Homeಮುಖಪುಟಬಿಲ್ಕಿಸ್ ಬಾನೋಳ ಮುಗಿಯದ ವನವಾಸ ಮತ್ತು ಸಂಸ್ಕಾರವಂತ ಅತ್ಯಾಚಾರಿಗಳು

ಬಿಲ್ಕಿಸ್ ಬಾನೋಳ ಮುಗಿಯದ ವನವಾಸ ಮತ್ತು ಸಂಸ್ಕಾರವಂತ ಅತ್ಯಾಚಾರಿಗಳು

- Advertisement -
- Advertisement -

ಭಯಾನಕ ಹಿನ್ನೆಲೆ

ಫೆಬ್ರವರಿ 27, 2002ರಂದು ಗುಜರಾತ್‌ನ ತುಂಬಾ ಕೋಮು ಗಲಭೆಗಳು ಭುಗಿಲೆದ್ದಿದ್ದವು. ಗಲಭೆ ಸಂಸ್ಕೃತಿಯ ಅವಿಭಾಜ್ಯ ಎಂದಾಗಿರುವ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕೊಲೆಗಳು ಪೊಲೀಸರ ಕಣ್ಗಾವಲಿನಲ್ಲಿಯೇ ನಡೆದವು. ದಿನ ಬೆಳಗಾಗಿ ಮುಖನೋಡುತ್ತಿದ್ದ ನೆರೆಹೊರೆಯವರು ಧರ್ಮದ ಅಮಲಿನಲ್ಲಿ ರಾಕ್ಷಸರಿಗಿಂತ ವಿಪರೀತವಾಗಿ ವರ್ತಿಸಿದರು.

ಗಲಭೆಯಿಂದ ರಕ್ಷಿಸಿಕೊಳ್ಳಲು ಕುಟುಂಬ ಸಮೇತ ಟ್ರಕ್‌ನಲ್ಲಿ ಹೋಗುತ್ತಿದ್ದಾಗ ಎದುರಾದ ಗಲಭೆಕೋರರು ಬಿಲ್ಕಿಸ್ ಬಾನೋ ಕೈಯಿಂದ ಅವಳ 3 ವರ್ಷದ ಮಗುವನ್ನು ಎಳೆದುಕೊಂಡು ನೆಲಕ್ಕೆ ಚಚ್ಚಿ ಕೊಂದರು. 5 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಮೇಲೆ, ಅವಳನ್ನು ದಿನಲೂ ನೋಡುತ್ತಿದ್ದ ಗಂಡಸರು ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರವೆಸಗಿದರು. ಗಾಡಿಯಲ್ಲಿದ್ದ ಬಿಲ್ಕಿಸ್ ಕುಟುಂಬದ 7 ಸದಸ್ಯರನ್ನು ಕೊಲೆ ಮಾಡಿದರು. ಬಿಲ್ಕಿಸ್ ಕೂಡ ಸತ್ತಿರಬಹುದೆಂದುಕೊಂಡ ಕೊಲೆಗಡುಕರು ಹೊರಟುಹೋದರು. ಆ ಕರಾಳ ಹಿಂಸೆಯ ಮಧ್ಯೆ ಬದುಕುಳಿದ ಬಿಲ್ಕಿಸ್ ತನ್ನ ಗಾಯಗಳನ್ನು ದಿನವೂ ಕೆದಕುವ ಭಯಾನಕ ನೆನಪುಗಳ ವಾತಾವರಣದಲ್ಲಿ ನ್ಯಾಯಕ್ಕಾಗಿ ಮುಳ್ಳಿನ ಹಾದಿ ತುಳಿದಳು.

ಸಂಪೂರ್ಣವಾಗಿ ಸರ್ಕಾರದ ಕೈಗೊಂಬೆಯಾಗಿದ್ದ ಪೊಲೀಸರು ಅವಳ ಕಂಪ್ಲೇಂಟನ್ನು ಕಡೆಗಣಿಸಿದರು. ಅನಿವಾರ್ಯವಾಗಿ ಅವಳು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ ನಂತರ ಸುಪ್ರೀಂ ಕೋರ್ಟ್ 2003ರಲ್ಲಿ ಸಿಬಿಐಗೆ ವಿಚಾರಣೆಯನ್ನು ಒಪ್ಪಿಸಿತು. ಆದರೆ ನಿರಂತರವಾಗಿ ಭಯದ ನೆರಳಲ್ಲಿ ಬದುಕುತ್ತಿದ್ದ ಬಿಲ್ಕಿಸ್‌ಳ ಮನವಿಯ ಮೇರೆಗೆ ಕೇಸನ್ನು ನೆರೆ ರಾಜ್ಯವಾದ ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಯಿತು. ವಿಚಾರಣೆ ನಂತರ 20 ಜನರ ಪೈಕಿ 13 ಜನರನ್ನು ಅಪರಾಧಿಗಳು ಎಂದು ತೀರ್ಪು ನೀಡಿದ ಕೋರ್ಟ್ 11 ಜನರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು. 2017ರಲ್ಲಿ ಬಾಂಬೆ ಹೈಕೋರ್ಟ್ ಈ ತೀರ್ಮಾನವನ್ನು ಎತ್ತಿ ಹಿಡಿಯಿತು. ಅತ್ಯಾಚಾರಿ, ಕೊಲೆಗಡುಕರು ಕೊನೆಗೂ ಜೈಲು ಸೇರಿದ್ದರು.

ಬಿಲ್ಕಿಸ್ ತನ್ನ ಮುರಿದ ಬದುಕನ್ನು ಮರಳಿಕಟ್ಟುವ ಪ್ರಯತ್ನದಲ್ಲಿ ನಿಧಾನವಾಗಿ ತೊಡಗಿದಳು. ತನ್ನ ನೋವಿಗೆ ನ್ಯಾಯಾಂಗ ಸ್ಪಂದಿಸಿದ್ದನ್ನು ಅನುಭವಿಸುವಷ್ಟರಲ್ಲಿ ಇದೇ ಆಗಸ್ಟ್ 15, 2022ರಂದು ಸನ್ನಡತೆಯ ಆಧಾರದ ಮೇಲೆ ಎಲ್ಲ 11 ಅತ್ಯಾಚಾರಿ-ಕೊಲೆಗಡುಕರನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದೆ. ಆ ಎಲ್ಲ ಕೊಲೆಗಡುಕರನ್ನು ಜೈಲಿನಿಂದ ಹೊರಬಂದಾಗ ಹಾರ ಹಾಕಿ ಸಿಹಿ ತಿನ್ನಿಸಿ ಸ್ವಾಗತ ಕೋರಲಾಯಿತು. ಈ ನಡೆ ಇಡೀ ದೇಶದಲ್ಲಿ ವ್ಯಾಪಕವಾಗಿ ಟೀಕೆಗೆ ಒಳಗಾದರೆ, ಕೆಲಜನ ಅದನ್ನು ಗೆಲುವಿನ ರೀತಿ ಸಂಭ್ರಮಿಸಿದರು. ವಿಕೃತ ಮನಸ್ಸುಗಳ ಈ ಸಂಭ್ರಮದಲ್ಲಿ ಬಿಲ್ಕಿಸ್ ಮತ್ತು ಅವಳ ಕುಟುಂಬದ ಮನಸ್ಸು-ಹೃದಯಗಳು ಒಡೆದು ಚೂರಾಗಿವೆ. ಇಂತಹ ಹೀನ ಕೃತ್ಯದ ಅಪರಾಧಿಗಳನ್ನು ಇಷ್ಟು ಸಲೀಸಲಾಗಿ ಬಿಡಬಹುದಾ? ಅವರನ್ನು ಬಿಡುಗಡೆಗೊಳಿಸಿದ ರೀತಿ ಕಾನೂನಾತ್ಮಕವಾಗಿ ಸರಿಯಾಗಿದೆಯಾ? ಅಥವಾ ಯಾವೆಲ್ಲಾ ಸಂದೇಹ ಮತ್ತು ಸಂಶಯಗಳಿಗೆ ಅದು ಎಡೆಮಾಡಿಕೊಡುತ್ತದೆ. ಈ ಬಿಡುಗಡೆ ಹಠಾತ್ತಾಗಿ ಆಗಿದ್ದಾ ಅಥವಾ ಸರಿಯಾದ ಪ್ರಕ್ರಿಯೆಗಳ ಮೂಲಕ ಆಗಿದೆಯಾ? ಮುಂತಾದ ನೂರಾರು ಪ್ರಶ್ನೆಗಳು ಜನರಲ್ಲಿ ಮೂಡಿವೆ.

ಬಿಡುಗಡೆಯ ಅಡಿಪಾಯ

11 ಜನರಲ್ಲಿ ರಾಧಾಶ್ಯಾಮ ಎನ್ನುವ ಅಪರಾಧಿ ಗುಜರಾತ್ ಹೈಕೋರ್ಟಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ. ಆದರೆ ಅದು ತಿರಸ್ಕೃತಗೊಂಡ ನಂತರ ಸುಪ್ರೀಂ ಕೋರ್ಟ್‌ನ ಮೊರೆಹೋಗಿದ್ದ. ಗುಜರಾತ್ ಹೈಕೋರ್ಟ್ ಅರ್ಜಿ ತಿರಸ್ಕರಿಸಲು ಕಾರಣ ನೀಡುತ್ತ ’ಮಹಾರಾಷ್ಟ್ರ ಹೈಕೋರ್ಟ್ ತೀರ್ಪು ನೀಡಿರುವುದರಿಂದ ಅದೇ ಕೋರ್ಟಿಗೆ ಹೋಗುವಂತೆ’ ಸಲಹೆ ನೀಡಿತ್ತು. ಆದರೆ ಹಾಗೆ ಮಾಡದೆ ಸುಪ್ರೀಂ ಕೋರ್ಟಿಗೆ ಹೋದ ರಾಧಾಶ್ಯಾಮ ಅಲ್ಲಿ ಅರ್ಜಿ ಸಲ್ಲಿಸಿ 1992ರ ಹಳೆಯ ಗುಜರಾತ್ ಸರ್ಕಾರದ ಕ್ಷಮಾದಾನದ ಸುತ್ತೋಲೆ ಪ್ರಕಾರ ತನ್ನ ಮನವಿಯನ್ನು ಪರಿಗಣಿಸುವಂತೆ ಸೂಚಿಸಲು ಕೋರಿದ. ಈ ಸುತ್ತೋಲೆ ಪ್ರಕಾರ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳು 14 ವರ್ಷಗಳನ್ನು ಜೈಲಿನಲ್ಲಿ ಕಳೆದ ಬಳಿಕ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಬಹುದು.

ಅಷ್ಟೊತ್ತಿಗಲೇ ಜೈಲಿನಲ್ಲಿ 15 ವರ್ಷ ಕಳೆದಿದ್ದರಿಂದ ಸುಪ್ರೀಂ ಕೋರ್ಟ್ ಅವನ ಮನವಿಯನ್ನು ಪರಿಗಣಿಸಿತು. ಅಲ್ಲದೆ ತೀರ್ಪು ನೀಡಿದ ನಂತರ ಮಹಾರಾಷ್ಟ್ರದ ಪಾತ್ರ ಅಲ್ಲಿಗೇ ಮುಗಿಯಿತು, ಅಪರಾಧ ಗುಜರಾತ್‌ನಲ್ಲಿ ನಡೆದಿದ್ದರಿಂದ ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ಗುಜರಾತ್ ಹೈಕೋರ್ಟ್ ನಡೆಸಬೇಕು ಎಂದು ಹೇಳಿತು.

ಕ್ಷಮಾದಾನದ ಅಧಿಕಾರ ರಾಜ್ಯ ಸರ್ಕಾರದ್ದಾಗಿರುವುದರಿಂದ ಮುಂದಿನ ಪ್ರಕ್ರಿಯೆ ಗುಜರಾತ್‌ನಲ್ಲಿ ನಡೆಯಬೇಕು ಎಂದಿತು. ಅಲ್ಲದೇ ತನ್ನದೆ ಕೋರ್ಟಿನ ತೀರ್ಮಾನವಾದ ಹರಿಯಾಣ ರಾಜ್ಯ ವರ್ಸಸ್ ಜಗದೀಶ್ ಎನ್ನುವ ಕೇಸಿನ ಉಲ್ಲೇಖ ಮಾಡುತ್ತ, “ಅವಧಿಗೂ ಮುನ್ನ ಬಿಡುಗಡೆ ಮಾಡುವ ವಿಚಾರದಲ್ಲಿ, ಅಪರಾಧ ಜರುಗಿದ ಸಮಯದಲ್ಲಿ ಜಾರಿಯಲ್ಲಿರುವ ಕಾಯ್ದೆಗಳನ್ನು ಅನುಸರಿಸಬೇಕು” ಎಂದಿತು. ಆದ್ದರಿಂದಲೇ 2012ರಲ್ಲಿ ಕಾಯ್ದೆಯ ಬದಲಾವಣೆ ಆಗಿದ್ದರೂ ಕೂಡ ರಾಧಾಶ್ಯಾಮನ ಮನವಿ 1992ರ ಕಾಯ್ದೆಯ ಅಡಿಯಲ್ಲಿ ಬರುತ್ತದೆ.

ಇಂತಹದೇ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದವರಂತೆ ಗುಜರಾತ್ ಸರ್ಕಾರ ಗೋಧ್ರಾದ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿತು. ಆ ಸಮಿತಿಯಲ್ಲಿ ಬಿಜೆಪಿ ಶಾಸಕರುಗಳಾದ ಸಿ.ಕೆ ರಾವೋಲ್‌ಜಿ ಮತ್ತು ಸುಮನ್ ಚೌಹನ್, ಗೋಧ್ರಾದ ಮಾಜಿ ನಗರಸಭಾ ಸದಸ್ಯ ಮತ್ತು ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ಸ್ನೇಹಾಬೆನ್ ಭಾಟಿಯಾ ಅವರಿದ್ದರು. ಈ ಸಮಿತಿಯ ರಚನೆಯೇ ಇದರ ಉದ್ದೇಶವನ್ನು ಸ್ಪಷ್ಟಪಡಿಸುವಂತಿತ್ತು. ಅಂದುಕೊಂಡ ಹಾಗೆಯೇ ಈ ಸಮಿತಿ ಒಮ್ಮತದಿಂದ ನಿರ್ಧಾರ ಕೈಗೊಂಡು ಎಲ್ಲ ಅಪರಾಧಿಗಳ ಕ್ಷಮಾದಾನವನ್ನು ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ತನ್ನ ಶಿಫಾರಸ್ಸನ್ನು ಸಲ್ಲಿಸಿತು. ಈ ವರದಿಯನ್ನು ಆಧರಿಸಿ ಸರ್ಕಾರ “ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು” ನೊಂದ ಮನಸ್ಸುಗಳಿಗೆ ವಿಷವುಣಿಸುವ ನಿರ್ಧಾರ ಕೈಗೊಂಡು ಎಲ್ಲ 11 ಅತ್ಯಾಚಾರಿ ಕೊಲೆಗಡುಕರನ್ನು ಬಿಡುಗಡೆ ಮಾಡಿತು.

ಕ್ಷಮಾದಾನದ ಸುತ್ತ

ಕೈದಿಗಳ ಕ್ಷಮಾದಾನ ಎನ್ನುವುದು ಎಲ್ಲರಿಗೂ ಗೊತ್ತಿರುವಂತೆ ಒಂದು ಸುಧಾರಣಾ ಕ್ರಮ. ಆದರೆ ದೇಶಾದ್ಯಂತ ಈ ಕ್ಷಮಾದಾನದ ವಿರುದ್ಧ ವ್ಯಕ್ತವಾಗಿರುವ ವ್ಯಾಪಕ ಪ್ರತಿರೋಧವನ್ನು ನೋಡಿದಾಗ ಇದರಲ್ಲಡಗಿರುವ ಸೂಕ್ಷ್ಮಗಳನ್ನು ಕೆದಕಲೇಬೇಕಾಗುತ್ತದೆ.

* ಕ್ಷಮಾದಾನವನ್ನು ಸಂವಿಧಾನಾತ್ಮಕವಾಗಿ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಮಾಡಬಹುದು. ಇನ್ನೊಂದು ಬಗೆಯಲ್ಲಿ ರಾಜ್ಯ ಸರ್ಕಾರಗಳು ಸೂಕ್ತ ಪ್ರಕರಣಗಳಲ್ಲಿ ಈ ಹಕ್ಕನ್ನು ಬಳಸಬಹುದು. ಆದರೆ ಯಾವುದೇ ಕಾರಣಕ್ಕೂ 14 ವರ್ಷಗಳಿಗಿಂತ ಕಡಿಮೆ ಅವಧಿ ಜೈಲಿನಲ್ಲಿ ಕಳೆದವರಿಗೆ ಇದು ಅನ್ವಯವಾಗುವುದಿಲ್ಲ.

* ಇನ್ನು ಕೆಲವು ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ಅಧಿಕಾರ ಇದ್ದರೂ ಕೂಡ ಅಕಸ್ಮಾತ್ ಪ್ರಕರಣದ ತನಿಖೆಯನ್ನು ಕೇಂದ್ರದ ಯಾವುದಾದರೂ ತನಿಖಾ ಸಂಸ್ಥೆ ನಡೆಸಿದ್ದರೆ ಅಂತಹ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ ಅವರು ಒಪ್ಪಿದ ಮೇಲೆ ಮಾತ್ರ ಕ್ಷಮಾದಾನ ಮಾಡಬಹುದು.

ವಕೀಲೆ ಶೋಭಾಗುಪ್ತಾ

ಈಗ ಪ್ರತಿರೋಧಿಸುತ್ತಿರುವ ಜನ ಕೇಳುತ್ತಿರುವುದು ಇದನ್ನೇ. ’ಬೇಟಿ ಬಚಾವೋ, ಬೇಟಿ ಪಡಾವೋ’, ’ಹೆಂಗಸರನ್ನು ಗೌರವದಿಂದ ನೋಡುವುದನ್ನು ಕಲಿಯುವ ಅಗತ್ಯವಿದೆ’ ಎಂದು ಮನದಾಳದಿಂದ ಹೇಳುವ ಮಾನ್ಯ ಪ್ರಧಾನಮಂತ್ರಿಗಳ ಮಂತ್ರಿಮಂಡಲದ ಅದ್ಯಾವ ನಾರಿದ್ವೇಷಿ ಮಂತ್ರಿ ಇದಕ್ಕೆ ಸಮ್ಮತಿ ನೀಡಿದ್ದಾನೋ ಎಂಬುದು! ಬಿಲ್ಕಿಸ್ ಪ್ರಕರಣದ ತನಿಖೆ ಸಿಬಿಐ ಮಾಡಿರುವುದರಿಂದ ಕೇಂದ್ರದ ಒಪ್ಪಿಗೆ ಕ್ಷಮಾದಾನಕ್ಕೆ ಅನಿವಾರ್ಯ. ಆದರೆ ಎಂದಿನಂತೆ ಮಾನ್ಯ ಪ್ರಧಾನಿ ಮೌನಕ್ಕೆ ಶರಣಾಗಿದ್ದಾರೆ.

ಕಾನೂನು ಇದೆ ಎಂದ ಮಾತ್ರಕ್ಕೆ ಎಂಥ ಅಪರಾಧಿಗಳನ್ನಾದರೂ ಕ್ಷಮಿಸಬಹುದಾ? ನಿರ್ಭಯಾ ಪ್ರಕರಣದ ನಂತರ ಆದ ಬದಲಾವಣೆಗಳು ಕೇವಲ ತೋರಿಕೆಗೆ ಮಾತ್ರವೆ? ತೆಲಂಗಾಣದ ಪ್ರಿಯಾಂಕಾ ರೆಡ್ಡಿ ಕೇಸಿನಲ್ಲಿ ಎನ್‌ಕೌಂಟರ್ ಆದಾಗ ಪೊಲೀಸ್ ವ್ಯವಸ್ಥೆಯನ್ನು ಕೊಂಡಾಡಿದ ಜನಕ್ಕೆ ಈಗ ಏನೂ ಅನ್ನಿಸುವುದಿಲ್ಲವೆ?

ಒಬ್ಬ ವ್ಯಕ್ತಿ ಕ್ಷಮಾದಾನ ಕೋರಿದಾಗ 11 ಜನರನ್ನು ಬಿಡುಗಡೆ ಮಾಡಿದ ರಾಜ್ಯ ಸರ್ಕಾರದ ಕ್ರಮ ಅಲ್ಲಿ ನಾಗರಿಕರು ಎನಿಸಿಕೊಂಡವರಿಗೆ ಅಸಹ್ಯವೆನ್ನಿಸುವುದಿಲ್ಲವೆ? ಜೈಲಿನಿಂದ ಹೊರಬಂದವರಿಗೆ ಸಿಹಿ ತಿನ್ನಿಸಿ ಹಾರ ಹಾಕಿ ಸ್ವಾಗತಿಸಿದ ರೀತಿ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿತೇ?

ಬಿಲ್ಕಿಸ್ ಪ್ರಕರಣವನ್ನು ಘಟನೆ ನಡೆದಂದಿನಿಂದಲೂ ಅನುಸರಿಸುತ್ತ ಬಂದಿರುವ ಪತ್ರಕರ್ತೆ ಬರ್ಖಾದತ್ ನಡೆಸುವ ’ಮೋಚೋ ಸ್ಟೋರಿ’ಗೆ ಸಂದರ್ಶನ ನೀಡಿದ್ದ ಸಿ.ಕೆ ರಾವೋಲ್‌ಜಿ ಬಿಡುಗಡೆಗೊಂಡವರ ಬಗ್ಗೆ ಹೇಳುತ್ತ “ಅವರೆಲ್ಲ ಬ್ರಾಹ್ಮಣರಾಗಿದ್ದರೆ ಮತ್ತು ಬ್ರಾಹ್ಮಣರು ಸಂಸ್ಕಾರವಂತರಾಗಿರುತ್ತಾರೆ” ಎಂದು ಹೇಳಿದ್ದಾನೆ. ಇದನ್ನು ಕೇಳಿದ ನೀತಿವಂತ ಬ್ರಾಹ್ಮಣರು ನಾಚಿಕೆಯಿಂದ ತಲೆತಗ್ಗಿಸಬೇಕು.

ಇಷ್ಟೆಲ್ಲದರ ನಡುವೆ ಬಿಲ್ಕಿಸ್‌ಳನ್ನು ಪ್ರತಿನಿಧಿಸಿದ ವಕೀಲೆ ಶೋಭಾಗುಪ್ತಾ ಇನ್ನು ಮುಂದೆ ಹೋರಾಡಲು ಅವಳಿಗೆ ಶಕ್ತಿ ಇಲ್ಲ ಎಂದಾಗ ಪ್ರಧಾನಮಂತ್ರಿಗಳ ಮಾತಿನ ಖಾಲಿತನ ಅರಿವಾಗುತ್ತದೆ.

23.08.2022ರಂದು ಸುಪ್ರೀಂಕೋರ್ಟ್‌ನಲ್ಲಿ ಸಿಪಿಐ(ಎಂ)ನ ಸುಭಾಷಿಣಿ ಅಲಿ ಹಾಗೂ ಟಿಎಂಸಿಯ ಮಹುವಾ ಮೊಯಿತ್ರಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಗುಜರಾತ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ ರಮಣ ಮುಂದಿನ ಕ್ರಮಕ್ಕಾಗಿ ಹಾಗೂ ಶೀಘ್ರ ಪರಿಗಣನೆಗೆ ಒಪ್ಪಿರುವುದು ಒಂದು ಆಶಾದಾಯಕ ಬೆಳವಣಿಗೆ. ವಿಪರ್ಯಾಸವೆಂದರೆ ಪ್ರತಿಬಾರಿ ಪ್ರಕರಣಗಳು ಇಷ್ಟು ದೀರ್ಘವಾದ ಪ್ರಯಾಣ ಬೆಳೆಸಲೇಬೇಕಾ? ಒಂದು ತಾರ್ಕಿಕ ಅಂತ್ಯವನ್ನು ಕೆಳಗಿನ ಹಂತದಲ್ಲಿ ಕಂಡುಕೊಳ್ಳಲು ಸಾಧ್ಯವೇ ಇಲ್ಲವೇ? ಎಂಬುದು. ಬಿಲ್ಕಿಸ್ ಬಾನೋಳ ವನವಾಸ ಮುಗಿಯುವುದಾ ಅಥವಾ ಸಂಸ್ಕಾರವಂತ ಅತ್ಯಾಚಾರಿಗಳಿಗೆ ಜಯವಾಗುವುದಾ ಕಾದು ನೋಡಬೇಕು.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.


ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅತ್ಯಾಚಾರಿ-ಕೊಲೆಗಡುಕರನ್ನು ಗೌರವಿಸಿದ ಕರಾಳ ವಿದ್ಯಮಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...