Homeಕರ್ನಾಟಕರಾಮನಗರ: ಕುಸಿದು ಬೀಳುವ ಅಪಾಯದಲ್ಲಿರುವ ಶತಮಾನ ಕಂಡ ಸರಕಾರಿ ಶಾಲೆ

ರಾಮನಗರ: ಕುಸಿದು ಬೀಳುವ ಅಪಾಯದಲ್ಲಿರುವ ಶತಮಾನ ಕಂಡ ಸರಕಾರಿ ಶಾಲೆ

- Advertisement -
- Advertisement -

ರಾಮನಗರ ಜಿಲೆಯಲ್ಲಿ ಹಲವು ಏಕೋಪಾಧ್ಯಾಯ, ಗ್ರಾಮೀಣ ಶಾಲೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ಕುಸಿದು ಬೀಳುವಂತಹ ಅಪಾಯದ ಸ್ಥಿತಿಯಲ್ಲಿವೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಾಲೆಯ ಕಟ್ಟಡಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಶತಮಾನ ಕಂಡ ಸರಕಾರಿ ಶಾಲೆಗಳೂ ಇದಕ್ಕೆ ಹೊರತಾಗಿಲ್ಲ. ಆಂಗ್ಲ ಹಾಗೂ ಕನ್ನಡ ಎರಡು ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿರುವ ಈ ಶಾಲೆಯಲ್ಲಿ ಕಟ್ಟಡದ್ದೇ ಸಮಸ್ಯೆಯಾಗಿದ್ದು, ಬಿದ್ದು ಹೋಗುವ ಭೀತಿಯಿಂದಾಗಿ ರಾಮನಗರ ತಾಲ್ಲೂಕಿನ ಹರಿಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲಾ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗಿದೆ.

ರಾಮನಗರ ತಾಲೂಕಿನ ಹರಿಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯು ಶತಮಾನದಷ್ಟು ಹಳೆಯದಾಗಿದೆ. ಈ ಶಾಲಾ ಕಟ್ಟಡ ಕುಸಿದು ಬೀಳುವ ಹಂತ ತಲುಪಿದೆ.

ಇದನ್ನೂ ಓದಿ: ಪ್ರತಿ ಊರಿನ ಸರ್ಕಾರಿ ಶಾಲೆಯಲ್ಲೂ ಇಂತಹ ಶಿಕ್ಷಕಿ ಇರಬೇಕಲ್ಲವೇ?

1920ರಲ್ಲಿ ಅಂದಿನ ಬ್ರಿಟಿಷ್ ಭಾರತದಲ್ಲಿ ಈ ಕನ್ನಡ ಶಾಲೆಯ ಕಟ್ಟಡವನ್ನು ನಿರ್ಮಿಸಲಾಗಿತ್ತು. ಮೊದಲು 1ರಿಂದ 4 ನೇ ತರಗತಿವರೆಗೆ ಶಾಲೆ ನಡೆಯುತ್ತಿತ್ತು. 1935ರಲ್ಲಿ ಶಾಲಾ ವ್ಯಾಪ್ತಿಯನ್ನು , 5ರಿಂದ 7ನೇ ತರಗತಿ ತನಕ ವಿಸ್ತರಣೆ ಮಾಡಲಾಯಿತು.

ಶತಮಾನದಷ್ಟು ಹಳೆಯದಾದ ಈ ಸರ್ಕಾರಿ ಶಾಲೆಯಲ್ಲಿ ಈತನಕ ಸಾವಿರಾರು ಮಂದಿ ವಿದ್ಯಾರ್ಥಿಗಳು ಅಕ್ಷಾರಭ್ಯಾಸ ಮಾಡುವುದರ ಜತೆಗೆ, ಉನ್ನತ ಜೀವನವನ್ನು ಕಟ್ಟಿಕೊಂಡಿದ್ದಾರೆ. ಇಂತಹ ಭವ್ಯ ಐತಿಹಾಸಿಕ ಘನತೆ ಹೊಂದಿರುವ ಶಾಲೆ ಈಗ ಅಳಿವಿನ ಅಂಚಿಗೆ ತಲುಪಿದೆ.

ಕುಸಿದು ಬೀಳುತ್ತಿದೆ ಚಾವಣಿ:

ಶಾಲೆಯ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು, ಅದಕ್ಕೆ ಹಾಕಿದ ಮರದ ಪಕಾಸು ರೀಪುಗಳು ಸಂಪೂರ್ಣ ದುರ್ಬಲಗೊಂಡಿದೆ. ಈಗಾಗಲೆ ಕೆಲವು ಹೆಂಚುಗಳು ಕೆಳಗೆ ಬಿದ್ದು ಒಡೆದು ಹೋಗಿವೆ. ಮಳೆ ಬಂದರೆ ನೀರು ತರಗತಿಗಳ ಒಳಗೆ ಮಡುಗಟ್ಟಿ ನಿಲ್ಲುತ್ತಿದ್ದು, ನೀರನ್ನು ಶುಚಿಗೊಳಿಸುವುದರಲ್ಲೇ ಕಾಲ ಕಳೆದು ಹೋಗುತ್ತಿದೆ. ಈ ಶಾಲೆಯನ್ನು ಜೀರ್ಣೋದ್ಧಾರಗೊಳಿಸಿ ಮಕ್ಕಳಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಮೈಮರೆತು ಕುಳಿತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಶಾಲೆಯ ದುಸ್ಥಿತಿಯನ್ನು ಕಂಡಿದ್ದ ಸ್ಥಳೀಯರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗಳಲ್ಲಿ ದಾಖಲು ಮಾಡಿದ್ದರು. ಆದರೆ ಕೊರೊನಾದಿಂದಾಗಿ ಮತ್ತೇ ಶಾಲೆಗೆ ದಾಖಲಾತಿ ಹೆಚ್ಚಾಗಿದೆ. ಅದರಲ್ಲೂ ಆಂಗ್ಲಮಾಧ್ಯಮ ನೀಡಿದ ಬಳಿಕ ಇಲ್ಲಿನ ದಾಖಲಾತಿಯು ಗಣನೀಯವಾಗಿ ಏರಿಕೆಯಾಗಿದೆ. ಶಾಲೆಯ ಒಟ್ಟು ಎಂಟು ಕೊಠಡಿಗಳಲ್ಲಿ ಏಳು ಸಂಪೂರ್ಣ ಶಿಥಿಲಗೊಂಡಿವೆ. ಉಳಿದಿರುವ ಒಂದು ಕೊಠಡಿಯಲ್ಲಿ 1ರಿಂದ 7ರ ತನಕ ತರಗತಿ ನಡೆಸುವುದು ಕಷ್ಟಕರವಾಗಿದೆ. ಹಾಳಾಗಿರುವ ಕೊಠಡಿಗಳನ್ನು ದುರಸ್ಥಿ ಮಾಡಿಸಿ, ವಿದ್ಯಾರ್ಥಿಗಳಿಗೆ ಉತ್ತಮ ತರಗತಿ ನೀಡಬೇಕೆಂಬುದು ಸ್ಥಳೀಯ ನಿವಾಸಿಗಳ ಒತ್ತಾಯವಾಗಿದೆ.

ಇದನ್ನೂ ಓದಿ: ದೆಹಲಿ ಶಾಲೆಗಳಲ್ಲಿ ಹಿಜಾಬ್ ಧರಿಸಬಹುದು: ಉಪ ಮುಖ್ಯಮಂತ್ರಿ ಮನೀಷ್‌‌ ಸಿಸೋಡಿಯಾ

ಪಕ್ಕದ ಶಾಲೆಗಳಿಗೆ ಮಕ್ಕಳ ಸ್ಥಳಾಂತರ:

ಶಾಲೆಯ ಕಟ್ಟಡಗಳಿಂದಾಗಿ ಮಕ್ಕಳಿಗೆ ಹೊರೆಯಾಗುವುದನ್ನು ತಪ್ಪಿಸುವ ಸಲುವಾಗಿ ಪ್ರೌಢಶಾಲೆಯಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಆಂಗ್ಲ ಹಾಗೂ ಕನ್ನಡ ಮಾಧ್ಯಮ ಇರುವುದರಿಂದ ಹೆಚ್ಚಿನ ಕೊಠಡಿಗಳು ಬೇಕಾಗುತ್ತದೆ. ಈ ಸಮಸ್ಯೆಯನ್ನು ಅರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಲಾದರೂ, ಶತಮಾನದಷ್ಟು ಹಳೆಯದಾದ ಶಾಲೆಗಳನ್ನು ಉಳಿಸಿಕೊಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

“ಶಾಲೆಯ ಕಟ್ಟಡಗಳು ದುರಸ್ಥಿಯಾಗಿರುವ ಕಾರಣ, ಪಕ್ಕದ ಪ್ರೌಢಶಾಲೆಯಲ್ಲಿ ತರಗತಿ ಮಾಡುತ್ತಿದ್ದೇವೆ. ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದೆ” ಎನ್ನುತ್ತಾರೆ ಹರಿಸಂದ್ರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಲ್.ವಿ. ರುದ್ರಾಣಿ.

“ಶತಮಾದಷ್ಟು ಹಳೆಯ ಶಾಲೆಯು ಸಂಪೂರ್ಣ ಶಿಥಿಲಗೊಂಡಿದೆ. ಕೊರೊನಾ ಬಿಕ್ಕಟ್ಟಿನಿಂದ ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದರು. ಸರ್ಕಾರಿ ಶಾಲೆಗಳ ದುಸ್ಥಿತಿ ನೋಡಿದರೆ, ಮರಳಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದು ಅನಿವಾರ್ಯ ಎನಿಸುತ್ತಿದೆ” ಎಂದು ಹನುಮಂತೇಗೌಡನದೊಡ್ಡಿ ನಿವಾಸಿ ಮಧುಸೂದನ್ ತಿಳಿಸಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ರಾಮನಗರ ಬಿಇಒ ಕುಮಾರಸ್ವಾಮಿ ಅವರು, “ಶಾಲಾ ಕಟ್ಟಡ ಶಿಥಿಲಗೊಂಡಿರುವುದರಿಂದ ಶಾಲೆಯನ್ನು ಲಾಕ್‌ ಮಾಡಿ, ತರಗತಿಗಳನ್ನು ಹೈಸ್ಕೂಲ್ ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದೇವೆ. ಅದನ್ನು ನೆಲಸಮಮಾಡಿ ಹೊಸ ಕಟ್ಟಡ ಕಟ್ಟುವ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮುಂದಿನ ವರ್ಷ ಹೊಸ ಕಟ್ಟಡ ಕಟ್ಟುವ ಬಗ್ಗೆ ನಿರೀಕ್ಷೆಯಲ್ಲಿ ಇದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...