ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳ ಭಟ್ಪಾರಾದ ಜಗತ್ದಾಲ್ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಕಚ್ಚಾ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯು ಜಗತ್ದಾಲ್ನ ಗಾಲಿ ನಂ. 17ರಲ್ಲಿ ನಡೆದಿದ್ದು, ಈ ಸ್ಥಳವು ಬರಾಕ್ಪುರ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ನಿವಾಸಕ್ಕೆ ಹತ್ತಿರದಲ್ಲಿದೆ. ಹೀಗಾಗಿ ತೃಣಮೂಲ ಕಾಂಗ್ರೆಸ್ ಗೂಂಡಾಗಳು ತಮ್ಮ ಕಚೇರಿ-ನಿವಾಸ ‘ಮಜ್ದೂರ್ ಭವನ್’ ಬಳಿ ಒಂದು ಡಜನ್ಗಿಂತಲೂ ಅಧಿಕ ಬಾಂಬ್ಗಳನ್ನು ಎಸೆದಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ, ಕೆಲವು ಅಪರಿಚಿತ ವ್ಯಕ್ತಿಗಳು ಗಾಲಿ ನಂ. 17ರಲ್ಲಿ ಕಚ್ಚಾ ಬಾಂಬ್ಗಳನ್ನು ಎಸೆದಿದ್ದಾರೆ. ಇದು ಭಟ್ಪರಾ ಪುರಸಭೆಯ 18ನೇ ವಾರ್ಡ್ನ ವ್ಯಾಪ್ತಿಗೆ ಬರುತ್ತದೆ. ನಗರದ 15 ಸ್ಥಳಗಳಲ್ಲಿ ಬಾಂಬ್ಗಳನ್ನು ಎಸೆಯಲಾಗಿದೆ. ಈ ಆರೋಪಿಗಳು ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಮುರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪುದುಚೇರಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಸಿಎಂ ನಾರಾಯಣಸಾಮಿ ಹೆಸರಿಲ್ಲ
ಘಟನಾ ಸ್ಥಳಕ್ಕೆ ಜಗತ್ದಾಲ್ ಪೊಲೀಸರು ಸ್ಥಳಕ್ಕೆ ಆಗಮಿಸಿದರೂ ಕೋಪಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಸ್ಥಳದಲ್ಲಿಯೇ ಇರುವಾಗಲೂ ಕಿಡಿಗೇಡಿಗಳು ಒಂದು ಬಾಂಬ್ ಎಸೆದಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಎಪಿ ಚೌಧರಿ ಮಾಹಿತಿ ನೀಡಿದ್ದಾರೆ.
West Bengal | Bombs have been hurled at around 15 places & CCTV cameras installed by police have been broken by three people & their associates: BJP MP Arjun Singh in Jagaddal area of Bhatpara, North 24 Parganas
ACP AP Choudhury says, "3 people including a child are injured". pic.twitter.com/dPSbZLcVyC
— ANI (@ANI) March 17, 2021
“ಅಪರಾಧಿಗಳು ಶಸ್ತ್ರಾಸ್ತ್ರಗಳೊಂದಿಗೆ ತಿರುಗಾಡುತ್ತಿದ್ದಾರೆ ಎಂದು ನಾವು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದೇವೆ. ಆದರೂ ಪೊಲೀಸರು ಏನೂ ಮಾಡುತ್ತಿಲ್ಲ. ಸುಮಾರು 15 ಸ್ಥಳಗಳಲ್ಲಿ ಬಾಂಬ್ಗಳನ್ನು ಎಸೆಯಲಾಗಿದೆ. ಪೊಲೀಸರು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು, ಮೂರು ಮಂದಿ ಮತ್ತು ಅವರ ಸಹಚರರು ಮುರಿದಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ನಾವು ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇವೆ “ಎಂದು ಅರ್ಜುನ್ ಸಿಂಗ್ ಹೇಳಿದ್ದಾರೆ.
ದಾಳಿಯ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಬಂಗಾಳ ಬಿಜೆಪಿ ಮುಖಂಡ ಮುಕುಲ್ ರಾಯ್ ಮತ್ತು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಹೇಳಿದ್ದಾರೆ.
ಆದರೆ, ಕಚ್ಚಾ ಬಾಂಬ್ ಸ್ಫೋಟದಲ್ಲಿ ಯಾರು ಭಾಗಿಯಾಗಿದ್ದಾರೆ ಮತ್ತು ದಾಳಿಯ ಹಿಂದಿನ ಉದ್ದೇಶವೂ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ 294 ಸದಸ್ಯರ ರಾಜ್ಯ ವಿಧಾನಸಭೆಗೆ ಮಾರ್ಚ್ 27 ರಿಂದ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಲಾಭವನ್ನು ಖಾಸಗೀಕರಿಸಿ, ನಷ್ಟವನ್ನು ರಾಷ್ಟ್ರೀಕರಣ ಮಾಡಲಾಗುತ್ತಿದೆ: ರಾಹುಲ್ ಗಾಂಧಿ