ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಜನಪರ ಸಂಘಟನೆಗಳ ಐಕ್ಯ ವೇದಿಕೆಯಾದ ಫ್ಯಾಸಿಸ್ಟ್ ವಿರೋಧಿ ಒಕ್ಕೂಟ ಪ್ರತಿಭಟನೆ ನಡೆಸಿತು.
ಫ್ಯಾಸಿಸ್ಟ್ ವಿರೋಧಿ ಒಕ್ಕೂಟದ ಸಹಭಾಗಿ ಸಂಘಟನೆಗಳಾದ, ದ್ರಾವಿಡ ವಿಡುದಲೈ ಕಳಗಂ, ಮಾಕ್ಸ್ ಅಂಬೇಡ್ಕರ್ ಅಧ್ಯಯನ ಕೇಂದ್ರ, ಪ್ರಜಾ ತಾಂತ್ರಿಕ ಜನರ ವೇದಿಕೆ, ಕರ್ನಾಟಕ ತಮಿಳು ಮಕ್ಕಳು ಇಯೆಕಂ, ಪ್ರಜಾ ವಿಮೋಚನ ಚಳುವಳಿ, ಕರ್ನಾಟಕ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ಜನ ಜಾಗೃತಿ ವೇದಿಕೆ, ಫ್ಯಾಂಥರ್ ಆಫ್ ಇಂಡಿಯಾ, ಭಾರತೀಯ ದಲಿತ ಪ್ಯಾಂಥರ್ ಸಂಘಟನೆಗಳು ಸೇರಿದಂತೆ ಹಲವಾರು ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾ ವಿಮೋಚನಾ ಸಮಿತಿಯ ಮಧುರೆ ಮಾತನಾಡಿ, “ಕಾರ್ಪೋರೇಟ್ ಮಾಧ್ಯಮಗಳ ಸಹಾಯದಿಂದ ದೇಶಾದ್ಯಂತ ಕೋಮುವಾದವನ್ನು ಪ್ರಚೋದಿಸಿ ಕಾರ್ಪೋರೇಟ್ ಕಂಪನಿಗಳ ಹಣಬಲದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದೇಶದ ಎಲ್ಲಾ ಸಂಪನ್ಮೂಲಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆಯಲು ಅನೇಕ ಅನೇಕ ಜನ ವಿರೋಧಿ ಕಾಯಿದೆಗಳನ್ನು ಜಾರಿ ಮಾಡುತ್ತಿದೆ” ಎಂದರು.
ಇದನ್ನೂ ಓದಿ: ರೈತ ಇದ್ರೇನೆ ದೇಶ: ರೈತ ಹೋರಾಟಕ್ಕೆ ನಟ ಶಿವರಾಜ್ಕುಮಾರ್ ಬೆಂಬಲ
“ಕಾರ್ಪೋರೇಟ್ ಶಕ್ತಿಗಳ ಅನುಕೂಲಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತ ಸಮುದಾಯವನ್ನು ದಿವಾಳಿಗೊಳಿಸಿ ಕೃಷಿ ಉತ್ಪಾದನೆಯನ್ನು ಕಾರ್ಪೋರೇಟ್ ಕಂಪನಿಗಳ ಪರವಾಗಿ ಮಾಡುವುದು ಈ ಕಾಯಿದೆಗಳ ನಿಜವಾದ ಉದ್ದೇಶ” ಎಂದು ಆರೋಪಿಸಿದರು.
ಕಾಯ್ದೆ ವಿರೋಧಿಸಿ ಕೆನಡಾ, ಇಂಗ್ಲೇಂಡ್, ಆಸ್ಟ್ರೇಲಿಯಾ, ಅಮೆರಿಕಾ ಮತ್ತು ಇತರೆ ದೇಶಗಳ ಜನರು ಈ ಚಳುವಳಿಗೆ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಮೇಲೆ ಸರ್ಕಾರ ನಡೆಸುತ್ತಿರುವ ದಮನಕಾರಿ ನೀತಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಜನಪರ ಸಂಘಟನೆಗಳ ಐಕ್ಯ ವೇದಿಕೆಯಾದ ಫ್ಯಾಸಿಸ್ಟ್ ವಿರೋಧಿ ಒಕ್ಕೂಟಗಳ ಹಕ್ಕೊತ್ತಾಯಗಳು
1. ಮೂರು ಜನವಿರೋಧಿ ರೈತ ವಿರೋಧಿ ಕೃಷಿ ತಿದ್ದುಪಡಿ ಕಾಯಿದೆಗಳನ್ನು ರದ್ದುಗೊಳಿಸಬೇಕು.
2. ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಗೊಳಿಸಬೇಕು.
3. ವಿದ್ಯುತ್ ತಿದ್ದುಪಡಿ ಕಾಯ್ದೆ-2020 ರದ್ದುಗೊಳಿಸಬೇಕು.
4. ಭೂ ಸುಧಾರಣಾ ತಿದ್ದುಪಡಿ ರದ್ದಾಗಬೇಕು.
5. ರೈತ ಹೋರಾಟಗಾರರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು.
ರಾಜ್ಯದಲ್ಲಿ ಇಂದು ಕೂಡ ಕರ್ನಾಟಕ ರಕ್ಷಣ ವೇದಿಕೆಯಿಂದ ಕಾಲ್ನಡಿಗೆ ಜಾಥಾ ನಡೆಸಿ ಕಾಯ್ದೆಗಳನ್ನು ವಿರೋಧಿಸಿತು. ಐಕ್ಯಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಹೋರಾಟಗಾರ, ಶತಾಯುಷಿ ದೊರೆಸ್ವಾಮಿ ಪಾಲ್ಗೊಂಡಿದ್ದರು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಬಾರುಕೋಲು ಚಳವಳಿ ನಡೆಸಲಾಯಿತು. ನಾಳೆಯು ಕೂಡ ರಾಜಭವನ ಮುತ್ತಿಗೆ ಹಾಕಲಾಗುತ್ತದೆ ಎಂದು ಐಕ್ಯ ಹೋರಾಟ ವೇದಿಕೆ ಕರೆ ಕೊಟ್ಟಿದೆ.
ಇದನ್ನೂ ಓದಿ: ಈ ಕೃಷಿ ಕಾನೂನುಗಳನ್ನು ಕಾಂಗ್ರೆಸ್ ಕೂಡಾ ತರಲು ಬಯಸಿತ್ತು ಎಂದ ಬಿಜೆಪಿ; ತಿರುಗೇಟು ನೀಡಿದ ಪವಾರ್!