ಸದ್ಯದ ವ್ಯವಸ್ಥೆಯಲ್ಲಿ ಪ್ರಬಲರು ಮತ್ತು ಅಧಿಕಾರಸ್ಥ ಬಲಾಢ್ಯರನ್ನು ಎದುರು ಹಾಕಿಕೊಂಡ ಅಧಿಕಾರಿಗೆ ಹೆಚ್ಚಿನ ಅಧಿಕಾರವಿಲ್ಲದ ಜಾಗಕ್ಕೆ ವರ್ಗಾವಣೆ ಮಾಡುವುದು ವೃತ್ತಿ ರಾಜಕಾರಣದ ಭಾಗವೇ ಆಗಿದೆ. ಅದರಂತೆ ಬುಧವಾರದವರೆಗೂ ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿಯಾಗಿದ್ದ ಡಿ. ರೂಪಾ ಗುರುವಾರ ಮುಂಜಾನೆ ಹೊತ್ತಿಗೆ ಕರಕುಶಲ ನಿಗಮದ ಎಂ.ಡಿ. ಸ್ಥಾನಕ್ಕೆ ವರ್ಗಾವಣೆಗೊಂಡಿದ್ದಾರೆ.
ಅಂದಂತೆ ರೂಪಾರಿಗೆ ವರ್ಗಾವಣೆ ಹೊಸದೇನೂ ಅಲ್ಲ. ಅವರ ಸೇವಾವಧಿಯ ವರ್ಷಗಳ ಸಂಖ್ಯೆಗಿಂತ ಅವರ ವರ್ಗಾವಣೆಯ ಸಂಖ್ಯೆ ದುಪ್ಪಟ್ಟಾಗಿದೆ. ಅಂದರೆ, 20 ವರ್ಷಗಳಲ್ಲಿ ಅವರು 40 ಸಲ ವರ್ಗಾವಣೆಗೊಂಡಿದ್ದಾರೆ.
ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಹೇಮಂತ್ ನಿಂಬಾಳ್ಕರ್ (ಈಗ ಇವರನ್ನೂ ಈ ಹುದ್ದೆಯಿಂದ ವರ್ಗಾ ಮಾಡಲಾಗಿದೆ) ನಿರ್ಭಯಾ ನಿಧಿ ಅಡಿ ಕೈಗೊಳ್ಳಲಿರುವ ಬೆಂಗಳೂರು ಸುರಕ್ಷಾ ನಗರ ಪ್ರಾಜೆಕ್ಟ್ ಟೆಂಡರ್ನಲ್ಲಿ ಸ್ವ ಹಿತಾಸಕ್ತಿ ತೋರುವ ಮೂಲಕ ಪ್ರಾಜೆಕ್ಟ್ ವಿಳಂಬ ಮಾಡುತ್ತಿದ್ದಾರೆ ಎಂದು ರೂಪಾ ಅವರು ಪದೇ ಪದೇ ಆಕ್ಷೇಪಣೆ ಎತ್ತಿದ್ದೇ ಅವರ ವರ್ಗಾವಣೆಗೆ ಮೂಲ ಎನ್ನಲಾಗಿದೆ. ತಮ್ಮ ಅಧಿಕಾರ ವ್ಯಾಪ್ತಿಗೆ ಬರದಿದ್ದರೂ ರೂಪಾ ಅವರು ಟೆಂಡರ್ ವಿವರಗಳನ್ನು ಪಡೆಯಲು ಯತ್ನಿಸಿದ್ದರು ಎಂದು ನಿಂಬಾಳ್ಕರ್ ದೂರನ್ನೂ ದಾಖಲಿಸಿದ್ದರು.
ಈಗ ಆಗಿದ್ದು ಏನೆಂದರೆ, ಈ ಇಬ್ಬರನ್ನೂ ಬೇರೆ ಹುದ್ದೆಗೆ ವರ್ಗಾ ಮಾಡಿರುವ ಸರ್ಕಾರ, ಟೆಂಡರ್ ವಿವಾದ ಕುರಿತು ಏನನ್ನೂ ಹೇಳದೇ ಇರುವುದು. 2019ರಲ್ಲೇ ಮುಗಿಯಬೇಕಿದ್ದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದ್ದೇಕೆ? ರೂಪಾ ಮಾಡಿರುವ ಆರೋಪಗಳ ಕುರಿತು ಸರ್ಕಾರದ ನಿಲುವೇನು? ಇದು ಯಾವುದು ಸ್ಪಷ್ಟವಾಗಿಲ್ಲ.
ಒಟ್ಟಿನಲ್ಲಿ ವಿಶಲ್ ಬ್ಲೋ ಮಾಡಿದ ರೂಪಾ ಅಮೋಘ 40ನೆ ಬಾರಿಗೆ ವರ್ಗಾವಣೆಯಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಬಲರು ಮತ್ತು ಅಧಿಕಾರಸ್ಥ ಬಲಾಢ್ಯರ ಬಗ್ಗೆ ಪ್ರಶ್ನಿಸುವುದು ರಿಸ್ಕ್ ಕೆಲಸವೇ. ಆದರೂ ತಪ್ಪುಗಳಾದಾಗ ನಾನು ಧ್ವನಿ ಎತ್ತದೆ ಇರಲಾರೆ. ಆ ಹುದ್ದೆ ಈ ಹುದ್ದೆ ಯಾವುದೇ ಹುದ್ದೆ ಇರಲಿ ನಾನು ನನ್ನ ಬದ್ಧತೆಯೊಂದಿಗೆ ಕೆಲಸ ಮಾಡುತ್ತೇನೆ ಎಂದಿದ್ದರು.
‘ದಿ ಪ್ರಿಂಟ್’ ಜೊತೆ ಮಾತಾಡಿರುವ ರೂಪಾ, ಯಾವುದೇ ತಪ್ಪುಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳದೇ ಇರುವುದು ನನ್ನ ವ್ಯಕ್ತಿತ್ವದ ಭಾಗ. ಅದು ನನ್ನ ಸಹಜ ಗುಣ. ಮನಶಾಂತಿ ಬಯಸುವ ಬಹಳಷ್ಟು ಅಧಿಕಾರಿಗಳು ‘ದೊಡ್ಡವರಿಗೆ’ ಕಿರಿಕಿರಿಯಾಗುವ ವಿಷಯಗಳ ತಂಟೆಗೆ ಹೋಗುವುದಿಲ್ಲ. ಆದರೆ ಎಲ್ಲಿವರೆಗೆ ನಾನು ಸರಿಯಾದ ಮಾರ್ಗದಲ್ಲಿ ಕೆಲಸ ಮಾಡುತ್ತೇನೆಯೋ ಅಲ್ಲಿವರೆಗೆ ನಾನು ಅವ್ಯವಸ್ಥೆ ಮತ್ತು ಇಂತಹ ಸಂಘರ್ಷಗಳನ್ನು ಎದುರಿಸಲು ಹಿಂಜರಿಯುವುದಿಲ್ಲ ಎಂದಿದ್ದಾರೆ.
Karnataka pioneers in handicrafts in the country, especially, sandalwood, rosewood, bidriware etc. As MD of Handicrafts Emporium I will be able to give impetus to the work of lakhs together artesans & showcase their work in India & abroad, through our famous "Cauvery Emporium". https://t.co/o7hh2GbhPZ
— D Roopa IPS (@D_Roopa_IPS) December 31, 2020
‘ಉನ್ನತ ಸ್ಥಾನಗಳಲ್ಲಿರುವ ಅಧಿಕಾರಿಗಳು ತಾವು ಮಾಡಬೇಕಾದ್ದನ್ನು ಮಾಡಲೇಬೇಕು. ಹೊಗಿನವರು ಬಂದು ಈ ವ್ಯವಸ್ಥೆ ಬದಲಿಸಲಾಗದು; ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಮೂರು ವರ್ಷಗಳ ಹಿಂದೆ, ಜಯಲಲಿತಾರ ಆಪ್ತೆ ಶಶಿಕಲಾ ಅವರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾನೂನುಬಾಹಿರವಾಗಿ ವಿಶೇಷ ಸವಲತ್ತು ನೀಡಲಾಗಿದೆ ಎಂದು ಆರೋಪಿಸಿದ್ದರು. ಇದಕ್ಕಾಗಿ ರೂಪಾ ಮೇಲೆ 20 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು.
2000 ಬ್ಯಾಚ್ನ ರೂಪಾ ಎರಡು ಸಲ (2016 ಮತ್ತು 2017) ರಾಷ್ಟ್ರಪತಿಗಳ ಚಿನ್ನದ ಪದಕ ಪಡೆದಿದ್ದಾರೆ.
ಕೃಪೆ: ದಿ ಪ್ರಿಂಟ್
ಇದನ್ನೂ ಓದಿ: ಫ್ಲ್ಯಾಟ್ ವಿಚಾರದಲ್ಲಿ ಕಂಗನಾ ರಾಣಾವತ್ ನಿಯಮ ಉಲ್ಲಂಘಿಸಿದ್ದಾರೆ: ಮುಂಬೈ ಸಿವಿಲ್ ಕೋರ್ಟ್