ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ಗಾಗಿ ತಮಿಳುನಾಡಿನ ಟ್ಯಾಬ್ಲೊ ಪ್ರಸ್ತಾವನೆಯನ್ನು ಒಕ್ಕೂಟ ಸರ್ಕಾರವು ಸೋಮವಾರ ತಿರಸ್ಕರಿಸಿದೆ. ಇದು ರಾಜ್ಯದಲ್ಲಿ ವ್ಯಾಪಕ ಆಕ್ರೋಶವನ್ನು ಉಂಟು ಮಾಡಿದೆ. ಟ್ಯಾಬ್ಲೊದಲ್ಲಿ ‘ರಾಷ್ಟ್ರೀಯ ಖ್ಯಾತಿಯ ಕೆಲವು ಸ್ವಾತಂತ್ರ್ಯ ಹೋರಾಟಗಾರರ’ ಚಿತ್ರಣ ನೀಡುವಂತೆ ತಜ್ಞರ ಸಮಿತಿಯು ತಮಿಳುನಾಡು ಅಧಿಕಾರಿಗಳಿಗೆ ಸೂಚಿಸಿತ್ತು.
ತಮಿಳುನಾಡು ಪ್ರಸ್ತಾಪಿಸಿದ ಟ್ಯಾಬ್ಲೋದಲ್ಲಿ ಸುಬ್ರಹ್ಮಣ್ಯ ಭಾರತಿ, ವಿ.ಒ. ಚಿದಂಬರನಾರ್, ರಾಣಿ ವೇಲು ನಾಚಿಯಾರ್, ಮರುತು ಪಾಂಡಿಯರ್ ಸೇರಿದಂತೆ ಹಲವು ಪ್ರಸಿದ್ದ ಸ್ವಾತಂತ್ಯ್ರ ಹೋರಾಟಗಾರ ಚಿತ್ರಣವಿತ್ತು. ಒಕ್ಕೂಟ ಸರ್ಕಾರವು ಇತ್ತೀಚೆಗೆ ಕೇರಳ ಮತ್ತು ಪಶ್ಚಿಮ ಬಂಗಾಳದ ಟ್ಯಾಬ್ಲೊಗಳನ್ನೂ ಪರೇಡ್ನಲ್ಲಿ ಭಾಗವಹಿಸುವುದನ್ನು ನಿರಾಕರಿಸಿತ್ತು.
ಇದನ್ನೂ ಓದಿ:ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರಾಕರಣೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಒಕ್ಕೂಟ ಸರ್ಕಾರವು ಟ್ಯಾಬ್ಲೊ ಪ್ರಸ್ತಾವನೆಯನ್ನು ನಿರಾಕರಿಸಿರುವುದಕ್ಕಾಗಿ ತಮ್ಮ ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಪರೇಡ್ನಲ್ಲಿ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರದರ್ಶಿಸುವ ತಮಿಳುನಾಡಿನ ಟ್ಯಾಬ್ಲೊವನ್ನು ಸೇರಿಸಲು ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ಮಧ್ಯಸ್ಥಿಕೆ ವಹಿಸಬೇಕು ಎಂದು ಅವರು ಕೋರಿದ್ದಾರೆ.
“ಟ್ಯಾಬ್ಲೊವನ್ನು ಹೊರಗಿಡುವುದರಿಂದ ತಮಿಳುನಾಡಿನ ಜನರ ಭಾವನೆಗಳು ಮತ್ತು ದೇಶಭಕ್ತಿಯ ಭಾವನೆಗಳನ್ನು ಆಳವಾಗಿ ಘಾಸಿಗೊಳಿಸುತ್ತದೆ. ಇದು ತಮಿಳುನಾಡು ರಾಜ್ಯ ಮತ್ತು ಅಲ್ಲಿನ ಜನತೆಗೆ ತೀವ್ರ ಕಳವಳಕಾರಿ ವಿಷಯವಾಗಿದೆ” ಎಂದು ಮುಖ್ಯಮಂತ್ರಿಗಳು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ನಾಲ್ಕನೇ ಸುತ್ತಿನ ಸಭೆಗೆ ತಮಿಳುನಾಡಿಗೆ ಕರೆ ನೀಡಲಾಗಿಲ್ಲ ಮತ್ತು ಶಾರ್ಟ್ಲಿಸ್ಟ್ ಮಾಡುವಾಗ ರಾಜ್ಯವನ್ನು ಹೊರಗಿಡಲಾಗಿದೆ ಎಂದು ತಿಳಿಸಲಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಈ ಹಿಂದಿನ ಡಿಎಂಕೆ ಆಡಳಿತದಲ್ಲಿಯೂ ಸಹ ತಮಿಳುನಾಡಿಗೆ ಅವಕಾಶ ನಿರಾಕರಿಸಲಾಗಿತ್ತು, ಆದರೆ ನಂತರ ಮಾಹಿತಿ ಸಚಿವ ಪರಿತಿ ಇಳಮವಝುತಿ ಒಕ್ಕೂಟ ಸರ್ಕಾರದಕ್ಕೆ ಪತ್ರ ಬರೆದ ನಂತರ ರಾಜ್ಯವನ್ನು ಸೇರಿಸಲಾಗಿತ್ತು.
ವಿ.ಒ. ಚಿದಂಬರನಾರ್ ಅವರನ್ನು ಉದ್ಯಮಿ ಎಂದು ಸಮಿತಿ ಸದಸ್ಯರು
“ರಕ್ಷಣಾ ಸಚಿವಾಲಯವು ‘ಭಾರತ@75 – ಸ್ವಾತಂತ್ರ್ಯ ಹೋರಾಟ’, ‘ಚಿಂತನೆಗಳು @ 75’, ‘ಸಾಧನೆಗಳು @ 75’, ‘ಕ್ರಮಗಳು @ 75’, ಮತ್ತು ‘ಪರಿಹಾರಗಳು @ 75’ ಎಂಬ ಥೀಮ್ನ ಚಿತ್ರಣಗಳನ್ನು ಪರೇಡ್ಗಾಗಿ ಪ್ರಸ್ತಾಪಿಸಿದೆ. ತಮಿಳುನಾಡಿನ ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರರನ್ನು ಚಿತ್ರಿಸುವ ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮಿಳುನಾಡು’ ಎಂಬ ಥೀಮ್ ಅಲ್ಲಿ ತಮಿಳುನಾಡು ಟ್ಯಾಬ್ಲೊ ಪ್ರಸ್ತಾವನೆ ಸಲ್ಲಿಸಿತ್ತು” ಎಂದು ಸ್ಟಾಲಿನ್ ಹೇಳಿದ್ದಾರೆ.
ತಜ್ಞರ ಸಮಿತಿಯ ಮುಂದೆ ರಾಜ್ಯದ ಪ್ರತಿನಿಧಿಗಳು ಮೂರು ಬಾರಿ ಹಾಜರಾಗಿದ್ದರು. ಮೊದಲ ಸಭೆಯಲ್ಲಿ, ತಜ್ಞರ ಸಮಿತಿಯು ತಮಿಳುನಾಡಿನ ಥೀಮ್ ಬಗ್ಗೆ ತೃಪ್ತಿ ವ್ಯಕ್ತಪಡಿಸಿತ್ತು. ಟ್ಯಾಬ್ಲೊ ವಿನ್ಯಾಸದ ಮುಂಭಾಗದಲ್ಲಿ ಬ್ರಿಟೀಷ್ ಆಡಳಿತದ ಸಮಯದಲ್ಲಿ ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನು ಚಿತ್ರಿಸಲಾಗಿತ್ತು ಮತ್ತು ಈಸ್ಟ್ ಇಂಡಿಯಾ ಕಂಪನಿಯ ಅವಧಿಯಲ್ಲಿನ ಹೋರಾಟಗಾರರನ್ನು ಟ್ಯಾಬ್ಲೋದ ಹಿಂಭಾಗದಲ್ಲಿ ಚಿತ್ರಿಸಲಾಗಿತ್ತು.
ಟ್ಯಾಬ್ಲೊ ಆಯ್ಕೆಯ ಚರ್ಚೆಯ ಸಂದರ್ಭದಲ್ಲಿ, ಕೇಂದ್ರ ಸಮಿತಿಯ ಸದಸ್ಯರು ವಿ.ಒ. ಚಿದಂಬರನಾರ್ ಅವರನ್ನು ‘ಉದ್ಯಮಿ’ ಎಂದು ಬಣ್ಣಿಸಿದ್ದಾರೆ ಮತ್ತು ಅವರಿಗೆ ಯಾಕೆ ಪ್ರಾಮುಖ್ಯತೆ ನೀಡಬೇಕು ಎಂದು ಕೇಳಿದ್ದಾರೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.
ಇದನ್ನೂ ಓದಿ:ಸ್ವಾಮಿ ನಾರಾಯಣ ಗುರುಗಳು ಮತ್ತು ಮುಸ್ಲಿಮರು.. – ಇಸ್ಮತ್ ಪಜೀರ್
ವೇಲು ನಾಚಿಯಾರ್ ಅವರು ಝಾನ್ಸಿ ರಾಣಿಯಂತೆ ಯಾಕೆ ಕಾಣುತ್ತಾರೆ ಎಂದು ಸಮಿತಿ ಸದಸ್ಯರು ಕೇಳಿದ್ದು, ಅವರ ಭಾವಚಿತ್ರಕ್ಕೆ ತಮಿಳು ಉಡುಗೆಯನ್ನು ತೊಡಿಸಬೇಕು ಎಂದು ಹೇಳಿದ್ದಾಗಿ ವರದಿಯಾಗಿದೆ.
ಸುಬ್ರಹ್ಮಣ್ಯ ಭಾರತಿ, ವಿ.ಒ. ಚಿದಂಬರನಾರ್ ಮತ್ತು ರಾಣಿ ವೇಲು ನಾಚಿಯಾರ್ ಪ್ರಸಿದ್ಧ ಸ್ವಾತಂತ್ಯ್ರ ಹೋರಾಟಗಾರರಲ್ಲ ಎಂದು ತಜ್ಞರ ಸಮಿತಿ ಹೇಳಿದೆ ಎಂದು TNIE ವರದಿ ಮಾಡಿದೆ. ಈ ಟ್ಯಾಬ್ಲೋದಲ್ಲಿ ‘ರಾಷ್ಟ್ರೀಯ ಖ್ಯಾತಿಯ ಸ್ವಾತಂತ್ರ್ಯ ಹೋರಾಟಗಾರನ್ನು ಚಿತ್ರಿಸಲು ತಜ್ಞರ ಸಮಿತಿಯು ತಮಿಳುನಾಡಿಗೆ ಕೇಳಿದೆ.
ಸುಬ್ರಮಣ್ಯ ಭಾರತಿ
ಸುಬ್ರಮಣ್ಯ ಭಾರತಿ, ತಮಿಳು ಬರಹಗಾರ, ಕವಿ, ಪತ್ರಕರ್ತ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕರಗಿದ್ದಾರೆ. ಅವರು ‘ಮಹಾಕವಿ ಭಾರತಿ’ ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತಾರೆ. ಆಧುನಿಕ ತಮಿಳು ಕಾವ್ಯದ ಪ್ರವರ್ತಕರಾಗಿದ್ದು, ಸಾರ್ವಕಾಲಿಕ ಶ್ರೇಷ್ಠ ತಮಿಳು ಸಾಹಿತ್ಯಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
ಇದನ್ನೂ ಓದಿ:ಗಣರಾಜ್ಯೋತ್ಸವದ ಕರ್ನಾಟಕ ಟ್ಯಾಬ್ಲೊದಲ್ಲಿ ಕೇಸರಿ ಧ್ವಜ!: ಕನ್ನಡವಿಲ್ಲದ್ದಕ್ಕೆ ಕನ್ನಡಿಗರ ಕಿಡಿ
ವಿ.ಒ. ಚಿದಂಬರನಾರ್
ವಿ.ಒ. ಚಿದಂಬರನಾರ್ ಅವರನ್ನು ‘ತಮಿಳು ಹೆಲ್ಮ್ಸ್ಮನ್’ ಎಂದೂ ಕರೆಯುತ್ತಾರೆ. ಅವರು ಸ್ವಾತಂತ್ರ್ಯ ಹೋರಾಟಗಾರರಗಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮಾಜಿ ನಾಯಕರಾಗಿದ್ದಾರೆ.
ರಾಣಿ ವೇಲು ನಾಚಿಯಾರ್
ರಾಣಿ ವೇಲು ನಾಚಿಯಾರ್ ಅವರು 1780–1790ರಲ್ಲಿ ಶಿವಗಂಗಾ ಎಸ್ಟೇಟ್ನ ರಾಣಿಯಾಗಿದ್ದರು. ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಯುದ್ಧ ಮಾಡಿದ ಮೊದಲ ಭಾರತೀಯ ರಾಣಿಯಾಗಿದ್ದಾರೆ. ಅವರನ್ನು ತಮಿಳರು ‘ವೀರಮಂಗೈ’ ಎಂದೂ ಕರೆಯುತ್ತಾರೆ.
ಮರುದು ಪಾಂಡಿಯರ್
ಮರುದು ಪಾಂಡಿಯರ್ಗಳು 18 ನೇ ಶತಮಾನದ ಅಂತ್ಯದ ವೇಳೆಯ ತಮಿಳುನಾಡಿನ ಶಿವಗಂಗೈನ ಡೈಯಾರ್ಕಲ್ ರಾಜರಾಗಿದ್ದರು. ಅವರು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ್ದರು. ಇವರನ್ನು ಈಸ್ಟ್ ಇಂಡಿಯಾ ಕಂಪೆನಿಯು ಗಲ್ಲಿಗೇರಿಸಿತ್ತು.
ಇದನ್ನೂ ಓದಿ:ತಮಿಳುನಾಡು: 50 ಸಾವಿರ ಕೇಂದ್ರಗಳಲ್ಲಿ 18 ನೇ ಮೆಗಾ ಲಸಿಕಾ ಶಿಬಿರ