ಮುಂಬೈನ ಲೋನವಾಲದಲ್ಲಿ ಇಂದು ಬೆಳಗ್ಗೆ 9.30ರ ಸಮಯದಲ್ಲಿ ಸ್ಥಳೀಯ ಶಿವಸೇನಾ ಘಟಕದ ಮಾಜಿ ಅಧ್ಯಕ್ಷನನ್ನು ದುಷ್ಕರ್ಮಿಗಳು ಗುಂಡು ಹೊಡೆದು, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಲೋನವಾಲದ ಶಿವಸೇನೆಯ ಘಟಕದ ಮಾಜಿ ಅಧ್ಯಕ್ಷ ರಾಹುಲ್ ಉಮೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಬೆಳಗ್ಗೆ 9.30ರ ಸುಮಾರಿನಲ್ಲಿ ಅಪರಿಚಿತರು ಸಮೀಪದಿಂದ ಗುಂಡು ಹಾರಿಸಿದ್ದಾರೆ ಮತ್ತು ಇರಿದಿದ್ದಾರೆ. ರಾಹುಲ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಪುಣೆ ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ದೇಶಮುಖ್ ಮಾತನಾಡಿ “ದುಷ್ಕರ್ಮಿಗಳು ರಾಹುಲ್ ಮೇಲೆ ಗುಂಡು ಹಾರಿಸಿದ್ದಾರೆ. ಮೂರು ಗುಂಡುಗಳ ರಾಹುಲ್ ದೇಹವನ್ನು ಹೊಕ್ಕಿವೆ. ಜೊತೆಗೆ ಹರಿತವಾದ ಆಯುಧದಿಂದ ರಾಹುಲ್ ದೇಹಕ್ಕೆ ಇರಿಯಲಾಗಿದೆ. ಆಯುಧದಿಂದ ತಿವಿದವನನ್ನು ಗುರುತಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿ ಟಿವಿಯ ದೃಶ್ಯಾವಳಿಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ದುಷ್ಕರ್ಮಿಗಳು ರಾಹುಲ್ (38) ಮೇಲೆ ದಾಳಿ ಮಾಡಿದ್ದಾರೆ. ಲೋನವಾಲದ ಜಯಚಂದ್ ಚೌಕಿಯಲ್ಲಿರುವ ರಾಹುಲ್ ಕಚೇರಿಯಲ್ಲಿ ಗುಂಡಿನ ದಾಳಿ ನಡೆಸಿರುವ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಇದೇ ಪ್ರದೇಶದ ಹನುಮಾನ್ ತೆಕ್ಡಿಯಲ್ಲಿ ನಿನ್ನೆ ಗಣೇಶ್ ನಾಯ್ಡು ಕೊಲೆಯಾಗಿದೆ. ಈ ಕೊಲೆಗೂ ರಾಹುಲ್ ಹತ್ಯೆಗೂ ಸಂಬಂಧ ಇರಬಹುದೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿವಸೇನೆಯ ಮುಖಂಡನ ಹತ್ಯೆ ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ.
ಇದನ್ನೂ ಓದಿ: ಗೋವಾದಲ್ಲಿ ಬೀಫ್ ಬ್ಯಾನ್ ಯಾಕಿಲ್ಲ, ಇದ ನಿಮ್ಮ ಹಿಂದುತ್ವ?: ಉದ್ಧವ್ ಠಾಕ್ರೆ ವಾಗ್ದಾಳಿ