17 ವರ್ಷದ ದಲಿತ ಬಾಲಕ ನಾಪತ್ತೆಯಾದ ಒಂದು ದಿನದ ನಂತರ ಶವವಾಗಿ ಸಿಕ್ಕಿದ್ದಾನೆ. ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಮಳೆ ನೀರಿನಿಂದ ತುಂಬಿದ ಗಣಿಗಾರಿಕೆಯ ಹೊಂಡದಲ್ಲಿ ಆತನ ಶವ ಸೆಪ್ಟೆಂಬರ್ 9ರಂದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವವಾಗಿ ಪತ್ತೆಯಾಗಿರುವ ಬಾಲಕನ ಸಹಪಾಠಿಯ ತಂದೆ ಶಾಲಾ ಅಧಿಕಾರಿಗಳಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ. ತನ್ನ ಮಗಳಿಗೆ ಈ ಹುಡುಗ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಶಾಲೆಗೆ ದೂರು ನೀಡಿದ ಬಳಿಕ ಈ ಘಟನೆಯಾಗಿದೆ.
ಶುಕ್ರವಾರ ಶವ ಪತ್ತೆಯಾದ ನಂತರ, ಕುಟುಂಬ ಸದಸ್ಯರು ಆತನ ಶವವನ್ನು ಶಾಲೆಯ ಹೊರಗೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಈ ಬಾಲಕನಿಗೆ ಶಾಲಾ ಸಿಬ್ಬಂದಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಸರ್ಕಲ್ ಆಫೀಸರ್, ಬೀವರ್ ಸುಮಿತ್ ಮೆಹ್ರೇದಾ ತಿಳಿಸಿದ್ದಾರೆ.
ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಬಾಲಕನ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶ: ದಲಿತ ಬಾಲಕನನ್ನು ಥಳಿಸಿದ ಜೈನ ಪಂಡಿತ
ಮಧ್ಯಪ್ರದೇಶದ ಸಾಗರ್ನಲ್ಲಿ ಜೈನ ದೇವಾಲಯದ ಪಂಡಿತರೊಬ್ಬರು 11 ವರ್ಷದ ದಲಿತ ಬಾಲಕನನ್ನು ಥಳಿಸಿರುವ ಘಟನೆ ನಡೆದಿದೆ.
A very terrible accident happened in Sagar, Madhya Pradesh, the temple's Pandit Rajesh Jain took a Dalit child hostage, then brutally beat him up. FIR has been registered under the SC ST Act against Pandit but till now he has not been arrested.#Brahminism pic.twitter.com/w7GrI5a6sb
— The Dalit Voice (@ambedkariteIND) September 10, 2022
ಟ್ವಿಟ್ಟರ್ ಬಳಕೆದಾರರು ಈ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದಲಿತ ಬಾಲಕ ಸಾಗರದ ಜೈನ ದೇವಾಲಯದ ಹೊರಗೆ ನಿಂತಿದ್ದಾಗ ಕಳ್ಳತನದ ಆರೋಪ ಹೊರಿಸಲಾಗಿದೆ. ಪಂಡಿತ್ ರಾಜೇಶ್ ಜೈನ್ ಬಾಲಕನನ್ನು ಥಳಿಸಿ, ನಂತರ ಕಟ್ಟಿಹಾಕಿದ್ದಾರೆ. ಪೂಜೆಯ ತಟ್ಟೆಯಲ್ಲಿದ್ದ ಬಾದಾಮಿಯನ್ನು ತೆಗೆದು ಜೇಬಿನಲ್ಲಿ ಇಟ್ಟುಕೊಂಡಿದ್ದಾಗಿ ರಾಜೇಶ್ ಜೈನ್ ಆರೋಪಿಸಿದ್ದಾರೆ.
ನಗರದ ಮೋತಿ ನಗರ ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಧ್ಯಪ್ರದೇಶ: ಅತ್ಯಾಚಾರಕ್ಕೆ ಒಳಗಾದ ದಲಿತ ಬಾಲಕಿಗೆ ಕಿರುಕುಳ; ಮೂವರು ಪೊಲೀಸ್ ಅಧಿಕಾರಿಗಳ ಅಮಾನತು
ಮಧ್ಯಪ್ರದೇಶದ ಛತ್ತರ್ಪುರ ನಗರದಲ್ಲಿ 13 ವರ್ಷದ ದಲಿತ ಬಾಲಕಿಯನ್ನು ಇಡೀ ರಾತ್ರಿ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡು ಥಳಿಸಿದ ಘಟನೆ ನಡೆದಿದೆ. ಆಗಸ್ಟ್ 30 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಬುಧವಾರ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಬಾಬು ಖಾನ್ ಎಂಬಾತನನ್ನು ಭಾರತೀಯ ದಂಡ ಸಂಹಿತೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಸೆಪ್ಟೆಂಬರ್ 3 ರಂದು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯನ್ನು ಪೊಲೀಸ್ ಠಾಣೆಯಲ್ಲಿ ಇರಿಸಿದ್ದಕ್ಕಾಗಿ ನಗರ ಕೊತ್ವಾಲಿ ಪೊಲೀಸ್ ಠಾಣೆಯ ಗೃಹ ಅಧಿಕಾರಿ (ಎಸ್ಎಚ್ಒ) ಅನೂಪ್ ಯಾದವ್, ಸಬ್ ಇನ್ಸ್ಪೆಕ್ಟರ್ ಮೋಹಿನಿ ಶರ್ಮಾ ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್ ಗುರುದತ್ ಶೇಷಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಛತ್ತರ್ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಾಲಕಿಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ (ಸಿಡಬ್ಲ್ಯುಸಿ) ದೂರು ಬಂದಿದ್ದು, ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಜಂಟಿ ಜಿಲ್ಲಾಧಿಕಾರಿ ಪ್ರತಾಪ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ.
ಬಾಲಕಿಯ ತಾಯಿಯ ಪ್ರಕಾರ, ಮಗಳು ಆಗಸ್ಟ್ 27 ರಂದು ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದಳು. ಆದರೆ ಹಿಂತಿರುಗಲಿಲ್ಲ. ಆದ್ದರಿಂದ ಬಾಲಕಿಯ ತಂದೆ ಮರುದಿನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆಗಸ್ಟ್ 30 ರಂದು ಹಿಂತಿರುಗಿದ ಬಾಲಕಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಬಾಬು ಖಾನ್ ಎಂಬಾತ ಬಲವಂತವಾಗಿ ಬಾಲಕಿಯನ್ನು ಎಳೆದೊಯ್ದು, ಅಲ್ಲಿಯೇ ಬಂಧಿಸಿ ಮೂರು ದಿನಗಳ ಕಾಲ ಅತ್ಯಾಚಾರವೆಸಗಿರುವ ಸಂಗತಿ ಹೊರಬಿದ್ದಿದೆ.
“ನಾವು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದೆವು. ಇಬ್ಬರು ಪೊಲೀಸರು ನನ್ನ ಮಗಳ ಹೇಳಿಕೆಯನ್ನು ಬದಲಾಯಿಸುವಂತೆ ಒತ್ತಡ ಹೇರಿದರು.ಜೊತೆಗೆ ನನ್ನ ಮಗಳನ್ನು ಥಳಿಸಿದರು. ಮತ್ತೊಬ್ಬ ಪೊಲೀಸ್ ಅಧಿಕಾರಿ ನನ್ನನ್ನು ಹೊರಗೆ ಕರೆದೊಯ್ದರು. ಒಳಗೆ ನನ್ನ ಮಗಳಿಗೆ ಒದ್ದು ಬೆಲ್ಟ್ಗಳಿಂದ ಹೊಡೆದರು” ಎಂದು ಸಂತ್ರಸ್ತ ಹೆಣ್ಣುಮಗಳ ತಾಯಿ ಆರೋಪಿಸಿದ್ದಾರೆ.
ಆಗಸ್ಟ್ 31ರಂದು ಮತ್ತೆ ಪೊಲೀಸ್ ಠಾಣೆಗೆ ತೆರಳಿ ಕೇಸು ದಾಖಲಿಸುವಂತೆ ಇನ್ಸ್ಪೆಕ್ಟರ್ ಯಾದವ್ ಅವರಲ್ಲಿ ಕೇಳಿದಾಗಲೂ ಯಾವುದೇ ಸ್ಪಂದನೆ ದೊರಯಲಿಲ್ಲ ಎಂದು ಅವರು ದೂರಿದ್ದಾರೆ.
ಅಂತಿಮವಾಗಿ, ಸೆಪ್ಟೆಂಬರ್ 1 ರ ಸಂಜೆ ಪೊಲೀಸರು ಆರೋಪಿಯ ವಿರುದ್ಧ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದಾರೆ. ಆದರೆ ಅಪಹರಣದ ಆರೋಪವನ್ನು ಸೇರಿಸಿಲ್ಲ ಎನ್ನಲಾಗಿದೆ.
ಎಫ್ಐಆರ್ನಲ್ಲಿ ಬಾಲಕಿಯ ವಯಸ್ಸನ್ನು 17 ವರ್ಷ ಎಂದು ನಮೂದಿಸಲಾಗಿದ್ದು, ಅಪಹರಣದ ಆರೋಪವನ್ನು ಸೇರಿಸಿಲ್ಲ.
ಸಿಡಬ್ಲ್ಯೂಸಿ ಸದಸ್ಯ ಅಫ್ಸರ್ ಜಹಾನ್ ಮಾತನಾಡಿ, “ಪೊಲೀಸರು ಅಪರಾಧಿಯನ್ನು ರಕ್ಷಿಸಲು ಮತ್ತು ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ದೂರಿದ್ದಾರೆ.
ಮತ್ತೊಬ್ಬ ಸಿಡಬ್ಲ್ಯೂಸಿ ಸದಸ್ಯ ಸೌರಭ್ ಭಟ್ನಾಗರ್, “13ರ ಬದಲಿಗೆ 17 ವರ್ಷ ಎಂದು ಪೊಲೀಸರು ನಮೂದಿಸಿರುವ ಕುರಿತು ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸರಿಂದ ಸ್ಪಷ್ಟನೆ ಕೇಳಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.