ಮಥುರಾದ ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಎಪ್ರಿಲ್ಗೆ ಮುಂದೂಡಿದ್ದು, ಶಾಹಿ ಈದ್ಗಾ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ನಡೆಸಲು ಅನುಮತಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು, ಅಲಹಾಬಾದ್ ಹೈಕೋರ್ಟ್ನ ಮೇ 2023ರ ಆದೇಶವನ್ನು ಪ್ರಶ್ನಿಸಿ ಶಾಹಿ ಈದ್ಗಾ ಮಸೀದಿ ಸಮಿತಿ ಮತ್ತು ಉತ್ತರ ಪ್ರದೇಶ ಸುನ್ನೀ ಸೆಂಟ್ರಲ್ ವಕ್ಫ್ ಬೋರ್ಡ್ ಸಲ್ಲಿಸಿರುವ ವಿಶೇಷ ರಜೆ ಕಾಲದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
ಶಾಹಿ ಈದ್ಗಾ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಅಡ್ವೋಕೇಟ್ ಕಮಿಷನರ್ ನೇಮಕಕ್ಕೆ ಅನುಮತಿ ನೀಡಿ ಡಿಸೆಂಬರ್ 2023 ರಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿಯು ಸಲ್ಲಿಸಿರುವ ಮತ್ತೊಂದು ಅರ್ಜಿ ನ್ಯಾಯಪೀಠದ ಮುಂದೆ ಪಟ್ಟಿ ಮಾಡಲಾಗಿದೆ.
ಜನವರಿ ಆರಂಭದಲ್ಲಿ, ಕಮಿಷನರ್ ನೇಮಕದ ಅಲಹಾಬಾದ್ ಹೈಕೋರ್ಟ್ ಆದೇಶದ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಇಂದು (ಜ.29) ತಡೆಯಾಜ್ಞೆ ವಿಸ್ತರಿಸಿದೆ.
ಅರ್ಜಿದಾರರ ಜಂಟಿ ಕೋರಿಕೆಯ ಮೇರೆಗೆ ಮೂರು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಅಲ್ಲದೆ, ಅಡ್ವೋಕೇಟ್ ಕಮಿಷನರ್ ನೇತೃತ್ವದಲ್ಲಿ ಸಮೀಕ್ಷೆ ನಡೆಸಲು ಅನುಮತಿ ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶದ ತಡೆಯಾಜ್ಞೆಯನ್ನೂ ಪ್ರಕರಣದ ವಿಚಾರಣೆ ಮುಂದೂಡಿದ ದಿನಾಂಕದವರೆಗೆ ವಿಸ್ತರಿಸಲಾಗಿದೆ ಎಂದು ನ್ಯಾಯಮೂರ್ತಿ ಖನ್ನಾ ತಿಳಿಸಿದ್ದಾರೆ.
ಮಥುರಾದ ಕೃಷ್ಣ ಜನ್ಮಭೂಮಿಯಲ್ಲಿದ್ದ ದೇವಸ್ಥಾನವನ್ನು ಕೆಡವಿ ಮೊಗಲ್ ದೊರೆ ಔರಂಗಜೇಬ್ ನಿರ್ದೇಶನದಂತೆ ಅಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಸುಮಾರು 12ರಷ್ಟು ಅರ್ಜಿಗಳು ಈಗಾಗಲೇ ಅಲಹಾಬಾದ್ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದು, ಎಲ್ಲಾ ಅರ್ಜಿಗಳು ಕತ್ರಾ ಕೇಶವ್ ದೇವಸ್ಥಾನಕ್ಕೆ ಹೊಂದಿಕೊಂಡಿರುವ 13.17 ಎಕರೆ ಜಾಗದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿವೆ.
ಇದನ್ನೂ ಓದಿ: ಕರಡು ಮಾರ್ಗಸೂಚಿಗೆ ಭಾರೀ ವಿರೋಧ: ಮೀಸಲಾತಿ ರದ್ದುಪಡಿಸಲ್ಲ ಎಂದ ಯುಜಿಸಿ ಅಧ್ಯಕ್ಷ