ಸರ್ಕಾರದಿಂದ ರಚಿಸಲ್ಪಷ್ಟ ಟ್ರಸ್ಟ್/ಪ್ರತಿಷ್ಠಾನಗಳ ಅಧ್ಯಕ್ಷರುಗಳು ಹಾಗೂ ಸದಸ್ಯರ ಅಧಿಕಾರವಧಿಯು ಮುಗಿದಿದ್ದು ಹೊಸ ನೇಮಕಾತಿಯನ್ನು ಸರ್ಕಾರ ಮಾಡಿದೆ. ಆದರೆ ನೇಮಕಾತಿ ಮಾಡುವಾಗ ದೊಡ್ಡ ಪ್ರಮಾದವನ್ನು ಎಸಗಿರುವ ಆರೋಪ ಬಂದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟ್/ಪ್ರತಿಷ್ಠಾನಗಳಿಗೆ ತಕ್ಷಣವೇ ಜಾರಿಗೆ ಬರುವಂತೆ ಮಾಡಿರುವ ಆದೇಶದಲ್ಲಿ ‘ರಾಜೇಶ್ವರಿ ತೇಜಸ್ವಿ’ ಅವರ ಹೆಸರೂ ಇರುವುದು ಟೀಕೆಗೆ ಗುರಿಯಾಗಿದೆ.
ಚಿಕ್ಕಮಗಳೂರಿನಲ್ಲಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ನರೇಂದ್ರ ರೈ ದೇರ್ಲ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದು, ಅದರಲ್ಲಿನ ಸದಸ್ಯರ ಪಟ್ಟಿಯಲ್ಲಿ ತೇಜಸ್ವಿಯವರ ಪತ್ನಿ, ಬರಹಗಾರ್ತಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರ ಹೆಸರೂ ಇದೆ. ಆದರೆ ರಾಜೇಶ್ವರಿ ತೇಜಸ್ವಿಯವರು ತೀರಿಹೋಗಿ ಹೀಗಾಗಲೇ ಎಂಟು ತಿಂಗಳು ಸಂದಿವೆ.
ಕನ್ನಡ ಸಾರಸ್ವತ ಲೋಕಕ್ಕೆ ರಾಜೇಶ್ವರಿ ತೇಜಸ್ವಿಯವರ ಹೆಸರು ಚಿರಪರಿಚಿತವಾಗಿದ್ದು, ಸದಸ್ಯರ ಪಟ್ಟಿಯಲ್ಲಿರುವ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರು ಯಾರೆಂಬುದು ಗೊಂದಲ ಉಂಟು ಮಾಡಿದೆ. ಕನ್ನಡ ಸಾಂಸ್ಕೃತಿಕ ಲೋಕದ ಇತಿಹಾಸ ತಿಳಿಯದವರು ಈ ಪ್ರಮಾದ ಎಸಗಿದ್ದಾರೆಯೇ ಎಂಬ ಅನುಮಾನಗಳು ಮೂಡಿವೆ.
2021ರ ಡಿಸೆಂಬರ್ನಲ್ಲಿ ರಾಜೇಶ್ವರಿ ತೇಜಸ್ವಿಯವರು ನಿಧನರಾಗಿದ್ದಾರೆ. ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಜಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.
ತೇಜಸ್ವಿಯವರ ನಿಧನದ ಬಳಿಕ ರಾಜೇಶ್ವರಿಯವರು ಮೂಡಿಗೆರೆಯಲ್ಲೇ ನೆಲೆಸಿದ್ದರು. ಮರಣ ಹೊಂದುವ ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿರುವ ಮಗಳ ಮನೆಗೆ ಬಂದಿದ್ದರು.
ಯಾವ ಯಾವ ಟ್ರಸ್ಟ್/ ಪ್ರತಿಷ್ಟಾನಕ್ಕೆ ಯಾರ್ಯಾರನ್ನು ನೇಮಿಸಲಾಗಿದೆ? ಪಟ್ಟಿ ಇಲ್ಲಿದೆ: