ವಿಧಾನಪರಿಷತ್ನ ಬಿಜೆಪಿ ಸದಸ್ಯ ತೇಜಸ್ವಿನಿಗೌಡ ಅವರು ಪರಿಷತ್ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮನೆಗೆ ಭೇಟಿ ನೀಡಿದ ತೇಜಸ್ವಿನಿಗೌಡ, ರಾಜೀನಾಮೆ ಪತ್ರ ನೀಡಿದ್ದಾರೆ. ಸಭಾಪತಿ ರಾಜೀನಾಮೆ ಅಂಗೀಕರಿಸಿದ್ದಾರೆ. ತೇಜಸ್ವಿನಿ ಅವರ ಪರಿಷತ್ ಸದಸ್ಯತ್ವ ಅವಧಿ ಜೂನ್ 24ರವರೆಗೆ ಇತ್ತು.
ರಾಜೀನಾಮೆ ಕುರಿತು ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, “ತೇಜಸ್ವಿನಿ ಅವರ ಪರಿಷತ್ ಅವಧಿ ಜೂನ್ವರೆಗೆ ಇದೆ. ಅವರ ಮನವೊಲಿಕೆಗೆ ಪ್ರಯತ್ನಿಸಿದರೂ, ವೈಯುಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಅಂಗೀಕರಿಸಿದ್ದೇನೆ” ಎಂದಿದ್ದಾರೆ.
ಇತ್ತೀಚೆಗೆ ಜೆಡಿಎಸ್ನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಬಸವರಾಜ ಹೊರಟ್ಟಿ, “ನಾನು ಸಭಾಪತಿ ಆದ ಬಳಿಕ ಸುಮಾರು 11 ಮಂದಿ ರಾಜೀನಾಮೆ ನೀಡಿದ್ದಾರೆ. ಇದೊಂದು ಇತಿಹಾಸ” ಎಂದಿದ್ದರು.
ತೇಜಸ್ವಿನಿಗೌಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಈ ಕ್ಷೇತ್ರದ ಟಿಕೆಟ್ ಮೈಸೂರು ರಾಜ ಕುಟುಂಬದ ಉತ್ತರಾಧಿಕಾರಿ ಯಧುವೀರ್ ಒಡೆಯರ್ ಅವರಿಗೆ ನೀಡಿದೆ. ಇದರಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೂ ಟಿಕೆಟ್ ಕೈ ತಪ್ಪಿದೆ. ತೇಜಸ್ವಿನಿಗೌಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಬರೀ 56 ಇಂಚಿನ ಎದೆ ಇರೋದಲ್ಲ, ಎದೆಯೊಳಗೆ ಹೃದಯ ಇರಬೇಕು: ಮೋದಿ ವಿರುದ್ಧ ಸಿಎಂ ವಾಗ್ದಾಳಿ