ಇಬ್ಬರು ಎಬಿವಿಪಿ ಕಾರ್ಯಕರ್ತರಿಗೆ ಕ್ಷಮೆ ನೀಡುವಂತೆ ಆಗ್ರಹಿಸಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವಿ ಮಳಿಮಠ್ ಅವರಿಗೆ ಪತ್ರ ಬರೆದಿದ್ದು, ಎಬಿವಿಪಿ ಕಾರ್ಯಕರ್ತರು ನ್ಯಾಯಾಧೀಶರ ಕಾರಿನ ಕೀಯನ್ನು ಬಲವಂತವಾಗಿ ಕಸಿದು ಕೊಂಡು ಹೋಗಿರುವ ಘಟನೆಯನ್ನು ಉದ್ದೇಶಪೂರ್ವಕ ಘಟನೆಯಲ್ಲ ಎಂದು ಸಮರ್ಥಿಸಿದ್ದಾರೆ.
ಗ್ವಾಲಿಯರ್ನಲ್ಲಿ ಅಸ್ವಸ್ಥ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಇಬ್ಬರು ಎಬಿವಿಪಿ ಕಾರ್ಯಕರ್ತರು ನ್ಯಾಯಾಧೀಶರ ಕಾರನ್ನು ಬಲವಂತವಾಗಿ ಕೊಂಡೊಯ್ದಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಗ್ವಾಲಿಯರ್ ಕಾರ್ಯದರ್ಶಿ ಹಿಮಾಂಶು ಶ್ರೋತ್ರಿಯಾ (22) ಮತ್ತು ಉಪ ಕಾರ್ಯದರ್ಶಿ ಸುಕೃತ್ ಶರ್ಮಾ (24) ಅವರ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ಡಕಾಯಿತಿ ವಿರೋಧಿ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಪೊಲೀಸರು ಬಂಧಿಸಿದ್ದು, ಬುಧವಾರ ಜಾಮೀನು ತಿರಸ್ಕೃತಗೊಂಡಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಶುಕ್ರವಾರ ನ್ಯಾಯಮೂರ್ತಿ ಮಳಿಮಠ್ ಅವರಿಗೆ ಈ ಕುರಿತು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪತ್ರವನ್ನು ಬರೆದಿದ್ದು, ಇದು ಮಾನವೀಯ ನೆಲೆಯಲ್ಲಿ ಜೀವ ಉಳಿಸಲು ಮಾಡಿದ ವಿಭಿನ್ನ ರೀತಿಯ ಅಪರಾಧವಾಗಿರುವುದರಿಂದ ಕ್ಷಮಿಸಲು ಯೋಗ್ಯವಾಗಿದೆ. ಹಿಮಾಂಶು ಶ್ರೋತ್ರಿಯಾ ಮತ್ತು ಸುಕೃತ್ ಶರ್ಮಾ ಉದ್ದೇಶಪೂರ್ವಕವಾಗಿ ಅಪರಾಧ ಮಾಡಲಿಲ್ಲ, ಆದ್ದರಿಂದ ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಕ್ಷಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಆರೋಪಿಗಳಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ಡಕಾಯಿತಿ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂಜಯ್ ಗೋಯಲ್, ಸಭ್ಯತೆಯಿಂದ ಸಹಾಯವನ್ನು ಕೇಳಬೇಕು ಹೊರತು ಬಲವಂತದಿಂದಲ್ಲ ಎಂದು ಹೇಳಿದ್ದಾರೆ.
ಎಬಿವಿಪಿಯ ಮಧ್ಯಪ್ರದೇಶ ರಾಜ್ಯ ಘಟಕದ ಕಾರ್ಯದರ್ಶಿ ಸಂದೀಪ್ ವೈಷ್ಣವ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರೋಗಿಯ ಆರೋಗ್ಯ ಸ್ಥಿತಿ ಹದಗೆಡುತ್ತಿರುವಾಗ ಇವರು ಸಹಾಯ ಮಾಡಲು ಪ್ರಯತ್ನಿಸಿದ್ದಾರೆ. ಈ ಕಾರು ಹೈಕೋರ್ಟ್ ನ್ಯಾಯಾಧೀಶರದ್ದು ಎಂದು ಅವರಿಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಏನಿದು ಘಟನೆ?
ದೆಹಲಿಯಿಂದ ಗ್ವಾಲಿಯರ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಎಬಿವಿಪಿ ಕಾರ್ಯಕರ್ತರು ಪ್ರಯಾಣಿಕನೋರ್ವನ ಆರೋಗ್ಯ ಗಂಭೀರವಾಗಿದ್ದನ್ನು ಗಮನಿಸಿ ಅವರು ಗ್ವಾಲಿಯರ್ ವ್ಯಾಪ್ತಿಯ ಇತರ ಎಬಿವಿಪಿ ಕಾರ್ಯಕರ್ತರಿಗೆ ಮಾಹಿತಿಯನ್ನು ರವಾನಿಸಿದ್ದಾರೆ. ಕಾರ್ಯಕರ್ತರು ಅಸ್ವಸ್ಥ ವ್ಯಕ್ತಿಯನ್ನು ಗ್ವಾಲಿಯರ್ ನಿಲ್ದಾಣದಲ್ಲಿ ಇಳಿಸಿದ್ದು ಆಂಬ್ಯುಲೆನ್ಸ್ ಬರಲಿಲ್ಲ ಎಂದು ನಿಲ್ದಾಣದ ಹೊರಗೆ ನಿಲ್ಲಿಸಿದ್ದ ಹೈಕೋರ್ಟ್ ಜಡ್ಜ್ ಅವರ ಕಾರನ್ನು ಬಲವಂತವಾಗಿ ಕೀ ಕಸಿದುಕೊಂಡು ಹೋಗಿದ್ದರು.
ಗ್ವಾಲಿಯರ್ನ ಇಂದರ್ಗಂಜ್ ಸಿಟಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಜಾಡೋನ್ ಪ್ರಕಾರ, ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ ಖಾಸಗಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ರಂಜೀತ್ ಸಿಂಗ್ (68) ಅವರಿಗೆ ಹೃದಯಾಘಾತವಾಗಿತ್ತು. ಅವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದರು.
ಇದನ್ನು ಓದಿ: ಶುಕ್ರವಾರದ ನಮಾಝ್ಗೆ ನಿರಂತರ ಅವಕಾಶ ನಿರಾಕರಣೆ; ಕಣಿವೆ ರಾಜ್ಯದಲ್ಲಿ ಧಾರ್ಮಿಕ ಹಕ್ಕಿನ ಉಲ್ಲಂಘನೆ