ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)-2019ರ ಅಡಿ ಭಾರತೀಯ ಪೌರತ್ವ ಪಡೆಯುವವರಿಗೆ ಸ್ಥಳೀಯ ಪೂಜಾರಿ ‘ಅರ್ಹತಾ ಪ್ರಮಾಣಪತ್ರ’ವನ್ನು ನೀಡಬಹುದು ಎಂದು ಕೇಂದ್ರ ಗೃಹ ಸಚಿವಾಲಯದ ಸಹಾಯವಾಣಿ ಹೇಳಿರುವುದಾಗಿ ‘ದಿ ಹಿಂದೂ ವರದಿ’ ಮಾಡಿದೆ.
ಸಿಎಎ ಅಡಿ ಪೌರತ್ವ ಪಡೆಯುವವರು ಅರ್ಹತಾ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ. ಸಿಎಎ ಪೋರ್ಟಲ್ನಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸುವಾಗ ಅರ್ಹತಾ ಪ್ರಮಾಣ ಸಲ್ಲಿಸಬೇಕು. ಅರ್ಹತಾ ಪ್ರಮಾಣ ಪತ್ರವೆಂದರೆ, ಪೌರತ್ವಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ ಹಿಂದೂ, ಕ್ರೈಸ್ತ, ಸಿಖ್, ಪಾರ್ಸಿ, ಜೈನ, ಬೌದ್ಧ ಈ ಧರ್ಮಗಳಲ್ಲಿ ಯಾವುದಾದರು ಒಂದಕ್ಕೆ ಸೇರಿದವರು ಎಂದು ಖಚಿತಪಡಿಸುವುದಾಗಿದೆ. ಈ ಖಚಿತತೆಯನ್ನು ಸ್ಥಳೀಯ ಪೂಜಾರಿ ಮಾಡಬಹುದು ಎಂದು ಸಹಾಯವಾಣಿ ಹೇಳಿರುವುದಾಗಿ ದಿ ಹಿಂದೂ ತಿಳಿಸಿದೆ.
ಪೌರತ್ವಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ ವಾಸವಿರುವ ಊರಿನ ದೇವಸ್ಥಾನದ ಪೂಜಾರಿ, ಚರ್ಚಿನ ಪಾದ್ರಿ ಅಥವಾ ಇತರ ಧರ್ಮಗಳ ಧರ್ಮ ಗುರುಗಳು, “ಈ ವ್ಯಕ್ತಿ ನನಗೆ ಗೊತ್ತು. ಇವರು ಈ ಧರ್ಮದವರು. ಮುಂದೆಯೂ ಅದೇ ಧರ್ಮದಲ್ಲಿ ಇರಲಿದ್ದಾರೆ” ಎಂದು ಖಚಿತಪಡಿಸಬೇಕಾಗಿದೆ. ಇಲ್ಲಿ ಪೂಜಾರಿ ಅಥವಾ ಪಾದ್ರಿ ಪ್ರಮಾಣ ಪತ್ರ ನೀಡುವುದು ಮಾತ್ರವಾಗಿದೆ. ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಪೌರತ್ವ ನೀಡಬೇಕೆ? ಬೇಡವೇ? ಎಂದು ತೀರ್ಮಾನಿಸುವುದು ಅದಕ್ಕಾಗಿ ನೇಮಿಸಿರುವ ತಂಡ ಎಂದು ವರದಿ ಹೇಳಿದೆ.
‘ಪ್ರತಿಷ್ಠಿತ ಸಮುದಾಯ ಸಂಸ್ಥೆ’
ಸಿಎಎ ನಿಯಮಗಳ ಪ್ರಕಾರ, ‘ಪ್ರತಿಷ್ಠಿತ ಸಮುದಾಯ ಸಂಸ್ಥೆ’ ಅರ್ಹತಾ ಪ್ರಮಾಣ ಪತ್ರ ನೀಡಬಹುದು ಎಂದಿದೆ. ಇಲ್ಲಿ ‘ಪ್ರತಿಷ್ಠಿತ ಸಮುದಾಯ ಸಂಸ್ಥೆ’ ಎಂದರೇನು?. ಅಲ್ಲಿ ಯಾರು ಪ್ರಮಾಣ ಪತ್ರ ನೀಡುತ್ತಾರೆ? ಎಂದು ತಿಳಿದುಕೊಳ್ಳಲು ನಾವು ಮಾರ್ಚ್ 26ರಂದು ಗೃಹ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿದ್ದೆವು. ಈ ವೇಳೆ ಕರೆ ಸ್ವೀಕರಿಸಿದ ವ್ಯಕ್ತಿ , ಅರ್ಹತಾ ಪ್ರಮಾಣ ಪತ್ರವನ್ನು ಖಾಲಿ ಹಾಳೆ ಅಥವಾ 10 ರೂಪಾಯಿಯ ಸ್ಟ್ಯಾಂಪ್ ಪೇಪರ್ನಲ್ಲಿ ನೀಡಬಹುದು ಎಂದಿದ್ದಾರೆ. ಪ್ರಮಾಣಪತ್ರ ನೀಡುವವರು ಯಾರು? ಎಂದು ನಾವು ಕೇಳಿದ್ದಕ್ಕೆ, ಅದು ಸ್ಥಳೀಯ ಪೂಜಾರಿ ನೀಡಬಹುದು ಎಂದು ಹೇಳಿದ್ದಾರೆ ಎಂದು ಹಿಂದೂ ಹೇಳಿದೆ.
ಸಿಎಎ ಮಸೂದೆಯನ್ನು 2019ರಲ್ಲಿ ಸಂಸತ್ನಲ್ಲಿ ಅಂಗೀಕರಿಸಲಾಗಿತ್ತು. ಆದರೆ, ಕಾಯ್ದೆಯ ನಿಯಮಗಳನ್ನು ತಿಳಿಸಿರಲಿಲ್ಲ. ಈ ಬಾರಿಯ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನ, ಅಂದರೆ ನಾಲ್ಕು ವರ್ಷಗಳ ನಂತರ ಮಾರ್ಚ್ 11ರಂದು ಸಿಎಎಯ ನಿಯಮಗಳನ್ನು ಪ್ರಕಟಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅದಕ್ಕಾಗಿ ವಿಶೇಷ ವೆಬ್ಸೈಟ್, ಆಪ್ ಸಿದ್ದಪಡಿಸಿ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ದ ಮತ್ತು ಪಾರ್ಸಿ ಧರ್ಮದವರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆ ನಡೆಸುತ್ತಿದೆ.
ಉತ್ತರ ದೆಹಲಿಯ ಮಜ್ನು ಕಾ ತಿಲಾ ಪ್ರದೇಶದಲ್ಲಿ ವಾಸಿಸುವ ಸುಮಾರು 100 ಪಾಕಿಸ್ತಾನಿ ಹಿಂದೂಗಳು ಇಲ್ಲಿಯವರೆಗೆ ಪೌರತ್ವ ಪೋರ್ಟಲ್ನಲ್ಲಿ (indiancitizenshiponline.nic.in) ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 44 ವರ್ಷದ ಧರಮ್ವೀರ್ ಸೋಲಂಕಿ ಕೂಡ ಒಬ್ಬರು.
“ನಮ್ಮಲ್ಲಿ ಕೆಲವರು ಆರ್ಯ ಸಮಾಜ ಮಂದಿರದಿಂದ ಅರ್ಹತಾ ಪ್ರಮಾಣಪತ್ರವನ್ನು ಪಡೆದಿದ್ದೇವೆ. ಇನ್ನೂ ಕೆಲವರು ಹತ್ತಿರದ ಶಿವ ಮಂದಿರದಿಂದ ಪಡೆದಿದ್ದೇವೆ. ದಾಖಲೆಗಳನ್ನು ಪರಿಶೀಲಿಸಲು ನಾವು ಕಾಯುತ್ತಿದ್ದೇವೆ ಎಂದು 2013 ರಲ್ಲಿ ತನ್ನ ಕುಟುಂಬದೊಂದಿಗೆ ಭಾರತಕ್ಕೆ ಬಂದ ಪಾಕಿಸ್ತಾನದ ಸಿಂಧ್ನ ಹೈದರಾಬಾದ್ನ ನಿವಾಸಿ ಸೋಲಂಕಿ ಹೇಳಿದ್ದಾರೆ. ಸೋಲಂಕಿ ಪ್ರಸ್ತುತ ತರಕಾರಿ ಮಾರಿ ಜೀವನ ನಡೆಸುತ್ತಿದ್ದಾರೆ ಎಂದು ಹಿಂದೂ ತಿಳಿಸಿದೆ.
ಸಿಎಎ ನಿಯಮಗಳ ಪ್ರಕಾರ, ಪೌರತ್ವ ಪಡೆಯಲು ದಾಖಲೆಗಳೊಂದಿಗೆ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ಅದು ಜಿಲ್ಲಾ ಮಟ್ಟಕ್ಕೆ ವರ್ಗಾವಣೆಯಾಗುತ್ತದೆ. ಅಂಚೆ ಇಲಾಖೆಯ ಅಧೀಕ್ಷಕರ ನೇತೃತ್ವದ ಜಿಲ್ಲಾ ಮಟ್ಟದ ಸಮಿತಿಯಿಂದ ಅರ್ಜಿಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ದಾಖಲೆ ಪರಿಶೀಲನೆ ದಿನ ಅರ್ಜಿದಾರರು ಅಧಿಕಾರಿಗಳ ಮುಂದೆ ಹಾಜರಾಗಬೇಕು. ಸೋಲಂಕಿ ಹೇಳಿದಂತೆ ಆತ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೆ ಅಧಿಕಾರಿಗಳಿಂದ ಕರೆ ಬಂಧಿಲ್ಲ ಎಂದು ವರದಿ ಹೇಳಿದೆ.
2016-17ರಲ್ಲಿ ಭಾರತಕ್ಕೆ ಬಂದ ನನ್ನ ಕೆಲ ನೆರೆಹೊರೆಯವರು ಕೂಡ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರ ಅರ್ಜಿಯನ್ನು ಪೋರ್ಟಲ್ ಸ್ವೀಕರಿಸುತ್ತಿಲ್ಲ ಎಂದಿದ್ದಾರೆ. ಸಿಎಎ 2014ರ ಡಿಸೆಂಬರ್ 31ಕ್ಕೆ ಮುಂಚಿತವಾಗಿ ಭಾರತಕ್ಕೆ ಬಂದಿರುವವರಿಗೆ ಮಾತ್ರ ಪೌರತ್ವ ನೀಡುತ್ತದೆ.
ಇದನ್ನೂ ಓದಿ : ಸಲಿಂಗ ವಿವಾಹ ಕಾನೂನುಬದ್ಧಗೊಳಿಸುವ ಮಸೂದೆ ಅಂಗೀಕರಿಸಿದ ಥೈಲ್ಯಾಂಡ್ ಸಂಸತ್ತು