ಕಳೆದ ವಾರ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯಲ್ಲಿ 76 ಜನರು ಸಾವನ್ನಪ್ಪಿದ್ದರು. ಅವರ ಸಾವಿಗೆ ವಿದ್ಯುತ್ ಕಡಿತವು ಕಾರಣವಾಗಿದೆ ಎಂದು ಉತ್ತರ ಪ್ರದೇಶದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಬುಧವಾರ ಪಿಟಿಐ ವರದಿ ಮಾಡಿದ್ದಾರೆ.
ರಾಜ್ಯ ಸರ್ಕಾರವು ಸಾವಿನ ಕಾರಣ ಕಂಡುಹಿಡಿಯಲು ಜಿಲ್ಲೆಗೆ ಸಮಿತಿ ಕಳುಹಿಸಿತ್ತು. ಆ ಸಮಿತಿಯ ಸದಸ್ಯರೊಬ್ಬರಾದ ಎಕೆ ಸಿಂಗ್ ಅವರು, ”ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಟ್ರಾನ್ಸ್ಫಾರಮರ್ಗಳು ಸುಟ್ಟುಹೋಗಿವೆ. ವಿದ್ಯುತ್ ಲಭ್ಯತೆ ಮತ್ತು ಇತರ ಕಾರಣಗಳಿಂದಾಗಿ ಜನರ ಆರೋಗ್ಯ ಸ್ಥಿತಿ ಹದಗೆಟ್ಟಿದೆ” ಎಂದು ಹೇಳಿದರು.
”ರೋಗಿಯು ಜಿಲ್ಲಾ ಆಸ್ಪತ್ರೆಗೆ ತಲುಪಲು ಐದರಿಂದ ಆರು ಗಂಟೆಗಳ ಕಾಲ ತೆಗೆದುಕೊಂಡಿತು. ದಾಖಲಾದ ಒಂದು ಗಂಟೆಯೊಳಗೆ ಅವರು ಸಾವನ್ನಪ್ಪಿದ್ದಾರೆ” ಎಂದು ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದ ಹಲವಾರು ಭಾಗಗಳು ಬಿಸಿಗಾಳಿಯಿಂದಾಗಿ ಜೂನ್ 15ರಿಂದ ಬಲ್ಲಿಯಾದ ಜಿಲ್ಲಾ ಆಸ್ಪತ್ರೆಯಲ್ಲಿ 76 ಜನರು ಸಾವನ್ನಪ್ಪಿದ್ದಾರೆ ಎಂದು ಪಿಟಿಐ ವರದಿ ಮಾಡಿತ್ತು. ರಾಜ್ಯಾದ್ಯಂತ ವ್ಯಾಪಕ ವಿದ್ಯುತ್ ಕಡಿತದಿಂದ ರೋಗಿಗಳ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದೆ ಎಂದು ಕೂಡ ವರದಿಯಾಗಿತ್ತು.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮಿತಿ ಮೀರಿದ ಬಿಸಿಲಿನ ತಾಪ: ಸಾವಿನ ಸಂಖ್ಯೆ 68ಕ್ಕೆ ಏರಿಕೆ
ಬಯಲು ಪ್ರದೇಶಗಳಿಗೆ, ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾದಾಗ ಮತ್ತು ಸಾಮಾನ್ಯಕ್ಕಿಂತ ಕನಿಷ್ಠ 4.5 ಡಿಗ್ರಿಗಳಷ್ಟು ಹೆಚ್ಚಾದಾಗ ಬಿಸಿಗಾಳಿ ಬೀಸುತ್ತದೆ. ಆದಾಗ್ಯೂ, ಬಲ್ಲಿಯಾದಲ್ಲಿ ಸಂಭವಿಸಿದ ಸಾವುಗಳಿಗೆ ತೀವ್ರವಾದ ಶಾಖವೇ ಕಾರಣ ಎಂದು ತೋರಿಸಲು ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಗರದ ಮುಖ್ಯ ವೈದ್ಯಾಧಿಕಾರಿ ಜಯಂತ್ ಕುಮಾರ್ ಅವರು, ಬಿಸಿಗಾಳಿಯಿಂದ ಕೇವಲ ಎರಡು ಸಾವುಗಳು ಸಂಭವಿಸಿವೆ ಎಂದು ಹೇಳಿದ್ದಾರೆ.
ಈ ಸಾವುಗಳಿಗೆ ಬಿಸಿಗಾಳಿಯೇ ಕಾರಣವೆಂದು ಕಾರಣ ನೀಡಿದ್ದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರಾದ ದಿವಾಕರ್ ಸಿಂಗ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ. ಸಿಂಗ್ ಅವರು ಸರಿಯಾದ ಮಾಹಿತಿಯಿಲ್ಲದೆ ಅಸಡ್ಡೆ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ.