ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು “ಮಾಧ್ಯಮ ವಿಚಾರಣೆ”ಯನ್ನು ನಿರ್ಬಂಧಿಸಿ ಆದೇಶ ಹೊರಡಿಸಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್ಗೆ ಮನವಿ ಸಲ್ಲಿಕೆಯಾಗಿತ್ತು. ಈ ಮನವಿಯನ್ನು ಅಂಗೀಕರಿಸಿರುವ ಕೋರ್ಟ್, “ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ರಿಪಬ್ಲಿಕ್ ಟಿ.ವಿ ಮತ್ತು ಟೈಮ್ಸ್ ನೌ ಮಾಡಿದ ಕೆಲವು ವರದಿಗಳು ಅವಮಾನಕಾರಿಯಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಅವರಿದ್ದ ನ್ಯಾಯಪೀಠ ಸೋಮವಾರ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಸುಶಾಂತ್ಸಿಂಗ್ ರಜಪೂತ್ ಸಾವು: ಕನಸು ಬಿತ್ತುವವರ ಕಮರಿದ ಬದುಕು
ಅದಾಗಿಯೂ, ನ್ಯಾಯಪೀಠ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದನ್ನು ತಡೆಯಿತು. ಯಾವುದೇ ಪ್ರಕರಣದ ತನಿಖೆಯ ಸಮಯದಲ್ಲಿ ಮಾಧ್ಯಮಗಳೇ ಅವುಗಳನ್ನು “ಮಾಧ್ಯಮ ವಿಚಾರಣೆ” ಮಾಡುವುದು ಕೇಬಲ್ ಟಿವಿ ನೆಟ್ವರ್ಕ್ ನಿಯಂತ್ರಣ ಕಾಯ್ದೆಯ ಪ್ರೋಗ್ರಾಂ ಕೋಡ್ ಅನ್ನು ಉಲ್ಲಂಘಿಸಿದಂತಾಗುತ್ತದೆ ಮತ್ತು ಅದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ತಮ್ಮದೇ ಆದ ಮಾರ್ಗಸೂಚಿಗಳನ್ನು ರೂಪಿಸುವವರೆಗೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮುದ್ರಣ ಮಾಧ್ಯಮಗಳ ಮಾರ್ಗಸೂಚಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೂ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ವರದಿಗಳ ಕುರಿತು ಕೇಂದ್ರೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಎಂಐಬಿ) “ಶಾಸನಬದ್ಧ ಕರ್ತವ್ಯದಲ್ಲಿ ಲೋಪವೆಸಗಿದೆ” ಎಂಬ ಆರೋಪವನ್ನೂ ನ್ಯಾಯಾಲಯ ಒಪ್ಪಿಕೊಂಡಿತು. ತನಿಖೆ ನಡೆಯುತ್ತಿರುವಾಗ ಸಂತ್ರಸ್ತರು ಮತ್ತು ಆರೋಪಿಗಳ ಚಿತ್ರಗಳನ್ನು ಹಾಕುವುದರ ಜೊತೆಗೆ ಘಟನೆಯನ್ನು ಪುನರ್ನಿರ್ಮಿಸುವುದನ್ನು ಮಾಧ್ಯಮಗಳು ತಪ್ಪಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ನೈಜೀರಿಯಾದಲ್ಲಿ ನಟ ಸುಶಾಂತ್ಗೆ ನ್ಯಾಯ ಕೋರಿ ನಡೆಯಿತೆ ಪ್ರತಿಭಟನೆ?