ಜೂನ್ 18 ರ ಬುಧವಾರ ಶಾಲಾ ಕಾಲೇಜುಗಳಲ್ಲಿ ಶುಲ್ಕವನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಪಶ್ಚಿಮ ಬಂಗಾಳದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತು. ಲಾಕ್ಡೌನ್ ಆಧ ತಿಂಗಳುಗಳವರೆಗೆ ಶಾಲೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರಸ್ತುತ ಸೆಮಿಸ್ಟರ್ ಶುಲ್ಕವನ್ನು ಮನ್ನಾ ಮಾಡಬೇಕೆಂದು ಸಂಘಟೆಯೂ ಒತ್ತಾಯಿಸಿದೆ. ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಧರಣಿ ಪ್ರತಿಭಟನೆ ನಡೆಸಲಾಯಿತು.
“ಲಾಕ್ಡೌನ್ ಅವಧಿಯವರೆಗೆ ಶುಲ್ಕವನ್ನು ಮನ್ನಾ ಮಾಡಬೇಕು, ಪ್ರತಿಯೊಬ್ಬ ವಿದ್ಯಾರ್ಥಿಗೂ ಇಂಟರ್ನೆಟ್ ಲಭ್ಯವಾಗುವವರೆಗೆ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಬಾರದು” ಎಂದು ಎಸ್ಎಫ್ಐ ಪಶ್ಚಿಮ ಬಂಗಾಳ ಹೇಳಿದೆ.
“ತರಗತಿಗಳು ಪುನರಾರಂಭಗೊಳ್ಳುವ ಮೊದಲು, ಎಲ್ಲಾ ಶಾಲಾ ಕಾಲೇಜು ಕ್ಯಾಂಪಸ್ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಮಾಸ್ಕ್ಗಳನ್ನು ಮತ್ತು ಸ್ಯಾನಿಟೈಸರ್ಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡಬೇಕು” ಎಂದು ಅದು ಹೇಳಿದೆ.
ಶಾಂತಿಯುತ ಧರಣಿ ನಡೆಸುತ್ತಿದ್ದ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಸ್ಥಳೀಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೂಂಡಾಗಳು ಬಿರ್ಭಮ್ನಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಎಸ್ಎಫ್ಐ ಆರೋಪಿಸಿದೆ. ಎಸ್ಎಫ್ಐ ಪಶ್ಚಿಮ ಬಂಗಾಳ ರಾಜ್ಯ ಸಮಿತಿ ಸದಸ್ಯ ವಾಸಿಮ್ ರಾಜಾ ಕೂಡ ಗೂಂಡಾಗಳಿಂದ ದೈಹಿಕವಾಗಿ ಹಲ್ಲೆಗೊಳಗಾದರು. ಇದರ ಹೊರತಾಗಿಯೂ ಪ್ರತಿಭಟನೆ ಮುಂದುವರೆಯಿತು.
ಪಶ್ಚಿಮ ಬಂಗಾಳದ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಶ್ರೀಜನ್ ಭಟ್ಟಾಚಾರ್ಯ, “ಲಾಕ್ಡೌನ್ ಅವಧಿಯಲ್ಲಿ ಶಾಲೆಗಳು ಶುಲ್ಕವನ್ನು ತೆಗೆದುಕೊಳ್ಳಬಾರದು. ಬಹಳಷ್ಟು ಕುಟುಂಬಗಳು ತಮ್ಮ ಆದಾಯದ ಮೂಲವನ್ನು ಕಳೆದುಕೊಂಡಿವೆ. ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರು ಈಗ ಬಹಳ ಸಮಯದಿಂದ ಶುಲ್ಕ ಮನ್ನಾ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಯಾಕೆ ಸರ್ಕಾರ ಗಮನ ಹರಿಸುತ್ತಿಲ್ಲ? ರಾಜ್ಯದ ಟಿಎಂಸಿ ಸರ್ಕಾರವು ಖಾಸಗಿ ಶಾಲೆಗಳನ್ನು ಸಹಕರಿಸುವಂತೆ ಏಕೆ ಕೇಳಬಾರದು? ” ಎಂದು ಕೇಳಿದ್ದಾರೆ.
ಪಶ್ಚಿಮ ಬಂಗಾಳದ ಕೆಲವು ಶಾಲೆಗಳು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶುಲ್ಕ ಪರಿಹಾರವನ್ನು ನೀಡುತ್ತವೆ ಎಂದು ಸೂಚಿಸಿದರೆ, ಹೆಚ್ಚಿನ ಶಾಲೆಗಳು ಈ ವಿಷಯದ ಬಗ್ಗೆ ಏನೂ ಮಾತನಾಡಿಲ್ಲ. ಈಗ ಮೂರು ತಿಂಗಳಿನಿಂದ ಶಾಲೆಗಳನ್ನು ಮುಚ್ಚಲಾಗಿದ್ದರೂ ಹೆಚ್ಚಿನ ಸಂಖ್ಯೆಯ ಖಾಸಗಿ ಶಾಲೆಗಳಲ್ಲಿ, ವಿದ್ಯಾರ್ಥಿಗಳ ಪೋಷಕರು ಸಾರಿಗೆ ಶುಲ್ಕವನ್ನು ಪಾವತಿಸುತ್ತಿದ್ದಾರೆ. ಅವರು ಲ್ಯಾಬ್ ಶುಲ್ಕ ಮತ್ತು ಇತರ ಅಭಿವೃದ್ಧಿ ಶುಲ್ಕಗಳನ್ನು ಸಹ ಪಾವತಿಸುತ್ತಿದ್ದಾರೆ. ಪೋಷಕರು ಈ ಸಮಸ್ಯೆಗಳನ್ನು ಹಲವು ಬಾರಿ ಎತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 76,703 ಪ್ರಾಥಮಿಕ ಶಾಲೆಗಳು, 8,839 ಉನ್ನತ ಪ್ರಾಥಮಿಕ ಶಾಲೆಗಳು, 3,296 ಮಾಧ್ಯಮಿಕ ಶಾಲೆಗಳು ಮತ್ತು 6,898 ಹಿರಿಯ ಮಾಧ್ಯಮಿಕ ಶಾಲೆಗಳಿವೆ ಎಂದು 2018 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್ಆರ್ಡಿ) ಬಿಡುಗಡೆ ಮಾಡಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ 1,411.
ಎಸ್ಫ್ಐ ಸದಸ್ಯ ಶ್ರೀಜನ್, “ಸಾಂಕ್ರಾಮಿಕ ಸಮಯದಲ್ಲಿ ಸಾಮಾನ್ಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ನಾವು ಬೀದಿಗಿಳಿದಿದ್ದೇವೆ. ಇದು ಕೂಡ ಸರ್ಕಾರದ ಕಣ್ಣು ತೆರೆಯದಿದ್ದರೆ, ನಾವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಶಿಕ್ಷಣ ಸಚಿವ ಪಾರ್ಥಾ ಚಟರ್ಜಿ ಅವರ ಮನೆಗಳನ್ನು ಘೆರಾವ್ ಮಾಡುತ್ತೇವೆ.” ಎಂದು ಎಚ್ಚರಿಸಿದ್ದಾರೆ.
ಓದಿ: ರಾಜಕೀಯ ಹಿಂಸಾಚಾರವನ್ನು ಪ್ರಚಾರ ಮಾಡುವ ಏಕೈಕ ರಾಜ್ಯ ಪಶ್ಚಿಮ ಬಂಗಾಳ: ಅಮಿತ್ ಶಾ