ಪ್ರಸ್ತುತ ಮಾಧ್ಯಮಗಳಲ್ಲಿ ಬಹು ಚರ್ಚಿತವಾಗುತ್ತಿರುವುದು ಆಗಸ್ಟ್ 11 ರಂದು ಬೆಂಗಳೂರಿನ ಪ್ರವಾದಿ ನಿಂದನೆ ಮತ್ತು ಡಿಜೆ ಹಳ್ಳಿ ಗಲಭೆ. ಈ ಘಟನೆಯ ಕುರಿತು ಬರುತ್ತಿರುವ ವರದಿಗಳಲ್ಲಿ ಸತ್ಯಾಸತ್ಯತೆ ಏನಿದೆ ಎಂಬುದನ್ನು ಮಾಧ್ಯಮಗಳು ತಮ್ಮಂತೆ ತಾವೇ ಅಥವಾ ‘ಪೊಲೀಸ್ ವರದಿ’ಗಳನ್ನು ಉಲ್ಲೇಖಿಸಿ ಮಾಡುವ ‘ಸ್ಟೋರಿ’ಗಳಿಂದ ತಿಳಿಯುವುದು ಅಸಾಧ್ಯ.
ಅದರಲ್ಲೂ ಗಲಭೆಗಳು ನಡೆದರೆ ಹಬ್ಬವೆಂದು ಭಾವಿಸುವ ರೀತಿ ವರ್ತಿಸುವ, ಯಾರ ಮೇಲೋ ಗೂಬೆ ಕೂರಿಸುವ ಅಜೆಂಡಾ ಇಟ್ಟುಕೊಂಡಂತೆ ಕಾಣುವ ವರದಿಗಳಿಂದ ಏನು ತಿಳಿಯಲು ಸಾಧ್ಯ? ಹಾಗೆಂದು ‘ಸತ್ಯಶೋಧನೆ’ ಮಾಡುತ್ತೇವೆಂದು ಹೊರಡುವ ಕೆಲವು ಪ್ರಯತ್ನಗಳ ಹಿಂದೆಯೂ ಅಜೆಂಡಾ ಇರಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯ.
ಅದರಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಧ್ಯಯನ ಸಮಿತಿಗಳನ್ನು ರಚಿಸಿರುವಾಗ ಇಂತಹ ಪ್ರಶ್ನೆಗಳು ಇನ್ನಷ್ಟು ಏಳುತ್ತವೆ. ಹಾಗಾಗಿ ಸತ್ಯಶೋಧನೆಯು ಪಾರದರ್ಶಕವಾಗಿರುವುದು ಅತಿ ಮುಖ್ಯ. ಹೀಗಾಗಿ ವಿಶಿಷ್ಟ ರೀತಿಯ ಸತ್ಯಶೋಧನೆಯೊಂದನ್ನು ಬೆಂಗಳೂರಿನ ಹಲವು ನಾಗರಿಕ ಸಂಘಟನೆಗಳು ಮಾಡಲು ಯೋಜಿಸಿವೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಪ್ರದೇಶಗಳಲ್ಲಿ ಆಗಸ್ಟ್ 11 ರಂದು ರಾತ್ರಿ ನಡೆದ ಹಿಂಸೆ ಮತ್ತು ನಂತರದ ಘಟನಾವಳಿಗಳು ನಗರದ ಆ ಭಾಗವನ್ನು ಪ್ರಕ್ಷುಬ್ಧಗೊಳಿಸಿದೆ. ಅಲ್ಲದೆ ಈ ಗಲಭೆ ಸಂದರ್ಭದಲ್ಲಿ ನಡೆಸಲಾದ ಗೋಲಿಬಾರ್ನಲ್ಲಿ 4 ಜನ ಯುವಕರು ಬಲಿಯಾಗಿದ್ದಾರೆ. ಇನ್ನೂ ಹಲವರು ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಕಷ್ಟು ಆಸ್ತಿಪಾಸ್ತಿಗಳು ನಷ್ಟವಾಗಿದೆ. ನೂರಾರು ಜನರನ್ನು ಬಂಧಿಸಲಾಗಿವೆ;
ಅವರಲ್ಲಿ ಅಮಾಯಕರ ಸಂಖ್ಯೆ ಹೆಚ್ಚಿದೆಯೆಂಬ ಆರೋಪವೂ ಕೇಳಿ ಬಂದಿದೆ. ಹಾಗೆಯೇ ಸದರಿ ಗಲಭೆಯ ಹಿಂದೆ ಎಸ್ಡಿಪಿಐನ ಕೈವಾಡ ಇದೆಯೆಂದು ಬಿಜೆಪಿ ನಾಯಕರು ಮತ್ತು ಮಾಧ್ಯಮಗಳು ಆರೋಪಿಸುತ್ತಿವೆ.
ಈ ಗಲಭೆಗೆ ಮೂಲ ಕಾರಣ ನವೀನ್ ಎಂಬ ವ್ಯಕ್ತಿ ಮಹಮ್ಮದ್ ಪೈಗಂಬರ್ ವಿರುದ್ಧ ಫೇಸ್ ಬುಕ್ ನಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದು ಎಂದು ಹೇಳಲಾಗಿದೆ. ಆದರೆ, ಅದಕ್ಕೂ ಹಿಂದೆ ಬೇರೆ ಹುನ್ನಾರಗಳಿದ್ದವೇ ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ.
ಈ ನಡುವೆ ರಾಜ್ಯ ಸರ್ಕಾರದ ಆದೇಶದಂತೆ ಗಲಭೆಗೆ ಸಂಬಂಧಿಸಿದಂತೆ ಕಳೆದ 9 ದಿನಗಳಿಂದ ಪೊಲೀಸ್ ತನಿಖೆ ನಡೆಯುತ್ತಿದೆ. ಆದರೆ ಈವರೆಗೆ ಸಂಪೂರ್ಣ ಸ್ಪಷ್ಟತೆ ದೊರಕಿಲ್ಲ. ಅಲ್ಲದೆ, ರಾಜಕೀಯ ಪಕ್ಷಗಳು ಈ ಗಲಭೆಗೆ ಪರಸ್ಪರ ಹೊಣೆಗಾರರೆಂದು ಆರೋಪಿಸುತ್ತಾ ಕೆಸರೆರಚಾಟಕ್ಕೆ ಮುಂದಾಗಿವೆ.
ಡಿಜೆ ಹಳ್ಳಿ ಆಸುಪಾಸಿನ ಪ್ರದೇಶಗಳು ಸಾಮಾನ್ಯವಾಗಿ ಆರ್ಥಿಕ ಮತ್ತು ಸಾಮಾಜಿಕ ದುರ್ಬಲತೆಯಿಂದ ಕೂಡಿರುವ ಸಮುದಾಯದ ಜನರೇ ಇರುವ ಪ್ರದೇಶ. ಈ ಘಟನೆಯಿಂದ ಹಲವು ಬಡವರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇಡೀ ವಿದ್ಯಮಾನದಲ್ಲಿ ಮಾಧ್ಯಮಗಳು ಯಾವ ಪಾತ್ರವನ್ನು ವಹಿಸಿದ್ದವು ಎಂಬುದು ಶೋಧನೆಗೊಳಗಾಗಬೇಕಿರುವ ಒಂದು ಆಯಾಮ. ಮಾಧ್ಯಮಗಳು ವರದಿ ಮಾಡಿದವೇ ಅಥವಾ ಪಾತ್ರ ವಹಿಸಿದವೇ?
ಇಂತಹ ಹತ್ತು ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಸತ್ಯದ ಶೋಧನೆಗೆ ಹೊರಟಿರುವುದಲ್ಲದೇ, ಇಡೀ ಪ್ರಕ್ರಿಯೆಯನ್ನೂ ಪಾರದರ್ಶಕವಾಗಿ ನಡೆಸುತ್ತೇವೆಂದು ತಂಡವು ಹೇಳಿರುವುದು ವಿಶಿಷ್ಟವಾದ ಬೆಳವಣಿಗೆಯಾಗಿದೆ. ಸತ್ಯಶೋಧನೆಯನ್ನೂ ಒರೆಗೆ ಹಚ್ಚುತ್ತಾ, ಬೆಳವಣಿಗೆಗಳನ್ನು ನಾನುಗೌರಿ.ಕಾಂ ವರದಿ ಮಾಡಲಿದೆ.
ಅವರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯ ಸಾರಾಂಶವು ಈ ಕೆಳಗಿನಂತಿದೆ.
ಸಂವಿಧಾನದ ಆಶಯಗಳನ್ನು ಎಲ್ಲಾ ಜನ ಸಮುದಾಯಗಳಿಗೂ ಖಾತ್ರಿಪಡಿಸುವ ಮತ್ತು ಶಾಂತಿ ಸೌಹಾರ್ದತೆಯನ್ನು ಪುನರ್ ಸ್ಥಾಪಿಸುವ ಉದ್ದೇಶಗಳೊಂದಿಗೆ ಈ ಸತ್ಯಶೋಧನಾ ಕೆಲಸವನ್ನು ಆರಂಭಿಸಲಾಗಿದೆ. ಈ ಸತ್ಯಶೋಧನಾ ತಂಡವು ಗಲಭೆ ನಡೆದ ಪ್ರದೇಶಗಳ ಎಲ್ಲಾ ಸಮುದಾಯಗಳ ನಿವಾಸಿಗಳನ್ನು, ತೊಂದರೆಗೆ ಒಳಗಾದ ಕುಟುಂಬದ ಸದಸ್ಯರನ್ನು, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು, ಹಿಂಸೆಯ ಸಂದರ್ಭದಲ್ಲಿ ಗಾಯಗೊಂಡ ಮತ್ತು ಇತರ ಮಾಧ್ಯಮ ಪ್ರತಿನಿಧಿಗಳನ್ನು ಸೇರಿದಂತೆ ಹಲವರನ್ನು ಭೇಟಿ ಮಾಡಲಿದೆ.
ಈ ಸಂದರ್ಭದಲ್ಲಿ ತಂಡವು ಸರಿಯಾದ ಮಾಹಿತಿಯನ್ನು ಸಂಗ್ರಹಿಸಲಿದೆ. ಜೊತೆಗೆ, ದಿಕ್ಸೂಚಿ ಅಂಶಗಳನ್ನು ರೂಪಿಸಿಕೊಳ್ಳಲಾಗಿದ್ದು, ಅವುಗಳಿಗೆ ಬದ್ಧವಾಗಿದ್ದುಕೊಂಡು ಈ ಸತ್ಯಶೋಧನೆಯು ನಡೆಯಲಿದೆ. ಈ ಮೂಲಕ ಘಟನೆಗೆ ಸಂಬಂಧಿಸಿದಂತೆ ನೈಜ ಅಂಶಗಳನ್ನು ಬಯಲಿಗೆ ಎಳೆಯಲಾಗುವುದು.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷರಾದ ನೀನಾ ನಾಯಕ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ವಿ. ನಾಗರಾಜ್, ವಕೀಲರಾದ ನಿಯಾಜ್ ಮೂಸ, ಪತ್ರಕರ್ತರು ಹಾಗೂ ಪಾಲಿಸಿ ಸಂಶೋಧಕರಾದ ಸಿಂಥಿಯಾ ಸ್ಪೀಫೆನ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ಗಾಂಧಿಮಥಿ ಸೇರಿದಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳು ಈ ಸಮಿತಿಯ ಭಾಗವಾಗಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ಪದಚ್ಯುತಿಗೆ RSS ನಾಯಕರು ಪ್ರಯತ್ನಿಸುತ್ತಿದ್ದಾರೆ: ಸಿದ್ದರಾಮಯ್ಯ