ಶಬರಿಮಲೆ ಕುರಿತು ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದ ನಂತರ, ರಾಜ್ಯ ಸರ್ಕಾರವು ತೀರ್ಪಿನ ಕುರಿತು ಭಿನ್ನಾಭಿಪ್ರಾಯ ಹೊಂದಿರುವವರು ಸೇರಿದಂತೆ ಭಕ್ತರೊಂದಿಗೆ ಚರ್ಚಿಸುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಗುರುವಾರ ತಮ್ಮ ಪ್ರಚಾರದ ಹಾದಿಯಲ್ಲಿ ಮಲಪ್ಪುರಂನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಶಬರಿಮಲೆಯಲ್ಲಿ ಈಗ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
“ಎಲ್ಲವೂ ಸರಿಯಾಗಿ ನಡೆಯುತ್ತಿದೆ. ಈಗ ಶಬರಿಮಲೆ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ವಿಧಾನಸಭಾ ಚುನಾವಣೆ ಮುಂದೆ ಇರುವುದರಿಂದ ಕೆಲವರು ದೇವಾಲಯದ ಬಗ್ಗೆ ತೀವ್ರ ಆಸಕ್ತಿ ವಹಿಸಿದ್ದಾರೆ. ಅವರ ಉದ್ದೇಶ ಸ್ಪಷ್ಟವಾಗಿದೆ, ಇದನ್ನು ಅದರ ಭಾಗವಾಗಿ ನೋಡಿ. ಈ ವಿಷಯವನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಎತ್ತಲಾಗಿತ್ತು” ಎಂದು ಪಿಣರಾಯಿ ಹೇಳಿದ್ದಾರೆ.
ಇದನ್ನೂ ಓದಿ: ಬಿಎಸ್ಪಿ ಶಾಸಕಿಯ ಪತಿಯನ್ನು ಹುಡುಕಿಕೊಟ್ಟವರಿಗೆ 30 ಸಾವಿರ ಬಹುಮಾನ!
ಕೇರಳದಲ್ಲಿ ಭಾರಿ ವಿವಾದವಾಗಿ ಮಾರ್ಪಟ್ಟಿದ್ದ ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಎಡ ಸರ್ಕಾರದ ನಿಲುವಿನ ಬಗ್ಗೆ ಪಿಣರಾಯಿ,”ಶಬರಿಮಲೆ ವಿಷಯದ ಬಗ್ಗೆ ನಿಲುವು ತೆಗೆದುಕೊಂಡಿದ್ದು ಸುಪ್ರೀಂ ಕೋರ್ಟ್ ಆಗಿದೆ. ಇದರ ನಂತರ ಕೆಲವು ರಿಯಾಯಿತಿಗಳನ್ನೂ ನೀಡಿದ್ದು, ಈಗ ಪ್ರಕರಣವನ್ನು ಬದಿಗಿರಿಸಲಾಗಿದೆ. ಅಂತಿಮ ತೀರ್ಪು ಬಂದಾಗ ಎಲ್ಲರ ನಿರ್ದಿಷ್ಟ ಅಭಿಪ್ರಾಯಗಳನ್ನು ಸಮಾಲೋಚಿಸಿ, ನಂತರ ನಿರ್ಧಾರ ತೆಗೆದುಕೊಳ್ಳುತ್ತದೆ. ಇದನ್ನು ಮೊದಲೆ ಸ್ಪಷ್ಟಪಡಿಸಲಾಗಿದೆ” ಎಂದು ಹೇಳಿದ್ದಾರೆ.
ಎಡಪಂಥೀಯರನ್ನು ಸೋಲಿಸಲು ಬೇಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಹೊಂದಾಣಿಕೆ ಇತ್ತು ಎಂದು ಬಿಜೆಪಿಯ ಹಿರಿಯ ನಾಯಕ ಒ. ರಾಜಗೋಪಾಲ್ ಅವರು ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ನಾಯಕರೇ ಸ್ವತಃ ಬಹಿರಂಗಪಡಿಸಿದ್ದು, ಕಾಂಗ್ರೆಸ್ಗೆ ನಾಚಿಕೆಯಾಗಬೇಕು ಎಂದು ಪಿಣರಾಯಿ ಹೇಳಿದ್ದಾರೆ.
“35 ಸ್ಥಾನಗಳನ್ನು ಪಡೆಯಲು ಸಾಧ್ಯವಾದರೆ ನಾವು ಸರ್ಕಾರ ರಚಿಸುತ್ತೇವೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ. ಇತರ ರಾಜ್ಯಗಳಂತೆ ಕಾಂಗ್ರೆಸ್ ಶಾಸಕರು ಗೆದ್ದು ಬಿಜೆಪಿಗೆ ಸೇರುತ್ತಿರುವುದರಿಂದ ಬಿಜೆಪಿ ಸರ್ಕಾರವನ್ನು ರಚಿಸುತ್ತಿದೆ. ಅದಕ್ಕಾಗಿಯೆ ಅವರು ಹಾಗೆ ಹೇಳಿದ್ದಾರೆ” ಎಂದು ಅವರು ಹೇಳಿದ್ದಾರೆ.
140 ಸದಸ್ಯರ ಕೇರಳ ವಿಧಾನಸಭಾ ಚುನಾವಣೆ ಏಪ್ರಿಲ್ 6 ರಂದು ನಡೆಯಲಿದ್ದು, ಮೇ 2 ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
ಇದನ್ನೂ ಓದಿ: ಪ.ಬಂಗಾಳದ 15 ಕಡೆ ಕಚ್ಚಾ ಬಾಂಬ್ ಸ್ಫೋಟ, ಮಗು ಸೇರಿ ಮೂವರ ಸ್ಥಿತಿ ಗಂಭೀರ