ಚುನಾವಣಾ ಬಾಂಡ್ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ ಕೇಂದ್ರವು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ ಮತ್ತು ನರೇಂದ್ರ ಮೋದಿ ಸರ್ಕಾರವು ಸ್ವತಂತ್ರ ಮತ್ತು ಬಲಿಷ್ಠ ನ್ಯಾಯಾಂಗ ವ್ಯವಸ್ಥೆಗೆ ಅನುಮೋದಿಸುವುದಿಲ್ಲವೇ ಎಂದು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.
‘ಪಟ್ಟಭದ್ರ ಹಿತಾಸಕ್ತಿ ಗುಂಪು’ ನ್ಯಾಯಾಂಗದ ಮೇಲೆ ಒತ್ತಡ ಹೇರಲು ಮತ್ತು ಮಾನಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ 600ಕ್ಕೂ ಹೆಚ್ಚು ವಕೀಲರು ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಎರಡು ದಿನಗಳ ನಂತರ ಪ್ರಿಯಾಂಕ ಗಾಂಧಿ ಈ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪ್ರಿಯಾಂಕಾ ಗಾಂಧಿ ಪೋಸ್ಟ್ ಮಾಡಿದ್ದು, ಚುನಾವಣಾ ಬಾಂಡ್ಗಳ ಕುರಿತ ಸುಪ್ರೀಂ ಕೋರ್ಟ್ನ ತೀರ್ಪಿನಿಂದ ಹಗರಣ ಬಯಲಾಗುತ್ತಿರುವುದನ್ನು ನೋಡಿದ ನಂತರ ಪತ್ರಗಳನ್ನು ಬರೆಯುವ ಮೂಲಕ ನ್ಯಾಯಾಂಗ ವ್ಯವಸ್ಥೆಯ ಮೇಲೆ ಒತ್ತಡ ಹೇರುತ್ತಿರುವ ರೀತಿ, ಸ್ವತಃ ಪ್ರಧಾನಿಯೇ ಅಖಾಡಕ್ಕಿಳಿದು ನ್ಯಾಯಾಂಗದ ಬಗ್ಗೆ ಋಣಾತ್ಮಕ ಟೀಕೆಗಳನ್ನು ಮಾಡುತ್ತಿರುವುದು ಏನೋ ಮೀನಮೇಷವಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ರಾಜಕೀಯ ಹಸ್ತಕ್ಷೇಪದಿಂದ ತೊಂದರೆಗೀಡಾದ ಸುಪ್ರೀಂಕೋರ್ಟ್ ನ್ಯಾಯಾಧೀಶರು ಪತ್ರಿಕಾಗೋಷ್ಠಿಗಳನ್ನು ನಡೆಸುವುದು, ರಾಜ್ಯಸಭೆಗೆ ನ್ಯಾಯಾಧೀಶರನ್ನು ಕಳುಹಿಸುವುದು, ಚುನಾವಣೆಯಲ್ಲಿ (ಮಾಜಿ) ನ್ಯಾಯಾಧೀಶರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು, ನ್ಯಾಯಾಧೀಶರ ನೇಮಕಾತಿಯನ್ನು ನಿಯಂತ್ರಿಸಲು ಪ್ರಯತ್ನಿಸುವುದು ಮತ್ತು ತೀರ್ಪುಗಳು ವಿರುದ್ಧವಾದಾಗ ನ್ಯಾಯಾಂಗದ ಬಗ್ಗೆ ಕಾಮೆಂಟ್ ಮಾಡುವುದು ಕಂಡು ಬರುತ್ತಿದೆ. ಮೋದಿಜಿಯವರ ಸರ್ಕಾರ ಸ್ವತಂತ್ರ ಮತ್ತು ಬಲಿಷ್ಠ ನ್ಯಾಯಾಂಗವನ್ನು ಅನುಮೋದಿಸುವುದಿಲ್ಲವೇ? ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ 600ಕ್ಕೂ ಹೆಚ್ಚು ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ. “ಪಟ್ಟಭದ್ರ ಹಿತಾಸಕ್ತಿಗಳ ಗುಂಪು” ನ್ಯಾಯಾಂಗದ ಮೇಲೆ ಒತ್ತಡ ಹೇರಲು ಮತ್ತು ವಿಶೇಷವಾಗಿ ನ್ಯಾಯಾಲಯಗಳ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಈ ತಂತ್ರಗಳು ನಮ್ಮ ನ್ಯಾಯಾಲಯಗಳಿಗೆ ಹಾನಿಯನ್ನುಂಟುಮಾಡುತ್ತವೆ ಮತ್ತು ನಮ್ಮ ಪ್ರಜಾಪ್ರಭುತ್ವದ ರಚನೆಗೆ ಬೆದರಿಕೆ ಹಾಕುತ್ತಿವೆ ಎಂದು ವಕೀಲರು ಮಾರ್ಚ್ 26ರಂದು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದನ್ನು ಓದಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ಕೇಸ್ ದಾಖಲು: ‘ಮೋದಿ ಪರಿವಾರ’ದ ವಿರುದ್ಧ ಎಫ್ಐಆರ್ ಎಂದ ಕಾಂಗ್ರೆಸ್