ಟೆಲಿಕಾಂ ಕಂಪೆನಿಗಳು ಎಜಿಆರ್ ಬಾಕಿ ಹಣವನ್ನು ವಾರ್ಷಿಕ ಕಂತುಗಳ ಆಧಾರದಲ್ಲಿ ಪಾವತಿಸಲು ಅನುಮೋದನೆ ಕೋರಿ ಮನವಿ ಸಲ್ಲಿಸಿದ್ದಕ್ಕಾಗಿ ಕೇಂದ್ರ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್ ಇದು “ಶುದ್ಧ ಅವಿಧೇಯತೆ” ಎಂದು ತೀವ್ರ ವಾಗ್ದಾಳಿ ನಡೆಸಿದೆ.
ಸರ್ಕಾರಿ ಇಲಾಖೆ ನಿರ್ಧರಿಸಿದ ಸ್ವ-ಮೌಲ್ಯಮಾಪನವು ನಮ್ಮ ಆದೇಶಗಳ ಉಲ್ಲಂಘನೆ ಮತ್ತು ಶುದ್ಧ ಅವಿಧೇಯತೆ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠ ಹೇಳಿದೆ.
ಟೆಲಿಕಾಂ ಕಂಪನಿಗಳು 20 ವರ್ಷಗಳಲ್ಲಿ ಹಣ ಮರುಪಾವತಿ ಮಾಡಲು ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನಮ್ಮನ್ನು ಮೂರ್ಖರು ಎಂದುಕೊಂಡಿದ್ದೀರಾ? ಇದು ನ್ಯಾಯಾಲಯದ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಎಂದು ನ್ಯಾಯಮೂರ್ತಿ ಮಿಶ್ರಾ ಹೇಳಿದರು.
ಸರ್ಕಾರವು ಕೇವಲ ಸಮಯ ವಿಸ್ತರಣೆಯನ್ನು ಬಯಸುತ್ತಿದೆ, ದಂಡವನ್ನು ಕಡಿಮೆ ಮಾಡುವಂತಿಲ್ಲ ಎಂದು ಮೆಹ್ತಾ ಸ್ಪಷ್ಟಪಡಿಸಲು ಪ್ರಯತ್ನಿಸಿದರು ಆದರೆ ನ್ಯಾಯಮೂರ್ತಿ ಮಿಶ್ರಾ ಅವರು ಎಜಿಆರ್ ಬಾಕಿ ಸಾರ್ವಜನಿಕ ಹಣ ಎಂದು ಹೇಳಿದರು. ವೊಡಾಫೋನ್ ಮತ್ತು ಹ್ಯೂಸ್ ಟೆಲಿಕಾಂ ಕಂಪೆನಿಯು ಮರು ಲೆಕ್ಕಾಚಾರ ಮತ್ತು ಕಂತುಗಳ ಪಾವತಿಯನ್ನು ಕೋರಿತು. ಆದರೆ ನ್ಯಾಯಾಲಯವು ತೀರ್ಪಿನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿ ಅವರ ಮನವಿಯನ್ನು ತಿರಸ್ಕರಿಸಿತು.
“ನಾವು ಬಯಸಿದರೆ ಟೆಲಿಕಾಂ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರನ್ನು ಜೈಲಿಗೆ ಕಳುಹಿಸಬಹುದು” ಎಂದು ನ್ಯಾಯಮೂರ್ತಿ ಮಿಶ್ರಾ ಹೇಳಿದರು. ಟೆಲಿಕಾಂ ಕಂಪನಿಗಳು ತೀರ್ಪಿನ ಪ್ರಕಾರ ದಂಡ ಮತ್ತು ಬಡ್ಡಿಯನ್ನು ಪಾವತಿಸಬೇಕು ಮತ್ತು ಮೂರು ವಾರಗಳ ನಂತರ ವಿಚಾರಣೆಯನ್ನು ಮುಂದೂಡಿದೆ ಎಂದು ಕೋರ್ಟ್ ಹೇಳಿದೆ.