”ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರಿಗೆ ರಾಜ್ಯದಲ್ಲಿ ಸಿಎಂ ಆಗಿ ಕೆಲಸ ನಿರ್ವಹಿಸಲು ಹೆಚ್ಚು ಸಮಯ ಸಿಗದ ಕಾರಣ ಕಾಂಗ್ರೆಸ್ ನಾಯಕತ್ವ ಅವರಿಗೆ ಮತ್ತೊಂದು ಅವಕಾಶ ನೀಡಬೇಕು’ ಎಂದು ನಟ, ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಎನ್ಡಿಟಿವಿಗೆ ತಿಳಿಸಿದ್ದಾರೆ.
ತಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಹೇಳಿರುವ ಅವರು, ಪಂಜಾಬ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಒಳ್ಳೆಯ ಮತ್ತು ಪ್ರಾಮಾಣಿಕ ವ್ಯಕ್ತಿ. ಅವರು ಯಾವಾಗಲೂ ಪೂರ್ಣ ಮನಸ್ಸಿನಿಂದ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
“ನಾನು ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಭೇಟಿ ಮಾಡಿದ್ದೇನೆ. ಕಳೆದ ಮೂರು ತಿಂಗಳಲ್ಲಿ ಅವರು ಮುಖ್ಯಮಂತ್ರಿಯಾಗಿ ಮಾಡಿದ ಕೆಲಸ ಶ್ಲಾಘನೀಯವಾಗಿದೆ. ಆದರೆ ಯಾರಿಗೆ ಆದರೂ ಇದು ಕೆಲಸ ಮಾಡಲು ತುಂಬಾ ಕಡಿಮೆ ಸಮಯ. ಅವರು ಬ್ಯಾಟಿಂಗ್ಗೆ ಹೋಗಿ ನಿಂತು ಚೆಂಡಿನ ಕಡೆ ಕಣ್ಣು ಇಟ್ಟಿದ್ದರು. ಆದರೆ, ಇದ್ದಕ್ಕಿದ್ದಂತೆ ಚಹಾ ವಿರಾಮ ಘೋಷಿಸಲಾಗಿದೆ. ಚಹಾ ವಿರಾಮದ ನಂತರ ಅವರು ಬ್ಯಾಟಿಂಗ್ಗೆ ಮತ್ತೆ ಬರಬೇಕು “ಎಂದು ಸೋನು ಸೂದ್ ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್ ಚುನಾವಣೆ: ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಒತ್ತಡದಲ್ಲಿ ಕಾಂಗ್ರೆಸ್
“ಜನರು ತಮ್ಮ ನಾಯಕ ಯಾರು ಎಂದು ಗುರುತಿಸಲು ಸಹಾಯ ಮಾಡಲು ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು. ಅದನ್ನು ತಿಳಿದುಕೊಳ್ಳುವುದು ಜನರ ಹಕ್ಕು. ನಾನು ಹೈಕಮಾಂಡ್ ಭೇಟಿಯಾದಾಗ, ನೀವು ಸಿಎಂ ಅಭ್ಯರ್ಥಿ ಘೋಷಣೆ ಮಾಡುವುದು ಬಹಳ ಮುಖ್ಯ ಎಂದು ನಾನು ಹೇಳಿದೆ” ಎಂದಿದ್ದಾರೆ.
ಇನ್ನು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರನ್ನು ರಾಜಕೀಯವಾಗಿ ಹೆಚ್ಚು ಅನುಸರಿಸಿಲ್ಲ. ಹಲವು ವರ್ಷಗಳ ಹಿಂದೆ ಕಲಾವಿದನಾಗಿ ಅವರನ್ನು ಒಮ್ಮೆ ಭೇಟಿಯಾಗಿದ್ದೆ. ಅವರು ನಾಯಕರಾಗಿ ಹೇಗೆ ಗುರುತಿಸಿಕೊಳ್ಳುತ್ತಾರೆ ಎಂಬುದನ್ನು ನಾನು ಇನ್ನೂ ನೋಡಿಲ್ಲ. ಆದರೆ, ಅವರ ಪಕ್ಷವು ನಿರ್ಧರಿಸಿರುವುದರಿಂದ ಅವರು ಅದರ ಬಗ್ಗೆ ಯೋಚಿಸಿರಬೇಕು” ಎಂದು ಹೇಳಿದ್ದಾರೆ.
ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಅವರು ತಮ್ಮ ಪೂರ್ವಜರ ಸ್ಥಳವಾದ ಮೊಗಾದಿಂದ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧಿಸುತ್ತಿದ್ದಾರೆ. ತಾವು ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ತಮ್ಮ ಸಹೋದರಿಯನ್ನು ಮಾತ್ರ ಬೆಂಬಲಿಸುತ್ತಿರುವುದಾಗಿ ತಿಳಿಸಿದ್ದಾರೆ.
“ಮೊಗದಲ್ಲಿರುವ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಧರ್ಮಶಾಲೆಗಳನ್ನು (inn) ನನ್ನ ಕುಟುಂಬದವರು ನಿರ್ಮಿಸಿದ್ದಾರೆ. ನನ್ನ ತಾಯಿ ಬಹಳಷ್ಟು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಿದ್ದಾರೆ. ಸಮಾಜ ಸೇವೆ ನಮ್ಮ ರಕ್ತದಲ್ಲಿದೆ. ನಾನು ನನ್ನ ಸಹೋದರಿ ಇಬ್ಬರೂ ಸಾಮಾಜಿಕ ಕೆಲಸಗಳಲ್ಲಿ ತಮ್ಮ ಪೋಷಕರ ಹಾದಿಯನ್ನು ಅನುಸರಿಸುತ್ತಿದ್ದೇವೆ. ನನ್ನ ಸಹೋದರಿ ನಗರದಲ್ಲಿ ಅರ್ಧದಷ್ಟು ಜನರಿಗೆ ಕೋವಿಡ್ ಲಸಿಕೆ ಹಾಕಿದ್ದಾರೆ” ಎಂದು ಸೋನು ಸೂದ್ ತಿಳಿಸಿದ್ದಾರೆ.
ಮಾಳವಿಕಾ ಸೂದ್ ಸಾಚಾರ್ ಮೊಗಾ ಪಟ್ಟಣದ ಪ್ರಮುಖ ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ನಟ ಸೋನು ಸೂದ್ ಮತ್ತು ಮಾಳವಿಕಾ ಸೂದ್ ಸಾಚಾರ್ ಜೋಡಿಯು ಸೂದ್ ಚಾರಿಟಿ ಫೌಂಡೇಶನ್ ಅನ್ನು ನಡೆಸುತ್ತಿದೆ.
ಇದನ್ನೂ ಓದಿ: ರೈತ ಚಳವಳಿಯ ಕಣ ಪಂಜಾಬ್ನಲ್ಲಿ ಚುನಾವಣೆ: ಯಾರಿಗೆ ಲಾಭ?