ಹಿರಿಯ ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್ (81) ಬುಧವಾರ ರಾತ್ರಿ 11.30 ಕ್ಕೆ ಬಳ್ಳಾರಿಯಲ್ಲಿ ನಿಧನರಾಗಿದ್ದಾರೆ.
ನಗರದ ರೇಡಿಯೋಪಾರ್ಕ್ ಪ್ರದೇಶದಲ್ಲಿ ವಾಸವಾಗಿದ್ದ ಅವರು 11 ಗಂಟೆ ಸುಮಾರಿಗೆ ಉಸಿರಾಟದ ತೊಂದರೆಯಾಗಿ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು. ಹಿರಿಯ ಕಲಾವಿದೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿರನ್ನು ಅಗಲಿದ್ದಾರೆ.
ಬಾಲ್ಯದಿಂದಲೇ ರಂಗಭೂಮಿಯಲ್ಲಿ ಬೆಳೆದು ಬಂದ ಅವರು ಪೌರಾಣಿಕವಾಗಿ ’ರಕ್ತ ರಾತ್ರಿ’ ನಾಟಕದ ದ್ರೌಪದಿ ಪಾತ್ರ ಹಾಗೂ ಸಾಮಾಜಿಕವಾಗಿ ’ಹೇಮರೆಡ್ಡಿ ಮಲ್ಲಮ್ಮ’ನ ಪಾತ್ರಕ್ಕೆ ಜನಮನ್ನಣೆ ಗಳಿಸಿದ್ದರು.
ಅಷ್ಟೇ ಅಲ್ಲದೆ ಇವರು ಹಾಡುತ್ತಿದ್ದ ಅಕ್ಕಮಹಾದೇವಿಯ ‘ಬೆಟ್ಟದ ಮೇಲೊಂದು ಮನೆಯ ಮಾಡಿ’ ಮತ್ತು ಹೇಮರೆಡ್ಡಿ ಮಲ್ಲಮ್ಮಳ ನಾಟಕದ ‘ಜಯವೆಂದು ಬೆಳಗುವೆ ಮಲ್ಲಿಕಾರ್ಜುನನೆ’ ಹಾಡುಗಳು ಜನಪ್ರಿಯವಾತ್ತು. ಇವರು ಆಕಾಶವಾಣಿಯ ಎ ಗ್ರೇಡ್ ಕಲಾವಿದರಾಗಿದ್ದರು.
ಹಂಪಿ ಕನ್ನಡ ವಿವಿಯ ನಾಡೋಜ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಯಲಯದ ಗೌರವ ಡಾಕ್ಟರೇಟ್, ರಾಜ್ಯೋತ್ಸವ, ನಾಟಕ ಅಕಾಡೆಮಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.
ಅವರ ಮನೆಯ ಬಳಿ ಪಾರ್ಥಿವ ಶರೀರವನ್ನು ಇಡಲಾಗಿದ್ದು ಇಂದು ಸಂಜೆ ಮಧ್ಯಾಹ್ನ 3 ಗಂಟೆಗೆ ನಗರದ ರೂಪನಗುಡಿ ರಸ್ತೆಯ ಹರಿಶ್ಚಂದ್ರಘಾಟನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಓದಿ: ನಮ್ಮ ನಡುವಿನಲ್ಲಿರುವ ಎಲೆಮರೆ ಸಾಧಕರಿವರು…!