ಪಂಜಾಬ್ನಲ್ಲಿ ಪ್ರಧಾನಿ ಮೋದಿಯವರ ಭದ್ರತಾ ವೈಫಲ್ಯದ ವಿಷಯ ವಿವಾದ ಹುಟ್ಟು ಹಾಕಿರುವ ಸಂದರ್ಭದಲ್ಲಿಯೇ ಜಮ್ಮು ಕಾಶ್ಮೀರದ ನಾಲ್ವರು ಮಾಜಿ ಸಿಎಂಗಳಿಗಿದ್ದ ವಿಶೇಷ ಭದ್ರತಾ ಗುಂಪು (SSG) ರಕ್ಷಣೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಸರ್ಕಾರದ ಭದ್ರತಾ ಪರಿಶೀಲನಾ ಸಭೆಯ ನಂತರ ಜಮ್ಮು ಕಾಶ್ಮೀರದ ನಾಲ್ವರು ಮಾಜಿ ಸಿಎಂಗಳಾದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಅವರ ಮಗ ಓಮರ್ ಅಬ್ದುಲ್ಲ, ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಮತ್ತು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ರವರಿಗಿದ್ದ ಎಸ್ಎಸ್ಜಿ ಭದ್ರತೆಯನ್ನು ಹಿಂಪಡೆಯಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ SSG ಎಂಬುದು ವಿಶೇಷ ಭದ್ರತಾ ಘಟಕವಾಗಿದ್ದು, ರಾಜ್ಯದ ಮುಖ್ಯಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳಿಗೆ ಭದ್ರತೆ ಒದಗಿಸಲು ರಚಿಸಲಾಗಿದೆ. ಈಗ ಅದನ್ನು ಹಿಂಪಡೆದಿದ್ದರಿಂದ ಎಲ್ಲಾ ನಾಲ್ಕು ಮಾಜಿ ಮುಖ್ಯಮಂತ್ರಿಗಳು ಅವರ ಭದ್ರತಾ ವರ್ಗೀಕರಣ ಮತ್ತು ಅವರಿಗೆ ಬರುವ ಬೆದರಿಕೆಯ ಆಧಾರದ ಮೇಲೆ J&K ಪೋಲೀಸರ ಭದ್ರತಾ ವಿಭಾಗದಿಂದ ರಕ್ಷಣೆ ಪಡೆಯಬೇಕಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಓಮರ್ ಅಬ್ದುಲ್ಲ, “ಈ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಭದ್ರತೆ ಹಿಂಪಡೆಯುತ್ತಿರುವುದರ ಕುರಿತು ಸೌಜನ್ಯಕ್ಕೂ ಒಂದು ಮಾತು ತಿಳಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ರಾಜಕೀಯ ಪ್ರೇರಿತ ನಿರ್ಧಾರ ಇದಾಗಿದೆ. ಇದರ ವಿರುದ್ಧ ದನಿಯೆತ್ತಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮೆಹಬೂಬ ಮುಫ್ತಿ ಮಾತನಾಡಿ, “ಈ ಕುರಿತು ನನಗೆ ಅಧಿಕೃತವಾಗಿ ತಿಳಿಸಿಲ್ಲ. ಅವರು ಏಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಸಹ ತಿಳಿದಿಲ್ಲ. ಪಂಜಾಬ್ನಲ್ಲಿ ಪ್ರಧಾನಿಯವರ ಬೆಂಗಾವಲು ವಾಹನಗಳನ್ನೇ ತಡೆಯಲಾಗಿದೆ ಎಂದರೆ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದು ನಿಮಗೆ ತಿಳಿದಿದೆ. ಇಂತಹ ಸಂದರ್ಭದಲ್ಲಿ ಜಮ್ಮು ಕಾಶ್ಮೀರದಲ್ಲಿ ನಮಗಿದ್ದ ಭದ್ರತೆಯನ್ನು ಹಿಂಪಡೆಯುವುದು ಸರಿಯೇ” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ’ಬುಲ್ಲಿ ಬಾಯ್’ ಪ್ರಕರಣದ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ಬಂಧನ: ದೆಹಲಿ ಪೊಲೀಸರು