Homeಮುಖಪುಟಶಹೀನ್ ಬಾಗ್ ಆಂದೋಲನ: ಆಳಗೊಳ್ಳುತ್ತಿರುವ ಪ್ರಜಾಪ್ರಭುತ್ವ-ಒಗ್ಗೂಡುತ್ತಿರುವ ಭಾರತ

ಶಹೀನ್ ಬಾಗ್ ಆಂದೋಲನ: ಆಳಗೊಳ್ಳುತ್ತಿರುವ ಪ್ರಜಾಪ್ರಭುತ್ವ-ಒಗ್ಗೂಡುತ್ತಿರುವ ಭಾರತ

- Advertisement -
- Advertisement -
  • ರಾಮ್ ಪುನಿಯಾನಿ

ಅನುವಾದ – ರಾಜಶೇಖರ್‌ ಅಕ್ಕಿ

ವಿಶ್ವಾದ್ಯಂತ ಪ್ರಜಾಪ್ರಭುತ್ವವು ನಿಧಾನವಾಗಿ ಬೇರೂರುತ್ತಿರುವ ಸಮಯದಲ್ಲಿ, ದಿ ಎಕಾನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಎನ್ನುವ ಸಂಸ್ಥೆಯು ವಿಶ್ವದ ದೇಶಗಳಲ್ಲಿ ಪ್ರಜಾಪ್ರಭುತ್ವದ ಪ್ರಮಾಣವನ್ನು ಮಾನಿಟರ್ ಮಾಡುವ ಕೆಲಸ ಮಾಡುತ್ತದೆ. ಪ್ರತಿ ದೇಶದಲ್ಲೂ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಹಾಗೂ ಅದನ್ನು ದುರ್ಬಲಗೊಳಿಸುವ ಹಲವಾರು ಕೈಗಳು ಕೆಲಸ ಮಾಡುತ್ತಿರುತ್ತವೆ. ಒಟ್ಟಾರೆಯಾಗಿ, ಸೈದ್ಧಾಂತಿಕ ಪ್ರಜಾಪ್ರಭುತ್ವದಿಂದ ಒಂದು ವಾಸ್ತವಿಕ ಪ್ರಜಾಪ್ರಭುತ್ವದೆಡೆಗೆ ನಡೆ ಕಾಣಿಸುತ್ತಿದೆ. ಈ ವಾಸ್ತವಿಕ ಪ್ರಜಾಪ್ರಭುತ್ವವು ಕೇವಲ ಔಪಚಾರಿಕ ಸಮಾನತೆ, ಸ್ವಾತಂತ್ರ್ಯ ಮತ್ತು ಸಮುದಾಯ ಪ್ರಜ್ಞೆಯಷ್ಟೆ ಅಲ್ಲದೇ ಈ ಮೌಲ್ಯಗಳ ವಾಸ್ತವಿಕ ಗುಣಮಟ್ಟದ ಮೇಲೆ ಆಧಾರಿತವಾದ ದೇಶ ಸ್ಥಾಪನೆಯಾಗುವೆಡೆಗೆ ಹೋಗುತ್ತಿದೆ. ಭಾರತದಲ್ಲಿ, ಆಧುನಿಕ ಶಿಕ್ಷಣ, ಸಾರಿಗೆ, ಸಂವಹನವು ಈ ಪ್ರಕ್ರಿಯೆಗೆ ಹಿನ್ನೆಲೆ ಒದಗಿಸಿದರೆ, ಈ ಪ್ರಕ್ರಿಯೆಯೂ ಬೇರೂರುವ ಕಡೆಗೆ ತಿರುಗಿದ್ದು ಮಹಾತ್ಮಾ ಗಾಂಧಿಯವರು ಪ್ರಾರಂಭಿಸಿದ 1920ರ ಅಸಹಕಾರ ಚಳವಳಿಯಿಂದ, ಆಗ ಸಾಮಾನ್ಯ ಜನರೂ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸಿದ್ದರು. ಭಾರತದ ಸ್ವಾತಂತ್ರಕ್ಕಾಗಿ ನಡೆದ ಚಳವಳಿಯು ವಿಶ್ವದಲ್ಲೇ ‘ಅತ್ಯಂತ ಶ್ರೇಷ್ಠ ಜನಾಂದೋಲನ’ ಎಂದು ಸಾಬೀತಾಗಿದೆ.

ಭಾರತದ ಸಂವಿಧಾನದಲ್ಲಿ ಪ್ರಜಾಪ್ರಭುತ್ವಕ್ಕೆ ಇರಬೇಕಾದ ಮಾನದಂಡಗಳನ್ನು ಮತ್ತು ಅನುಮೋದನೆಯನ್ನು ಪ್ರತಿಪಾದಿಸಲಾಗಿದೆ. ನಮ್ಮ ಸಂವಿಧಾನ ‘ನಾವು ಭಾರತೀಯರು’ (we the people of India) ಎಂದು ಪ್ರಾರಂಭವಾಗುತ್ತದೆ ಹಾಗೂ ಅದನ್ನು 1950ರ ಜನವರಿ 26ರಂದು ಅಂಗೀಕರಿಸಲಾಯಿತು. ಈ ಸಂವಿಧಾನದಿಂದಾಗಿ ಹಾಗೂ ನೆಹರು ಅವರು ಅಳವಡಿಸಿಕೊಂಡು ನೀತಿಗಳಿಂದಾಗಿ ಪ್ರಜಾಪ್ರಭುತ್ವದ ಪ್ರಕ್ರಿಯೆಯು ಇನ್ನಷ್ಟು ಆಳಗೊಳ್ಳತೊಡಗಿತು.

1975ರ ಹೇರಲಾದ ಭಯಾನಕವಾದ ತುರ್ತು ಪರಿಸ್ಥಿತಿಯಿಂದ ಧಕ್ಕೆಯಾದರೂ ನಂತರ ಅದನ್ನು ಹಿಂಪಡೆದುಕೊಂಡು ಪ್ರಜಾಸತ್ತಾತ್ಮಕ ಸ್ವಾತಂತ್ರಗಳನ್ನು ಕೆಲಮಟ್ಟಿಗೆ ಪುನಃಸ್ಥಾಪಿಸಲಾಯಿತು. 1990ರ ದಶಕದಲ್ಲಿ ರಾಮಮಂದಿರ ಆಂದೋಲನದ ಪ್ರಾರಂಭದಿಂದ ಪ್ರಜಾಪ್ರಭುತ್ವದ ಈ ಪ್ರಕ್ರಿಯೆಗೆ ವಿರೋಧ ಎದುರಿಸುತ್ತಿದೆ. ಹಾಗೂ 2014ರಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಈ ಪ್ರಕ್ರಿಯೆಯಲ್ಲಿ ಇನ್ನಷ್ಟು ಸವೆತ ಕಂಡುಬಂದಿದೆ. ಸರಕಾರವು ನಾಗರಿಕ ಹಕ್ಕುಗಳು, ಬಹುತ್ವ ಮತ್ತು ಎಲ್ಲರೂ ಪಾಲ್ಗೊಳ್ಳುವಂತಹ ರಾಜಕೀಯ ಸಂಸ್ಕೃತಿಯ ಮೇಲೆ ಸಕ್ರೀಯವಾಗಿ ದಾಳಿ ಮಾಡುತ್ತಿದೆ ಹಾಗೂ ಪ್ರಜಾಪ್ರಭುತ್ವವು ಗಂಭೀರವಾದ ದೋಷಪೂರಿತವಾಗುತ್ತಿದೆ. ಹಾಗೂ ಇದು ಸ್ಪಷ್ಟವಾಗಿ ವ್ಯಕ್ತವಾಗಿದ್ದು ಭಾರತದ ಸೂಚ್ಯಾಂಕವು 2019ರಲ್ಲಿ ಹತ್ತು ಸ್ಥಾನ ಕಳೆದುಕೊಂಡು 51ನೇ ಸ್ಥಾನಕ್ಕೆ ಇಳಿದಾಗ. ಪ್ರಜಾಪ್ರಭುತ್ವದ ಸೂಚ್ಯಾಂಕದಲ್ಲಿ ಭಾರತದ ಅಂಕವು 7.23 ರಿಂದ 6.90 ಗೆ ಇಳಿದಿದೆ. ಬಿಜೆಪಿಯ ಬಲಪಂಥೀಯ ರಾಜಕೀಯದ ಪ್ರಭಾವವು ರಾಷ್ಟ್ರದ ಮೇಲೆ ಸ್ಪಷ್ಟವಾಗಿ ಕಾಣಿಸುತ್ತಿದೆ.

ವಿಪರ್ಯಾಸವೇನೆಂದರೆ, ಶಾಹೀನ್ ಬಾಗ್‌ನ ಪ್ರತಿಭಟನೆಯೊಂದಿಗೆ ಪ್ರಜಾಪ್ರಭುತ್ವದ ಪ್ರಕ್ರಿಯೆಯು ಮತ್ತೇ ಚಿಗುರೊಡೆದು ಗಟ್ಟಿಗೊಳ್ಳುತ್ತಿರುವ ಮತ್ತು ಜನರ ಸಾವಿರಾರು ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಸೂಚ್ಯಾಂಕಗಳು ಹೊರಬಿದ್ದಿವೆ. ಜಾಮಿಯ ಮಿಲ್ಲಿಯ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಮತ್ತು ಪೌರತ್ವ ತಿದ್ದುಪಡಿ ಕಾಯಿದೆ ಅಂಗೀಕಾರಗೊಂಡ ಸಮಯದಲ್ಲಿ ಅಂದರೆ 2019ರ ಡಿಸೆಂಬರ್ 15ರಂದು ಪ್ರಾರಂಭಗೊಂಡ ಈ ಪ್ರತಿಭಟನೆ ಇನ್ನೂ ಗಟ್ಟಿಯಾಗಿಯೇ ನಡೆಯುತ್ತಿದೆ.

ಇದರ ವಿಶೇಷತೆಯೆಂದರೆ, ಇದರ ಮುಂದಾಳತ್ವ ವಹಿಸಿದವರು ಮುಸ್ಲಿಮ್ ಮಹಿಳೆಯರು. ಬುರ್ಖಾ-ಹಿಜಬ್ ಧರಿಸಿದ ಮಹಿಳೆಯರಿಂದ ಹಿಡಿದು, ‘ಮುಸ್ಲಿಮರಂತೆ ಕಾಣದ’ ಮಹಿಳೆಯರು ಪ್ರಾರಂಭಿಸಿದ ಈ ಪ್ರತಿಭಟನೆಗೆ ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಮತ್ತು ಯುವಜನರು ಸೇರಿಕೊಂಡರು. ನಂತರ ಎಲ್ಲಾ ಸಮುದಾಯಗಳ ಇತರ ಜನರೂ ಸೇರಿಕೊಂಡರು. ಈ ಹಿಂದೆ ಮುಸ್ಲಿಮ್ ಸಮುದಾಯದವರು ಪ್ರಾರಂಭಿಸಿದ ಯಾವುದೇ ಚಳವಳಿಗಿಂತಲೂ ಇದು ಭಿನ್ನವಾಗಿದೆ. ಈ ಹಿಂದೆ ಶಾಹ್ ಬಾನೋ ತೀರ್ಪಿನ ವಿರುದ್ಧ ಪ್ರತಿಭಟನೆಗಳು, ಹಾಜಿ ಅಲಿಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆದ ಪ್ರತಿಭಟನೆಗಳು, ಸರಕಾರವು ತ್ರಿವಳಿ ತಲಾಕ್‌ಅನ್ನು ರದ್ದುಗೊಳಿಸಿದ ಕ್ರಮಕ್ಕೆ ವಿರೋಧಿಸಿ ನಡೆದ ಪ್ರತಿಭಟನೆಗಳು ಹಾಗೂ ಇಂಥವುಗಳೆಲ್ಲ ಉನ್ನತ ಸ್ಥಾನದಲ್ಲಿರುವ ಮೌಲಾನಗಳು ಮುನ್ನೆಡೆಸಿದ ಪ್ರತಭಟನೆಗಳಾಗಿದ್ದವು; ಆ ಜಾಥಾಗಳಲ್ಲಿ ಗಡ್ಡ ಮತ್ತು ಟೋಪಿಗಳೇ ಹೆಚ್ಚಾಗಿ ಕಾಣುತ್ತಿದ್ದವು. ಶರಿಯಾ, ಇಸ್ಲಾಮ್ ಅನ್ನು ರಕ್ಷಿಸುವ ಮತ್ತು ಮುಸ್ಲಿಮ್ ಸಮುದಾಯ ಮಾತ್ರ ಭಾಗವಹಿಸುವ ಪ್ರತಿಭಟನೆಗಳಾಗಿದ್ದವು.

ಈ ಸಲ, ಯಾವಾಗ ಪ್ರಧಾನಿ ನರೇಂದ್ರ ಮೋದಿ ‘ಪ್ರತಿಭಟನಾಕಾರರನ್ನು ಅವರು ಧರಿಸಿದ ಬಟ್ಟೆಗಳಿಂದ ಗುರುತಿಸಬಹುದು’ ಎಂದು ಘೋಷಿಸಿದರೋ ಆ ಸಮಯದಲ್ಲಿಯೇ ಬಟ್ಟೆಗಳಿಂದ ಗುರತಿಸಬಹುದಾದವರಿಗಿಂತ ಗುರುತಿಸಲಾಗದಂಥವರೇ ಎಷ್ಟೋ ಹೆಚ್ಚಿನ ಪಟ್ಟು ಜನರು ಭಾಗವಹಿಸುತ್ತಿದ್ದಾರೆ.

ಈ ಪ್ರತಿಭಟನೆಗಳು ಇಸ್ಲಾಮ್ ಅಥವಾ ಇತರ ಯಾವುದೇ ಧರ್ಮವನ್ನು ರಕ್ಷಿಸಲು ನಡೆಯುತ್ತಿರುವ ಪ್ರತಿಭಟನೆಗಳಾಗದೇ ಭಾರತದ ಸಂವಿದಾನವನ್ನು ರಕ್ಷಿಸುವ ಪ್ರತಿಭಟನೆಗಳಾಗಿವೆ. ಇಲ್ಲಿಯ ಘೋಷಣೆಗಳು ‘ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಭಾರತೀಯ ಸಂವಿಧಾನದ’ ಸುತ್ತ ರಚಿಸಲಾಗಿವೆ. ಇಲ್ಲಿಯ ಪ್ರಮುಖ ಘೋಷಣೆಗಳು ‘ಅಲ್ಲಾಹು ಅಕ್ಬರ್’ ಅಥವಾ ನಾರೇ-ತಕ್ಬೀರ್’ ಆಗಿರದೇ ಭಾರತದ ಸಂವಿಧಾನದ ಪೀಠಿಕೆಯ ಸುತ್ತ ರಚಿಸಿದ ಘೋಷಣೆಗಳಾಗಿವೆ. ಇಲ್ಲಿಯ ಪ್ರಮುಖ ಹಾಡು, ಫೈಝ್ ಅಹ್ಮದ್ ಫೈಝ್ ಅವರು ರಚಿಸಿದ ‘ಹಮ್ ದೇಖೇಂಗೆ’ ಆಗಿದೆ. ಅದನ್ನು ಪಾಕಿಸ್ತಾನದಲ್ಲಿ ಧರ್ಮದ ಹೆಸರಿನಲ್ಲಿ ಪ್ರಜಾಪ್ರಭುತ್ವವನ್ನು ಝಿಯಾ ಉಲ್ ಹಕ್ ಹತ್ತಿಕ್ಕುವ ಸಂದರ್ಭದಲ್ಲಿ ರಚಿಸಿದ್ದು. ಇನ್ನೊಂದು ಹೋರಾಟದ ಹಾಡು, ವರುಣ್ ಗ್ರೋವರ್ ರಚಿಸಿದ ‘ತಾನಾಶಾಹ್ ಆಯೆಂಗೆ.. ಹಮ್ ಕಾಗಝ್ ನಹಿಂ ದಿಖಾಯೆಂಗೆ’, ಇದು ಸಿಎಎ-ಎನ್‌ಆರ್‌ಸಿ ವಿರುದ್ಧದ ಅಸಹಕಾರ ಚಳವಳಿಯ ಕರೆಯೂ ಆಗಿದೆ ಹಾಗೂ ಪ್ರಸಕ್ತ ಆಡಳಿತದ ಸರ್ವಾಧಿಕಾರಿ ಸ್ವರೂಪವನ್ನು ಎತ್ತಿಹಿಡಿಯುತ್ತದೆ.

ಮುಸ್ಲಿಮ್ ಮಹಿಳೆಯರಿಗೆ ಇರುವ ಪ್ರಾಥಮಿಕ ಸಮಸ್ಯೆ ತ್ರಿವಳಿ ತಲಾಕ್ ಎಂದು ಬಿಜೆಪಿ ಹೇಳುತ್ತಿರುವಾಗಲೇ ಈ ಆಂದೋಲನವನ್ನು ಮುನ್ನೆಡೆಸುತ್ತಿರುವ ಮಹಿಳೆಯರು ಇಡೀ ಮುಸ್ಲಿಮ್ ಸಮುದಾಯಕ್ಕೆ ಬಂದಿರುವ ಅಪಾಯವೇ ಮುಸ್ಲಿಮರ ಪ್ರಾಥಮಿಕ ಸಮಸ್ಯೆ ಎಂದು ಸ್ಪಷ್ಟಪಡಿಸಿದ್ದಾರೆ. ಬಡತನ ರೇಖೆಯ ಕೆಳಗಿರುವವರು, ವಸತಿಹೀನರು, ಭೂಮಿಯನ್ನು ಹೊಂದಿಲ್ಲದವರು, ಎಲ್ಲಾ ಧಾರ್ಮಿಕ ಗೆರೆಗಳನ್ನು ಮೀರಿ, ಇತರ ಎಲ್ಲಾ ಸಮುದಾಯದವರಿಗೂ ಈಗ ಗೊತ್ತಾಗಿರುವುದೇನೆಂದರೆ, ಕೆವಲ ದಾಖಲೆಗಳು ಇಲ್ಲ ಎನ್ನುವ ಕಾರಣಕ್ಕೆ ಮುಸ್ಲಿಮರ ಪೌರತ್ವವನ್ನು ಪ್ರಶ್ನಿಸಬಹುದಾದರೆ, ಈ ಸರಕಾರವು ಹರಿಬಿಟ್ಟಿರುವ ಈ ಪ್ರಕ್ರಿಯೆಗೆ ತಾವೂ ಬಲಿಯಾಗುವ ದಿನಗಳು ದೂರವಿಲ್ಲ ಎಂಬುದು.

ಸಿಎಎ-ಎನ್‌ಆರ್‌ಸಿ ಗಳೇ ಈ ಆಂದೋಲನಕ್ಕೆ ತಕ್ಷಣಕ್ಕೆ ಕಾರಣವಾದ ಅಂಶಗಳಾದರೂ, ಕಪ್ಪು ಹಣವನ್ನು ವಾಪಸ್ ತರುವ ಆಶ್ವಾಸನೆ, ನೋಟುರದ್ದತಿಯ ಕೆಟ್ಟ ಪರಿಣಾಮ, ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಆಡಳಿತಾರೂಢ ಪಕ್ಷದ ವಿಭಜನಕಾರಿ ನೀತಿಗಳು ಮತ್ತು ಇನ್ನಿತರ ಭರವಸೆಗಳನ್ನು ಹುಸಿಗೊಳಿಸಿದ ಕಾರಣಕ್ಕೆ ಈ ಆಂದೋಲನವು ಗಟ್ಟಿಯಾಗಿ ನಿಂತಿದೆ. ಶಹೀನ್ ಬಾಗ್ ಕೇವಲ ಒಂದು ಜಾಗವಲ್ಲ ಅದು ವಿಭಜನಕಾರಿ ನೀತಿಗಳ ವಿರುದ್ಧದ ಪ್ರತಿರೋಧದ ಸಂಕೇತ, ಬಡಕಾರ್ಮಿಕರ, ರೈತರ ಮತ್ತು ಸಮಾಜದ ಸಾಮಾನ್ಯ ಜನರ ಬವಣೆಯನ್ನು ಹೆಚ್ಚಿಸುತ್ತಿರುವ ನೀತಿಗಳ ವಿರುದ್ಧ ಎದ್ದುನಿಂತಿರುವ ಸಂಕೇತವಾಗಿದೆ.

ಈಗ ಸ್ಪಷ್ಟವಾಗಿರುವುದೇನೆಂದರೆ, ಗುರುತಿನ ವಿಷಯಗಳು, ರಾಮಮಂದಿರ, ಗೋವು, ಬೀಫ್, ಲವ್ ಜಿಹಾದ್ ಮತ್ತು ಘರ್ ವಾಪಸಿಯಂತಹ ಭಾವನಾತ್ಮಕ ವಿಷಯಗಳು ಸಮಾಜವನ್ನು ಒಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿದರೆ, ಶಾಹೀನ್ ಬಾಗ್ ಸಮಾಜವನ್ನು ಒಗ್ಗೂಡಿಸಿವ ಕೆಲಸ ಮಾಡುತ್ತಿದೆ. ಜನರೆಲ್ಲರೂ ಭಾರತದ ಸಂವಿಧಾನದ ಪೀಠಿಕೆಯ ಸುತ್ತ ಸೇರಿ, ಜನಗಣಮನವನ್ನು ಹಾಡಿ, ತ್ರಿವರ್ಣ ಧ್ವಜವನ್ನು ಹಾರಿಸಿ ಹಾಗೂ ರಾಷ್ಟ್ರೀಯ ಐಕಾನ್‌ಗಳಾದ ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್ ಮತ್ತು ಮೌಲಾನಾ ಅಝಾದ್ ಅವರನ್ನು ಎತ್ತಿಹಿಡಯುವುದರಿಂದ ಸವೆತ ಕಂಡಿದ್ದ ಪ್ರಜಾಪ್ರಭುತ್ವದ ಪ್ರಕ್ರಿಯೆಗೆ ಬಲತುಂಬಿದಂತಾಗಿದೆ. ಭಾರತವನ್ನು ಕಟ್ಟಿದ ಭಾವನೆಗಳು ಮರಳಿ ಬರುತ್ತಿವೆ; ಭಾರತದ ಸ್ವಾತಂತ್ರ ಸಂಗ್ರಾಮ ಮತ್ತು ಭಾರತೀಯ ಸಂವಿಧಾನವು ನೀಡಿರುವ ಹಕ್ಕುಗಳನ್ನು ರಕ್ಷಿಸಲು ಎದೆಯೊಡ್ಡಿ ನಿಂತಿರುವುದು ಕಂಡುಬರುತ್ತಿದೆ.

ಖಂಡಿತವಾಗಿಯೂ ಕೋಮುವಾದಿ ಶಕ್ತಿಗಳು ಈ ಪ್ರತಿಭಟನೆಗಳಿಗೆ ಮಸಿಬಳಿಯಲು ಪ್ರಯತ್ನಿಸುತ್ತಿವೆ. ಈ ಪ್ರತಿಭಟನೆಗಳು ನಮ್ಮ ಪ್ರಜಾಪ್ರಭುತ್ವದ ಗಟ್ಟಿಯಾದ ಅಡಿಪಾಯವನ್ನು ಎತ್ತಿಹಿಡಿಯುತ್ತಿವೆ. ಈ ಆಂದೋಲನದ ಸ್ವಯಂಪ್ರೇರಣೆ ಮತ್ತು ಸ್ವಾಭಾವಿಕತೆಯೇ ಇದರ ಶಕ್ತಿಯಾಗಿವೆ. ಈ ಶಕ್ತಿಯನ್ನು ಭಾರತದ ಸಂವಿಧಾನವನ್ನು ಮತ್ತು ನಮ್ಮ ದೇಶದ ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿಹಿಡಿಯುವತ್ತ ಮುನ್ನೆಡಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ತಪ್ಪು ಮಾಡುವವರ ವಿರುದ್ಧ ಪ್ರತಿಭಟಿಸಲು ಇದ್ದರೆ ಅವರಿಗೆ ನಾವು ಮಾಡಿರುವುದು ತಪ್ಪು ಎಂದು ಜ್ಞಾನೋದಯ ವಾಗುವುದು ಆದರೂ ಹೇಗೆ

    ಪ್ರತಿಭಟಿಸುವುದಕ್ಕೆ ಇವರ ಅಪ್ಪಣೆ ತಾಳುವುದು ಎಂದು 70 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಸಂಸತ್ತಿನಲ್ಲಿ ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿ ಇಲ್ಲವೇ

    ಅಧಿಕಾರದ ಮದದಲ್ಲಿ ಬೀಗುತ್ತಿರುವ ಬಿಜೆಪಿಯವರಿಗೆ ಒಂದು ದಿನ ಜನರೇ ಸರಿಯಾದ ತೀರ್ಮಾನ ತೆಗೆದುಕೊಳ್ಳುವ ಕಾಲ ಹತ್ತಿರದಲ್ಲಿ ಸಮೀಪಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು
    ಮಾಜಿ ಪ್ರಧಾನಿ ಮನೋಹರ್ ಸಿಂಗ್ ಅವರ ಅವಧಿಯಲ್ಲಿ ಪ್ರತಿಭಟಿಸುವವರು ವಿರುದ್ಧ ಕಾನೂನು ರೂಪಿಸುವ ಕೆಲಸ ಮಾಡುವುದು ದೊಡ್ಡ ಸಾಧನೆಯೇನಲ್ಲ ಎಂಬುದು

    ಅವರಿಗೆ ಜನಸಾಮಾನ್ಯರ ಓರೆಕೋರೆಗಳ ತಿಳಿದು ಸರ್ವಾಧಿಕಾರವನ್ನು ನಡೆಸುವವನು ಅಧಿಕಾರದ ನಾಯಕತ್ವದ ಗುಣಗಳು ಅವರಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ
    ಸಂವಿಧಾನ ರೂಪಿಸಿ ಕೊಟ್ಟಂತಹ ಮಹಾತ್ಮರು ಅವತ್ತಿನ ದಿನವೇ ಈ ರೀತಿಯ ಜಾತಿಗೊಂದು ನೀತಿ ಸೃಷ್ಟಿಸಿದ್ದಾರೆ ಇವರುಗಳಿಗೆ ಉಳಿಗಾಲವೇ ಇರುತ್ತಿರಲಿಲ್ಲ ಎಂದರೆ ತಪ್ಪಾಗಲಾರದು
    ಜೈ ಭೀಮ್ ಜೈ ಸಂವಿಧಾನ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...