Homeಸಾಹಿತ್ಯ-ಸಂಸ್ಕೃತಿಕಥೆಎಷ್ಟು ಉಂಡರೂ ಉಟ್ಟರೂ, ಇನ್ನೂ ಬೇಕೆಂಬ ದಾಹ

ಎಷ್ಟು ಉಂಡರೂ ಉಟ್ಟರೂ, ಇನ್ನೂ ಬೇಕೆಂಬ ದಾಹ

- Advertisement -
- Advertisement -

ಆಡಿದ ಮಾತು ಕಾಲ ಕಳೆದಂತೆ ಮರೆತು ಹೋಗಬಹುದು. ಆದರೆ ಪಾಲ್ಗೊಂಡ ಚಿತ್ರ ಮಾತ್ರ ಕಾಲಾನಂತರದಲ್ಲೂ ಉಳಿದುಬಿಡುತ್ತದೆ’- ಇತ್ತೀಚಿನ ದಿನಗಳಲ್ಲಿ ನನ್ನನ್ನು ಗಾಢವಾಗಿ ಕಲಕಿದ ಮಾತಿದು. ನಾಗಪುರದ ಸಂಘ ಪರಿವಾರದ ಸಮಾವೇಶದಲ್ಲಿ ಪಾಲ್ಗೊಂಡ ತನ್ನ ತಂದೆ, ಭಾರತದ ಮಾಜಿ ರಾಷ್ಟ್ರಪತಿಗಳಾಗಿದ್ದ ಪ್ರಣವ ಮುಖರ್ಜಿಯವರನ್ನು ಎಚ್ಚರಿಸಲು ಅವರ ಮಗಳು ಶರ್ಮಿಷ್ಠಾ ಮುಖರ್ಜಿ ಆಡಿದ ಮಾತುಗಳಿವು. ಮತೀಯವಾದಿ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಮತ್ತು ಮತೀಯ ಭ್ರಷ್ಟ ವ್ಯಕ್ತಿಗಳು-ಚಿಂತನೆಗಳು ಸೇರಿಕೊಂಡ ಸಾಂಸ್ಕøತಿಕ-ಸಾಹಿತ್ಯಿಕ-ಶೈಕ್ಷಣಿಕ ವೇದಿಕೆಗಳಲ್ಲಿ ಪಾಲ್ಗೊಳ್ಳುವುದು ಎರಡೂ ಅಪಾಯಕಾರಿಯೇ. ಆದರೆ ಈ ಎರಡರ ಮಧ್ಯೆ ಕನಿಷ್ಠ ವ್ಯತ್ಯಾಸವಿದೆ. ಆ ವ್ಯತ್ಯಾಸ ಕೇಳುಗ ವರ್ಗಕ್ಕೆ ಸಂಬಂಧಿಸಿದ್ದು. ಮತೀಯ ಸಂಘಟನೆಗಳ ಕಾರ್ಯಕರ್ತರು ತಮ್ಮನ್ನು ಸಿದ್ಧಾಂತಕ್ಕೆ ಕೊಟ್ಟುಕೊಂಡವರು. ತಾವು ಸರಿ ಎಂದುಕೊಂಡಿದ್ದು ತಪ್ಪಿರಬಹುದು. ಲೋಕವನ್ನು ಕಾಣಬೇಕಾದ ಕ್ರಮ ಬೇರೆಯಿದ್ದೀತು ಎಂಬ ಉದಾರತೆ ಇರದವರು. ಇವರಿಗೆ ಜೀವ ಸಾಮರಸ್ಯದ ಚರಿತ್ರೆಯನ್ನು ನೆನಪಿಸುವುದಾಗಲಿ, ವರ್ತಮಾನದ ಬಗ್ಗೆ ನೆನಪಿಸುವುದಾಗಲಿ ವ್ಯರ್ಥ. ಹೆಚ್ಚೆಂದರೆ, ದಿನದ ಮಾತುಗಳಿಗಿಂತ ಬೇರೆಯಾದ ಮಾತುಗಳನ್ನು ಕೇಳಿಸಿಕೊಂಡ ಮುದ ಒಂದು ಗಳಿಗೆ ದೊರೆತೀತು. ಸಂಘ ಪರಿವಾರದ ಚರಿತ್ರೆಯನ್ನು ಗಮನಿಸಿದರೆ, ಅದು ತನ್ನನ್ನು ಕಟುವಾಗಿ ವಿರೋಧಿಸಿ ಎದುರು ಹಾಕಿಕೊಂಡವರನ್ನೂ ತನ್ನ ಚಹರೆಪಟ್ಟಿಗೆ ಸೇರಿಸಿಕೊಂಡು ಬೆಳೆದಿದೆ. ಬುದ್ಧ, ಬಸವ, ವಿವೇಕಾನಂದ, ಅಂಬೇಡ್ಕರ್, ಭಗತ್‍ಸಿಂಗ್ ಯಾರನ್ನು ಬೇಕಾದರೂ ನುಂಗಿ ನೊಣೆಯುತ್ತ ಬಂದಿದೆ. ಮಹಾನ್ ವ್ಯಕ್ತಿತ್ವಗಳಿಗೆ ಮರಣೋತ್ತರ ಅವಮಾನ ಮಾಡುತ್ತ ಬಂದಿದೆ. ಹಾಗಿರುವಾಗ, ಅಧಿಕಾರದಾಸೆಗೆ ಬೇರು ಸಡಿಲವಾಗಿಸಿಕೊಂಡರೆ, ತನ್ನ ಧೃತರಾಷ್ಟ್ರ ಆಲಿಂಗನದಿಂದ ಹೊರತುಪಡಿಸೀತೆ?
ಶರ್ಮಿಷ್ಠಾ ಮತ್ತು ಹಾಗೆ ಯೋಚಿಸುವವರ ಧಾಟಿ ದಿಟವಾದದ್ದೆನ್ನಲು ಕೆಲವು ಗಂಟೆಗಳಲ್ಲಿಯೇ ಪುರಾವೆಗಳೊದಗಿದ್ದವು. ಪ್ರಣವ ಮುಖರ್ಜಿ ಸಂಘ ಪರಿವಾರದ ಶೈಲಿಯಲ್ಲಿ ನಮಸ್ಕರಿಸಿ ನಿಂತ ಫೇಕ್ ಫೋಟೊ ಜಾಲತಾಣಗಳಲ್ಲಿ ಹರಿದಾಡಿದವು. ಒಂದಿಡೀ ದಿನ ದೇಶದ ಮಾಧ್ಯಮಗಳು, ಚಿಂತಕರು ಮಾಜಿ ರಾಷ್ಟ್ರಪತಿಗಳ ಭಾಷಣದಲ್ಲಿದ್ದ ದೇಶದ ಸಾಮರಸ್ಯ-ಸಹಬಾಳ್ವೆಯ ಪ್ರತಿಪಾದನೆಯ ಕುರಿತು ಚರ್ಚಿಸಿದರು. ಆದರೆ ಇಂತಹ ಮಾನವೀಯ ನುಡಿಗಳು ಮತೀಯವಾದಿಗಳನ್ನು ಅಲ್ಲಾಡಿಸಿಬಿಡುತ್ತವೆಯೇ? ಮೂಲಭೂತ ಜಡತೆಯ ಮನಸ್ಸು ಮಾನವೀಯತೆಯನ್ನು ಸ್ವೀಕರಿಸುವ ವಿಧಾನದಲ್ಲಿಯೇ ತಪ್ಪುಗಳಿವೆ. ಮತೀಯವಾದಿ ಸಂಘಟನೆಗಳು ಜನಸಮುದಾಯವನ್ನು ಸ್ವೀಕರಿಸುವ ವಿಧಾನದಲ್ಲಿಯೇ ಸ್ಪಷ್ಟ ವಿಭಾಜಕಗಳಿವೆ. ತನ್ನವರು-ಹೊರಗಿನವರು ಎಂಬ ವಿಂಗಡನೆ ಅಮಾನುಷವಾಗಿರುತ್ತದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಮಾತು ಅದೆಷ್ಟೇ ಉದಾತ್ತವಾಗಿರಲಿ, ಅಲ್ಲಿ ‘ಜನ’ ಎಂದರೆ ತನ್ನ ಧರ್ಮ ಜಾತಿ-ಕುಲ ಬಾಂಧವರು ಎಂದು ಮಾತ್ರ ಆಗುತ್ತದೆ. ‘ಸಬ್‍ಕಾ ಸಾಥ್ ಸಬ್‍ಕಾ ವಿಕಾಸ’ ಎನ್ನುವುದೂ ಹೀಗೇ. ಅದರ ಪರಿಷ್ಕøತ ರೂಪ. ಇವು ನುಡಿಯಲ್ಲಿ ಉದಾತ್ತವಾಗಿದ್ದು, ನಡೆಯಲ್ಲಿ ತನ್ನ ಜಾತಿ-ಧರ್ಮಗಳ ಚೌಕಟ್ಟಿನೊಳಗೇ ವ್ಯವಹರಿಸುತ್ತವೆ. ಇಂತಹ ನುಡಿಸೋಂಕಿಗೆ ಬಲಿಯಾದ ಜನರು, ಪ್ರಣವ ಮುಖರ್ಜಿಯವರ ಮಾತಿನ ಜೇನನ್ನು ಅರಿವಿಗೆ ತಂದುಕೊಳ್ಳಲಾರರು. ಅಲ್ಲಿಗೆ ಪ್ರಣವ ಮುಖರ್ಜಿಯವರ ನುಡಿಜೇನು ತೊಟ್ಟಿಕ್ಕಿ ಮರಳು ಸೇರಿದಂತಾಯಿತು. ಇಂಥದ್ದೊಂದು ಪಾಲ್ಗೊಳ್ಳುವಿಕೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿ ನಡೆದದ್ದಲ್ಲ. ಇದೊಂದು ಪ್ರಜ್ಞಾಪೂರ್ವಕ ಭಾಗೀದಾರಿಕೆ. ಸಂಘಪರಿವಾರದ ಸಿದ್ಧಾಂತಗಳಿಗಿಂತ ಬೇರೆಯಾದ ಪಕ್ಷ ರಾಜಕಾರಣದಲ್ಲಿದ್ದು ರಾಷ್ಟ್ರಪತಿ ಹುದ್ದೆಯವರೆಗೆ ಏರಿದವರು, ಮತ್ತೆ ಈ ವಯಸ್ಸಿನಲ್ಲಿ ಅಧಿಕಾರ ರಾಜಕಾರಣದಲ್ಲುಳಿಯುವ ಮನಸ್ಸು ಮಾಡಿದರು- ಎನ್ನುವ ವಿಶ್ಲೇಷಣೆಯೂ ಇದೆ.
ಇದು ನಿಜವಾಗಿದ್ದರೆ, ಸ್ವತಂತ್ರ ಭಾರತ, ರಾಜಕಾರಣಿಗಳ ಅನೈತಿಕ ಲೂಟಿಯ ಕಥನವಾಗಿ ಪ್ರಸಿದ್ಧಿ ಪಡೆದಂತಾಯಿತು. ಎಷ್ಟು ಉಂಡರೂ ಉಟ್ಟರೂ ತೊಟ್ಟರೂ ಇನ್ನೂ ಬೇಕು ಎಂಬ ಯಮ ಹಸಿವು ಇದು. ಅಪರೂಪದ ಅತ್ಯುನ್ನತ ಪದವಿಗಳನ್ನು ಪಡೆದ ಮೇಲೂ ಅತೃಪ್ತಿ, ಪಕ್ಷಾಂತರ, ಸ್ವ ಪಕ್ಷದ್ವೇಷ… ಮುಂತಾದ ಚಟುವಟಿಕೆಗಳು ನಡೆದೇ ಇವೆ. ಸದ್ಯದ ವಿಧಾನಸಭೆ ಚುನಾವಣೆಯ ಆಚೀಚೆ ಕರ್ನಾಟಕದ ರಾಜಕಾರಣಿಗಳು ನಡೆದುಕೊಂಡ ಬಗೆಯೂ ಅವಕಾಶವಾದದ ಮಾದರಿಯಂತಿತ್ತು. ಇಂತಹ ಭ್ರಷ್ಟ ರಾಜಕಾರಣವನ್ನು ಉಪೇಕ್ಷಿಸಲಾಗುತ್ತಿಲ್ಲ. ಯಾಕೆಂದರೆ ಇದು ವ್ಯವಸ್ಥೆಯನ್ನು ಸತತವಾಗಿ ಭ್ರಷ್ಟಗೊಳಿಸುತ್ತಿರುತ್ತದೆ.
ರಾಜಕಾರಣ ಮತ್ತು ಪ್ರಭುತ್ವ ತನ್ನ ನಾಗರಿಕರಿಗೆ ಅನ್ಯಾಯ ಮಾಡಿದಷ್ಟು ಇನ್ಯಾವುದೂ ಮಾಡಲು ಸಾಧ್ಯವಿಲ್ಲವೇನೋ. ತನ್ನ ರಾಜಕೀಯ ಲಾಭಕ್ಕಾಗಿ ಜನರನ್ನು ಮತ-ಧರ್ಮದ ಹೆಸರಿನಲ್ಲಿ ವಿಭಜಿಸುವ ರಾಜಕಾರಣಿ, ಸಮುದಾಯದ ಬದುಕನ್ನು ಮೂರು ರೀತಿಯಲ್ಲಿ ಈಡಾಡುತ್ತಾನೆ. ಮೊದಲನೆಯದು, ಒಂದು ಧರ್ಮದ, ಜಾತಿಯ ಜನರನ್ನು ಅಡ್ರೆಸ್ ಮಾಡಿ; ನೀವು ವೋಟ್ ಹಾಕಬೇಡಿ ಎಂದೋ ವೋಟ್ ಹಾಕಿ ಎಂದೋ ದಬಾಯಿಸುವುದು. ಸದ್ಯ, ಯತ್ನಾಳ ಎಂಬ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಶಾಸಕರು, ತಮ್ಮ ಕ್ಷೇತ್ರದ ಕಾರ್ಪೊರೇಟರ್‍ಗಳಿಗೆ ‘ನೀವು ಹಿಂದೂಗಳ ಪರವಾಗಿ ಕೆಲಸ ಮಾಡಿ, ಮುಸ್ಲಿಮರ ಪರವಾಗಿ ಅಲ್ಲ’- ಎಂದು ಫರ್ಮಾನು ಕೊಡಲೂ ಹೇಸಲಿಲ್ಲ. ಅವರ ಮಾತು ಅನಂತಕುಮಾರ್ ಹೆಗಡೆಯವರಿಗೆ ಸರಿದೊರೆಯಾಗಿತ್ತು. ಇಂತಹ ಸಂವಿಧಾನ ವಿರೋಧಿಯಾದ ಉಡಾಫೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಯುವಕರು ಶಿಳ್ಳೆ ಹಾಕಿ, ಚಪ್ಪಾಳೆ ಹಾಕಿ, ಬಹು ಜೋಷ್‍ನಿಂದ ಆ ಮಾತುಗಳನ್ನು ಬರಮಾಡಿಕೊಂಡರು. ಅಲ್ಲಿಗೆ ಸಾಮಾಜಿಕ ಬದುಕಿನ ನೆಮ್ಮದಿಗೆ ಪೆಟ್ರೋಲ್ ಸುರಿಯಲಾಯಿತು ಎಂದೇ ಅರ್ಥ. ಪರಿಣಾಮವಾಗಿ ನೈತಿಕ ಭ್ರಷ್ಟತೆಯ ಪ್ರಜಾತಂತ್ರ ವಿರೋಧಿಯಾದ ಅಧಿಕಾರಶಾಹಿ ವರ್ಗವು ನಿರ್ಮಾಣಗೊಳ್ಳುತ್ತದೆ. ಇದರಿಂದ ಮತೀಯವಾದದ ಬೇರು ಭದ್ರಗೊಳ್ಳುತ್ತದೆ. ಕೋಮುಹಿಂಸೆ ವಿಜೃಂಭಿಸಿದಾಗೆಲ್ಲ ಅದರ ಪೋಷಕ ಸ್ಥಾನದಲ್ಲಿ ಅಧಿಕಾರಶಾಹಿಗಳಿರುವುದು ಪ್ರಜಾಪ್ರಭುತ್ವದ ಕರಾಳ ಸತ್ಯ. ಇತ್ತೀಚೆಗೆ ಕರಾವಳಿಯಲ್ಲಿ ಹುಸೇನಬ್ಬ ಎಂಬ ದನದ ವ್ಯಾಪಾರಿಯನ್ನು ಅಕಾರಣ ಮುಗಿಸಿದ ಕ್ರೌರ್ಯ ಪೊಲೀಸ್ ವ್ಯವಸ್ಥೆಗೂ ಇದೆ ಎನ್ನಲಾಗುತ್ತಿರುವ ಸಂಬಂಧ ಗಾಬರಿ ಬೀಳಿಸುವಂಥದ್ದು. ಈ ನೆಲ ಬದುಕಿಗೆ ಯೋಗ್ಯವಾಗುಳಿ ಯುವುದು ಇನ್ನೆಷ್ಟು ಕಾಲ? ಎನಿಸುತ್ತಿದೆ. ಕೋಮುವಾದ-ಮತೀಯವಾದದ ದುಷ್ಟ ವೈರಸ್‍ಗಳು ಅತ್ಯಂತ ಸುಸಂಪನ್ನ ಸ್ವಸಂಪೂರ್ಣ ವ್ಯವಸ್ಥೆಯಲ್ಲಿ ಬೆಳೆಯುತ್ತಿವೆ ಅಥವಾ ಬೆಳೆಸಲಾಗುತ್ತಿದೆ. ಇತ್ತೀಚೆಗೆ ನಾನು ಪರೀಕ್ಷಾ ಕೆಲಸಕ್ಕಾಗಿ ಒಂದು ಅನ್‍ಏಡೆಡ್ ಕಾಲೇಜಿನಲ್ಲಿ ಕೆಲ ದಿನಗಳನ್ನು ಕಳೆಯಬೇಕಾಯಿತು.
ಅಂತಾರಾಷ್ಟ್ರೀಯ ಗುಣಮಟ್ಟ ಎಂದು ಘೋಷಿಸಿಕೊಂಡಿರುವ ವ್ಯವಸ್ಥೆಯನ್ನು ಹೊಂದಿರುವ ಕಾಲೇಜದು. ಹೊರಗಣ್ಣಿಗೆ ತುಂಬಾ ಸಂಪನ್ನವೆನಿಸುತ್ತದೆ. ಒಳಗಿಳಿದರೆ ಅಧಃಪತನದ ಕೊರಕಲುಗಳೇ ಇವೆ. ಕಾಲೇಜಿನ ಮ್ಯಾನೇಜ್‍ಮೆಂಟ, ಕಚೇರಿ ಸಿಬ್ಬಂದಿಗಳು, ಪ್ರಾಧ್ಯಾಪಕರು ಮತ್ತು ಬಹುತೇಕ ವಿದ್ಯಾರ್ಥಿಗಳು ಮೇಲ್ಜಾತಿಯ ಒಂದು ಕಮ್ಯುನಿಟಿಗೆ ಸೇರಿದವರು. ಅಗತ್ಯವಿದ್ದರೆ ಜಾತಿಯಲ್ಲಿ ತಮಗಿಂತ ಉತ್ತಮರೆಂದು ಭಾವಿಸಿದ ಇನ್ನೊಂದು ಜಾತಿಯವರನ್ನು ಸೇರಿಸಿಕೊಳ್ಳಲಾಗಿದೆ ಅಷ್ಟೇ. ಶಿಕ್ಷಣ ವ್ಯವಸ್ಥೆಯ ಸಿಬ್ಬಂದಿಗಳಲ್ಲಿ ಇರಬೇಕಾದ ಪರಸ್ಪರ ಗೌರವಾದರಗಳಿಗಿಂತ, ಒಂದು ಮನೆಯ ಸದಸ್ಯರಂತಹ ಸಲುಗೆ; ಶಿಕ್ಷಕರು-ವಿದ್ಯಾರ್ಥಿಗಳ ಸಂಬಂಧವೂ ಹಾಗೇ. ಸರ್ಕಾರಿ ಸೆಕ್ಟರ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ವಿಶೇಷ ಸೌಲಭ್ಯಗಳನ್ನು ಕೊಡಮಾಡಲಾಗುತ್ತದೆಂಬ ತಕರಾರು. ಶಿಕ್ಷಣದ ಗುಣಮಟ್ಟ ಕುಸಿಯಲು, ದೇಹದಿಂದ ದುಡಿಯಲು ಹುಟ್ಟಿದವರೂ ಕಲಿಯಲು ಬರುತ್ತಿರುವುದು ಕಾರಣ ಎಂಬ ತೀರ್ಮಾನ. ಸತತ ಏಳನೇ ಬಾರಿ ಪರೀಕ್ಷೆಗೆ ಕಟ್ಟಿದ ವಿದ್ಯಾರ್ಥಿಗಳೂ ಇದ್ದರು. ಅವರ ಧಿಮಾಕು, ನಿರ್ಲಕ್ಷ್ಯ ಹೇಳತೀರದ್ದು. ಕ್ರಮೇಣ ತಿಳಿದದ್ದೇನೆಂದರೆ, ಅದು ಒಂದು ರೀತಿಯಲ್ಲಿ ಮರಿ ರಾಜಕೀಯ ಪುಢಾರಿಗಳನ್ನು ತಯಾರು ಮಾಡುವ ಸೆಂಟರ್‍ನಂತಿತ್ತು. ತಮ್ಮ ಶಿಷ್ಯನೊಬ್ಬನಿಗೆ ಈ ಬಾರಿ ಟಿಕೆಟ್ ಸಿಕ್ಕಿದೆ- ಎಂಬ ಸಂಭ್ರಮದಲ್ಲಿದ್ದರು. ಯು.ಜಿ.ಸಿ.ಯ ಯಾವ ನಿಯಮವೂ ಅವರಿಗೆ ಅನ್ವಯವಾಗಬೇಕಿರಲಿಲ್ಲ. ಅವರು ಸರ್ಕಾರದಿಂದ ‘ಅನುದಾನ’ ತೆಗೆದುಕೊಳ್ತಿರಲಿಲ್ಲ. ಒಂದು ವಾರ ಕಳೆಯುವಷ್ಟರಲ್ಲಿ ದಣಿದುಬಿಟ್ಟಿದ್ದೆ. ನಾಗರಿಕ ಸಮಾಜದಲ್ಲಿ ಮೇಲ್ಜಾತಿ ವರ್ಗಗಳು ಪ್ರತ್ಯೇಕ ಅಪಾರ್ಟಮೆಂಟು, ಲೇಔಟು, ಶಾಪಿಂಗ್ ಮಾಲ್‍ಗಳು, ಆಸ್ಪತ್ರೆಗಳ ಸೌಲಭ್ಯಗಳನ್ನು ಮಾತ್ರವಲ್ಲದೆ; ಪ್ರತ್ಯೇಕ ಶಿಕ್ಷಣ ಸಂಸ್ಥೆಗಳನ್ನೂ ಕಟ್ಟಿಕೊಂಡು, ತಮ್ಮನ್ನು ಇನ್ನಿತರರಿಗಿಂತ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳುತ್ತಿವೆ. ಮತೀಯವಾದದ ಗರಡಿಮನೆ ತುಂಬ ಸುಂದರವಾಗಿ ಕಂಗೊಳಿಸುತ್ತಿದೆ. ಇವುಗಳ ವಾರಸುದಾರರು ರಾಜಕಾರಣಿಗಳು ಅಥವಾ ರಾಜಕಾರಣಿಗಳ ಬಂಧುಗಳು. ಮತೀಯ ದ್ವೇಷದಿಂದ ಸಿಡಿವ ಬಾಂಬರ್‍ಗಳಾಗಿ ಯುವ ಸಮುದಾಯವನ್ನು ತಯಾರು ಮಾಡಿದ ಮೇಲೆ ಸಾಮಾಜಿಕ ಸ್ವಾಸ್ಥ್ಯದ ಮಾತೆಲ್ಲಿ? ಕೋಮುವಾದ ಆರ್ಭಟಿಸುತ್ತಲೇ ಇದೆ- ರಾಜಕಾರಣಿಗಳ ಸಾಕುನಾಯಿಯಂತೆ.

– ವಿನಯಾ ಒಕ್ಕುಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...