಕಿದ್ದಾನೆ.

****

ಹೋರಿಯ ಹಿಂದೆ ನಡೆಯುತ್ತ ಅದರ ಯಾವುದಾದರೊಂದು ಪಾರ್ಟು ಲೂಸಾಗಿ ಕಳಚಿಕೊಂಡು ಉದುರಬಹುದೆಂದು ಆಸೆಯಿಂದ ಫಾಲೋ ಮಾಡುತ್ತಿರೋ ಗುಳ್ಳೆನರಿಯಂತೆ ಧಡಿಯೂರಪ್ಪನವರು ರಾಜ್ಯದ ಬೆರಕೆ ಸರ್ಕಾರದ ಹಿಂದೆ ಬಿದ್ದಿರುವುದು ತಿಳಿದ ಸಂಗತಿ. ದಿನಕಳೆದಂತೆ ಬೆರಕೆ ಸರ್ಕಾರದ ಮಂದಿ ಕೇರಳದ ಮಾಟಮಂತ್ರ ತಜ್ಞರೂ ನಾಚಿ ನೀರಾಗುವ ಹಾಗೆ ಬುರುಡೆ ಮಂತ್ರವಾದಿಗಳಂತೆ ಆಡುತ್ತಿರುವುದನ್ನು ಕಂಡು ಧಡಿಯೂರಪ್ಪ ಗಾಬರಿಯಾಗಿದ್ದಾರೆಂದು ಸುದ್ದಿ ಲಭ್ಯವಾಗಿದೆ. ತಮ್ಮ ಪಕ್ಷವೇ ಅಧಿಕಾರದಲ್ಲಿದ್ರೆ ಏನೇನು ನೌಟಂಕಿ ಆಟವಾಡುತ್ತಿದ್ದೆವೋ, ಅದೆಲ್ಲವನ್ನೂ ತಮ್ಮ ಎದುರಾಳಿಗಳೇ ಕಚ್ಚೆ ಬಿಚ್ಚಿಕೊಂಡು ಆಡುತ್ತಿರುವುದನ್ನು ಕಂಡು ಧಡಿಯೂರಪ್ಪ, ತಮ್ಮ ಪಕ್ಷದೋರು ಯಾರು? ಬೆರಕೆ ಸರ್ಕಾರದ ಪಕ್ಷದೋರು ಯಾರು? ಎಂದು ಗುರುತಿಸಲಾಗದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆಂದು ಸ್ಕೋಪಕ್ಕನವರು ಚೀಟಿ ರೆವಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದಾರೆಂದು ಗೊತ್ತಾಗಿದೆ.

****

ಭೀಮ ಕೊರೆಗಾಂವ್ ಮೆರವಣಿಗೆಯಲ್ಲಿ ತನ್ನ ಪಟಾಲಂನಿಂದ ದಲಿತರ ಮೇಲೆ ಹಲ್ಲೆ ನಡೆಸಿದ್ದ ಮಹಾರಾಷ್ಟ್ರದ ಪೊರಕೆ ಮೀಸೆ ಸಂಘಿ ಮುದುಕನೊಬ್ಬ ತಾನು ತನ್ನ ತೋಟದಲ್ಲಿ ಬೆಳೆಯೋ ಮಾವಿನಹಣ್ಣು ತಿಂದ್ರೆ ಗಂಡು ಮಕ್ಕಳಾಗ್ತವೆ, ಅಂಥ ವಿಶೇಷ ಶಕ್ತಿ ತನ್ನ ಮ್ಯಾಂಗೋಗಳಿಗೆ ಇದೆಯೆಂದು ಕಕ್ಕಿಕೊಂಡಿದ್ದಾನೆ. ಸಂಘಿ ಮಂಗಿಗಳ ಈ ಮ್ಯಾಂಗೋ ಸಂತಾನ ಪ್ರಾಪ್ತಿ ಮ್ಯಾಜಿಕ್ ಥಿಯರಿ ಕೇಳಿದ ದೇಶದ ಜನರು ನಗಬಾರದ ಜಾಗದಲ್ಲೆಲ್ಲ ನಗುತ್ತ “ಅಲ್ಲಾ ಕಣೋ ಬುಡ್ಡಾ, ಮ್ಯಾಂಗೋ ತಿಂದ್ರೆ ಮಕ್ಕಳಾಗ್ತವೆ ಅಂದ್ರೆ ಜನ ಬಾಟಾ ಕಂಪನಿ ಮೆಟ್ಟು ತಗೊಂಡು ಅಟ್ಟಿಸಿಕೊಂಡು ಬಂದು ಬಡೀತಾರೆ” ಎಂದು ಆಡಿಕೊಳ್ಳುತ್ತಿರುವ ಸುದ್ದಿ ತಡವಾಗಿ ವರದಿಯಾಗಿದೆ. ಬೆದರಿದ ಸಂಘಿ ಮುದುಕನು ಮಹಾರಾಷ್ಟ್ರ ಸಿಎಂ ಭಡ್ನಊಸು ಕಚೇರಿಯ ಶೌಚಾಲಯದಲ್ಲಿ ಕದ್ದು ಕುಳಿತಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಇಲ್ಲಿಗೆ ಆಘಾತಕಾರಿ ಸುದ್ದಿಗಳನ್ನು ನಿಮ್ಮ ಮುಂದಿಡುವ ‘ಆಘಾತವಾಣಿ’ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಮುಂದಿನ ವಾರ. ನಮಸ್ತೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...