ರಾಜ್ಯದ ಎಲ್ಲ ನಿವಾಸಿಗಳಿಗೆ ಉಚಿತ ಆರೋಗ್ಯ ವಿಮೆ ನೀಡಿದ ದೇಶದ ಮೊದಲ ರಾಜ್ಯ ಎಂದು ರಾಜಸ್ಥಾನ ಸರ್ಕಾರ ಘೋಷಿಸಿಕೊಂಡಿದೆ. ಕರ್ನಾಟಕದಲ್ಲಿಯೂ 2018 ರಲ್ಲಿ 1 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಘೋಷಣೆಯಾಗಿದ್ದು, ಯೋಜನೆ ಎಷ್ಟರ ಮಟ್ಟಿಗೆ ಪ್ರಯೋಜನಕ್ಕೆ ಬಂದಿದ್ದೆ ಎಂಬುದರ ಬಗ್ಗೆ ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ರಾಜಸ್ಥಾನದ ಈ ಘೋಷಣೆ ಎಷ್ಟರಮಟ್ಟಿಗೆ ಜನಸಾಮಾನ್ಯರ ಉಪಯೋಗಕ್ಕೆ ಬರುತ್ತದೆ ಎಂದು ಕಾದು ನೋಡಬೇಕಿದೆ.
ರಾಜಸ್ಥಾನದಲ್ಲಿ ‘ಮುಖ್ಯಮಂತ್ರಿ ಚಿರಂಜೀವಿ ಸ್ವಾಸ್ತ್ಯ ಭೀಮಾ ಯೋಜನೆ’ ಅಡಿಯಲ್ಲಿ ನೋಂದಣಿ ಪ್ರಾರಂಭಿದ್ದು, ಇದರ ಅಡಿಯಲ್ಲಿ ರಾಜ್ಯದ ಪ್ರತಿ ಕುಟುಂಬವು ವೈದ್ಯಕೀಯ ವೆಚ್ಚಗಳಿಗಾಗಿ ವರ್ಷಕ್ಕೆ ಐದು ಲಕ್ಷ ರೂಪಾಯಿಗಳನ್ನು ಪಡೆಯಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಯೋಜನೆಯ ಪ್ರಾರಂಭದ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. “ರಾಜಸ್ಥಾನ ಸರ್ಕಾರದ ಎಲ್ಲರಿಗೂ ನಗದುರಹಿತ ಚಿಕಿತ್ಸೆಗಾಗಿ ನೋಂದಣಿ ಆರಂಭಿಸಿದೆ. ಮುಖ್ಯಮಂತ್ರಿ ಚಿರಂಜೀವಿ ಸ್ವಾಸ್ಥ್ಯ ಭೀಮಾ ಯೋಜನೆ ಇಂದಿನಿಂದ ರಾಜ್ಯದಲ್ಲಿ ಪ್ರಾರಂಭವಾಗಿದೆ. ಇದು ವೈದ್ಯಕೀಯ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಿರುವ ಅತಿದೊಡ್ಡ ಆರೋಗ್ಯ ಯೋಜನೆಗಳಲ್ಲಿ ಒಂದಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: ಬೆಳಗಾವಿ ರೈತ ಮಹಾಪಂಚಾಯತ್: ಕಿತ್ತೂರು ರಾಣಿ ಚೆನ್ನಮ್ಮನ ಮಾದರಿಯಲ್ಲಿ ಹೋರಾಡೋಣ- ರಾಕೇಶ್ ಟಿಕಾಯತ್
Registrations for Rajasthan Govt’s cashless treatment for all – Mukhyamantri Chiranjeevi Swasthya Bima Yojana have begun in the state from today. It is one of our biggest health care schemes aimed at providing medical relief to all residents of #Rajasthan.
— Ashok Gehlot (@ashokgehlot51) April 1, 2021
“ರಾಜಸ್ಥಾನ ಎಲ್ಲಾ ನಿವಾಸಿಗಳಿಗೆ ಆರೋಗ್ಯ ವಿಮೆ ಪಡೆದ ದೇಶದ ಮೊದಲ ರಾಜ್ಯವಾಗಿದೆ. ಪ್ರತಿ ಕುಟುಂಬವು ಪ್ರತಿ ವರ್ಷ 5 ಲಕ್ಷ ರೂ. ಆರೋಗ್ಯ ವಿಮೆಯನ್ನು ಪಡೆಯಬಹುದು. ನೋಂದಾಣಿ ಮಾಡಿಕೊಂಡು, ನಗದುರಹಿತ ಚಿಕಿತ್ಸೆಯನ್ನು ಪಡೆಯಬಹುದು” ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಆರೋಗ್ಯ ವಿಮಾ ಯೋಜನೆಯನ್ನು ಮುಖ್ಯಮಂತ್ರಿ ಗೆಹ್ಲೋಟ್ ಅವರು ರಾಜ್ಯ ಬಜೆಟ್ 2021-22ರಲ್ಲಿ ಘೋಷಿಸಿದ್ದಾರೆ.
ಇತ್ತ ಕರ್ನಾಟಕದಲ್ಲಿ 2018 ರ ಫ್ರೆಬ್ರವರಿಯಲ್ಲಿ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್, ಆರೋಗ್ಯ ಕರ್ನಾಟಕ (ಯೂನಿರ್ವಸಲ್ ಹೆಲ್ತ್ ಕಾರ್ಡ್) ಯೋಜನೆ ಘೋಷಿಸಿದ್ದರು. ಮಾರ್ಚ್ನಲ್ಲಿ ಈ ಯೋಜನೆಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು.
ಆರೋಗ್ಯ ಕರ್ನಾಟಕ ಯೋಜನೆಯ ಹೆಲ್ತ್ ಕಾರ್ಡ್ ಅಡಿಯಲ್ಲಿ, ಚಿಕಿತ್ಸೆ ಆಧಾರದಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ. ಕನಿಷ್ಠ ಐದು ಸದಸ್ಯರ ಒಂದು ಕುಟುಂಬಕ್ಕೆ ವರ್ಷಕ್ಕೆ 30,000 ರೂಪಾಯಿಯಿಂದ 2 ಲಕ್ಷದವರೆಗಿನ ವೆಚ್ಚ ಭರಿಸಲಾಗುತ್ತದೆ ಎಂದು ಹೇಳಲಾಗಿತ್ತು.
ಯಶಸ್ವಿನಿ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ, ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ಹಿರಿಯ ನಾಗರಿಕರಿಗೆ ಆರ್ಎಸ್ಬಿವೈ ಯೋಜನೆ ಒಳಗೊಂಡಂತೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ ಇವುಗಳೆಲ್ಲಾ ಈ ಹೆಲ್ತ್ ಕಾರ್ಡ ಅಡಿಯಲ್ಲಿ ವಿಲಿನವಾಗಿದ್ದವು. ಆದರೆ, ಸಾಕಷ್ಟು ಜನರಿಗೆ ಈ ಬಗ್ಗೆ ಮಾಹಿತಿಯಿಲ್ಲ. ಯೋಜನೆಯನ್ನು ಅನುಮೋದಿಸುವ ಆಸ್ಪತ್ರೆಗಳು ಈ ಕುರಿತು ರೋಗಿಗೆ ತಿಳಿಸಿದರೇ ಮಾತ್ರ ಯೋಜನೆಯ ಫಲಾನುಭವಿಯಾಗಲು ಸಾಧ್ಯ.
ಆದರೆ ನಂತರದ ವರ್ಷಗಳಲ್ಲಿಯೂ ಆರೋಗ್ಯ ಕರ್ನಾಟಕ ಯೋಜನೆಯೂ ಅಂತಹ ಸದ್ದು ಮಾಡಿಲ್ಲ. ಈಗ ರಾಜಸ್ಥಾನದಲ್ಲಿಯೂ ಇಂತಹ ಒಂದು ಯೋಜನೆ ಘೋಷಣೆಯಾಗಿದ್ದು, ಇದೊಂದು ಚುನಾವಣಾ ತಂತ್ರವಾಗಿರದೇ ಜನರಿಗೆ ಆರೋಗ್ಯ ಸೌಲಭ್ಯ ನೀಡುವ ಯೋಜನೆಯಾಗಲಿ ಎಂಬುದು ಸಾರ್ವಜನಿಕರ ಆಶಯ.
ಇದನ್ನೂ ಓದಿ: ಕೇಂದ್ರ ಸರ್ಕಾರದ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ ಕನ್ನಡ ಸುದ್ದಿ ಪೋರ್ಟಲ್ ‘ಪ್ರತಿಧ್ವನಿ’