“ಮಾರ್ಗರೇಟ್ ರಾಮಾಚಾರಿ ಸುಖವಾಗಿ ಬಾಳಲು ಆಗಿಲ್ಲ – ಇನ್ನು ಮುಂದು ಪ್ರೀತಿಗೆ ಯಾರು ಅಡ್ಡ ಬರಬಾರದು, ಸರ್ಕಾರ ಕೂಡ! ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸಿಕೊಳ್ಳೋಣ ಬನ್ನಿ. ದ್ವೇಷ ಸಾಕು, ಪ್ರೀತಿ ಬೇಕು. ಮುಖ್ಯಮಂತ್ರಿಗಳೇ, ತಮ್ಮ ಬದ್ಧತೆ ಸಂವಿಧಾನದ ಮೌಲ್ಯಗಳಿಗಿರಲಿ”.. ಇವಿಷ್ಟು ಇಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮತೀಯ ಗೂಂಡಾಗಿರಿ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಮುಖ್ಯಮಂತ್ರಿಗಳ ಹೇಳಿಕೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಕಂಡುಬಂದ ಮತ್ತು ಕೇಳಿಬಂದ ಘೋಷಣೆಗಳು.
ಕ್ರಿಯೆಗೆ ಪ್ರತಿಕ್ರಿಯೆ ಕೊಡುವುದು ವಿನಾಶಕ್ಕೆ ಕರೆದೊಯ್ಯುತ್ತದೆ. ಬಸವಣ್ಣನನ್ನೆ ಮರೆತ ಬೊಮ್ಮಾಯಿ, ಸಾಂವಿಧಾನಿಕ ಮೌಲ್ಯಗಳನ್ನು ಮರೆತ ಮುಖ್ಯಮಂತ್ರಿ. ಜಾತಿ ಧರ್ಮದ ಹೆಸರಿನಲ್ಲಿ ಕಗ್ಗೊಲೆ ಸಾಕು ಎಂಬ ಘೋಷಣೆಗಳ ಮೂಲಕ ನೂರಾರು ಪ್ರತಿಭಟನಾಕಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.
ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸಿಕೊಳ್ಳೋಣ ಬನ್ನಿ. ದ್ವೇಷ ಸಾಕು, ಪ್ರೀತಿ ಬೇಕು. ಮುಖ್ಯಮಂತ್ರಿಗಳೇ, ತಮ್ಮ ಬದ್ಧತೆ ಸಂವಿಧಾನದ ಮೌಲ್ಯಗಳಿಗಿರಲಿ"..
ಮತೀಯ ಗೂಂಡಾಗಿರಿ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ pic.twitter.com/CnJXPwmR6o
— Naanu Gauri (@naanugauri) October 21, 2021
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರಾದ ವಿನಯ್ ಶ್ರೀನಿವಾಸ್, “ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನದ ಮೇಲೆ ಪ್ರಮಾಣ ಮಾಡಿದರು. ನನ್ನ ಬದ್ಧತೆ ಸಂವಿಧಾನಕ್ಕೆ, ಈ ನಾಡಿನಲ್ಲಿ ಯಾವುದೇ ಒಂದು ವರ್ಗಕ್ಕೆ ಒಲವು ತೋರಿಸದೆ ಎಲ್ಲ ವರ್ಗಕ್ಕೂ ನ್ಯಾಯ ಸಿಗುವಂತೆ ಆಡಳಿತ ನಡೆಸುತ್ತೇನೆ, ಸಂವಿಧಾನದ ಮೌಲ್ಯಗಳಿಗೆ ತಕ್ಕಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ಅವು ಇಂದು ಮಾಡುತ್ತಿರುವುದು ಅದಕ್ಕೆ ಸಂಪೂರ್ಣ ವಿರುದ್ಧವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಯುವಕ-ಯುವತಿಯರು ಒಂದು ಐಸ್ ಕ್ರೀಂ ತಿನ್ನಲು ಸಹ ಸಾಧ್ಯವಾಗುತ್ತಿಲ್ಲ. ಅದರಲ್ಲಿಯೂ ಜಾತಿ-ಧರ್ಮ ನೋಡಲಾಗುತ್ತಿದೆ. ಬಜರಂಗದಳ, ವಿಎಚ್ಪಿ ಗೂಂಡಾಗಳ ಕಿರುಕುಳದಿಂದ ಯುವಕ ಯುವತಿಯರು ತಮ್ಮಿಷ್ಟ ಬಂದವರ ಜೊತೆ ಸ್ನೇಹ ಮಾಡುವಂತಿಲ್ಲ, ಅವರಿಗೆ ತಮಗಿಷ್ಟ ಬಂದವರನ್ನು ಪ್ರೀತಿ ಮಾಡುವ ಹಕ್ಕಿಲ್ಲದಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮತೀಯ ಗೂಂಡಾಗಿರಿ ಸಮರ್ಥನೆ ಹೇಳಿಕೆ ಹಿಂಪಡೆಯಿರಿ: ಸಿಎಂ ಬೊಮ್ಮಾಯಿಗೆ ನೋಟೀಸ್
ಬಾಬಾ ಸಾಹೇಬ್ ಅಂಬೇಡ್ಕರ್ರವರು ಜಾತಿ ವಿನಾಶಕ್ಕೆ ಅಂತರ್ಜಾತಿ ವಿವಾಹ ಅಗತ್ಯ ಎಂದಿದ್ದರು. ಆದರೆ ಇಂದು ಅಂತರ್ಜಾತಿ ಮದುವೆಗೆ ಕಲ್ಲು ಹಾಕುತ್ತಿದ್ದಾರೆ. ಜನರ ನಡುವೆ ಜಾತಿ ಧರ್ಮದ ಗೋಡೆ ಕಟ್ಟುತ್ತಿದ್ದಾರೆ. ಮಹಿಳೆಯರ ಮೇಲೆ ದಾಳಿ ಅವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಮಹಿಳೆಯರು ಯಾರೊಂದಿಗೆ ಸ್ನೇಹ ಮಾಡಬೇಕು, ಯಾರೊಂದಿಗೆ ಮದುವೆಯಾಗಬೇಕು ಎಂಬುದನ್ನು ನಿಯಂತ್ರಿಸುತ್ತಿದ್ದಾರೆ. ಏಕೆ ಮಹಿಳೆಯರಿಗೆ ಜ್ಞಾನವಿಲ್ಲವೇ? ಸ್ವಾತಂತ್ರ್ಯವಿಲ್ಲವೇ? ಮಹಿಳೆಯರು ಏನು ಮಾಡಬೇಕೆಂದು ತೀರ್ಮಾನಿಸಲು ಇವರ್ಯಾರು ಎಂದು ಕಿಡಿಕಾರಿದರು.
ನಿಮ್ ತಲೇಲಿ ಬೂಸಾ ತುಂಬಿಕೊಂಡಿದೆ. ನೀವು ಬೇರೆಯವರಿಗೆ ಪಾಠ ಮಾಡಬೇಡಿ. ಕರ್ನಾಟಕದಲ್ಲಿ ದ್ವೇಷ ತುಂಬಿಸುತ್ತಿದ್ದಾರೆ. ಕೋವಿಡ್ನಿಂದ ಜನ ಸಾಯುತ್ತಿದ್ದಾರೆ. ಅಪೌಷ್ಠಿಕತೆ ತುಂಬಿಕೊಂಡಿದೆ. ಇದರ ಬಗ್ಗೆ ಸಮೀಕ್ಷೆ ಮಾಡಲು ಯಾರು ಮುಂದೆ ಬಂದಿಲ್ಲ, ಆದರೆ ಚರ್ಚ್ಗಳ ಸಮೀಕ್ಷೆ ಮಾಡುತ್ತೇವೆ, ಅಲ್ಲಿ ಮತಾಂತರ ತಡೆಯುತ್ತೇವೆ ಎಂದು ಗೂಂಡಾಗಿರಿ ಮಾಡುತ್ತಿದ್ದಾರೆ. ಇವರು ಅಶ್ಪೃಶ್ಯತೆ ನಿಲ್ಲಿಸಲು, ದಲಿತರ ಮೇಲೆ ದೌರ್ಜನ್ಯ ತಡೆಗಟ್ಟಲು ಏನು ಮಾಡಿದ್ದಾರೆ? ಬೆಂಗಳೂರಿನಲ್ಲಿ ಸ್ಲಂ ಜನರಿಗೆ ಏನು ಸಹಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಲು ತಾವು ಹೇಳಿದ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು. ರಾಜ್ಯ ಸರ್ಕಾರವು ಸಂವಿಧಾನವನ್ನು ಎತ್ತಿಹಿಡಿಲಾಗುತ್ತೆಂದು ಹಾಗೂ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಮತ್ತು ಅಂತಹ ಅಪರಾಧಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಶಿಕ್ಷಿಸಲು ಕ್ರಮ ಕೈಗೊಳ್ಳಲಾಗುವುದೆಂದು ಖಚಿತಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸರ್ವೋಚ್ಛ ನ್ಯಾಯಾಲಯವು ಅಂತರ್ಜಾತಿ ಮತ್ತು ಅಂತರ್ ಧರ್ಮೀಐ ವಿವಾಹಗಳನ್ನು ರಕ್ಷಿಸಲು ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು ಮತ್ತು ಅಂತಹ ವಿವಾಹಿತ ವ್ಯಕ್ತಿಗಳ ವಿರುದ್ಧ ನಡೆಯುವ ಹಿಂಸೆ, ಮರ್ಯಾದಾ ಹತ್ಯೆಗಳು ಮತ್ತು “ನೈತಿಕ ಪೊಲೀಸ್ಗಿರಿ” ವಿರುದ್ಧ ತೆಗೆದುಕೊಳ್ಳುವ ಕಾನೂನು ಕ್ರಮಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವಂತೆ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಭಾಗವಹಿಸಿದ್ದರು.
ಇದನ್ನೂ ಓದಿ: ನೈತಿಕತೆ ಇಲ್ಲದೇ ಬದುಕಲಾಗದು: ಮಾರಲ್ ಪೊಲೀಸಿಂಗ್ ಸಮರ್ಥಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ