ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಅಸ್ಸಾಂ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಸೋಮವಾರ ಸಂಜೆಯೊಳಗೆ ನೋಟೀಸ್ಗೆ ಉತ್ತರ ನೀಡುವಂತೆ ಚುನಾವಣಾ ಆಯೋಗ ಉಭಯ ನಾಯಕರಿಗೆ ತಿಳಿಸಿದೆ.
ಗಡುವು ಮುಗಿಯುವ ಮೊದಲು ಪ್ರತಿಕ್ರಿಯೆ ನೀಡದಿದ್ದಲ್ಲಿ ಇಬ್ಬರೂ ನಾಯಕರು ಹೇಳಲು ಏನೂ ಇಲ್ಲ ಎಂದು ಭಾವಿಸಲಾಗುವುದು. ಅವರನ್ನು ಸಂಪರ್ಕಿಸದೆ “ಸೂಕ್ತ ಕ್ರಮ” ತೆಗೆದುಕೊಳ್ಳುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಸಿದೆ.
ಕಳೆದ ವಾರ ಛತ್ತೀಸ್ಗಢದ ಚುನಾವಣಾ ಪ್ರಚಾರ ಭಾಷಣದಲ್ಲಿ ಶರ್ಮಾ ಅವರು ಮುಸ್ಲಿಂ ಸಚಿವ ಮೊಹಮ್ಮದ್ ಅಕ್ಬರ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಕ್ಟೋಬರ್ 18 ರಂದು ಛತ್ತೀಸ್ಗಢದ ಕವರ್ಧಾದಲ್ಲಿ ಅವರು ಮಾಡಿದ ಭಾಷಣದ ಸಂದರ್ಭದಲ್ಲಿ, ಶರ್ಮಾ ಅವರು ಅಕ್ಬರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಟಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.
ಇನ್ನು ರಾಜಸ್ಥಾನ ಬಿಜೆಪಿ ಘಾಟಕವು ಪ್ರಿಯಾಂಕಾ ಗಾಂಧಿ ವಿರುದ್ಧ ದೂರು ನೀಡಿದ್ದು, ”ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ” ಎಂದು ಹೇಳಿದ್ದಾರೆ.
ಅಕ್ಟೋಬರ್ 20 ರಂದು ದೌಸಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೃಢೀಕೃತವಲ್ಲದ ಆರೋಪಗಳನ್ನು ಮಾಡಿದ್ದರು. ಮೋದಿ ಅವರು ದೇವಸ್ಥಾನದಲ್ಲಿ ನೀಡಿದ ದೇಣಿಗೆಯ ಲಕೋಟೆಯನ್ನು ತೆರೆದಾಗ ಅದರಲ್ಲಿ ಕೇವಲ 21 ರೂಪಾಯಿ ಇದ್ದುದು ಟಿವಿಯಲ್ಲಿ ನೋಡಿದೆ ಎಂದು ಪ್ರಿಯಾಂಕಾ ಹೇಳಿದ್ದರು.
ನಾನು ಇತ್ತೀಚೆಗೆ ಟಿವಿಯಲ್ಲಿ ವಿಡಿಯೋ ಒಂದನ್ನು ನೋಡಿದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ದೇವನಾರಾಯಣ ದೇವಸ್ಥಾನಕ್ಕೆ ತೆರಳಿದ್ದ ಪ್ರಧಾನಿ ಮೋದಿ ಕಾಣಿಕೆ ಪೆಟ್ಟಿಗೆಯಲ್ಲಿ ದೇಣಿಗೆ ಲಕೋಟೆಯನ್ನು ಹಾಕಿದ್ದರು. ಅದರಲ್ಲಿ ಏನಿರಬಹುದು ಎಂದು ಜನರು ಆಶ್ಚರ್ಯ ಪಟ್ಟಿದ್ದರು, ಆದರೆ ಅದನ್ನು ತೆರೆದಾಗ 21 ರೂಪಾಯಿ ಇತ್ತು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು.
ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಬಿಜೆಪಿ, ಪ್ರಿಯಾಂಕಾ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಧಾರ್ಮಿಕ ಶ್ರದ್ಧೆಯನ್ನು ಪ್ರಶ್ನಿಸಿದ್ದಾರೆ ಎಂದು ಆರೋಪಿಸಿತ್ತು. ಜತೆಗೆ, ಪ್ರಿಯಾಂಕಾ ಗಾಂಧಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತ್ತು.
ಮುಂದಿನ ತಿಂಗಳು ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಛತ್ತೀಸ್ಗಢದಲ್ಲಿ ಚುನಾವಣಾ ಪ್ರಚಾರದ ವೇಳೆ ಶರ್ಮಾ ಅವರು ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಾರ್ಮಿಕ ಮತಾಂತರ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಾಗ್ದಾಳಿ ನಡೆಸಿದ್ದರು.
ಇಂದು ನಮಗೆ ಆತ್ಮೀಯರಾದ ಛತ್ತೀಸ್ಗಢದ ಆದಿವಾಸಿಗಳು ತಮ್ಮ ಧರ್ಮವನ್ನು ಮತಾಂತರಕ್ಕೆ ಪ್ರತಿನಿತ್ಯ ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಯಾರಾದರೂ ಅದರ ವಿರುದ್ಧ ಧ್ವನಿ ಎತ್ತಿದಾಗ ಭೂಪೇಶ್ ಬಘೇಲ್ ಜೀ ‘ನಾವು ಜಾತ್ಯತೀತರು’ ಎಂದು ಹೇಳುತ್ತಾರೆ. ಹಿಂದೂಗಳನ್ನು ಹೊಡೆಯುವುದು ನಿಮ್ಮ ಜಾತ್ಯತೀತತೆ? ಈ ದೇಶವು ಹಿಂದೂಗಳ ದೇಶ ಮತ್ತು ಹಿಂದೂಗಳಿಗೆ ಸೇರುತ್ತದೆ, ನಮಗೆ ಜಾತ್ಯತೀತತೆಯನ್ನು ಕಲಿಸಬೇಡಿ, ನಾವು ನಿಮ್ಮಿಂದ ಜಾತ್ಯತೀತತೆಯನ್ನು ಕಲಿಯಬೇಕಾಗಿಲ್ಲ, ”ಎಂದು ಶರ್ಮಾ ಹೇಳಿದರು.
ಶರ್ಮಾ ಅವರ ಹೇಳಿಕೆಗಳು ಸಮಾಜದಲ್ಲಿ ಒಡಕು ಮೂಡಿಸಲು ಪ್ರಚೋದಿಸುವ ಸ್ಪಷ್ಟ ಉದ್ದೇಶವನ್ನು ತೋರಿಸಿದೆ ಎಂದು ದೂರಿನಲ್ಲಿ ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ: ‘INDIA’ವನ್ನು ‘ಭಾರತ್’ ಎಂದು ಬದಲಿಸುವ NCERT ಪ್ರಸ್ತಾಪ ತಿರಸ್ಕರಿಸಿದ ಕೇರಳ ಸರ್ಕಾರ