ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಇಬ್ಬರು ಸಹೋದರರು ಹಾಡಹಗಲೇ ಇರಿದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಇಂದು (ನ.21) ಬೆಳಿಗ್ಗೆ ತಿಳಿಸಿದ್ದಾರೆ. ಆರೋಪಿಗಳ ಪೈಕಿ ಒಬ್ಬ ಈ ಹಿಂದೆ ಮೃತಳ ಮೇಲೆ ಅತ್ಯಾಚಾರವೆಸಗಿ ಜೈಲು ಸೇರಿದ್ದವನು ಎಂದು ತಿಳಿದುಬಂದಿದೆ.
ಮುಖ್ಯ ರಸ್ತೆಯಲ್ಲೇ ಯುವತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡುವಾಗ ಸಾರ್ವಜನಿಕರು ಅಸಹಾಯಕರಾಗಿ ನಿಂತು ನೋಡುತ್ತಿದ್ದರು ಎಂದು ರಾಷ್ಟ್ರೀಯ ಮಾಧ್ಯಮ ವರದಿಗಳು ಹೇಳಿವೆ.
ಅಶೋಕ್ ನಿಶಾದ್ ಮತ್ತು ಪವನ್ ನಿಶಾದ್ ಕೊಲೆ ಆರೋಪಿಗಳು ಎಂದು ಗುರುತಿಸಲಾಗಿದೆ. ಇವರು ಕೆಲ ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಪವನ್ ನಿಶಾದ್ ಮೂರು ವರ್ಷಗಳ ಹಿಂದೆ ಮೃತ ಯುವತಿ ಅಪ್ರಾಪ್ತಳಾಗಿದ್ದ ವೇಳೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಈ ಸಂಬಂಧ ಆತನ ವಿರುದ್ದ ಯುವತಿ ದೂರು ದಾಖಲಿಸಿದ್ದಳು. ದೂರು ಹಿಂಪಡೆಯವಂತೆ ಪವನ್ ಮತ್ತು ಆತನ ಸಹಚರರು ಯುವತಿಗೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಪವನ್ ಸಹೋದರ ಅಶೋಕ್ ನಿಶಾದ್ ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಯುವತಿಯೊಬ್ಬಳ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಈತ ಎರಡು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ. ಅಶೋಕ್ ಜೈಲಿನಿಂದ ಹೊರಬಂದ ಬಳಿಕ ಇಬ್ಬರು ಸಹೋದರು ಸೇರಿಕೊಂಡು ಅತ್ಯಾಚಾರ ದೂರು ಹಿಂಪಡೆಯುವಂತೆ ಯುವತಿಯನ್ನು ಪೀಡಿಸುತ್ತಿದ್ದರು. ಆಕೆ ನಿರಾಕರಿಸಿದ್ದಕ್ಕೆ ದನಗಳನ್ನು ಮೇಯಲು ಬಿಟ್ಟು ಮನೆಗೆ ಮರಳುವಾಗ ಹೊಂಚು ಹಾಕಿ ಕುಳಿತು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೌಶಂಬಿ ಜಿಲ್ಲೆಯ ದೇರ್ಹಾ ಗ್ರಾಮದಲ್ಲಿ ಭಯಾನಕ ಕೊಲೆ ಘಟನೆ ನಡೆದಿದೆ. ಪೊಲೀಸರು ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಕೌಶಂಬಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀವಾಸ್ತವ ತಿಳಿಸಿದ್ದಾರೆ.
ಇದನ್ನೂ ಓದಿ : ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅತಿಥಿ: ವಿವಾದ ಸೃಷ್ಟಿ