Homeಕರ್ನಾಟಕಅಧಿಕಾರಕ್ಕೆ ಸತ್ಯ ನುಡಿದವರು; ಬಾಲನ್ ಎಂಬ ಬೆಂಕಿ ಚೆಂಡು

ಅಧಿಕಾರಕ್ಕೆ ಸತ್ಯ ನುಡಿದವರು; ಬಾಲನ್ ಎಂಬ ಬೆಂಕಿ ಚೆಂಡು

- Advertisement -
- Advertisement -

ಆ ಒಂದು ದಿನ ದಿಢೀರನೆ ಸ್ಫೋಟಿಸಿದ ಸದ್ದು ಕೇಳಿಬರುತ್ತದೆ. ಕಾರ್ಮಿಕರ ಕುಟುಂಬದವರೆಲ್ಲ ಓಡಿಹೋಗಿ ನೋಡಿದಾಗ ಆತಂಕ ಕಾದಿರುತ್ತದೆ. ಏಳೆಂಟು ಮಂದಿ ಕಾರ್ಮಿಕರು ಹತರಾಗಿದ್ದಾರೆ. ಅಂಬೂರು ಸುಬ್ಬ ಸತ್ತ, ಅರಣಿ ಸೀನಾ ಸತ್ತ, ಇರೋಡು ಕೃಷ್ಣಸ್ವಾಮಿ ಜೀವಂತವಿಲ್ಲ – ಹೀಗೆ ಆಕ್ರಂದನ ಮೊಳಗುತ್ತದೆ. ಹೆಣಗಳೂ ಸಿಗುತ್ತಿಲ್ಲ. ಕೆಲವರ ಕೈ ಹೋಯಿತು, ಕಾಲು ಹೋಯಿತು. ಭೀಕರ ಕಾಯಿಲೆಗಳಿಗೆ ತುತ್ತಾದರು. ಇಂತಹ ಭಯಂಕರ ಸನ್ನಿವೇಶದಿಂದ ಸಿಡಿದುಬಂದ ಕಿಡಿ ಎಸ್.ಬಾಲನ್.

ಕೋಲಾರದ ಚಿನ್ನದ ಗಣಿಯ ಕಾರ್ಮಿಕರೊಬ್ಬರ ಮಗ ಬಾಲನ್. ನಿಜವಾದ ಹೆಸರು ಬಾಲಕೃಷನ್ ಆದರೂ ತಮಿಳುನಾಡು ಹಾಗೂ ಕರ್ನಾಟಕಕ್ಕೆ ಬಾಲನ್ ಎಂದೇ ಚಿರಪರಿಚಿತ. ಬಾಲ್ಯದಲ್ಲಿ ‘ಬಾಲ’ ಎಂದೇ ಸಮುದಾಯದಲ್ಲಿ ಪ್ರೀತಿಪಾತ್ರರಾಗಿದ್ದ ಅವರು, ಆ ಸ್ಫೋಟದ ಬಳಿಕ ಯುವ ಮುಖಂಡರಾಗಿ ಹೊರಹೊಮ್ಮುತ್ತಾರೆ. ಆಗಿನ್ನೂ ಅವರ ವಯಸ್ಸು 15 ವರ್ಷ!

ಪಿಯುಸಿ ಓದುವಾಗಲೇ ಸಂಘಟನೆ, ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಆ ಬ್ಲಾಸ್ಟ್ ಘಟನೆ ನಡೆದಾಗ ಕೆಜಿಎಫ್ ಬಂದ್ ಮಾಡಿಸಿದ್ದರು. ಸಾವಿರಾರು ಹುಡುಗರು ಮೆರವಣಿಗೆ ಹೊರಟರು. ಲೀಡರ್ ಯಾರೆಂದು ಪೊಲೀಸರು ಹುಡುಕುತ್ತಿದ್ದರು. ಎಲ್ಲರೂ ‘ಬಾಲ, ಬಾಲ’ ಎಂದು ಹೆಸರು ಹೇಳತೊಡಗಿದರು. ಬಾಲ ಎಂದರೆ ಯಾರೋ ಇಪ್ಪತ್ತೋ, ಇಪ್ಪತ್ತೈದು ವರ್ಷದವನಿರಬಹುದೆಂದು ಪೊಲೀಸರು ಭಾವಿಸಿದ್ದರು. ಆದರೆ ಅಲ್ಲಿ ಲೀಡರ್ ಎನಿಸಿಕೊಂಡಿದ್ದು ಇನ್ನೂ ಮೀಸೆಯೂ ಚಿಗುರದ, ಹದಿನೈದು ವರ್ಷದ ಬಾಲ(ಕ). ಪೊಲೀಸರು ಆ ಬಾಲ(ಕ)ನೊಂದಿಗೆಯೇ ಮಾತುಕತೆ ನಡೆಸಿದರು.

ಹೀಗೆ ಬೆಳೆದುಬಂದ ಅವರು ಕಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡರು. ಜನರು ಪ್ರೀತಿಯಿಂದ ‘ಬಾಲನ್’ ಎಂದು ಕರೆದರು.

ಬಾಲನ್ ಬಾಲ್ಯದ ವಾತಾವರಣ ಹೇಗಿತ್ತು: ಹುಟ್ಟಿ ಬೆಳೆದಿದ್ದು ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ. ಅದು ಕಾರ್ಮಿಕರು ವಾಸವಿದ್ದ ಪ್ರದೇಶ. ದೊಡ್ಡದೊಡ್ಡ ಬಂಗಲೆಗಳಲ್ಲಿ ಬ್ರಾಹ್ಮಣ ಹಾಗೂ ಇತರೆ ಸವರ್ಣೀಯರು ವಾಸವಿದ್ದರು. ಅಲ್ಲಿನ ಡೈರೆಕ್ಟರ್, ಮ್ಯಾನೇಜಿಂಗ್ ಡೈರೆಕ್ಟರ್, ಎಲ್ಲ ಅಧಿಕಾರಿಗಳು ಕೂಡ ಬ್ರಾಹ್ಮಣರು ಅಥವಾ ಮುಂದುವರಿದ ಸಮುದಾಯಗಳಿಗೇ ಸೇರಿದವರಾಗಿದ್ದರು. ಶೂದ್ರರು ಮತ್ತು ದಲಿತರು ಲೈನ್ ಮನೆಗಳಲ್ಲಿ ವಾಸವಿದ್ದರು. ಒಂದೊಂದು ಗುಡಿಸಲಿನಲ್ಲೂ ಐದರಿಂದ ಎಂಟು ಜನ ಇರುತ್ತಿದ್ದರು. ಪ್ರತಿಯೊಂದಕ್ಕೂ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ. ಬೆಳಿಗ್ಗೆ ಟಾಯ್ಲೆಟ್‌ಗೂ ಕ್ಯೂ, ನೀರಿಗೂ ಕ್ಯೂ, ರೇಷನ್‌ಗೆ ಕ್ಯೂ, ಸೌದೆಗೂ ಕ್ಯೂ.
ಬಾಲನ್ ಅವರ ತಂದೆ ಗಣಿ ಕಾರ್ಮಿಕರಾಗಿದ್ದರು. ಆವರ ಸಂಬಳ ಹದಿನೈದರಿಂದ ಇಪ್ಪತ್ತು ರೂ ಇತ್ತು. ಚಪ್ಪಲಿ ಕೂಡ ಸರಿಯಾಗಿ ಇಲ್ಲದ ಬಾಲನ್ ಕಷ್ಟಪಟ್ಟು ಪದವೀಧರರಾದರು.

ಮಾರ್ಕ್ಸ್, ಅಂಬೇಡ್ಕರ್, ಪೆರಿಯಾರ್
ವಿದ್ಯಾರ್ಥಿ ದೆಸೆಯಲ್ಲಿಯೇ ಮಾರ್ಕ್ಸ್‌ವಾದದ ಮೇಲೆ ಭಾರಿ ಆಸಕ್ತಿ ತೆಳೆದವರು ಬಾಲನ್. ನಂತರ ಪೆರಿಯಾರ್, ಅಂಬೇಡ್ಕರ್ ಪ್ರಭಾವಕ್ಕೂ ಒಳಗಾದರು. ಕಮ್ಯುನಿಸ್ಟ್ ಪಕ್ಷವನ್ನು ಸೇರಿಕೊಂಡರು. ಆದರೆ ಕಮ್ಯುನಿಸ್ಟ್ ಪಕ್ಷದೊಂದಿಗೆ ಹೆಚ್ಚು ಕಾಲ ಇರಲಿಲ್ಲ. “ಹೋರಾಟ ಮಾಡಬೇಕು, ಸಂಘಟನೆ ಮಾಡಬೇಕೆಂಬ ಆಸೆ ಇತ್ತು. ಆದರೆ ಆ ಮುಖಂಡರು ನನ್ನನ್ನು ಹೊಡೆದಾಟಕ್ಕೆ ಹೋಗುವಂತೆ ಹೇಳುತ್ತಿದ್ದರು. ಅವನನ್ನು ಹೊಡೆಯಿರಿ, ಇವನನ್ನು ಹೊಡೆಯಿರಿ ಎಂದು ಕೆಟ್ಟದಾರಿಗೆ ಕರೆದೊಯ್ದರು. ಇದರಿಂದ ಬೇಸತ್ತು ನಾನು ಅವರಿಂದ ದೂರವಾದೆ” ಎನ್ನುತ್ತಾರೆ ಬಾಲನ್.

ಪಕ್ಷದ ಭಾಗವಾಗಿ ಹಲವು ಹೋರಾಟ ಸಂಘಟಿಸಿದರೂ ನಾಯಕರೆಂದು ಬಾಲನ್‌ರನ್ನು ಗುರುತಿಸಲಿಲ್ಲ. ಬೆಂಗಳೂರಿಗೆ ಹೋರಾಟಕ್ಕೆ ಬರುವಾಗಲೆಲ್ಲ ರೈಲ್ವೆ ಸ್ಟೇಷನ್‌ವರೆಗೂ ನಡೆದದ್ದನ್ನು, ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದನ್ನು, ದಿನವೆಲ್ಲ ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದು, ಘೋಷಣೆ ಕೂಗುತ್ತಾ ಹಾಡಿದ್ದನ್ನು ನೆನೆಯುತ್ತಾರೆ ಬಾಲನ್. ಹೋರಾಟದ ಬದುಕಿನ ನಡುವೆಯೇ ಕಾನೂನು ವಿದ್ಯಾರ್ಥಿಯಾದರು. ಈ ನಂತರದಲ್ಲಿ ಟ್ರೇಡ್ ಯೂನಿಯನ್‌ಗಳನ್ನು ಕಟ್ಟಬೇಕೆಂದು ನಿರ್ಧರಿಸಿ ಮುನ್ನಡೆದರು.

ಮೊಟ್ಟಮೊದಲಿಗೆ ಬಿಇಎಂಎಲ್ ಕಾಂಟ್ರಾಕ್ಟ್ ಲೇಬರ್ ಸಂಘಟನೆಯನ್ನು ರೂಪಿಸಿದರು. ಈ ಕಾರ್ಮಿಕರಿಗೆ 8 ರೂಪಾಯಿ ಸಂಬಳವಿತ್ತು. ಹೋರಾಟ ಫಲವಾಗಿ 16 ರೂಪಾಯಿಯಾಯ್ತು. ಅದೇ ಸಂದರ್ಭದಲ್ಲಿ ಮತ್ತೊಂದು ಕೈಗಾರಿಕೆಯ ನಾಲ್ಕು ಸಾವಿರ ಯುವಕರನ್ನು ಒಗ್ಗೂಡಿಸಿ ದೊಡ್ಡ ಮೆರವಣಿಗೆ ನಡೆಸಿದರು.
ರೈಲ್ವೆ ಗ್ಯಾಂಗ್‌ಮ್ಯಾನ್ ಸಂಘಟನೆಯನ್ನೂ ಮಾಡಿದರು. ಬಂಡೆ ಹೊಡೆಯುವವರು, ಕಟ್ಟಡ ಕಟ್ಟುವವರನ್ನು ಸಾವಿರಾರು ಸಂಖ್ಯೆಯಲ್ಲಿ ಒಟ್ಟುಗೂಡಿಸಿದರು. ಕಲ್ಲನ್ನು ಕತ್ತರಿಸಿ ಟ್ರಿಮ್ ಮಾಡುವವರಿಗೆ ಮೂರೂವರೆ ರೂಪಾಯಿ ಸಿಗುತ್ತಿತ್ತು. ಹೋರಾಟ ರೂಪಿಸಿ ಹನ್ನೆರಡೂವರೆ ರೂಪಾಯಿಗೆ ಹೆಚ್ಚಿಸಿದರು ಬಾಲನ್. ಕ್ವಾರಿ ಮಾಫಿಯಾಗಳು ಬಾಲನ್ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದೂ ಉಂಟು.

ಬಿಜಿಎಂಎಲ್ ಕಾರ್ಮಿಕರ ಪರವಾಗಿ ದೊಡ್ಡ ಮಟ್ಟದಲ್ಲಿ ಹೋರಾಡಿದರು. ಎಲ್ಲ ಪಕ್ಷದವರು ಕಾರ್ಮಿಕರಿಗೆ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿದ್ದರು. ಸುಮಾರು ಐದಾರು ಸಾವಿರ ಕಾರ್ಮಿಕರನ್ನು ಒಂದುಗೂಡಿಸಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಿದರು. ಈ ಹೋರಾಟದ ಭಾಗವಾಗಿ ಗೋಡೌನ್ ಲೂಟಿ ಮಾಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ನಾಲ್ಕೈದು ಸಾವಿರ ಕಾರ್ಮಿಕರು ಗೋಡೋನ್‌ಗೆ ನುಗ್ಗಿ ಅಕ್ಕಿಯನ್ನೆಲ್ಲ ಹೊತ್ತೊಯ್ದರು.

ಮರೆಯಲಾಗದ ಟಾಯ್ಲೆಟ್ ಪ್ರತಿಭಟನೆ
ಕೋಲಾರ ಗಣಿ ಮುಚ್ಚಿದ ಬಳಿಕ ಸುಮಾರು ಮೂರು ಲಕ್ಷ ಜನ ಬಳಸುವ ಸಾರ್ವಜನಿಕ ಟಾಯ್ಲೆಟ್‌ಗಳನ್ನು ಮುನ್ಸಿಪಾಲಿಟಿ ಬಂದ್ ಮಾಡಿತು. ಮಹಿಳೆಯರೆಲ್ಲ ಬಯಲು ಶೌಚಾಲಯಕ್ಕೆ ಹೋಗುವಂತಾಯಿತು. ಹೀಗಿದ್ದಾಗ ಮುನ್ಸಿಪಾಲಿಟಿಗೆ ಬಾಲನ್ ಎಚ್ಚರಿಕೆ ಕೊಟ್ಟರು. ಟಾಯ್ಲೆಟ್‌ಗಳನ್ನು ತೆರೆಯದಿದ್ದರೆ ನಾವು ಮುನ್ಸಿಪಾಲಿಟಿಯನ್ನೇ ಟಾಯ್ಲೆಟ್ ಆಗಿ ಬಳಸುತ್ತೇವೆ ಎಂದರು. ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದ ಕಾರಣ ಮುನ್ಸಿಪಾಲಿಟಿಗೆ ಹೋಗಿ ಟಾಯ್ಲೆಟ್ ಮಾಡುವ ಹೋರಾಟ ನಡೆಸಲಾಯಿತು. ಆಗಲೂ ಬಗ್ಗಲಿಲ್ಲ. ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದರು. ಸಮಸ್ಯೆ ಬಗೆಹರಿಯಲಿಲ್ಲ. ಒಂದು ದಿನ ಮೂವತ್ತು ಬಕಿಟ್‌ಗಳಲ್ಲಿ ಕಕ್ಕಸ್ಸನ್ನು ತುಂಬಿಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಾವಿರಕ್ಕೂ ಹೆಚ್ಚು ಹುಡುಗರು ಜೊತೆಯಲ್ಲಿದ್ದರು. ಮೆರವಣಿಗೆ ಮಾಡಿಕೊಂಡು ಹೋಗಿ ಮುನ್ಸಿಪಾಲಿಟಿ ಕಮಿಷನರ್ ಕಾರಿನ ಮೇಲೆ ಕಕ್ಕಸ್ಸನ್ನು ಎರಚಲಾಯಿತು. ಪೊಲೀಸರು ಸಿಕ್ಕಾಪಟ್ಟೆ ಲಾಠಿ ಚಾರ್ಜ್ ಮಾಡಿದರು. ಪೊಲೀಸರಿಗೂ ಕಕ್ಕಸ್ಸನ್ನು ಎರಚಲಾಯಿತು. ಹೋರಾಟಗಾರರನ್ನು ಹಿಡಿದು ಲಾಕಪ್ ಹಾಕಿದರು. ಕೋಲಾರದಲ್ಲಿ ನಡೆಸಿದ ಈ ಹೋರಾಟವನ್ನೂ ಬಾಲನ್ ನೆನಪಿಸಿಕೊಳ್ಳುವುದು ಹೀಗೆ.

ಕೋಲಾರ ಜಿಲ್ಲೆಯ ಹಳ್ಳಿಹಳ್ಳಿಯನ್ನೂ ಬಾಲನ್ ಸುತ್ತಾಡಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರನ್ನು ಒಗ್ಗೂಡಿಸಬೇಕು ಎಂದು ಬೆಂಗಳೂರು, ಕೋಲಾರ, ಹುಬ್ಬಳ್ಳಿ, ಧಾರಾವಾಡ, ಗುಲ್ಬರ್ಗ ಹೀಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಓಡಾಡಿದ್ದಾರೆ. ಬೆಂಗಳೂರಿನಲ್ಲಿರುವ ಕ್ವಾರಿಗಳಿಗೆ ಹೋಗಿ ಅಲ್ಲಿನ ಕಾರ್ಮಿಕರನ್ನು ಸಂಘಟಿಸಿದ್ದಾರೆ. ಕೋಲಾರದಿಂದ ಬೆಂಗಳೂರಿಗೆ ಸುಮಾರು ಮೂವತ್ತರಿಂದ ನಲವತ್ತು ಸಾವಿರ ಕಾರ್ಮಿಕರನ್ನು ಕರೆದುಕೊಂಡು ಬಂದು ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಕಟ್ಟಡ ಕಾರ್ಮಿಕರ ಬೋರ್ಡ್ ರಚನೆಯಾಗಿದೆ. ಸುಮಾರು ಮೂರು ಸಾವಿರ ಕಾರ್ಮಿಕರನ್ನು ನವದೆಹಲಿಗೆ ಕರೆದುಕೊಂಡು ಹೋಗಿ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪೌರಕಾರ್ಮಿಕರ ಪರ ಹೋರಾಟ
2002ರಲ್ಲಿ ಕೋಲಾರದಿಂದ ಬೆಂಗಳೂರಿಗೆ ಬಂದು ಬಾಲನ್ ನೆಲೆಸಿದರು. ಆ ಸಂದರ್ಭದಲ್ಲಿ ಪೌರಕಾರ್ಮಿಕರ ಕಷ್ಟಗಳನ್ನು ಗಮನಿಸಿದರು. ಅವರ ಮಾಸಿಕ ಸಂಬಳ 1200 ರೂಪಾಯಿ ಇತ್ತು. ಅದನ್ನೂ ಸರಿಯಾಗಿ ಗುತ್ತಿಗೆದಾರರು ನೀಡುತ್ತಿರಲಿಲ್ಲ. ತಮ್ಮ ಸಂಬಳವನ್ನು ಪೌರಕಾರ್ಮಿಕರು ಭಿಕ್ಷೆ ಬೇಡಿ ಪಡೆದುಕೊಳ್ಳಬೇಕಿತ್ತು. ಸುಮಾರು ಮೂರು ಸಾವಿರ ಪೌರಕಾರ್ಮಿಕರನ್ನು ಒಗ್ಗೂಡಿಸಿ ಹೋರಾಟ ಶುರುಮಾಡಿದರು ಬಾಲನ್. 2.500 ರೂಪಾಯಿಗೆ ಸಂಬಳ ಏರಿಕೆಯಾಯಿತು. ನಂತರ 5,000ಕ್ಕೆ ಏರಿಕೆ ಮಾಡಿಸಲಾಯಿತು. ಹೀಗೆ ಕಾಲಕಾಲಕ್ಕೆ ಪೌರಕಾರ್ಮಿಕರ ಮಾಸಿಕ ವೇತನ ಹೆಚ್ಚಳವಾಗುವಲ್ಲಿ ಬಾಲನ್ ಶ್ರಮಿಸಿದ್ದಾರೆ. ‘ಪೊಲೀಸರಿಂದ, ರೌಡಿಗಳಿಂದ ಹಲವು ಸಲ ದಾಳಿಗಳಾಗಿವೆ. ಬಿಬಿಎಂಪಿ ಕಚೇರಿಯಲ್ಲಿಯೇ ದಾಳಿ ನಡೆದಿದೆ’ ಎಂದು ನೆನೆಯುತ್ತಾರೆ ಅವರು.
ರೇಸ್‌ಕೋರ್ಸ್ ಕಾರ್ಮಿಕರನ್ನು ಕೆಲಸದಿಂದ ತೆಗೆದಿದ್ದರು. ಆ ಕಾರ್ಮಿಕರನ್ನು ಸಂಘಟಿಸಿ 21 ದಿನ ಕಾರ್ಮಿಕರ ಭವನದಲ್ಲೇ ಮಲಗಿದರು. ದೊಡ್ಡ ಹೋರಾಟ ಆದ ಮೇಲೆ ಕಾರ್ಮಿಕರಿಗೆ ಪರಿಹಾರ ದೊರಕಿತು. ಗ್ರಾಚ್ಯುಟಿ ರಿಟರ್ನ್ ಈ ಹಿಂದೆ ಕೇವಲ 35 ಸಾವಿರ ರೂ. ಇತ್ತು. ಈಗ ಏಳರಿಂದ ಹತ್ತು ಲಕ್ಷದವರೆಗೆ ರಿಟರ್ನ್ ಆಗುತ್ತಿದೆ. ಹೆಚ್ಚುವರಿ ಸಮಯ ಕೆಲಸ ಮಾಡಿದರೆ ಹೆಚ್ಚುವರಿ ಹಣ ಪಾವತಿಯಾಗುತ್ತಿದೆ.

ಎಚ್‌ಎಎಲ್‌ನಲ್ಲಿ ಆರು ಸಾವಿರ ಗುತ್ತಿಗೆ ಕಾರ್ಮಿಕರಿಗೆ ಕಡಿಮೆ ಕೂಲಿ ಸಿಗುತ್ತಿತ್ತು. ಕ್ಯಾಂಟೀನ್ ಸೌಲಭ್ಯ ಇರಲಿಲ್ಲ. ಬೋನಸ್, ಓಟಿ ಸೌಲಭ್ಯವೂ ಇರಲಿಲ್ಲ. ಗುಲಾಮರಂತೆ ಆ ಕಾರ್ಮಿಕರನ್ನು ನಡೆಸಿಕೊಳ್ಳಲಾಗುತ್ತಿತ್ತು. ಆರು ಸಾವಿರ ಕಾರ್ಮಿಕರನ್ನು ಒಂದುಗೂಡಿಸಿ, ಹೋರಾಟ ನಡೆಸಿದರು. ಈಗ ದಿನಕ್ಕೆ ಸಾವಿರ ರೂ.ವರೆಗೂ ಕೂಲಿ ಸಿಗುತ್ತಿದೆ ಎನ್ನುತ್ತಾರೆ ಬಾಲನ್.

ಬಿಇಎಂಎಲ್, ಬಿಎಚ್‌ಇಎಲ್ ಕಾರ್ಮಿಕರಿಗೆ ಎರಡು ಡಿಎ, ಹಾಜರಾತಿ ಬೋನಸ್ ಕೊಡಿಸಲಾಗಿದೆ. ತಮಿಳುನಾಡಿನ ರಾಣಿಪೇಟೆ, ತಿರುಚಿಯಲ್ಲಿರುವ ಬಿಎಚ್‌ಇಎಲ್ ಗುತ್ತಿಗೆ ಕಾರ್ಮಿಕರನ್ನು ಸಂಘಟಿಸಿದ್ದಾರೆ. ಬೆಂಗಳೂರಿನಲ್ಲಿ ಒಳಚರಂಡಿ ಶುಚಿಗೊಳಿಸುವ ಕಾರ್ಮಿಕರು ಹಾಗೂ ವಾಟರ್ ವರ್ಕ್ಸ್ ಕಾರ್ಮಿಕರನ್ನು ಸಂಘಟನೆ ಮಾಡಿದ್ದಾರೆ. ಒಳಚರಂಡಿ ಶುಚಿಗೊಳಿಸುವ ಕಾರ್ಮಿಕರಿಗೆ ಆರು ಸಾವಿರ ಇದ್ದ ಸಂಬಳ ಈಗ 23,000ಕ್ಕೆ ಏರಿಕೆಯಾಗಿದೆ. ಈ ಹೋರಾಟದಲ್ಲಿ ಭಾಗಿಯಾದ ಸಂತೃಪ್ತಿಯನ್ನು ಬಾಲನ್ ವ್ಯಕ್ತಪಡಿಸುತ್ತಾರೆ.
ತಮಿಳು, ತೆಲುಗು, ಕನ್ನಡ ಹಾಗೂ ಇಂಗ್ಲಿಷನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಬಾಲನ್ ಬರುತ್ತಾರೆಂದರೆ ನೂರಾರು, ಸಾವಿರಾರು ಜನ ಕಾರ್ಮಿಕರು ಜಮಾಯಿಸಿ ಭಾಷಣ ಆಲಿಸುತ್ತಾರೆ. ಅಂಬೇಡ್ಕರ್‌ವಾದ, ಮಾರ್ಕ್ಸ್‌ವಾದ, ಪೆರಿಯಾರ್‌ವಾದವನ್ನು ನಿರಂತರ ಪ್ರಚಾರ ಮಾಡುತ್ತಲೇ ಇದ್ದಾರೆ.

ತಮ್ಮ ಹೋರಾಟದ ಬದುಕಿನ ಕುರಿತು ಸಂತೃಪ್ತಿ ವ್ಯಕ್ತಪಡಿಸುವ ಅವರು, “ಇಷ್ಟೆಲ್ಲ ಕೆಲಸ ಮಾಡಿದ್ದೇನೆ. ಆದರೆ ಕಾರ್ಮಿಕರಿಂದ ಒಂದು ರೂಪಾಯಿ ತಿಂದಿಲ್ಲ. ಅವರ ದುಡ್ಡಲ್ಲಿ ಒಂದು ಟೀಯನ್ನೂ ಕುಡಿದಿಲ್ಲ. ವಸೂಲಿಯಾಗಿರುವ ಲಕ್ಷಾಂತರ ರೂಪಾಯಿಗಳನ್ನು ಕಾರ್ಮಿಕರ ಹೆಸರಲ್ಲೇ ಬ್ಯಾಂಕ್‌ನಲ್ಲಿ ಇಟ್ಟಿದ್ದೇವೆ. ಪ್ರವಾಸ ವೆಚ್ಚವನ್ನೂ ನಾನು ಅವರಿಂದ ತೆಗೆದುಕೊಂಡಿಲ್ಲ. ಟ್ರೇಡ್ ಯೂನಿಯನ್‌ಗಳಿಗೆ ನನ್ನ ಸೇವೆ ಉಚಿತ” ಎನ್ನುತ್ತಾರೆ.

“ನನ್ನ ಮೇಲೆಯೂ ಹಲವಾರು ಕೇಸ್‌ಗಳನ್ನು ಹಾಕಿದ್ದಾರೆ. ನನ್ನನ್ನು ಕೆಜಿಎಫ್‌ನಲ್ಲಿ ರೌಡಿಶೀಟರ್ ಎಂದು ನಮೂದಿಸಿದ್ದಾರೆ. ಕಾರ್ಮಿಕ ಹೋರಾಟದ ಫಲವಾಗಿ ಕೋಲಾರದಲ್ಲಿ ನನ್ನ ವಿರುದ್ಧ ಸುಮಾರು ಇಪ್ಪತ್ತು ಕೇಸ್‌ಗಳಿದ್ದವು. ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು. ವೇದಿಕೆ ಮೇಲೆ ಇದ್ದಾಗ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದುಂಟು. ಬೀದಿ ಹೋರಾಟದ ಸಂದರ್ಭಗಳಲ್ಲೂ ದಾಳಿಗಳಾಗಿವೆ” ಎಂದು ನೆನೆಯುತ್ತಾರೆ ಅವರು.

ವಕೀಲರಾಗಿ ಬಾಲನ್
ಬಾಲನ್ ಅವರ ಹೋರಾಟ ಬದುಕಿನಷ್ಟೇ ಅವರ ವೃತ್ತಿ ಬದುಕು ಕೂಡ ಗಮನಾರ್ಹ. ಅಪರಾಧ ಪ್ರಕರಣಗಳ ವಕೀಲರಾಗಿ ಇವರು ಮನೆಮಾತಾಗಿದ್ದಾರೆ. ಕರ್ನಾಟಕದಲ್ಲಿ ಸದ್ದು ಮಾಡಿದ ದೊಡ್ಡದೊಡ್ಡ ಪ್ರಕರಣಗಳ ವಕೀಲರಾಗಿ ಕೆಲಸ ಮಾಡಿದ್ದಾರೆ. ಎನ್‌ಕೌಂಟರ್, ಬಾಂಬ್ ಸ್ಫೋಟ ಮುಂತಾದ ಪ್ರಕರಣಗಳು, ಅಮಾಯಕರ ಮೇಲೆ ದಾಖಲಾದ ಯುಎಪಿಎ, ಎನ್‌ಐಎ ಪ್ರಕರಣಗಳನ್ನು ಕೈಗೆತ್ತಿಕೊಂಡ ಹೆಗ್ಗಳಿಕೆಯೂ ಇವರಿಗಿದೆ. ದಕ್ಷಿಣ ಭಾರತದಲ್ಲಿ ದಾಖಲಾಗಿರುವ ಯುಎಪಿಎ, ಎನ್‌ಐಎ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನವನ್ನೂ ಇವರು ಮಾಡುತ್ತಿದ್ದಾರೆ. 2020ರಲ್ಲಿ ನೂರಾರು ಪ್ರಖ್ಯಾತ ವಕೀಲರನ್ನು ಒಂದು ಕಡೆ ಸೇರಿಸಿ ಸಮಾವೇಶವನ್ನೂ ನಡೆಸಿದ್ದರು. ಈ ಪ್ರಕರಣಗಳನ್ನು ನಿಭಾಯಿಸುವ ಕುರಿತು ಚರ್ಚೆ ನಡೆದಿತ್ತು.

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ ಬಾಲನ್ ಕೆಲಸ ಮಾಡುತ್ತಿದ್ದಾರೆ. “ಒಂದೂ ರೂಪಾಯಿ ಕೂಡ ತೆಗೆದುಕೊಂಡಿಲ್ಲ. ಇದರಲ್ಲಿ ನ್ಯಾಯ ಸಿಗಬೇಕು ಎನ್ನುವುದು ನನ್ನ ಹೋರಾಟ” ಎನ್ನುತ್ತಾರೆ ಅವರು. ಇಷ್ಟೇ ಅಲ್ಲದೇ ಹಲವು ಪ್ರಕರಣಗಳಲ್ಲಿ ಸ್ಪೆಷಲ್ ಪ್ರಾಸಿಕ್ಯೂಟರ್ ಆಗಿದ್ದಾರೆ.

“ಭ್ರಷ್ಟಾಚಾರ ಪ್ರಕರಣಗಳನ್ನು ಕೈಗೆತ್ತಿಕೊಂಡರೆ ಲಕ್ಷಾಂತರ ಹಣ ಬರುತ್ತದೆ. ಆದರೆ ನಾನು ಅವುಗಳನ್ನು ತೆಗೆದುಕೊಳ್ಳುವುದಿಲ್ಲ. ಹೆಣ್ಣುಮಕ್ಕಳ ರೇಪ್ ಪ್ರಕರಣಗಳು ಬಂದಾಗ ಆರೋಪಿ ಮುಗ್ಧ ಎಂದು ಗೊತ್ತಾದಾಗ ಮಾತ್ರ ಪ್ರಕರಣ ಕೈಗೆತ್ತಿಕೊಳ್ಳುತ್ತೇನೆ. ಇಲ್ಲವಾದರೆ ಎಷ್ಟು ಲಕ್ಷ ಕೊಟ್ಟರೂ ಅಂತಹ ಪ್ರಕರಣಗಳನ್ನು ಮುಟ್ಟುವುದಿಲ್ಲ. ನನ್ನ ಕೇಸು, ನನ್ನ ಕಾಸು ಎಂದು ಹೋಗುವವನು ನಾನಲ್ಲ. ನ್ಯಾಯ ಸಿಗಬೇಕಾದ ಪ್ರಕರಣಗಳನ್ನು ಮಾತ್ರ ನಡೆಸುತ್ತೇನೆ. ಹೆಣ್ಣುಮಕ್ಕಳಿಗೆ ದೌರ್ಜನ್ಯಗಳಾದಾಗ ಅವರ ಪರ ನಿಂತು ಕೆಲಸ ಮಾಡಿದ್ದೇನೆ. ಸಂತ್ರಸ್ತ ಹೆಣ್ಣುಮಕ್ಕಳಿಂದ ಹಣ ಪಡೆದುಕೊಳ್ಳುವುದಿಲ್ಲ” ಎನ್ನುವುದು ಬಾಲನ್ ಅವರ ಬದ್ಧತೆ.

“ಟ್ರೇಡ್ ಯೂನಿಯನ್, ಕಾರ್ಮಿಕರ ಕೆಲಸಗಳಿಗೆ ನನ್ನ ಸೇವೆ ಉಚಿತ. ಕಾನೂನು ಕ್ಷೇತ್ರದ ಕೆಲವು ಪ್ರಕರಣಗಳಲ್ಲಿ ನಾನು ಶುಲ್ಕವನ್ನು ಪಡೆಯುತ್ತೇನೆ. ನಾನು ಟಿಪಿಕಲ್ ಕಾರ್ಪೊರೆಟ್ ಲಾಯರ್ ಅಲ್ಲ. ಹಾಗೆಯೇ ನಾನು ಮಾನವ ಹಕ್ಕುಗಳ ಹೋರಾಟದ ವಕೀಲ ಎಂದೂ ಹೇಳಿಕೊಳ್ಳುವುದಿಲ್ಲ. ಒಬ್ಬ ಗಣಿ ಕಾರ್ಮಿಕನ ಮಗನಾಗಿ ನೊಂದವರ ಪರ ಕೆಲಸ ಮಾಡುವುದು, ಕಾರ್ಮಿಕರಿಗಾಗಿ ಹೋರಾಡುವುದು ನನ್ನ ಕರ್ತವ್ಯ ಎಂದು ತಿಳಿಸಿದ್ದೇನೆ. ಇದು ಫ್ಯಾಷನ್ ಅಲ್ಲ. ಹಾಗೆಂದು ನಾನು ಲೀಡರ್ ಅಲ್ಲ, ಆದರೆ ಬೀದಿ ಹೋರಾಟಗಾರ” ಎನ್ನುವುದು ಬಾಲನ್ ಅವರ ಸ್ಪಷ್ಟನುಡಿ.

ಇಷ್ಟೇ ಅಲ್ಲದೆ ಟಿ.ವಿ.ಗಳಿಗೆ ಸಂದರ್ಶನಗಳನ್ನು ನೀಡುವುದು, ಪಂಚಿಂಗ್ ಆಗಿ ಮಾತನಾಡಿ ಕೇಳುಗರನ್ನು ಆಕರ್ಷಿಸುವುದು ಬಾಲನ್ ಅವರ ಮತ್ತೊಂದು ಗುಣ. ಅಂದಹಾಗೆ ಅವರಿಗೆ ಈಗ 63 ವರ್ಷ ವಯಸ್ಸು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಾಲನ್ ರವರ ಕುರಿತ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.ಅವರ ಕುರಿತು ಪುಸ್ತಕ ಪ್ರಕಟವಾದರೆ ಮುಂದಿನ ತಲೆಮಾರಿಗೆ ದಾಖಲೆಯಾಗಲಿದೆ.ಅವರ ಎಲ್ಲ ನಿಲುವುಗಳನ್ನು ಒಪ್ಪಲಾಗದಿದ್ದರುಸದ್ಯ ಕೇಸು ಕಾಸು ಅಂತಾ ಬಡಿದಾಡುವ ವಕೀಲರ ಮಧ್ತೆ ಗಟ್ಟಿ ಗುಂಡಿಗೆಯಿಂಥ ಲಾಯರ್ ಅಂತೂ ಕರ್ನಾಟಕಕ್ಕೆ ಬೇಕಿದೆ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...