Homeಮುಖಪುಟಲೋಕಸಭಾ ಚುನಾವಣೆ ಮುಗಿದ ನಾಲ್ಕು ತಿಂಗಳಲ್ಲೇ ನಿಯಮ ಮೀರಿ ವಿವಿ ಪ್ಯಾಟ್‌ ಸ್ಲಿಪ್‌ಗಳ ನಾಶ: ಉತ್ತರ...

ಲೋಕಸಭಾ ಚುನಾವಣೆ ಮುಗಿದ ನಾಲ್ಕು ತಿಂಗಳಲ್ಲೇ ನಿಯಮ ಮೀರಿ ವಿವಿ ಪ್ಯಾಟ್‌ ಸ್ಲಿಪ್‌ಗಳ ನಾಶ: ಉತ್ತರ ಕೊಡದ ಚುನಾವಣಾ ಆಯೋಗ..!

ಚುನಾವಣಾ ಆಯೋಗವು ನಿಯಮಗಳನ್ನು ಏಕೆ ಪಾಲಿಸಲಿಲ್ಲ. ಕೇವಲ ನಾಲ್ಕು ತಿಂಗಳಲ್ಲಿ ವಿವಿಪಿಎಟಿ ಸ್ಲಿಪ್‌ಗಳನ್ನು ಏಕೆ ನಾಶಪಡಿಸಿತು? ಮತಯಂತ್ರ ಟ್ಯಾಂಪರ್‌ ಆಗಿರುವ ಪುರಾವೆಗಳನ್ನು ನಾಶ ಮಾಡಲು ಹೀಗೆ ಮಾಡಲಾಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

- Advertisement -
- Advertisement -

ಯಾವುದೇ ಚುನಾವಣೆಯಲ್ಲಿ ಬಳಸಿದ ಮುದ್ರಿತ ವಿವಿಪಿಎಟಿ ಸ್ಲಿಪ್‌ಗಳನ್ನು ಒಂದು ವರ್ಷದವರೆಗೆ ಉಳಿಸಿಕೊಂಡು ನಂತರ ನಾಶ ಮಾಡಬೇಕೆಂದು 1961ರ ಚುನಾವಣಾ ನಿಯಮಗಳ ನಿಯಮ 94 (ಬಿ) ಹೇಳುತ್ತದೆ. ಆದರೆ ಚುನಾವಣಾ ಆಯೋಗವು 2019ರ ಲೋಕಸಭಾ ಚುನಾವಣೆಯಲ್ಲಿ ಬಳಸಿದ ಮುದ್ರಿತ ವಿವಿಪಿಎಟಿ ಸ್ಲಿಪ್‌ಗಳನ್ನು ಈಗಾಗಲೇ ನಾಶಪಡಿಸಿದೆ. ಅದೂ ಸಹ 2019ರ ಮೇನಲ್ಲಿ ಫಲಿತಾಂಶಗಳನ್ನು ಘೋಷಿಸಿದ ನಾಲ್ಕು ತಿಂಗಳ ನಂತರ… ಯಾಕಿಷ್ಟು ಅವಸರ, ತರಾತುರಿ ಎಂಬ ಪ್ರಶ್ನೆ ಭುಗಿಲೆದ್ದಿದೆ.

ಇಂಗ್ಲಿಷ್‌ನ ಖ್ಯಾತ ವೆಬ್‌ ಪೋರ್ಟಲ್‌ ’ದಿ ಕ್ವಿಂಟ್‌’ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ದೆಹಲಿ ಚುನಾವಣಾ ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿ “ವಿವಿಪಿಎಟಿ ಸ್ಲಿಪ್‌ಗಳನ್ನು ವಿಲೇವಾರಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಆರ್‌ಟಿಐ ಉತ್ತರದೊಂದಿಗೆ ಲಗತ್ತಿಸಲಾದ ಮಾಹಿತಿಯಲ್ಲಿ ಚುನಾವಣಾ ಆಯೋಗವು 24 ಸೆಪ್ಟೆಂಬರ್ 2019ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ “ವಿವಿಪಿಎಟಿ ಮುದ್ರಿತ ಕಾಗದದ ಸ್ಲಿಪ್‌ಗಳನ್ನು ವಿಲೇವಾರಿ ಮಾಡಲು” ಆದೇಶಿಸಿದೆ.

ಚುನಾವಣೆ ಮುಗಿದ ನಾಲ್ಕು ತಿಂಗಳಲ್ಲಿಯೇ ವಿವಿಪಿಎಟಿ ಸ್ಲಿಪ್‌ಗಳನ್ನು ನಾಶಮಾಡುವ ಅವಸರ ಮತ್ತು ತುರ್ತು ಏಕೆ? ನೀವು ಮತ್ತು ನಾನು ಹೇಗೆ ಮತ ಚಲಾಯಿಸಿದ್ದೇವೆ ಎಂಬುದಕ್ಕೆ ನಿರ್ಣಾಯಕ ಸಾಕ್ಷಿಯಾಗಿರುವ ವಿವಿಪಿಎಟಿ ಸ್ಲಿಪ್‌ಗಳನ್ನು ಚುನಾವಣಾ ಆಯೋಗವು ಒಂದು ವರ್ಷದ ಅವಧಿಗೆ ಏಕೆ ಸಂಗ್ರಹಿಸಲು ಸಾಧ್ಯವಾಗಲಿಲ್ಲ?

ನೆನಪಿಡಿ, ನಾವು ಮತ ​​ಚಲಾಯಿಸಿದಾಗ, ನಮ್ಮ ಮತವು ನಮ್ಮ ಆಯ್ಕೆಯ ಅಭ್ಯರ್ಥಿಗೆ ಹೋಗಿದೆಯೇ ಎಂದು ವಿವಿಪಿಎಟಿ ಸ್ಲಿಪ್ ಪರಿಶೀಲಿಸುತ್ತದೆ. ವಿವಿಪಿಎಟಿ ಸ್ಲಿಪ್ ನಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರನ್ನು ತೋರಿಸದಿದ್ದರೆ, ವಿವಿಪಿಎಟಿ ಯಂತ್ರದ ಅಸಮರ್ಪಕ ಕಾರ್ಯದ ಬಗ್ಗೆ ನಾವು ತಕ್ಷಣ ಮತದಾನ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗೆ ತಿಳಿಸಿ ದೂರು ದಾಖಲಿಸಬಹುದು.

ಇಡೀ ಮತದಾನ ಪ್ರಕ್ರಿಯೆಯಲ್ಲಿ ಸಂಭವನೀಯ ರಿಗ್ಗಿಂಗ್‌, ಅಕ್ರಮ ಮತದಾನ, ದುರ್ಬಳಕೆ ನಡೆದಿದ್ದರೆ ಪತ್ತೆಹಚ್ಚಲು ವಿವಿಪಿಎಟಿ ಸ್ಲಿಪ್‌ಗಳು ಎಷ್ಟು ನಿರ್ಣಾಯಕವಾಗಿವೆ ಎಂಬುದರ ಬಗ್ಗೆ ಕ್ವಿಂಟ್ ಈ ಹಿಂದೆ ವರದಿ ಮಾಡಿತ್ತು.

ಪ್ರತಿ ಮತದಾನ ಕೇಂದ್ರದಲ್ಲಿ, ವಿವಿಪಿಎಟಿ ಯಂತ್ರವನ್ನು ಬ್ಯಾಲೆಟ್ ಘಟಕಕ್ಕೆ ಸಂಪರ್ಕಿಸಲಾಗಿರುತ್ತದೆ. ನಾವು ಮತ ​​ಚಲಾಯಿಸಿದಾಗ, ಅದನ್ನು ಮೊದಲು ವಿವಿಪಿಎಟಿ ಯಂತ್ರದಲ್ಲಿ ದಾಖಲಿಸಲಾಗುತ್ತದೆ, ಮತ್ತು ಅದರ ನಂತರವೇ ಅದು ಇವಿಎಂ ನಿಯಂತ್ರಣ ಘಟಕಕ್ಕೆ ಹೋಗುತ್ತದೆ.

ಪ್ರತಿ ಕ್ಷೇತ್ರಕ್ಕೂ ವಿವಿಪಿಎಟಿ ಯಂತ್ರಗಳನ್ನು ಗುರುತಿಸಿದ ನಂತರ, ಅವುಗಳನ್ನು ಎರಡು ವಾರಗಳವರೆಗೆ ಸರ್ಕಾರವು ತೊಡಗಿಸಿಕೊಂಡ ಖಾಸಗಿ ಎಂಜಿನಿಯರ್‌ಗಳು ಹೇಗೆ ಪರಿಶೀಲಿಸಿದರು, ನಿರ್ವಹಿಸುತ್ತಿದ್ದರು ಮತ್ತು ಪ್ರೋಗ್ರಾಮ್ ಮಾಡಿದರು, ಈ ಸಮಯದಲ್ಲಿ ವಿವಿಪಿಎಟಿ ಯಂತ್ರಗಳು ಟ್ಯಾಂಪರಿಂಗ್‌ಗೆ ಸ್ಪಷ್ಟವಾಗಿ ಗುರಿಯಾಗುತ್ತವೆ.

ಆದ್ದರಿಂದ, 2019 ರಲ್ಲಿ ಎಲ್ಲಾ ಇವಿಎಂ-ವಿವಿಪಿಎಟಿ ಯಂತ್ರಗಳನ್ನು ಹಾಳುಗೆಡವಿದ್ದರೆ, ಮತದಾರರು ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರನ್ನು ತೋರಿಸುವ ವಿವಿಪಿಎಟಿ ಸ್ಲಿಪ್ ಅಂತಹ ಯಾವುದೇ ಆರೋಪದ ಬಗ್ಗೆ ತನಿಖೆ ನಡೆಸುವಾಗ ನಿರ್ಣಾಯಕ ಸಾಕ್ಷಿಯಾಗಬಹುದು.

ಆದರೆ ಈಗ, ಈ ಆರ್‌ಟಿಐ ಉತ್ತರವು ಬಹಿರಂಗಪಡಿಸಿದಂತೆ, ಎಲ್ಲಾ ವಿವಿಪಿಎಟಿ ಸ್ಲಿಪ್‌ಗಳು ನಾಶವಾಗಿವೆ ಮತ್ತು ವಿವಿಪಿಎಟಿ ಸ್ಲಿಪ್‌ಗಳ ಬಗ್ಗೆ ಇರಬಹುದಾದ ಯಾವುದೇ ಸಂಭಾವ್ಯ ಅನುಮಾನಕ್ಕೂ ಪುರಾವೆಗಳು ಸಹ ನಾಶವಾಗಿವೆ.

ಮತ್ತು ನಾವು ಮೊದಲೇ ಸೂಚಿಸಿದಂತೆ ಅದು ಚುನಾವಣಾ ನಿಯಮಗಳಿಗೆ ವಿರುದ್ಧವಾಗಿದೆ.

ಯಾವುದೇ ಪ್ರಯೋಜನವಿಲ್ಲದಿದ್ದರೂ ಸಹ, ದಶಕಗಳಿಂದ ‘ಬಾಬುಡೊಮ್’ ದಾಖಲೆಗಳು ಮತ್ತು ಫೈಲ್‌ಗಳನ್ನು ಹಿಡಿದಿಟ್ಟುಕೊಂಡಿರುವ ದೇಶದಲ್ಲಿ, ವಿವಿಪಿಎಟಿ ಸ್ಲಿಪ್‌ಗಳನ್ನು ಇಷ್ಟು ತುರ್ತಾಗಿ ಏಕೆ ವಿಲೇವಾರಿ ಮಾಡಲಾಗಿದೆ ಎಂದರೆ ಆಶ್ಚರ್ಯವಾಗುವುದಿಲ್ಲವೇ?

ಕಾನೂನು ತಜ್ಞರು ಹೇಳುವಂತೆ, ಈ ವಿವಿಪಿಎಟಿ ಸ್ಲಿಪ್‌ಗಳನ್ನು ನಾಲ್ಕು ತಿಂಗಳಲ್ಲಿ ನಾಶಪಡಿಸಿರುವುದು ಚಿಂತೆಗೀಡುಮಾಡುವು ವಿಷಯವಾಗಿದೆ. ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗದ ಇಷ್ಟು ಅವಸರಕ್ಕೆ ಕಾರಣವೇನೆಂದು ವಿವರಿಸಬೇಕು. ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ, ಹಾಗೆ ಮಾಡಲು ಸರಿಯಾದ ಕಾರಣವಿದ್ದಲ್ಲಿ ಮಾತ್ರ ಚುನಾವಣಾ ಆಯೋಗ ವಿವಿಪಿಎಟಿ ಸ್ಲಿಪ್‌ಗಳನ್ನು ನಾಶಪಡಿಸುವ ಅಧಿಕಾರ ಹೊಂದಿದೆ. ಅಂತಹ ಸಕಾರಣವೇನೆಂದು ಅದು ವಿವರಿಸಬೇಕಿದೆ.

ಚುನಾವಣಾ ಆಯೋಗದ ಆರ್‌ಟಿಐ ಉತ್ತರವನ್ನು ನೋಡಿದ್ದೇವೆ. ಆದರೆ ಅದರಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ವಿವಿಪಿಎಟಿ ಸ್ಲಿಪ್‌ಗಳನ್ನು ಏಕೆ ವಿಲೇವಾರಿ ಮಾಡಲಾಗಿದೆ ಎಂಬುದನ್ನು ವಿವರಿಸಲು ಯಾವುದೇ ಸ್ಪಷ್ಟ ಕಾರಣ ಕಂಡುಬಂದಿಲ್ಲ.

ರಾಜಸ್ಥಾನ, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ಆಂಧ್ರಪ್ರದೇಶದಲ್ಲಿ ಇವಿಎಂ ಮತ್ತು ವಿವಿಪಿಎಟಿ ಮತ ಎಣಿಕೆಗಳ ನಡುವೆ ಕನಿಷ್ಠ ಎಂಟು ‘ಹೊಂದಿಕೆಯಾಗದ’ ಪ್ರಕರಣಗಳು ವರದಿಯಾಗಿವೆ ಎಂದು ಈ ಹಿಂದೆ ಕ್ವಿಂಟ್ ವರದಿ ಮಾಡಿತ್ತು.

ಈ ಪ್ರಕರಣಗಳ ವಿಚಾರಣೆಗೆ ಚುನಾವಣಾ ಆಯೋಗವು ಜುಲೈ 2019ರಲ್ಲಿ ಆದೇಶ ನೀಡಿತು. ನಡೆಸಿದ ವಿಚಾರಣೆಯ ಮಾಹಿತಿ ಕೋರಿ ಕ್ವಿಂಟ್ ಆರ್‌ಟಿಐ ಸಲ್ಲಿಸಿದರು. ಇಸಿ 2019 ರ ನವೆಂಬರ್‌ನಲ್ಲಿ ಉತ್ತರಿಸುತ್ತಾ, ಈ ವಿಷಯವು ಇಸಿಯ ತಾಂತ್ರಿಕ ತಜ್ಞರ ಸಮಿತಿಯ ಪರಿಗಣನೆಯಲ್ಲಿ ಇರುವುದರಿಂದ ಮಾಹಿತಿ ಲಭ್ಯವಿಲ್ಲ ಎಂದು ಹೇಳಿದೆ.

ಈಗ, ಈ ಎಂಟು ಪ್ರಕರಣಗಳಿಗೆ ಸಂಬಂಧಿಸಿದ ವಿವಿಪಿಎಟಿ ಸ್ಲಿಪ್‌ಗಳನ್ನು ಇಸಿ ವಿಲೇವಾರಿ ಮಾಡಿದೆಯೇ ಅಥವಾ ನಾಶಪಡಿಸಿದೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಸೆಪ್ಟೆಂಬರ್ 2019ರಿಂದ ಈ ಚುನಾವಣಾ ಆಯೋಗ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವಿವಿಪಿಎಟಿ ಸ್ಲಿಪ್‌ಗಳನ್ನು ವಿಲೇವಾರಿ ಮಾಡಲು ಆದೇಶಿಸಿದೆ…

ಇದು ಮತ್ತೊಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಈ ಎಂಟು ಪ್ರಕರಣಗಳಿಗೆ ಸಂಬಂಧಿಸಿದ ವಿವಿಪಿಎಟಿ ಸ್ಲಿಪ್‌ಗಳು ಸಹ ನಾಶವಾಗಿದ್ದರೆ, ಇವಿಎಂ ಮತ್ತು ವಿವಿಪಿಎಟಿ ಮತ ಎಣಿಕೆಗಳ ‘ಹೊಂದಾಣಿಕೆಯಾಗದ’ ಕುರಿತು ವಿಚಾರಣೆಯನ್ನು ಹೇಗೆ ನಡೆಸಬಹುದು?

ಹಾಗಾಗಿ, ನಾವು ಮತ್ತೆ ಕೇಳುತ್ತೇವೆ – ಚುನಾವಣಾ ಆಯೋಗವು ನಿಯಮಗಳನ್ನು ಏಕೆ ಪಾಲಿಸಲಿಲ್ಲ, ಮತ್ತು ಕೇವಲ ನಾಲ್ಕು ತಿಂಗಳಲ್ಲಿ ವಿವಿಪಿಎಟಿ ಸ್ಲಿಪ್‌ಗಳನ್ನು ಏಕೆ ನಾಶಪಡಿಸಿತು? ಮತಯಂತ್ರ ಟ್ಯಾಂಪರ್‌ ಆಗಿರುವ ಪುರಾವೆಗಳನ್ನು ನಾಶ ಮಾಡಲು ಹೀಗೆ ಮಾಡಲಾಗಿದೆ ಎಂದು ನಾವು ಹೇಳುವ ಧೈರ್ಯವಿದೆಯೇ?

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನ ಮಂತ್ರಿಯನ್ನು ನಿರ್ಧರಿಸುವ, ಭಾರತದ ಅತ್ಯಂತ ನಿರ್ಣಾಯಕ ಚುನಾವಣೆಗಳ ವಿವಿಪಿಎಟಿ ಸ್ಲಿಪ್‌ಗಳನ್ನು ಇಸಿ ಏಕೆ ಉಳಿಸಿಕೊಳ್ಳಲಿಲ್ಲ?

ಕ್ವಿಂಟ್ ತನ್ನ ಈ ಪ್ರಶ್ನೆಗಳೊಂದಿಗೆ ಭಾರತದ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ನಾವೀಗ ಚುನಾವಣಾ ಆಯೋಗದ ಸಮರ್ಪಕ ಉತ್ತರದ ನಿರೀಕ್ಷೆಯಲ್ಲಿದ್ದೇವೆ…

ಕೃಪೆ: ದಿ ಕ್ವಿಂಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಭಾರತೀಯ ಚುನಾವಣಾ ಆಯೋಗ, ಬಿಜೆಪಿಯ ಚುನಾವಣಾ ಏಜೆಂಟನಂತೆ ವರ್ತಿಸುತ್ತಿರುವುದಕ್ಕೆ ಈ ಪ್ರಕರಣ ಪ್ರಮುಖ ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here

- Advertisment -

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...