ಜಾರ್ಖಂಡ್ನ ದಿಯೋಘರ್ನಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಅವರ ಪತ್ನಿ ಮತ್ತು ಇಬ್ಬರು ಪುತ್ರರು ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ವಂಚನೆಯ ಮೂಲಕ ಆಕ್ರಮಿಸಿಕೊಂಡ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ದುಬೆ ಮತ್ತು ಅವರ ಪತ್ನಿ ಅನಾಮಿಕಾ ಗೌತಮ್ ಅವರು ಬಾಬಾ ಬೈದ್ಯನಾಥ್ ಮೆಡಿಕಲ್ ಟ್ರಸ್ಟ್ ಮೂಲಕ ತಮ್ಮ ಸಂಸ್ಥೆಗೆ ಸಂಬಂಧಿಸಿದ ದಾಖಲೆಗಳನ್ನು ದುರುಪಯೋಗಡಿಸಿಕೊಂಡು ಹರಾಜು ಮೂಲಕ ಆಸ್ಪತ್ರೆಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಶಿವದತ್ ಶರ್ಮಾ ಅವರು ದೇವಘರ ಜಿಲ್ಲೆಯ ಜಸಿದಿಹ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಾಗಿ ನಾನು 93 ಕೋಟಿ ಸಾಲ ಮಾಡಿದ್ದೇನೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಕಾಲೇಜಿಗೆ ಅನುಮೋದನೆ ಪಡೆಯಲು ವಿಫಲವಾದ ನಂತರ, ಈ ಸಾಲದ ಮೊತ್ತವನ್ನು ಬ್ಯಾಂಕ್ ನಿಷ್ಕ್ರಿಯ ಎಂದು ಘೋಷಿಸಿತು. ಈ ಸಂದರ್ಭದಲ್ಲಿ ನನ್ನನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲಿಕ್ಕಾಗಿ ಪಾಲುದಾರರನ್ನು ಹುಡುಕುವ ಭರವಸೆ ನೀಡಿದ ದುಬೆ, ನನ್ನಿಂದ 20 ಲಕ್ಷ ಪಡೆದಿದ್ದರು. ಆದರೆ, ಕಳೆದ ಡಿಸೆಂಬರ್ನಲ್ಲಿ ಕಾಲೇಜನ್ನು ಹರಾಜಿಗೆ ಹಾಕಿದ್ದಾರೆ. ಈ ಹರಾಜಿನಲ್ಲಿ ಬಾಬಾ ಬೈದ್ಯನಾಥ್ ಮೆಡಿಕಲ್ ಟ್ರಸ್ಟ್ ಒಂದೇ ಭಾಗಿಯಾಗಿತ್ತು ಎಂದು ಶರ್ಮಾ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಎಫ್ಐಆರ್ಗೆ ಪ್ರತಿಕ್ರಿಯಿಸಿದ ದುಬೆ, ತಮ್ಮ ವಿರುದ್ಧದ ಆರೋಪ ಸಾಬೀತಾದರೆ ರಾಜಕೀಯ ತ್ಯಜಿಸುವುದಾಗಿ ಹೇಳಿದ್ದಾರೆ. ಜಾರ್ಖಂಡ್ನಲ್ಲಿ ಕಾಂಗ್ರೆಸ್ ಮತ್ತು JMM ಸರ್ಕಾರ ರಚನೆಯಾದ ನಂತರ ಇದು ನನ್ನ ವಿರುದ್ಧ ದಾಖಲಾದ 44ನೇ ಪ್ರಕರಣವಾಗಿದೆ. ಜಾರ್ಖಂಡ್ ಪೊಲೀಸರು ಇದನ್ನು ಸಾಬೀತುಪಡಿಸಿದರೆ, ನಾನು ರಾಜಕೀಯವನ್ನು ತೊರೆಯುತ್ತೇನೆ. ಈ ವೈದ್ಯಕೀಯ ಕಾಲೇಜನ್ನು ಡಿಆರ್ಟಿ ನ್ಯಾಯಾಲಯದ ಹರಾಜಿನಲ್ಲಿ ಖರೀದಿಸಲಾಗಿದೆ. ಜಾರ್ಖಂಡ್ ಹೈಕೋರ್ಟ್ ಇದನ್ನು ಅನುಮೋದಿಸಿದೆ. ನಾನು ಅದರ ಟ್ರಸ್ಟಿ ಅಲ್ಲ. ನಾನು ಬಿಜೆಪಿಯ ಸೈನಿಕ ಎಂದು ನಿಶಿಕಾಂತ್ ದುಬೆ ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.