ಕ್ರಿಶ್ಚಿಯನ್ನರ ವಿರುದ್ಧ ದ್ವೇಷಪೂರಿತ ಹೇಳಿಕೆ ನೀಡಿದ್ದ ಶಾಸಕ ಮುನಿರತ್ನ ವಿರುದ್ಧ ಗುರುವಾರ ಪ್ರಕರಣ ದಾಖಲಿಸಲಾಗಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಮುನಿರತ್ನ ಅವರು ತೋಟಗಾರಿಕೆ ಸಚಿವರಾಗಿದ್ದಾರೆ.
ಸಮುದಾಯಗಳ ನಡುವೆ ಕಿಡಿ ಹೊತ್ತುವಂತೆ ಇತ್ತೀಚೆಗೆ ಮಾತನಾಡಿದ್ದ ಅವರು, “ಕ್ರಿಶ್ಚಿಯನ್ನರನ್ನು ಹೊಡೆದು ಓಡಿಸಿ” ಎಂದು ಪ್ರಚೋದನೆ ನೀಡಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅವರು ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
“ಮುನಿರತ್ನ ಅವರ ಹೇಳಿಕೆಗಳು ಕೋಮು ಸೌಹಾರ್ದತೆಗೆ ಭಂಗ ತಂದಿದೆ, ಕ್ರೈಸ್ತರಿಗೆ ಅವಮಾನ ಮಾಡಿದೆ” ಎಂದು ಮನೋಜ್ಕುಮಾರ್ ತಿಳಿಸಿದ್ದಾರೆ.
ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದಕ್ಕಾಗಿ ಸಚಿವರ ವಿರುದ್ಧ 1950ರ ಜನಪ್ರತಿನಿಧಿ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿದ್ದ ಮುನಿರತ್ನ ಅವರು, “ಇಲ್ಲಿಗೆ ಯಾರೇ ಬಂದರೂ ಹೊಡೆದು ಕಳುಹಿಸಿ, ಹೆಂಗೆ ಹೊಡಿಬೇಕು ಅಂದರೆ ಅವರು ತಿರುಗಿ ನೋಡಬಾರದು ಹಂಗೆ ಹೊಡೆದು ಕಳುಹಿಸಿ. ಬಂದಿದ್ದೆಲ್ಲಾ ನಾನು ನೋಡಿಕೊಳ್ಳುತ್ತೇನೆ” ಎಂದು ಭಾಷಣ ಮಾಡಿದ್ದರು.
ಪೊಲೀಸರ ಮುಂದೆಯೇ ಭಾಷಣ ಮಾಡಿರುವ ವಿಡಿಯೋ ತುಣುಕನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಅಲ್ಲದೇ, ಆರ್.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಕೂಡ ಪೊಲೀಸರಿಗೆ ದೂರು ನೀಡಿದ್ದರು.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸಚಿವ ಮುನಿರತ್ನ ತಮಿಳಿಗರನ್ನ, ಕನ್ನಡಿಗರ ಮೇಲೆ ಎತ್ತಿಕಟ್ಟುತ್ತಿದ್ದಾರೆ ಅಂತ ಕಾಂಗ್ರೆಸ್ ಆರೋಪ ಮಾಡಿತ್ತು.
ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಕೂಡ ಮುನಿರತ್ನ ವಿರುದ್ಧ ಕಳೆದ ವಾರ ದೂರು ನೀಡಿದ್ದರು. ಕನ್ನಡಿಗರು ಮತ್ತು ತಮಿಳರ ನಡುವೆ ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಬಿಜೆಪಿ ನಾಯಕನನ್ನು ಬಂಧಿಸುವಂತೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಪೊಲೀಸರನ್ನು ಒತ್ತಾಯಿಸಿದ್ದರು.
ಇತ್ತೀಚೆಗೆ ಬಾರಿ ಸುದ್ದಿಯಲ್ಲಿದ್ದ ಮುನಿರತ್ನ ಅವರು, ‘ಉರಿಗೌಡ, ನಂಜೇಗೌಡ’ ಎಂಬ ಸಿನಿಮಾ ಮಾಡುತ್ತೇನೆ ಎಂದು ವಿವಾದ ಸೃಷ್ಟಿಸಿದ್ದರು. ಟಿಪ್ಪುವನ್ನು ಕೊಂದಿದ್ದು ‘ಉರಿಗೌಡ, ನಂಜೇಗೌಡ’ ಎಂಬ ಕಲ್ಪಿತ ಇತಿಹಾಸದ ಮೇಲೆಯೇ ಸಿನಿಮಾ ಮಾಡುವುದಾಗಿ ಮುನಿರತ್ನ ಅವರು ಹೇಳಿದ್ದು ಟೀಕೆಗೆ ಗುರಿಯಾಗಿತ್ತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಕರೆದು ಬುದ್ಧಿಹೇಳಿದ ಮೇಲೆ ಸಿನಿಮಾ ಮಾಡುವ ಆಲೋಚನೆಯಿಂದ ಹಿಂದೆ ಸರಿದಿದ್ದರು.
BJP