ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಯೋಗ ಗುರು ರಾಮ್ದೇವ್ ವಿರುದ್ಧದ ಎಫ್ಐಆರ್ಗೆ ಸಂಬಂಧಿಸಿದಂತೆ ಅಕ್ಟೋಬರ್ 5 ರಂದು ಬಾರ್ಮರ್ನ ಚೋಹ್ತಾನ್ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಹಾಜರಾಗುವಂತೆ ರಾಜಸ್ಥಾನ ಹೈಕೋರ್ಟ್ ನೋಟಿಸ್ ನೀಡಿದೆ.
ತನಿಖಾಧಿಕಾರಿ ಕರೆದಾಗಲೆಲ್ಲಾ ಠಾಣೆಗೆ ಹಾಜರಾಗಬೇಕು ಎಂದು ರಾಮ್ದೇವ್ಗೆ ಹೈಕೋರ್ಟ್ ಹೇಳಿದೆ. ಜತೆಗೆ ಪಕರಣದ ದಿನಚರಿಯನ್ನು ಅ. 16ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ಗೆ ಸೂಚಿಸಿದೆ. ಜತೆಗೆ ರಾಮ್ ದೇವ್ ಬಂಧನಕ್ಕೆ ನೀಡಿದ ತಡೆಯನ್ನು ಹೈಕೋರ್ಟ್ ವಿಸ್ತರಿಸಿದೆ.
ಎಫ್ಐಆರ್ ರದ್ದು ಕೋರಿ ಬಾಬಾ ರಾಮ್ದೇವ್ ಹೈಕೋರ್ಟ್ ಮೊರೆ ಹೋಗಿದ್ದರು. ಕ್ರಿಮಿನಲ್ ವಿವಿಧ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಕುಲದೀಪ್ ಮಾಥುರ್ ಸೋಮವಾರ ಈ ನಿರ್ದೇಶನ ನೀಡಿದ್ದಾರೆ.
”ಅರ್ಜಿದಾರರಿಗೆ 05.10.2023ರಂದು ಬೆಳಿಗ್ಗೆ 11.30ಕ್ಕೆ ವಿಚಾರಣೆಗಾಗಿ ತನಿಖಾ ಅಧಿಕಾರಿಯ ಮುಂದೆ ಹಾಜರಾಗಲು ಸೂಚಿಸಲಾಗಿದೆ. ಅರ್ಜಿದಾರರು ವಿಚಾರಣೆಗೆ ಕರೆದಾಗ ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಿಂದಿನ ವಿಚಾರಣೆ ವೇಳೆ ರಾಮ್ದೇವ್ ಬಂಧನಕ್ಕೆ, ನ್ಯಾಯಾಲಯ ತಡೆ ನೀಡಿತ್ತು. ಮೇ 20ರಂದು ತನಿಖಾಧಿಕಾರಿ ಎದುರು ಹಾಜರಾಗುವಂತೆಯೂ ಸೂಚಿಸಿತ್ತು. ಆದರೆ ರಾಮ್ ದೇವ್ ಹಾಜರಾಗಿರಲಿಲ್ಲ.
2023ರ ಫೆ. 2ರಂದು ಚಾರ್ಮ್ರನಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಾಬಾ ರಾಮ್ ದೇವ್ ಅವರು ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂಬ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.
ನಂತರ ಚೋಹ್ತಾನ್ ಪೊಲೀಸರು ದ್ವೇಷವನ್ನು ಪ್ರಚೋದಿಸುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಆರೋಪದಡಿಯಲ್ಲಿ ಕೇಸು ದಾಖಲಿಸಿದ್ದರು.
”ರಾಮ್ದೇವ್ ಅವರು ‘ಉದ್ದೇಶಪೂರ್ವಕವಾಗಿ… ಇಸ್ಲಾಂ ವಿರುದ್ಧ ದ್ವೇಷ ಮತ್ತು ದ್ವೇಷದ ಮನೋಭಾವವನ್ನು ರೂಪಿಸಲು’ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಹೇಳಿಕೆಗಳಿಂದ ಕೋಟ್ಯಂತರ ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ದ್ವೇಷ ಭಾಷಣ ಹಿನ್ನೆಲೆ ರಾಮದೇವ್ ವಿರುದ್ಧ ಎಫ್ಐಆರ್