Homeಸಾಹಿತ್ಯ-ಸಂಸ್ಕೃತಿಕಥೆಎಷ್ಟು ಉಂಡರೂ ಉಟ್ಟರೂ, ಇನ್ನೂ ಬೇಕೆಂಬ ದಾಹ

ಎಷ್ಟು ಉಂಡರೂ ಉಟ್ಟರೂ, ಇನ್ನೂ ಬೇಕೆಂಬ ದಾಹ

- Advertisement -
- Advertisement -

ಆಡಿದ ಮಾತು ಕಾಲ ಕಳೆದಂತೆ ಮರೆತು ಹೋಗಬಹುದು. ಆದರೆ ಪಾಲ್ಗೊಂಡ ಚಿತ್ರ ಮಾತ್ರ ಕಾಲಾನಂತರದಲ್ಲೂ ಉಳಿದುಬಿಡುತ್ತದೆ’- ಇತ್ತೀಚಿನ ದಿನಗಳಲ್ಲಿ ನನ್ನನ್ನು ಗಾಢವಾಗಿ ಕಲಕಿದ ಮಾತಿದು. ನಾಗಪುರದ ಸಂಘ ಪರಿವಾರದ ಸಮಾವೇಶದಲ್ಲಿ ಪಾಲ್ಗೊಂಡ ತನ್ನ ತಂದೆ, ಭಾರತದ ಮಾಜಿ ರಾಷ್ಟ್ರಪತಿಗಳಾಗಿದ್ದ ಪ್ರಣವ ಮುಖರ್ಜಿಯವರನ್ನು ಎಚ್ಚರಿಸಲು ಅವರ ಮಗಳು ಶರ್ಮಿಷ್ಠಾ ಮುಖರ್ಜಿ ಆಡಿದ ಮಾತುಗಳಿವು. ಮತೀಯವಾದಿ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಮತ್ತು ಮತೀಯ ಭ್ರಷ್ಟ ವ್ಯಕ್ತಿಗಳು-ಚಿಂತನೆಗಳು ಸೇರಿಕೊಂಡ ಸಾಂಸ್ಕøತಿಕ-ಸಾಹಿತ್ಯಿಕ-ಶೈಕ್ಷಣಿಕ ವೇದಿಕೆಗಳಲ್ಲಿ ಪಾಲ್ಗೊಳ್ಳುವುದು ಎರಡೂ ಅಪಾಯಕಾರಿಯೇ. ಆದರೆ ಈ ಎರಡರ ಮಧ್ಯೆ ಕನಿಷ್ಠ ವ್ಯತ್ಯಾಸವಿದೆ. ಆ ವ್ಯತ್ಯಾಸ ಕೇಳುಗ ವರ್ಗಕ್ಕೆ ಸಂಬಂಧಿಸಿದ್ದು. ಮತೀಯ ಸಂಘಟನೆಗಳ ಕಾರ್ಯಕರ್ತರು ತಮ್ಮನ್ನು ಸಿದ್ಧಾಂತಕ್ಕೆ ಕೊಟ್ಟುಕೊಂಡವರು. ತಾವು ಸರಿ ಎಂದುಕೊಂಡಿದ್ದು ತಪ್ಪಿರಬಹುದು. ಲೋಕವನ್ನು ಕಾಣಬೇಕಾದ ಕ್ರಮ ಬೇರೆಯಿದ್ದೀತು ಎಂಬ ಉದಾರತೆ ಇರದವರು. ಇವರಿಗೆ ಜೀವ ಸಾಮರಸ್ಯದ ಚರಿತ್ರೆಯನ್ನು ನೆನಪಿಸುವುದಾಗಲಿ, ವರ್ತಮಾನದ ಬಗ್ಗೆ ನೆನಪಿಸುವುದಾಗಲಿ ವ್ಯರ್ಥ. ಹೆಚ್ಚೆಂದರೆ, ದಿನದ ಮಾತುಗಳಿಗಿಂತ ಬೇರೆಯಾದ ಮಾತುಗಳನ್ನು ಕೇಳಿಸಿಕೊಂಡ ಮುದ ಒಂದು ಗಳಿಗೆ ದೊರೆತೀತು. ಸಂಘ ಪರಿವಾರದ ಚರಿತ್ರೆಯನ್ನು ಗಮನಿಸಿದರೆ, ಅದು ತನ್ನನ್ನು ಕಟುವಾಗಿ ವಿರೋಧಿಸಿ ಎದುರು ಹಾಕಿಕೊಂಡವರನ್ನೂ ತನ್ನ ಚಹರೆಪಟ್ಟಿಗೆ ಸೇರಿಸಿಕೊಂಡು ಬೆಳೆದಿದೆ. ಬುದ್ಧ, ಬಸವ, ವಿವೇಕಾನಂದ, ಅಂಬೇಡ್ಕರ್, ಭಗತ್‍ಸಿಂಗ್ ಯಾರನ್ನು ಬೇಕಾದರೂ ನುಂಗಿ ನೊಣೆಯುತ್ತ ಬಂದಿದೆ. ಮಹಾನ್ ವ್ಯಕ್ತಿತ್ವಗಳಿಗೆ ಮರಣೋತ್ತರ ಅವಮಾನ ಮಾಡುತ್ತ ಬಂದಿದೆ. ಹಾಗಿರುವಾಗ, ಅಧಿಕಾರದಾಸೆಗೆ ಬೇರು ಸಡಿಲವಾಗಿಸಿಕೊಂಡರೆ, ತನ್ನ ಧೃತರಾಷ್ಟ್ರ ಆಲಿಂಗನದಿಂದ ಹೊರತುಪಡಿಸೀತೆ?
ಶರ್ಮಿಷ್ಠಾ ಮತ್ತು ಹಾಗೆ ಯೋಚಿಸುವವರ ಧಾಟಿ ದಿಟವಾದದ್ದೆನ್ನಲು ಕೆಲವು ಗಂಟೆಗಳಲ್ಲಿಯೇ ಪುರಾವೆಗಳೊದಗಿದ್ದವು. ಪ್ರಣವ ಮುಖರ್ಜಿ ಸಂಘ ಪರಿವಾರದ ಶೈಲಿಯಲ್ಲಿ ನಮಸ್ಕರಿಸಿ ನಿಂತ ಫೇಕ್ ಫೋಟೊ ಜಾಲತಾಣಗಳಲ್ಲಿ ಹರಿದಾಡಿದವು. ಒಂದಿಡೀ ದಿನ ದೇಶದ ಮಾಧ್ಯಮಗಳು, ಚಿಂತಕರು ಮಾಜಿ ರಾಷ್ಟ್ರಪತಿಗಳ ಭಾಷಣದಲ್ಲಿದ್ದ ದೇಶದ ಸಾಮರಸ್ಯ-ಸಹಬಾಳ್ವೆಯ ಪ್ರತಿಪಾದನೆಯ ಕುರಿತು ಚರ್ಚಿಸಿದರು. ಆದರೆ ಇಂತಹ ಮಾನವೀಯ ನುಡಿಗಳು ಮತೀಯವಾದಿಗಳನ್ನು ಅಲ್ಲಾಡಿಸಿಬಿಡುತ್ತವೆಯೇ? ಮೂಲಭೂತ ಜಡತೆಯ ಮನಸ್ಸು ಮಾನವೀಯತೆಯನ್ನು ಸ್ವೀಕರಿಸುವ ವಿಧಾನದಲ್ಲಿಯೇ ತಪ್ಪುಗಳಿವೆ. ಮತೀಯವಾದಿ ಸಂಘಟನೆಗಳು ಜನಸಮುದಾಯವನ್ನು ಸ್ವೀಕರಿಸುವ ವಿಧಾನದಲ್ಲಿಯೇ ಸ್ಪಷ್ಟ ವಿಭಾಜಕಗಳಿವೆ. ತನ್ನವರು-ಹೊರಗಿನವರು ಎಂಬ ವಿಂಗಡನೆ ಅಮಾನುಷವಾಗಿರುತ್ತದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಮಾತು ಅದೆಷ್ಟೇ ಉದಾತ್ತವಾಗಿರಲಿ, ಅಲ್ಲಿ ‘ಜನ’ ಎಂದರೆ ತನ್ನ ಧರ್ಮ ಜಾತಿ-ಕುಲ ಬಾಂಧವರು ಎಂದು ಮಾತ್ರ ಆಗುತ್ತದೆ. ‘ಸಬ್‍ಕಾ ಸಾಥ್ ಸಬ್‍ಕಾ ವಿಕಾಸ’ ಎನ್ನುವುದೂ ಹೀಗೇ. ಅದರ ಪರಿಷ್ಕøತ ರೂಪ. ಇವು ನುಡಿಯಲ್ಲಿ ಉದಾತ್ತವಾಗಿದ್ದು, ನಡೆಯಲ್ಲಿ ತನ್ನ ಜಾತಿ-ಧರ್ಮಗಳ ಚೌಕಟ್ಟಿನೊಳಗೇ ವ್ಯವಹರಿಸುತ್ತವೆ. ಇಂತಹ ನುಡಿಸೋಂಕಿಗೆ ಬಲಿಯಾದ ಜನರು, ಪ್ರಣವ ಮುಖರ್ಜಿಯವರ ಮಾತಿನ ಜೇನನ್ನು ಅರಿವಿಗೆ ತಂದುಕೊಳ್ಳಲಾರರು. ಅಲ್ಲಿಗೆ ಪ್ರಣವ ಮುಖರ್ಜಿಯವರ ನುಡಿಜೇನು ತೊಟ್ಟಿಕ್ಕಿ ಮರಳು ಸೇರಿದಂತಾಯಿತು. ಇಂಥದ್ದೊಂದು ಪಾಲ್ಗೊಳ್ಳುವಿಕೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿ ನಡೆದದ್ದಲ್ಲ. ಇದೊಂದು ಪ್ರಜ್ಞಾಪೂರ್ವಕ ಭಾಗೀದಾರಿಕೆ. ಸಂಘಪರಿವಾರದ ಸಿದ್ಧಾಂತಗಳಿಗಿಂತ ಬೇರೆಯಾದ ಪಕ್ಷ ರಾಜಕಾರಣದಲ್ಲಿದ್ದು ರಾಷ್ಟ್ರಪತಿ ಹುದ್ದೆಯವರೆಗೆ ಏರಿದವರು, ಮತ್ತೆ ಈ ವಯಸ್ಸಿನಲ್ಲಿ ಅಧಿಕಾರ ರಾಜಕಾರಣದಲ್ಲುಳಿಯುವ ಮನಸ್ಸು ಮಾಡಿದರು- ಎನ್ನುವ ವಿಶ್ಲೇಷಣೆಯೂ ಇದೆ.
ಇದು ನಿಜವಾಗಿದ್ದರೆ, ಸ್ವತಂತ್ರ ಭಾರತ, ರಾಜಕಾರಣಿಗಳ ಅನೈತಿಕ ಲೂಟಿಯ ಕಥನವಾಗಿ ಪ್ರಸಿದ್ಧಿ ಪಡೆದಂತಾಯಿತು. ಎಷ್ಟು ಉಂಡರೂ ಉಟ್ಟರೂ ತೊಟ್ಟರೂ ಇನ್ನೂ ಬೇಕು ಎಂಬ ಯಮ ಹಸಿವು ಇದು. ಅಪರೂಪದ ಅತ್ಯುನ್ನತ ಪದವಿಗಳನ್ನು ಪಡೆದ ಮೇಲೂ ಅತೃಪ್ತಿ, ಪಕ್ಷಾಂತರ, ಸ್ವ ಪಕ್ಷದ್ವೇಷ… ಮುಂತಾದ ಚಟುವಟಿಕೆಗಳು ನಡೆದೇ ಇವೆ. ಸದ್ಯದ ವಿಧಾನಸಭೆ ಚುನಾವಣೆಯ ಆಚೀಚೆ ಕರ್ನಾಟಕದ ರಾಜಕಾರಣಿಗಳು ನಡೆದುಕೊಂಡ ಬಗೆಯೂ ಅವಕಾಶವಾದದ ಮಾದರಿಯಂತಿತ್ತು. ಇಂತಹ ಭ್ರಷ್ಟ ರಾಜಕಾರಣವನ್ನು ಉಪೇಕ್ಷಿಸಲಾಗುತ್ತಿಲ್ಲ. ಯಾಕೆಂದರೆ ಇದು ವ್ಯವಸ್ಥೆಯನ್ನು ಸತತವಾಗಿ ಭ್ರಷ್ಟಗೊಳಿಸುತ್ತಿರುತ್ತದೆ.
ರಾಜಕಾರಣ ಮತ್ತು ಪ್ರಭುತ್ವ ತನ್ನ ನಾಗರಿಕರಿಗೆ ಅನ್ಯಾಯ ಮಾಡಿದಷ್ಟು ಇನ್ಯಾವುದೂ ಮಾಡಲು ಸಾಧ್ಯವಿಲ್ಲವೇನೋ. ತನ್ನ ರಾಜಕೀಯ ಲಾಭಕ್ಕಾಗಿ ಜನರನ್ನು ಮತ-ಧರ್ಮದ ಹೆಸರಿನಲ್ಲಿ ವಿಭಜಿಸುವ ರಾಜಕಾರಣಿ, ಸಮುದಾಯದ ಬದುಕನ್ನು ಮೂರು ರೀತಿಯಲ್ಲಿ ಈಡಾಡುತ್ತಾನೆ. ಮೊದಲನೆಯದು, ಒಂದು ಧರ್ಮದ, ಜಾತಿಯ ಜನರನ್ನು ಅಡ್ರೆಸ್ ಮಾಡಿ; ನೀವು ವೋಟ್ ಹಾಕಬೇಡಿ ಎಂದೋ ವೋಟ್ ಹಾಕಿ ಎಂದೋ ದಬಾಯಿಸುವುದು. ಸದ್ಯ, ಯತ್ನಾಳ ಎಂಬ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಶಾಸಕರು, ತಮ್ಮ ಕ್ಷೇತ್ರದ ಕಾರ್ಪೊರೇಟರ್‍ಗಳಿಗೆ ‘ನೀವು ಹಿಂದೂಗಳ ಪರವಾಗಿ ಕೆಲಸ ಮಾಡಿ, ಮುಸ್ಲಿಮರ ಪರವಾಗಿ ಅಲ್ಲ’- ಎಂದು ಫರ್ಮಾನು ಕೊಡಲೂ ಹೇಸಲಿಲ್ಲ. ಅವರ ಮಾತು ಅನಂತಕುಮಾರ್ ಹೆಗಡೆಯವರಿಗೆ ಸರಿದೊರೆಯಾಗಿತ್ತು. ಇಂತಹ ಸಂವಿಧಾನ ವಿರೋಧಿಯಾದ ಉಡಾಫೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಯುವಕರು ಶಿಳ್ಳೆ ಹಾಕಿ, ಚಪ್ಪಾಳೆ ಹಾಕಿ, ಬಹು ಜೋಷ್‍ನಿಂದ ಆ ಮಾತುಗಳನ್ನು ಬರಮಾಡಿಕೊಂಡರು. ಅಲ್ಲಿಗೆ ಸಾಮಾಜಿಕ ಬದುಕಿನ ನೆಮ್ಮದಿಗೆ ಪೆಟ್ರೋಲ್ ಸುರಿಯಲಾಯಿತು ಎಂದೇ ಅರ್ಥ. ಪರಿಣಾಮವಾಗಿ ನೈತಿಕ ಭ್ರಷ್ಟತೆಯ ಪ್ರಜಾತಂತ್ರ ವಿರೋಧಿಯಾದ ಅಧಿಕಾರಶಾಹಿ ವರ್ಗವು ನಿರ್ಮಾಣಗೊಳ್ಳುತ್ತದೆ. ಇದರಿಂದ ಮತೀಯವಾದದ ಬೇರು ಭದ್ರಗೊಳ್ಳುತ್ತದೆ. ಕೋಮುಹಿಂಸೆ ವಿಜೃಂಭಿಸಿದಾಗೆಲ್ಲ ಅದರ ಪೋಷಕ ಸ್ಥಾನದಲ್ಲಿ ಅಧಿಕಾರಶಾಹಿಗಳಿರುವುದು ಪ್ರಜಾಪ್ರಭುತ್ವದ ಕರಾಳ ಸತ್ಯ. ಇತ್ತೀಚೆಗೆ ಕರಾವಳಿಯಲ್ಲಿ ಹುಸೇನಬ್ಬ ಎಂಬ ದನದ ವ್ಯಾಪಾರಿಯನ್ನು ಅಕಾರಣ ಮುಗಿಸಿದ ಕ್ರೌರ್ಯ ಪೊಲೀಸ್ ವ್ಯವಸ್ಥೆಗೂ ಇದೆ ಎನ್ನಲಾಗುತ್ತಿರುವ ಸಂಬಂಧ ಗಾಬರಿ ಬೀಳಿಸುವಂಥದ್ದು. ಈ ನೆಲ ಬದುಕಿಗೆ ಯೋಗ್ಯವಾಗುಳಿ ಯುವುದು ಇನ್ನೆಷ್ಟು ಕಾಲ? ಎನಿಸುತ್ತಿದೆ. ಕೋಮುವಾದ-ಮತೀಯವಾದದ ದುಷ್ಟ ವೈರಸ್‍ಗಳು ಅತ್ಯಂತ ಸುಸಂಪನ್ನ ಸ್ವಸಂಪೂರ್ಣ ವ್ಯವಸ್ಥೆಯಲ್ಲಿ ಬೆಳೆಯುತ್ತಿವೆ ಅಥವಾ ಬೆಳೆಸಲಾಗುತ್ತಿದೆ. ಇತ್ತೀಚೆಗೆ ನಾನು ಪರೀಕ್ಷಾ ಕೆಲಸಕ್ಕಾಗಿ ಒಂದು ಅನ್‍ಏಡೆಡ್ ಕಾಲೇಜಿನಲ್ಲಿ ಕೆಲ ದಿನಗಳನ್ನು ಕಳೆಯಬೇಕಾಯಿತು.
ಅಂತಾರಾಷ್ಟ್ರೀಯ ಗುಣಮಟ್ಟ ಎಂದು ಘೋಷಿಸಿಕೊಂಡಿರುವ ವ್ಯವಸ್ಥೆಯನ್ನು ಹೊಂದಿರುವ ಕಾಲೇಜದು. ಹೊರಗಣ್ಣಿಗೆ ತುಂಬಾ ಸಂಪನ್ನವೆನಿಸುತ್ತದೆ. ಒಳಗಿಳಿದರೆ ಅಧಃಪತನದ ಕೊರಕಲುಗಳೇ ಇವೆ. ಕಾಲೇಜಿನ ಮ್ಯಾನೇಜ್‍ಮೆಂಟ, ಕಚೇರಿ ಸಿಬ್ಬಂದಿಗಳು, ಪ್ರಾಧ್ಯಾಪಕರು ಮತ್ತು ಬಹುತೇಕ ವಿದ್ಯಾರ್ಥಿಗಳು ಮೇಲ್ಜಾತಿಯ ಒಂದು ಕಮ್ಯುನಿಟಿಗೆ ಸೇರಿದವರು. ಅಗತ್ಯವಿದ್ದರೆ ಜಾತಿಯಲ್ಲಿ ತಮಗಿಂತ ಉತ್ತಮರೆಂದು ಭಾವಿಸಿದ ಇನ್ನೊಂದು ಜಾತಿಯವರನ್ನು ಸೇರಿಸಿಕೊಳ್ಳಲಾಗಿದೆ ಅಷ್ಟೇ. ಶಿಕ್ಷಣ ವ್ಯವಸ್ಥೆಯ ಸಿಬ್ಬಂದಿಗಳಲ್ಲಿ ಇರಬೇಕಾದ ಪರಸ್ಪರ ಗೌರವಾದರಗಳಿಗಿಂತ, ಒಂದು ಮನೆಯ ಸದಸ್ಯರಂತಹ ಸಲುಗೆ; ಶಿಕ್ಷಕರು-ವಿದ್ಯಾರ್ಥಿಗಳ ಸಂಬಂಧವೂ ಹಾಗೇ. ಸರ್ಕಾರಿ ಸೆಕ್ಟರ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ವಿಶೇಷ ಸೌಲಭ್ಯಗಳನ್ನು ಕೊಡಮಾಡಲಾಗುತ್ತದೆಂಬ ತಕರಾರು. ಶಿಕ್ಷಣದ ಗುಣಮಟ್ಟ ಕುಸಿಯಲು, ದೇಹದಿಂದ ದುಡಿಯಲು ಹುಟ್ಟಿದವರೂ ಕಲಿಯಲು ಬರುತ್ತಿರುವುದು ಕಾರಣ ಎಂಬ ತೀರ್ಮಾನ. ಸತತ ಏಳನೇ ಬಾರಿ ಪರೀಕ್ಷೆಗೆ ಕಟ್ಟಿದ ವಿದ್ಯಾರ್ಥಿಗಳೂ ಇದ್ದರು. ಅವರ ಧಿಮಾಕು, ನಿರ್ಲಕ್ಷ್ಯ ಹೇಳತೀರದ್ದು. ಕ್ರಮೇಣ ತಿಳಿದದ್ದೇನೆಂದರೆ, ಅದು ಒಂದು ರೀತಿಯಲ್ಲಿ ಮರಿ ರಾಜಕೀಯ ಪುಢಾರಿಗಳನ್ನು ತಯಾರು ಮಾಡುವ ಸೆಂಟರ್‍ನಂತಿತ್ತು. ತಮ್ಮ ಶಿಷ್ಯನೊಬ್ಬನಿಗೆ ಈ ಬಾರಿ ಟಿಕೆಟ್ ಸಿಕ್ಕಿದೆ- ಎಂಬ ಸಂಭ್ರಮದಲ್ಲಿದ್ದರು. ಯು.ಜಿ.ಸಿ.ಯ ಯಾವ ನಿಯಮವೂ ಅವರಿಗೆ ಅನ್ವಯವಾಗಬೇಕಿರಲಿಲ್ಲ. ಅವರು ಸರ್ಕಾರದಿಂದ ‘ಅನುದಾನ’ ತೆಗೆದುಕೊಳ್ತಿರಲಿಲ್ಲ. ಒಂದು ವಾರ ಕಳೆಯುವಷ್ಟರಲ್ಲಿ ದಣಿದುಬಿಟ್ಟಿದ್ದೆ. ನಾಗರಿಕ ಸಮಾಜದಲ್ಲಿ ಮೇಲ್ಜಾತಿ ವರ್ಗಗಳು ಪ್ರತ್ಯೇಕ ಅಪಾರ್ಟಮೆಂಟು, ಲೇಔಟು, ಶಾಪಿಂಗ್ ಮಾಲ್‍ಗಳು, ಆಸ್ಪತ್ರೆಗಳ ಸೌಲಭ್ಯಗಳನ್ನು ಮಾತ್ರವಲ್ಲದೆ; ಪ್ರತ್ಯೇಕ ಶಿಕ್ಷಣ ಸಂಸ್ಥೆಗಳನ್ನೂ ಕಟ್ಟಿಕೊಂಡು, ತಮ್ಮನ್ನು ಇನ್ನಿತರರಿಗಿಂತ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳುತ್ತಿವೆ. ಮತೀಯವಾದದ ಗರಡಿಮನೆ ತುಂಬ ಸುಂದರವಾಗಿ ಕಂಗೊಳಿಸುತ್ತಿದೆ. ಇವುಗಳ ವಾರಸುದಾರರು ರಾಜಕಾರಣಿಗಳು ಅಥವಾ ರಾಜಕಾರಣಿಗಳ ಬಂಧುಗಳು. ಮತೀಯ ದ್ವೇಷದಿಂದ ಸಿಡಿವ ಬಾಂಬರ್‍ಗಳಾಗಿ ಯುವ ಸಮುದಾಯವನ್ನು ತಯಾರು ಮಾಡಿದ ಮೇಲೆ ಸಾಮಾಜಿಕ ಸ್ವಾಸ್ಥ್ಯದ ಮಾತೆಲ್ಲಿ? ಕೋಮುವಾದ ಆರ್ಭಟಿಸುತ್ತಲೇ ಇದೆ- ರಾಜಕಾರಣಿಗಳ ಸಾಕುನಾಯಿಯಂತೆ.

– ವಿನಯಾ ಒಕ್ಕುಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...