ಉತ್ತರಾಖಂಡದ ಎಸ್ಸಿ-ಎಸ್ಟಿ ವಿದ್ಯಾರ್ಥಿವೇತನ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಶೈಕ್ಷಣಿಕ ಸಂಸ್ಥೆಗೆ ಸೇರಿದ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಕಟ್ಟಡ ಮತ್ತು ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ರೂರ್ಕಿಯಲ್ಲಿನ ದೀನ್ ದಯಾಳ್ ಶರ್ಮಾ ಎಜುಕೇಷನಲ್ ಟ್ರಸ್ಟ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.
2013-14 ಮತ್ತು 2016-17ರ ಅವಧಿಗೆ ಹರಿದ್ವಾರದ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ವಿದ್ಯಾರ್ಥಿಗಳ ಹೆಸರಿನಲ್ಲಿ ಸಂಸ್ಥೆಯು ವಂಚನೆಯಿಂದ ವಿದ್ಯಾರ್ಥಿ ವೇತನವನ್ನು ಪಡೆದಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಆರೋಪಿಸಿದೆ.
ಎಸ್ಸಿ-ಎಸ್ಟಿ ವಿದ್ಯಾರ್ಥಿವೇತನ ಯೋಜನೆಯಡಿ ಹಣವನ್ನು ಪಡೆಯಲು ಸಂಸ್ಥೆಯು ಸುಳ್ಳು ಸಾಕ್ಷಿಗಳನ್ನು ನೀಡಿದೆ ಮತ್ತು ವಿದ್ಯಾರ್ಥಿಗಳ ವೈಯಕ್ತಿಕ ವೆಚ್ಚಗಳು ಮತ್ತು ಕಾಲೇಜು ಬೋಧನಾ ಶುಲ್ಕದ ರೂಪದಲ್ಲಿ ಮೊತ್ತವನ್ನು ಕಾಲೇಜಿನ ಖಾತೆಗೆ ಜಮಾ ಮಾಡಲಾಗಿದೆ ಎಂದು ಇಡಿ ಹೇಳಿದೆ.
ಈ ಮೊತ್ತವನ್ನು ದೀನ್ ದಯಾಳ್ ಶರ್ಮಾ ಎಜುಕೇಷನಲ್ ಟ್ರಸ್ಟ್ನ ಟ್ರಸ್ಟಿಗಳಾದ ವಿವೇಕ್ ಶರ್ಮಾ ಮತ್ತು ಅಂಕುರ್ ಶರ್ಮಾ ಅವರು ಕಬಳಿಸಿದ್ದಾರೆ ಮತ್ತು ಇದು ಸಾರ್ವಜನಿಕ ಬೊಕ್ಕಸಕ್ಕೆ ಭಾರಿ ಆರ್ಥಿಕ ನಷ್ಟವನ್ನು ಉಂಟುಮಾಡಿದೆ ಎಂದು ಇಡಿ ಆರೋಪಿಸಿದೆ. ಈ ಹಣವನ್ನು ಶೈಕ್ಷಣಿಕ ಟ್ರಸ್ಟ್ನ ಬ್ಯಾಂಕ್ ಖಾತೆಗಳಿಗೆ ಅಥವಾ ಕಾಲೇಜಿನ ಇತರ ಖಾತೆಗಳಿಗೆ ವರ್ಗಾಯಿಸಲಾಗಿದೆ ಮತ್ತು ನಗದನ್ನು ಟ್ರಸ್ಟಿಗಳು ತಮ್ಮ ವೆಚ್ಚಗಳಿಗಾಗಿ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
1.97 ಕೋಟಿ ಮೌಲ್ಯದ ಡೆಹ್ರಾಡೂನ್ನ ಮತ್ತು ಹರಿದ್ವಾರದಲ್ಲಿನ ಟ್ರಸ್ಟ್ನ ಭೂಮಿ ಮತ್ತು ಕಟ್ಟಡವನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಹರಿದ್ವಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಡೆಹ್ರಾಡೂನ್ ಮೂಲದ ರವೀಂದ್ರ ಜುಗ್ರಾನ್ ಎಂಬವರು ಸಲ್ಲಿಸಿರುವ ಅರ್ಜಿಯಲ್ಲಿ 2004ರಿಂದ ಈ ಹಗರಣ ನಡೆಯುತ್ತಿದೆ. ಈವರೆಗೆ 500 ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ. ವಂಚನೆ ದೊಡ್ಡದಾಗಿದೆ ಮತ್ತು ಹಣವನ್ನು ಅನೇಕರು ಕಬಳಿಸುತ್ತಿದ್ದಾರೆ. ಇದರಲ್ಲಿ ದಲ್ಲಾಳಿಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ. ದಲಿತ ಸಮುದಾಯಕ್ಕೆ ಮೀಸಲಾದ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ನಾನು ಅರ್ಜಿಯನ್ನು ಸಲ್ಲಿಸಿದ್ದೇನೆ ಎಂದು ರವೀಂದ್ರ ಜುಗ್ರಾನ್ ಹೇಳಿದ್ದರು.
ಇದನ್ನು ಓದಿ: ‘ಭಗವಾನ್ ರಾಮನನ್ನು’ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲು ಮಾತ್ರ ಬಾಕಿ ಉಳಿದಿದೆ: ಸಂಜಯ್ ರಾವತ್