ಖಾಸಗಿ ಬಸ್ ಪಲ್ಟಿಯಾಗಿ ಕನಿಷ್ಠ ಎಂಟು ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪಾವಗಡ ತಾಲ್ಲೂಕಿನ ಪಳವಳ್ಳಿ ಬಳಿ ನಡೆದಿದೆ.
ವೈ.ಎನ್.ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಖಾಸಗಿ ಎಸ್ಎಲ್ವಿ ಬಸ್ ಪಳವಳ್ಳಿ ಕೆರೆ ಬಳಿಯ ತಿರುವಿನಲ್ಲಿ ಪಲ್ಟಿಯಾಗಿದೆ. ಬಸ್ ಪಲ್ಟಿಯಾಗಿದ್ದರಿಂದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಪಾವಗಡ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ತುಮಕೂರು ಜಿಲ್ಲೆ ವೈ.ಎನ್. ಹೊಸಕೋಟೆಯಿಂದ ಪಳವಳ್ಳಿಕಟ್ಟೆ ಮಾರ್ಗವಾಗಿ ಪಾವಗಡಕ್ಕೆ ಬರುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿದೆ. ತೀವ್ರವಾಗಿ ಗಾಯಗೊಂಡವರನ್ನು ಬೆಂಗಳೂರಿಗೆ ಕರೆ ತರಲಾಗುತ್ತಿದೆ.
ಪ್ರಯಾಣಿಕರು ಬಸ್ ಟಾಪ್ನಲ್ಲಿ ಕುಳಿತಿದ್ದರು ಎಂದು ತಿಳಿದುಬಂದಿದೆ. ಚಾಲಕನ ಅಜಾಗರೂಕತೆ ಚಾಲನೆಯಿಂದ ಪಳವಳ್ಳಿ ಕಟ್ಟೆಯ ಕೆರೆಯ ಬಳಿ ಬಸ್ ಉರುಳಿದೆ. ಗಂಟೆಗೆ 90 ಕಿಮೀ ವೇಗದಲ್ಲಿ ಬಸ್ ಚಲಿಸುತ್ತಿತ್ತು, ಈ ವೇಳೆ ಕೆರೆ ಬಳಿಯ ಕಂಬಿಗೆ ಬಡಿದಿದ್ದು ಅವಘಡ ಸಂಭವಿಸಿದೆ.
ಟಾಪ್ನಲ್ಲಿ ಕುಳಿತ್ತಿದ್ದ ವಿದ್ಯಾರ್ಥಿಗಳು ಬಸ್ ಪಲ್ಟಿಯಾಗುತ್ತಿದ್ದಂತೆ ತೂರಿ ಹೋಗಿ ಬಿದ್ದಿದ್ದಾರೆ. ಬಸ್ನಲ್ಲಿ ಒಟ್ಟು 100ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಟಾಪ್ನಲ್ಲಿಯೇ 40 ಜನರು ಇದ್ದರು ಎನ್ನಲಾಗಿದೆ. ಸುಮಾರು 16 ಕಿ.ಮೀ ದೂರದವರೆಗೆ ಓವರ್ ಲೋಡ್ ಆಗಿ ಪ್ರಯಾಣಿಸುತ್ತಿತ್ತು. ಬಸ್ ಚಕ್ರಕ್ಕೆ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿ, ಇದು ದುರದೃಷ್ಟಕರ ಘಟನೆ. 8 ಮಂದಿ ಮೃತಪಟ್ಟಿದ್ದಾರೆಂದು ಮಾಹಿತಿ ಬಂದಿದೆ. 25ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸ್ಥಳಕ್ಕೆ ಹೋಗಲು ಸೂಚಿಸಿದ್ದೇನೆ. ಎಲ್ಲಾ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಸೂಚಿಸಿದ್ದೇನೆ. ಆಂಬ್ಯುಲೆನ್ಸ್ ಕಳಿಸಿದ್ದು, ರಸ್ತೆ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲು ಹೇಳಿದ್ದೇನೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಸಂತಾಪ
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಾಲವಳ್ಳಿ ಕಟ್ಟೆ ಬಳಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಸಂತ್ರಸ್ತರ ಕುಟುಂಬಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಂತ್ವನ ಸೂಚಿಸಿದ್ದಾರೆ.
ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗಬೇಕು. ಜತೆಗೆ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲರಿಗೂ ಉಚಿತ ಚಿಕಿತ್ಸೆ ಸಿಗಬೇಕು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದ ಸದಸ್ಯರಿಗೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಅವರು ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ದೆಹಲಿ: 60 ಗುಡಿಸಲುಗಳಲ್ಲಿ ಬೆಂಕಿ ಅವಘಡ; ಏಳು ಮಂದಿ ದುರ್ಮರಣ