ಪಿಎಚ್ಡಿ ಹಾಗು ಎಂಫಿಲ್ ಅಧ್ಯಯನ ಕೈಗೊಳ್ಳುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ರಾಜ್ಯ ಅಲ್ಪಸಂಖ್ಯಾತ ಇಲಾಖೆ ಕಡಿತಗೊಳಿಸಿ ಆದೇಶ ಹೊರಡಿಸಿರುವುಕ್ಕೆ ಹಲವಾರು ವಿದ್ಯಾರ್ಥಿ ಸಂಘಟನೆ ಸೇರಿದಂತೆ, ರಾಜಕೀಯ ಪಕ್ಷಗಳು ವಿರೋಧಿಸಿದ್ದು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಗಳೊಂದಿಗೆ ತಮ್ಮ ಹಕ್ಕುಗಳನ್ನು ಕೇಳುತ್ತಿರುವ ಸಮುದಾಯಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದೆ ಈ ಸರ್ಕಾರದ ಹುನ್ನಾರವಾಗಿದೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ(KVS)ಯ ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆ ಆಕ್ರೋಶ ವ್ಯಕ್ತಪಡಿಸಿದ್ದು, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಫೆಲೋಶಿಪ್ ಅನ್ನು ಕಡಿತಗೊಳಿಸಿ ಹೊಡಿಸಿರುವ ಆದೇಶವನ್ನು ಹಿಂಪಡೆದು ಇನ್ನೂ ಹೆಚ್ಚಿನ ನೆರವನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
“ಹೊಸ ಶಿಕ್ಷಣ ನೀತಿ ಸೇರಿದಂತೆ ಸರ್ಕಾರದ ಇತ್ತೀಚೆಗಿನ ಬೆಳವಣಿಗೆಯನ್ನು ನೋಡಿದರೆ ಶಿಕ್ಷಣದಿಂದ ಅಲ್ಪಸಂಖ್ಯಾತ ಹಾಗೂ ದಲಿತ ವಿದ್ಯಾರ್ಥಿಗಳನ್ನು ದೂರ ಇಡುವ ಎಲ್ಲಾ ಹುನ್ನಾರಗಳನ್ನು ಮಾಡುತ್ತಿದೆ. ರಾಜ್ಯ ಸರ್ಕಾರದ ಸಾಮಾಜ ಕಲ್ಯಾಣ ಇಲಾಖೆಯಲ್ಲಿ 19 ಸಾವಿರ ಕೋಟಿ ಉಳಿದಿದ್ದು ಅದನ್ನು ಬೇರೆ ಇಲಾಖೆಗೆ ವರ್ಗಾಯಿಸಲು ಹೊರಟಿದ್ದಾರೆ. ಅದೇ ಸಮಯದಲ್ಲಿ ದಲಿತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಲ್ಯಾಪ್ಟಾಪ್ ನಿಲ್ಲಿಸಿದ್ದಾರೆ, ಸ್ಕಾಲರ್ಶಿಪ್ಗಳನ್ನು ಕಡಿಮೆ ಮಾಡುತ್ತಿದ್ದಾರೆ. ಇವೆಲ್ಲವೂ ಈ ಹುನ್ನಾರದ ಭಾಗವೆ ಆಗಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿಎಚ್ಡಿ, ಎಂಫಿಲ್ ಫೆಲೋಶಿಪ್ ಕಡಿತಗೊಳಿಸಿದ ಸರ್ಕಾರ!
“ಶಿಕ್ಷಣ ಪಡೆದುಕೊಂಡಿರುವ ದಲಿತ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಪ್ರಶ್ನೆ ಹಾಗೂ ಧ್ವನಿ ಎತ್ತುತ್ತಿದ್ದಾರೆ. ಇದಕ್ಕೆ ಸರಿಯಾದ ಉದಾಹರಣೆ ಜಾಮಿಯಾ ಮತ್ತು ಜೆಎನ್ಯು ಆಗಿದೆ. ಆದ್ದರಿಂದಲೇ ಇವರು ಈ ವಿಶ್ವವಿದ್ಯಾನಿಲಯಗಳನ್ನು ಗುರಿಯಾಗಿಸುತ್ತಿದ್ದಾರೆ. ಇಲ್ಲಿ ಅಧ್ಯಯನ ಮಾಡುತ್ತಿರುವ ಬಡ ಹಿನ್ನಲೆಯಲ್ಲಿರುವ ವಿದ್ಯಾರ್ಥಿಗಳು ಶಿಕ್ಷಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಹತ್ತಿಕ್ಕುವುದರ ಜೊತೆಗೆ, ಮನುಸ್ಮೃತಿಯ ಆಶಯವನ್ನು ಗಟ್ಟಿಗೊಳಿಸುವುದು ಈ ಸರ್ಕಾರಗಳ ಗುರಿಯಾಗಿದೆ” ಎಂದು ಸರೋವರ್ ಬೆಂಕಿಕೆರೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರ ಬಂದ ನಂತರದಲ್ಲಿ ವಿದ್ಯಾರ್ಥಿಗಳ ಹಕ್ಕುಗಳನ್ನು ದಮನ ಮಾಡುತ್ತಿರುವುದಲ್ಲದೆ ಅವರಿಗೆ ಸಿಗಬೇಕಾದ ಶೈಕ್ಷಣಿಕ ಪ್ರೋತ್ಸಾಹ ಧನವನ್ನೂ ಕಡಿತಗೊಳಿಸುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆಯಾಗಿರುವ SFI ಹೇಳಿದ್ದು, “ಕಳೆದ 10 ತಿಂಗಳಿನಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಹಣವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಸರ್ಕಾರ ವಿಫಲವಾಗಿದೆ. ಈಗ ಏಕಾಏಕಿ ವರ್ಷಕ್ಕೆ ಒಂದು ಲಕ್ಷ ಮಾತ್ರ ನೀಡಲಾಗುವುದು ಎಂಬ ಸುತ್ತೋಲೆ ಹೊರಡಿಸಿರುವುದು ವಿದ್ಯಾರ್ಥಿಗಳಿಗೆ ಆತಂಕ ಉಂಟುಮಾಡಿದೆ” ಎಂದಿದೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಅವರನ್ನು ತುಳಿತಕ್ಕೆ ಒಳಪಡಿಸಿದಷ್ಟೇ ಅಲ್ಲದೇ, ಈಗ ಶೈಕ್ಷಣಿಕವಾಗಿಯೂ ಅವರನ್ನು ವಂಚಿಸುವ, ದುರ್ಬಲರನ್ನಾಗಿ ಮಾಡುವ ನಡೆ ಇದು ಎಂದಿರುವ SFI, “ಈ ಕೂಡಲೇ ಈ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಕೈ ಬಿಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಆರ್ಥಿಕ ಯೋಜನೆಗಳನ್ನು ಮುಂದುವರೆಸಬೇಕು” ಎಂದು ಅದು ಒತ್ತಾಯಿಸಿದೆ.
ಇದನ್ನೂ ಓದಿ: ನಾಸಾ ಹ್ಯೂಮನ್ ಎಕ್ಸ್ಪ್ಲೋರೇಶನ್ ರೋವರ್ ಚಾಲೆಂಜ್ಗೆ ಒಡಿಶಾ ಶಾಲಾ ವಿದ್ಯಾರ್ಥಿಗಳ ತಂಡ!
ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ತಾರತಮ್ಯದ ಪರಮಾವಧಿ: SDPI ಖಂಡನೆ
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್ ಮೊತ್ತವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿರುವುದು ಒಂದು ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ಉದ್ದೇಶವಾಗಿದ್ದು, ಇದು ತಾರತಮ್ಯದ ಪರಮಾವಧಿ ಎಂದು SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದ್ದಕ್ಕಿದ್ದಂತೆ ಫೆಲೋಷಿಪ್ ಮೊತ್ತ ಕಡಿತಗೊಳಿಸುವುದಾಗಿ ಆದೇಶ ಮಾಡಿರುವುದು ಖೇದಕರ. ಬಿಜೆಪಿ ಸರ್ಕಾರ ಪ್ರಾರಂಭದಿಂದಲೂ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಕಡಿತಗೊಳಿಸುತ್ತಿದೆ. 2020–21ನೇ ಸಾಲಿನಲ್ಲಿ 44% ದಷ್ಟು ಅನುದಾನ ಕಡಿತಗೊಳಿಸಿದೆ. ಇದರ ಮುಂದುವರಿದ ಭಾಗವಾಗಿ ಉನ್ನತ ಶಿಕ್ಷಣದ ನೆರವನ್ನು ಕಡಿತ ಮಾಡಲಾಗಿದೆ” ಎಂದು ಅವರು ಹೇಳಿದ್ದಾರೆ.
“ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಮಾಡಿ ಖಜಾನೆ ತುಂಬಿಸಲು ಹೊರಟಿರುವ ಸರ್ಕಾರದ ಈ ನಡೆ ಒಪ್ಪುವಂತದಲ್ಲ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಯೋಜನೆಗಳಲ್ಲಿ ತಾರತಮ್ಯವೆಸಗುವುದನ್ನು SDPI ಸಹಿಸುವುದಿಲ್ಲ. ಸರ್ಕಾರ ಈ ಕೊಡಲೇ ಎಚ್ಚೆತ್ತು ಕೊಂಡು ಬಾಕಿ ಉಳಿದಿರುವ ಫೆಲೋಶಿಪ್ ಹಣ ನೀಡುವುದರ ಜೊತೆ ಎಂದಿನಂತೆ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆರ್ಥಿಕ ಸಹಾಯ ಮುಂದುವರಿಸ ಬೇಕು” ಎಂದು ಹನ್ನಾನ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಯಾರಿಗೂ ಹೊರೆಯಾಗಲಾರೆ ಎಂದು ನೇಣಿಗೆ ಕೊರಳೊಡ್ಡಿದ ಪ್ರತಿಭಾನ್ವಿತ ವಿದ್ಯಾರ್ಥಿನಿ!