ನಟ ರಜನಿಕಾಂತ್ ತಮ್ಮ ಆರೋಗ್ಯವನ್ನು ಉಲ್ಲೇಖಿಸಿ ರಾಜಕೀಯದಿಂದ ಹೊರಗುಳಿಯುವುದಾಗಿ ಇತ್ತೀಚೆಗಷ್ಟೇ ಹೇಳಿದ್ದರು. ಇದರಿಂದಾಗಿ ಅವರ ಅಭಿಮಾನಿಗಳ ಸಂಘವಾದ “ರಜನಿ ಮಕ್ಕಲ್ ಮಂಡ್ರಂ”ನ ಕೆಲವು ಸದಸ್ಯರು ತಮಿಳುನಾಡು ವಿರೋಧ ಪಕ್ಷವಾದ ಡಿಎಂಕೆ ಸೇರಿದ್ದರು. ಈ ಹಿನ್ನಲೆಯಲ್ಲಿ ಅಭಿಮಾನಿ ಸಂಘವು, ತಮ್ಮ ಸದಸ್ಯರು ರಾಜೀನಾಮೆ ನೀಡಲು ಮತ್ತು ಇತರ ಪಕ್ಷಗಳಿಗೆ ಸೇರಲು ಸ್ವತಂತ್ರರು ಎಂದು ಹೇಳಿದೆ.
“ಆದರೆ ಅಭಿಮಾನಿಗಳು ಯಾವ ಪಕ್ಷಕ್ಕೆ ಸೇರಿದರೂ ಅವರು ಯಾವಾಗಲೂ ರಜನಿ ಅಭಿಮಾನಿಗಳು ಎಂಬುದನ್ನು ಮರೆಯಬಾರದು” ಎಂದು ರಜಿನಿ ಮಕ್ಕಲ್ ಮಂಡ್ರಂ ಹೇಳಿದೆ.
ಇದನ್ನೂ ಓದಿ: ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ: ಉಲ್ಟಾ ಹೊಡೆದ ರಜನಿಕಾಂತ್
ತಮಿಳುನಾಡಿನಲ್ಲಿ ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಜನಿಕಾಂತ್ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಈಗಾಗಲೇ ಚರ್ಚೆ ನಡೆಯುತ್ತಿದೆ. ಆದರೆ ಬಿಜೆಪಿಯು ರಜನಿಕಾಂತ್ ರಾಜಕಾರಣದಿಂದ ಹೊರಬಂದ ನಂತರ ತಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ಆಶಿಸಿತ್ತು.
ಕಳೆದ ತಿಂಗಳು ತಮ್ಮ ರಾಜಕೀಯ ಪಕ್ಷವನ್ನು ಘೋಷಿಸುತ್ತೇನೆ ಎಂದಿದ್ದ ರಜನಿಕಾಂತ್, ರಕ್ತದೊತ್ತಡ ಏರಿಳಿತದಿಂದಾಗಿ ಆಸ್ಪತ್ರೆ ದಾಖಲಾದ ನಂತರ ತಾನು ರಾಜಕೀಯಕ್ಕೆ ಇಳಿಯುವುದಿಲ್ಲ ಎಂದು ಘೋಷಿಸಿದ್ದರು.
ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಎರಡೆ ದಿನಗಳಲ್ಲಿ ಈ ಹೇಳಿಕೆ ನೀಡಿದ್ದರು. “ನಾನು ರಾಜಕೀಯಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ತೀವ್ರ ದುಃಖದಿಂದ ಹೇಳುತ್ತೇನೆ. ಈ ನಿರ್ಧಾರವನ್ನು ಘೋಷಿಸುವಾಗ ನಾನು ಅನುಭವಿಸಿದ ನೋವು ನನಗೆ ಮಾತ್ರ ತಿಳಿದಿದೆ. ಚುನಾವಣಾ ರಾಜಕೀಯಕ್ಕೆ ಪ್ರವೇಶಿಸದೆ ನಾನು ಜನರ ಸೇವೆ ಸಲ್ಲಿಸುತ್ತೇನೆ. ನನ್ನ ಈ ನಿರ್ಧಾರವು ನನ್ನ ಅಭಿಮಾನಿಗಳನ್ನು ಮತ್ತು ಜನರನ್ನು ನಿರಾಶೆಗೊಳಿಸುತ್ತದೆ ಆದರೆ ನನ್ನನ್ನು ದಯವಿಟ್ಟು ಕ್ಷಮಿಸಿ” ಎಂದು ಅವರು ವಿನಂತಿಸಿದ್ದರು.
ಇದನ್ನೂ ಓದಿ: ವೇದಾಂತ ಸ್ಟೆರ್ಲೈಟ್ ವಿರೋಧಿ ಹಿಂಸಾಚಾರ: ರಜನಿಕಾಂತ್ಗೆ ಸಮನ್ಸ್