ಪ್ರಜಾಪ್ರಭುತ್ವ ಹಾಗೂ ಗಣತಂತ್ರದ ಕೊಲೆ ಮಾಡಲು ಹವಣಿಸುತ್ತಿರುವ ಜನದ್ರೋಹಿ ಸರಕಾರವನ್ನು ಸೋಲಿಸಿ, ಜನಪರವಾದ ಪ್ರಗತಿಪರ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು, ಬಸವಣ್ಣನವರು ಹಾಗೂ ಸರ್ವಸಮತೆಯ ಬಂಧುತ್ವದ ಸ್ವಾಭಿಮಾನಿ ದೇಶವನ್ನು ಕಟ್ಟುವ ಅಭಿಲಾಷೆ ಹೊಂದಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸಿನ ದೇಶವನ್ನು ನಿರ್ಮಿಸಲು ಜನದ್ರೋಹಿ ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಂದಾಗಬೇಕು ಎಂದು ಸಂವಿಧಾನ ಪರ ಸಂಘಟನೆಗಳ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.
2014ರ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ, ಭಾರೀ ಕಾರ್ಪೊರೇಟ್ ಮತ್ತು ಹಣಬೆಂಬಲ
ಹಾಗೂ ಗುಲಾಮಿ ಸ್ವಭಾವದ ಮಾಧ್ಯಮಗಳ ಸಹಾಯದ ಮೂಲಕ ಮನಮೋಹನ್ ಸಿಂಗ್ ನೇತೃತ್ವದ ಮೇಲೆ ಸುಳ್ಳು ಆರೋಪ, ಅಪಪ್ರಚಾರ ಮಾಡಿ, ಸುಳ್ಳು ಆಶ್ವಾಸನೆ ನೀಡಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ, ಇಡೀ ಭಾರತ ದೇಶವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ಹಿಂದೆ ಅವರ ಕೈಗೆ ಅಧಿಕಾರ ಕೊಟ್ಟಿದ್ದ ಜನ ಈಗ ಪಶ್ಚಾತಾಪ ಪಡುವಂತಾಗಿದೆ. ಮೋದಿಯ ಕ್ರೂರ, ಭ್ರಷ್ಟ, ಫ್ಯಾಶಿಸ್ಟ್ ಸರಕಾರ ಸೋಲಬೇಕೆಂದು ದೇಶದ ಜನರು ಬಯಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ದೇಶದ ಸಮಸ್ತ ರೈತರು, ದಲಿತ, ದಮನಿತರು, ಮಧ್ಯಮ ವರ್ಗದವರು, ರಾಷ್ಟ್ರದ ಸಣ್ಣ ಉದ್ದಿಮೆದಾರರು ಮತ್ತು ವ್ಯಾಪಾರಿಗಳು, ಮಹಿಳೆಯರು, ವಿದ್ಯಾರ್ಥಿಗಳು, ಕೃಷಿಕರು, ಜನಸಾಮಾನ್ಯರು ಮೋದಿ ಸೋಲಬೇಕೆಂದು ಬಯಸುತ್ತಿದ್ದಾರೆ.
ಬಿಜೆಪಿ ಒಂದು ಸ್ವತಂತ್ರವಾದ ರಾಜಕೀಯ ಪಕ್ಷವಲ್ಲ. ಅದು ನಿಜವಾಗಿ ಫ್ಯಾಶಿಸ್ಟ್ ಧೋರಣೆಯ
ಆರ್.ಎಸ್.ಎಸ್.ನ ರಾಜಕೀಯ ಶಾಖೆಯಾಗಿದೆ. ಹಾಗಾಗಿ ಅದು, ಸಂಘೀ ಗ್ಯಾಂಗಿನ ವೈದಿಕಶಾಹಿ
ನಿರ್ದೇಶನದಲ್ಲಿಯೇ ನಡೆಯುವ ಕೊಳಕು ಚಿಂತನೆಯ ಕೋಮುವಾದಿ ಪಕ್ಷವಾಗಿದೆ. ಜನರಲ್ಲಿ ಪರಸ್ಪರ
ದ್ವೇಷಭಾವನೆ ಹುಟ್ಟಿಸುವ ವಿಚ್ಛಿದ್ರಕಾರಿ ಒಡಕಿನ ಕುತಂತ್ರವೇ ಅದರ ಜೀವಾಳವಾಗಿದೆ. ನೋಟ್ ಬ್ಯಾನ್ ಮೂಲಕ ದೇಶದ ಕೋಟ್ಯಾಂತರ ಜನರ ಬದುಕನ್ನು ಬಿಜೆಪಿ ಮೂರಾಬಟ್ಟೆ ಮಾಡಿದ್ದು, ಜಿಎಸ್ಟಿ ಮೂಲಕ
ಸಮಸ್ತ ಬಡಜನರನ್ನು ದರೋಡೆ ಮಾಡಿದೆ. ದೇಶದ ಅನ್ನದಾತರಾದ ರೈತರನ್ನು ಕಂಗಾಲಾಗಿಸಿ, ಭಿಕಾರಿಗಳನ್ನಾಗಿ ಮಾಡಿ, ಬಂಡವಾಳಶಾಹಿಗಳ ಸುಲಿಗೆ ತೆಕ್ಕೆಗೆ ನೂಕುವ ಉದ್ದೇಶದಿಂದ ರೈತ ವಿರೋಧಿ ಕಾನೂನು ಜಾರಿಗೆ ತಂದಿದೆ.
ಒಂದೆಡೆ ಭೇಟಿ ಬಚಾವೋ, ಭೇಟಿ ಪಡಾವೋ ಎಂದು ಘೋಷಿಸುತ್ತಲೇ ಮಣಿಪುರದಲ್ಲಿ ಮಹಿಳೆಯರನ್ನು
ಅಮಾನಿಸಿದಾಗ, ದೇಶಕ್ಕೆ ಕೀರ್ತಿ ತಂದ ಒಲಿಂಪಿಕ್ಸ್ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ
ನಡೆದಾಗ, ಬಿಲ್ಕೀಸ್ ಬಾನು ಪ್ರಕರಣದ ಅಪರಾಧಿಗಳನ್ನು ಶಿಕ್ಷೆಯ ಅರ್ಧಾವಧಿಯಲ್ಲಿಯೇ ಬಿಡುಗಡೆ
ಮಾಡಿದ್ದಾಗ ಬಿಜೆಪಿ ಬಾಯಿ ಮುಚ್ಚಿಕೊಂಡಿದೆ. ಬಿಜೆಪಿ ಭ್ರಷ್ಟಾಚಾರವನ್ನು ಕೊನೆಗೊಳಿಸುತ್ತದೆ ಎಂದು ಹೇಳುತ್ತಾ ಬಂದಿತ್ತು, ಇದೀಗ ಭ್ರಷ್ಟರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಂಡಿದೆ. ಯುವಕರಿಗೆ 2 ಕೋಟಿ ಉದ್ಯೋಗ ಕೊಡುತ್ತೇವೆಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಪಕೋಡ ಮಾರಿ ಎಂದು ಅವಮಾನಿಸಿದ್ದಾರೆ, ಉದ್ಯೋಗವನ್ನು ಬಿಜೆಪಿ ನಾಶಪಡಿಸಿದೆ. ಬೆಲಯೇರಿಕೆಯಿಂದ ದೇಶದ ಜನರ ಬದುಕನ್ನ ಬರ್ಬರವನ್ನಾಗಿಸಿದೆ. ಕೋಮುವಾದವನ್ನು ಬಿತ್ತುತ್ತ ಅಲ್ಪಸಂಖ್ಯಾತರು, ದಲಿತರ ಬದುಕನ್ನು ನರಕವನ್ನಾಗಿಸಿದೆ.
ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ನಿಲ್ಲಿಸಿ ಶಿಕ್ಷಣಕ್ಕೆ ಅಡ್ಡಿಪಡಿಸಿದೆ. ಇಡಿ, ಸಿಬಿಐ ಸೇರಿದಂತೆ ಸರಕಾರಿ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳನ್ನು ಜೈಲಿಗೆ ತಳ್ಳಿದೆ. ಚುನಾವಣಾ ಬಾಂಡ್ ಇಡೀ ದೇಶವನ್ನು ಕೊಳ್ಳೆ ಹೊಡೆದ ಕೋಟ್ಯಾಂತರ ಹಣವನ್ನು ಕಳ್ಳ ಮಾರ್ಗದ ಮೂಲಕ ಸಂಗ್ರಹಿಸಿದೆ. ಕಾರ್ಪೋರೇಟರ್ಗಳ ಸಾಲವನ್ನು ಬಿಜೆಪಿ ಸರಕಾರ ಮನ್ನಾ ಮಾಡಿದ್ದು, ಬಡ, ರೈತರ ವಿದ್ಯಾರ್ಥಿಗಳಿಂದ ಬಲವಂತವಾಗಿ ಸಾಲ ವಸೂಲಾತಿಯನ್ನು ಮಾಡುತ್ತಿದೆ, ಆದ್ದರಿಂದ ಎಲ್ಲರೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಅದಾನಿ ಮಾಲಿಕತ್ವದ ಬಂದರಿನ ವಿರುದ್ಧ ಪ್ರತಿಭಟಿಸಿದ ಚರ್ಚ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಮೋದಿ ಸರಕಾರ