Homeಮುಖಪುಟಮಾದರಿ ಪುಸ್ತಕಪ್ರೇಮಿ: ಕಟಿಂಗ್ ಶಾಪ್ ನಲ್ಲಿ ಪುಟ್ಟ ಗ್ರಂಥಾಲಯ, ಪುಸ್ತಕ ಓದು ಅಭಿಯಾನ

ಮಾದರಿ ಪುಸ್ತಕಪ್ರೇಮಿ: ಕಟಿಂಗ್ ಶಾಪ್ ನಲ್ಲಿ ಪುಟ್ಟ ಗ್ರಂಥಾಲಯ, ಪುಸ್ತಕ ಓದು ಅಭಿಯಾನ

- Advertisement -
- Advertisement -

ತರಾವರಿ ಪುಸ್ತಕಗಳ ಗ್ರಂಥಾಲಯವಿರುವ ಕಟಿಂಗ್ ಶಾಪಿನ ಫೋಟೋವೊಂದು ವೈರಲ್ ಆಗಿ ಓಡಾಡುತ್ತಿತ್ತು. ಮೇಲುನೋಟಕ್ಕೆ ಇದೊಂದು ಪೋಟೋಶಾಪ್ ಮಾಡಿದ ಫೇಕ್ ಫೋಟೋ ಇರಬೇಕು ಅಂದುಕೊಂಡೆ. ನಂತರ ಇದನ್ನು ಪರಿಶೀಲಿಸಲು ಗೂಗಲ್ ಮಾಡಿದಾಗ,  ಈ ಫೋಟೋದ ನಿಜದ ಕಥೆ ಹೇಳುವ ಹಿಂದೂ ಪತ್ರಿಕೆಯ ವರದಿಯೊಂದು ಕಾಣಿಸಿತು. ಈ ಫೋಟೋದ ಬಗೆಗಿನ ಕುತೂಹಲಕಾರಿ ಸಂಗತಿ ತಿಳಿಯಲೆಂದು ವರದಿಯನ್ನು ಅನುವಾದಿಸಿದ್ದೇನೆ.

ಪೊನ್ನ ಮರಿಯಪ್ಪ ಹದಿನೆಂಟು ವರ್ಷ ದಿನಗೂಲಿ ಮಾಡಿ ಅದರಲ್ಲಿ ಒಂದಷ್ಟು ಹಣವನ್ನು ಉಳಿತಾಯ ಮಾಡುತ್ತಾನೆ. ಈ ಹಣದಲ್ಲಿ ತನ್ನ ಬಹುದಿನದ ಕನಸಾದ ತನ್ನದೇ `ಸುರೇಶ್ ಬ್ಯೂಟಿ ಸೆಂಟರ್’ ಹೆಸರಿನ ಕಟಿಂಗ್ ಶಾಪೊಂದನ್ನು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮಿಲ್ಲೆರ್ ಪುರಂ ನಲ್ಲಿ 2014 ರಲ್ಲಿ ತೆರೆಯುತ್ತಾನೆ.

ಸಹಜವಾಗಿ ಕಟಿಂಗ್ ಮಾಡಿಸಲು ಬಂದವರು ತಮ್ಮ ಸರತಿ ಬರುವ ತನಕ ಕಾಯಬೇಕಾಗಿತ್ತು. ಈ ಅವಧಿಯಲ್ಲಿ ಎಲ್ಲರೂ ತಮ್ಮ ಮೊಬೈಲಿನಲ್ಲಿ ಮುಳುಗಿರುತ್ತಿದ್ದರು. ಕೆಲವರು ಶಾಪಲ್ಲಿನ ಟಿವಿ ನೋಡುತ್ತಿದ್ದರು. ಹೀಗಿರುವಾಗ ಮರಿಯಪ್ಪನಿಗೆ ಸರತಿ ಬರುವ ತನಕ ಕಾಯುವವರ ಕೈಗೆ ಪುಸ್ತಕಗಳನ್ನು ಯಾಕೆ ಕೊಡಬಾರದು ಎನ್ನುವ ಯೋಚನೆ ಹೊಳೆಯುತ್ತದೆ. ಮರುದಿನವೇ ತನ್ನ ಶಾಪಿನಿಂದ ಟಿ.ವಿಯನ್ನು ತೆಗೆಯುತ್ತಾನೆ. ಆಗ ಟಿವಿ ಇಟ್ಟಿದ್ದ ಜಾಗದಲ್ಲಿ  ದಿನ ಪತ್ರಿಕೆಗಳ ಜತೆ 5 ಪುಸ್ತಕಗಳನ್ನು ಇಡುತ್ತಾರೆ. ಈ ಐದೂ ಪುಸ್ತಕಗಳು ಕಾರ್ಲ್ ಮಾರ್ಕ್ಸ್, ಅಬ್ರಾಹಂ ಲಿಂಕನ್, ಪೆರಿಯಾರ್, ಅಣ್ಣಾದೊರೈ, ಅಬ್ದುಲ್ ಕಲಾಮ್ ಕುರಿತಾದ ಆತ್ಮಕಥನ/ಜೀವನ ಚರಿತ್ರೆಗಳು.  ಕೆಲವೇ ದಿನಗಳಲ್ಲಿ ಮೊಬೈಲ್ ನೋಡುವವರು ಈ ಪುಸ್ತಕಗಳನ್ನು ಹಿಡಿದು ತಿರುವಿಹಾಕಿ ಹಾಗೆ ಪುಸ್ತಕದ ಜಾಗಕ್ಕೆ ಇಡತೊಡಗಿದರು, ಕೆಲವರು ಚೂರು ಚೂರು ಓದತೊಡಗಿದರು. ಇದು ಮರಿಯಪ್ಪನ ಖುಷಿಯನ್ನು ಇಮ್ಮಡಿಗೊಳಿಸಿತು.

ಆ ನಂತರ ಮರಿಯಪ್ಪ ಹಳೆ ಪುಸ್ತಕ ಮಾರುವವರಲ್ಲಿ, ಹೆಚ್ಚು ರಿಯಾಯಿತಿ ದರದಲ್ಲಿ ಮಾರುವ ಪುಸ್ತಕ ಮೇಳಗಳಲ್ಲಿ ಪುಸ್ತಕಗಳನ್ನು ಕೊಂಡು ತನ್ನ ಶಾಪಿಗೆ ತರತೊಡಗುತ್ತಾನೆ. 2015 ರ ಕೊನೆಗೆ ಶಾಪಿನ ಒಂದು ಗೋಡೆಯನ್ನು ಪುಸ್ತಕಗಳ ಕಪಾಟಿಗಾಗಿ ಸಿದ್ದಗೊಳಿಸುತ್ತಾನೆ. ತತ್ವಶಾಸ್ತ್ರ, ವಿಜ್ಞಾನ, ಜನಪದ ಕತೆ, ಧರ್ಮ, ನೀತಿಕತೆಗಳು, ಮಕ್ಕಳಿಗೆ ಬೇಕಾಗುವ ರಮ್ಯ ಕಥೆಗಳು ಹೀಗೆ ಹಲವು ವೈವಿಧ್ಯಮಯ 250 ಪುಸ್ತಗಳು ಸೇರ್ಪಡೆಗೊಳ್ಳುತ್ತವೆ.

“ಶಾಪಿಗೆ ಬಂದು ಅವರ ಸರತಿ ಬರುವವರೆಗೆ ಕಾಯುವ ಗಿರಾಕಿಗಳನ್ನು ದಯವಿಟ್ಟು ಮೊಬೈಲ್ ಬಳಸಬೇಡಿ, ಇಲ್ಲಿ ಒಳ್ಳೊಳ್ಳೆ ಪುಸ್ತಕಗಳಿವೆ ಕಟಿಂಗ್ ಮಾಡಿಸಿಕೊಳ್ಳುವ ತನಕ ಪುಸ್ತಕ ಓದಿ” ಎಂದು ಆತ್ಮೀಯವಾಗಿ ಕೇಳಿಕೊಳ್ಳುವೆ. ಈ ತನಕ ಯಾರೂ ನನ್ನ ಮಾತನ್ನು ಮೀರಿಲ್ಲ. ಅದು ನನಗೆ ಖುಷಿಕೊಡುತ್ತದೆ ಎನ್ನುತ್ತಾನೆ ಮರಿಯಪ್ಪ.

ಶಾಲಾ ಮಕ್ಕಳು ಬಂದಾಗ, ನೀವು ಪುಸ್ತಕ ಓದುವುದು ಮಾತ್ರವಲ್ಲ, ನೀವು ಓದಿದ ಭಾಗದ ಮುಖ್ಯಾಂಶಗಳನ್ನು ಬರೆದು ಹೋಗಿ ಎಂದು ಹೇಳುತ್ತಾರೆ. ಹೀಗೆ ವಿವರ ಟಿಪ್ಪಣಿ ಪರಿಚಯ ಬರೆಯುವುದಕ್ಕಾಗಿ 2018 ರಿಂದ ಒಂದು ದಾಖಲಾತಿ ಪುಸ್ತಕವನ್ನೂ ಇಟ್ಟಿದ್ದಾರೆ. ಅದರಲ್ಲಿ ಪುಸ್ತಕ ಓದಿದವರು ಅಭಿಪ್ರಾಯ ಬರೆದು ಹೋಗುತ್ತಾರೆ. ಈತನಕ 300 ವಿದ್ಯಾರ್ಥಿಗಳು ತಾವು ಓದಿದ ಪುಸ್ತಕದ ಬಗ್ಗೆ ಅಭಿಪ್ರಾಯ, ತಮ್ಮ ಹೆಸರು ಮತ್ತು ಶಾಲೆಯ ವಿಳಾಸವನ್ನು ಬರೆದು ಹೋಗಿದ್ದಾರೆ.

ಕನಿಷ್ಠ ಒಂದು ಪುಸ್ತಕದ 10 ಪುಟ ಓದಿ, ಅದರ ಬಗ್ಗೆ ಒಂದು ಟಿಪ್ಪಣಿ ಬರೆದರೆ ಹೇರ್ ಕಟ್ ಗೆ 80 ರೂ ಇದ್ದರೆ.  30 ರೂ ರಿಯಾಯಿತಿ ಕೊಡುವುದಾಗಿ ಹೇಳಿ 2020 ರ ಹೊಸ ವರ್ಷವನ್ನು ಆಚರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮರಿಯಪ್ಪನವರ ಸಲೂನ್ ಲೈಬ್ರರಿಯ ಫೋಟೋ ವೈರಲ್ ಆಗುವುದಕ್ಕಿಂತ ಮೊದಲು ಆರು ವರ್ಷ ಯಾವುದೇ ಪ್ರಚಾರ ಬಯಸದೆ ಮರಿಯಪ್ಪ ತನ್ನ ಸಲೂನಲ್ಲಿ ಓದು ಅಭಿಯಾನ ಶುರುಮಾಡಿದ್ದರು. ಮರಿಯಪ್ಪನ ಪುಸ್ತಕ ಪ್ರೀತಿ ನೋಡಿ ಪ್ರಸಿದ್ಧ ಪುಸ್ತಕ ಪ್ರಕಾಶನ Hatchette Indiaದವರು ಒಂದಷ್ಟು ಇಂಗ್ಲೀಷ್ ಪುಸ್ತಕಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಇದರಿಂದ ಆ ತನಕ ಬರಿ ತಮಿಳು ಪುಸ್ತಕ ಇಟ್ಟಿದ್ದ ಮರಿಯಪ್ಪ ಇದೀಗ ಇಂಗ್ಲೀಷ್ ಪುಸ್ತಕಗಳನ್ನು ಇಟ್ಟಿದ್ದಾರೆ. ತೂತುಕುಡಿ ಎಂ.ಪಿ. ಕನಿಮೋಜಿ ಯವರು 50 ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಮರಿಯಪ್ಪನ ಸಲೂನಿನಲ್ಲಿ 900 ರಷ್ಟು ವೈವಿಧ್ಯಮಯ ತಮಿಳು, ಇಂಗ್ಲೀಷ್ ಪುಸ್ತಕಗಳ ಸಂಗ್ರಹವಾಗಿದೆ. ನಿರಂತರವಾಗಿ ಓದುತ್ತಿದ್ದರೆ ಹೊಸ ಹೊಸ ಆಲೋಚನೆಗಳು ಬರುತ್ತವೆ ಎಂದು ಮರಿಯಪ್ಪ ಹೇಳುತ್ತಾರೆ.

ತನ್ನ ವಿದ್ಯಭ್ಯಾಸ ಕುಂಟಿತವಾದರೂ ಬೇರೆಯವರು ಓದಬೇಕು, ಓದಿ ಜ್ಞಾನ ಸಂಪಾದಿಸಬೇಕೆಂದು ಕನಸುವ ಪೊನ್ನ ಮರಿಯಪ್ಪನವರ ನಡೆಯಿಂದ  ಸೆಲೂನ್ ಶಾಪ್ ನ ಸ್ಥಾಪಿತ ಕಲ್ಪನೆಯನ್ನೆ ಹೊಡೆದು ಹಾಕಿದ್ದಾರೆ.

  • (ಕೃಪೆ): ದ ಹಿಂದು
  • ಮೂಲ: ಸೋಮ ಬಸು
  • ಅನುವಾದ: ಅರುಣ್ ಜೋಳದಕೂಡ್ಲಿಗಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...