ಜನವರಿ 4ರ ಮಂಗಳವಾರದಂದು ಕೇರಳದ ಕೊಡಂಗಲ್ಲೂರಿನಲ್ಲಿ ಬಿಜೆಪಿ-ಆರ್ಎಸ್ಎಸ್ ಆಯೋಜಿಸಿದ್ದ ರ್ಯಾಲಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡುವ ಪ್ರಚೋದನಕಾರಿ ಘೋಷಣೆಗಳು ಕೂಗಲಾಗಿದೆ. ರ್ಯಾಲಿಯ ಸಮಯದಲ್ಲಿ ಮಾಡಲಾಗಿದ್ದ ಲೈವ್ ವೀಡಿಯೊವನ್ನು ಕೇರಳ ಬಿಜೆಪಿ ರಾಜ್ಯ ವಕ್ತಾರ ಸಂದೀಪ್ ವಾಚಸ್ಪತಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ರ್ಯಾಲಿಯಲ್ಲಿ ಭಾಗವಹಿಸಿದ್ದ ಜನರು, ಬಿಜೆಪಿ ಧ್ವಜಗಳನ್ನು ಹಿಡಿದು, ಮುಖ್ಯಮಂತ್ರಿ ವಿರುದ್ಧ ಮಲಯಾಳಂ ಭಾಷೆಯಲ್ಲಿ ಘೋಷಣೆಗಳನ್ನು ಕೂಗಿದ್ದಾರೆ.
ಇದನ್ನೂ ಓದಿ:ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ – ಪಿಣರಾಯಿ ವಿಜಯನ್
ರ್ಯಾಲಿಯಲ್ಲಿ “ಪಿಣರಾಯಿ ವಿಜಯನ್ ಅವರನ್ನು ಕಡಿದು, ಕಣ್ಣೂರಿನ ನಾಯಿಗಳಿಗೆ ತಿನ್ನಿಸುತ್ತೇವೆ” ಎಂಬ ಘೋಷಣೆಗಳನ್ನು ಕೂಗಲಾಗಿದೆ. 2006 ರಲ್ಲಿ ಕೊಲೆಗೀಡಾದ ಬಿಜೆಪಿಯ ಅಂದಿನ ಪುರಸಭೆಯ ಕಾರ್ಯದರ್ಶಿ ಸತ್ಯೇಶ್ (33) ಅವರ ಪುಣ್ಯತಿಥಿಯನ್ನು ಆಚರಿಸುವ ರ್ಯಾಲಿಯಲ್ಲಿ ಬಿಜೆಪಿ-ಆರ್ಎಸ್ಎಸ್ ಕಾರ್ಯಕರ್ತರು ಈ ಘೋಷಣೆಯನ್ನು ಕೂಗಿದ್ದಾರೆ.
“ಮಂಗಳವಾರ ನಡೆದ ರ್ಯಾಲಿಯಲ್ಲಿ ಸುಮಾರು 1,000 ಜನರು ಭಾಗವಹಿಸಿದ್ದರು. ಮೆರವಣಿಗೆಯೂ 250-300 ಮೀಟರ್ ಉದ್ದವಾಗಿತ್ತು. ರ್ಯಾಲಿಯ ಮಧ್ಯ ಭಾಗದಿಂದ ಘೋಷಣೆಗಳನ್ನು ಕೂಗಲಾಗಿದ್ದು, ಅದು ಪೊಲೀಸರ ಗಮನಕ್ಕೆ ಬಂದಿರಲಿಲ್ಲ” ಎಂದು ಕೊಡಂಗಲ್ಲೂರು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕೇರಳದಲ್ಲಿ ಸಿಎಎ ಜಾರಿಯಾಗುವುದಿಲ್ಲ: ಸಿಎಂ ಪಿಣರಾಯಿ ವಿಜಯನ್ ಪುನರುಚ್ಚಾರ
ರ್ಯಾಲಿ ನಡೆಸಿರುವುದರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 283 (ಸಾರ್ವಜನಿಕ ಮಾರ್ಗ ಅಥವಾ ಸಂಚಾರ ಮಾರ್ಗದಲ್ಲಿ ಅಪಾಯ ಅಥವಾ ಅಡಚಣೆ) ಮತ್ತು ಕೇರಳ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆಯ ಸೆಕ್ಷನ್ಗಳ ಅಡಿಯಲ್ಲಿ ಕಾರ್ಯಕರ್ತರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಘೋಷಣೆ ಕೂಗಿದ ಘಟನೆ ಗುರುವಾರ ಪೊಲೀಸರ ಗಮನಕ್ಕೆ ಬಂದ ನಂತರ, ಪ್ರಸ್ತುತ ಪ್ರಕರಣಕ್ಕೆ ಸಂಬಂಧಿತ ವಿಭಾಗಗಳನ್ನು ಸೇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಕೂಡಾ ತಲಶ್ಶೇರಿಯ ಬಿಜೆಪಿ ರ್ಯಾಲಿಯಲ್ಲಿ ದ್ವೇಷಪೂರಿತ ಘೋಷಣೆಗಳನ್ನು ಕೂಗಲಾಗಿತ್ತು. ಈ ರ್ಯಾಲಿಯಲ್ಲಿ ‘ಆಜಾನ್’ ಕೂಗಬಾರದು ಎಂದು ಮುಸ್ಲಿಮರನ್ನು ಬೆದರಿಸಲಾಗಿತ್ತು.
ಇದನ್ನೂ ಓದಿ:ಚಾಲ್ತಿಯಲ್ಲಿರುವ ವಿವಾಹ ವ್ಯವಸ್ಥೆ ಸುಧಾರಿಸಬೇಕು: ವರದಕ್ಷಿಣೆ ಹತ್ಯೆಗಳ ಬಗ್ಗೆ ಪಿಣರಾಯಿ ವಿಜಯನ್