ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲು ಅನುಮತಿ ಕೋರಿ ಕೇರಳ ವಿಧಾನಸಭೆಯ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಅವರು ವಿಧಾನಸಭೆ ಸ್ಪೀಕರ್ಗೆ ನೋಟಿಸ್ ನೀಡಿದ್ದಾರೆ.
ಆ ಮೂಲಕ ಕೇರಳದ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ನಡೆಯುತ್ತಿದ್ದ ಗುದ್ದಾಟಕ್ಕೆ ಮತ್ತೊಂದು ಆಯಾಮ ದೊರಕಿದ್ದು ಆಡಳಿತ ಪಕ್ಷದ ಪರವಾಗಿ ಪ್ರತಿಪಕ್ಷವು ನಿಂತಿದೆ.
Kerala: Leader of Opposition in Kerala assembly, Ramesh Chennithala has given a notice to Assembly Speaker seeking permission to introduce a resolution in the assembly calling on President Ram Nath Kovind to recall Governor Arif Mohammad Khan. pic.twitter.com/wiCHTZRjcZ
— ANI (@ANI) January 25, 2020
ಮುಖ್ಯವಾಗಿ ಸಿಎಎ, ಎನ್ಆರ್ಸಿ ವಿರುದ್ಧದ ಹೋರಾಟ ಆರಂಭವಾದೊಡನೆಯೂ ರಾಜ್ಯಪಾಲರೊಂದಿಗೆ ಸರ್ಕಾರಕ್ಕೆ ಇರಿಸುಮುರಿಸು ಆರಂಭವಾಗಿತ್ತು. ಈಗ ಅವರನ್ನು ವಾಪಸ್ ಕರೆಸಿಕೊಳ್ಳಿ ಎಂಬವಲ್ಲಿಗೆ ಬಂದು ನಿಂತಿದೆ.
ತಿಂಗಳ ಹಿಂದೆ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ನಡೆದ ಭಾರತೀಯ ಇತಿಹಾಸ ಕಾಂಗ್ರೆಸ್ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ವೇಳೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಮಾತನಾಡಿದ್ದರು. ಆಗ ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಅತಿಥಿ, ಇತಿಹಾಸ ತಜ್ಞ ಇರ್ಫಾನ್ ಹಬೀಬ್ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭಾಷಣ ಮಾಡುವುದನ್ನು ಅರ್ಧಕ್ಕೇ ತಡೆದಿದ್ದರು. ಅವರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರು.
ಆದಾದ ನಂತರ ಪ್ರಪಥಮ ಬಾರಿಗೆ ಕೇರಳ ಸಿಎಎ ವಿರುದ್ಧ ಅಸೆಂಬ್ಲಿಯಲ್ಲಿ ನಿರ್ಣಯವನ್ನು ಅಂಗೀಕರಿಸಿತ್ತು. ಆಗ ಆರ್ಟಿಕಲ್ 254 ರ ಪ್ರಕಾರ ಎಲ್ಲ ರಾಜ್ಯಗಳೂ CAA ಯನ್ನು ಜಾರಿಗೊಳಿಸಬೇಕು. ರಾಜ್ಯಗಳು ಬೇಕಾದರೆ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ಗೆ ಹೋಗಬಹದು ಆದರೆ ಯಾವ ರಾಜ್ಯಕ್ಕೂ CAA ಯನ್ನು ಜಾರಿಗೊಳಿಸದೆ ಬೇರೆ ದಾರಿಯೇ ಇಲ್ಲವೆಂದು ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದರು.
ಆನಂತರ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಆಗ ಮತ್ತೆ ರಾಜ್ಯಪಾಲರು “ಸಿಎಎ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಕ್ಕೆ ತಮ್ಮ ಅಭ್ಯಂತರವಿಲ್ಲ. ಆದರೆ, ರಾಜ್ಯದ ಸಾಂವಿಧಾನಿಕ ವ್ಯವಸ್ಥೆಯ ಮುಖ್ಯಸ್ಥರಾಗಿರುವ ತಮಗೆ ಮಾಹಿತಿ ನೀಡದೇ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಬೇಸರವಾಗಿದೆ ಎಂದು ಸಿಡಿಮಿಡಿಗೊಂಡಿದ್ದರು.
ರಾಜ್ಯ ಸರ್ಕಾರವು ತೆಗೆದುಕೊಳ್ಳುವ ನಿರ್ಧಾರವನ್ನು ರಾಜ್ಯಪಾಲರ ಗಮನಕ್ಕೆ ತರುತ್ತಿಲ್ಲ. ಸುದ್ದಿ ಮಾಧ್ಯಮ ಹಾಗೂ ದಿನಪತ್ರಿಕೆಗಳ ಮೂಲಕ ಅದನ್ನೆಲ್ಲ ತಿಳಿದುಕೊಳ್ಳುವಂತಾ ಪರಿಸ್ಥಿತಿ ಎದುರಾಗಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಒಟ್ಟಿನಲ್ಲಿ ಸದಾ ಸರ್ಕಾರದೊಂದಿಗೆ ತಗಾದೆ ತೆಗೆಯುತ್ತಿರುವ ಈ ರಾಜ್ಯಪಾಲರು ಬೇಡ ಎಂದು ವಿಧಾನಸಭೆಯಲ್ಲಿಯೇ ನಿರ್ಣಯ ಅಂಗೀಕರಿಸಲು ಪ್ರತಿಪಕ್ಷ ಯುಡಿಎಫ್ ಸಿದ್ದವಾಗಿದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಕಾದು ನೋಡಬೇಕಿದೆ.