ಸಂಸತ್ತಿನ ಭದ್ರತೆ ಉಲ್ಲಂಘಿಸಿ ಲೋಕಸಭೆ ಪ್ರವೇಶಿಸಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಜನ ಆರೋಪಿಗಳು, ಸದನಕ್ಕೆ ಜಿಗಿಯುವ ಬಗ್ಗೆ ನಿರ್ಧಾರ ಮಾಡುವುದಕ್ಕೂ ಮೊದಲು ಹಲವು ಸಾಧ್ಯತೆಗಳ ಕುರಿತು ಚರ್ಚಿಸಿದ್ದರು ಎನ್ನಲಾಗಿದೆ. ಸಂಸತ್ ಆವರಣದಲ್ಲಿ ತಮ್ಮನ್ನು ತಾವು ಸುಟ್ಟುಕೊಳ್ಳುವುದು ಹಾಗೂ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಕರಪತ್ರ ಹಂಚುವ ಯೋಜನೆ ಹಾಕಿಕೊಂಡಿದ್ದರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅಗ್ನಿಶಾಮಕ ಜೆಲ್ ಹಚ್ಚಿಕೊಳ್ಳುವ ಮೂಲಕ ತಮ್ಮ ದೇಹಕ್ಕೆ ತಾವು ಬೆಂಕಿ ಹಚ್ಚಿಕೊಳ್ಳುವ ಬಗ್ಗೆ ಚರ್ಚಿಸಿದ್ದರು. ನಂತರ, ಈ ನಿರ್ಧಾರದಿಂದ ಹಿಂದೆ ಸರಿದಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ನಂತರ. ಸಂಸತ್ ಒಳನುಗ್ಗಿದ ಸಾಗರ್ ಶರ್ಮಾ, ಮನೋರಂಜನ್ ಡಿ, ಅಮೋಲ್ ಶಿಂಧೆ, ನೀಲಂ ಮತ್ತು ಲಲಿತ್ ಮೋಹನ್ ಝಾ ಅವರು ಏಳು ಹೊಗೆ ಕ್ಯಾನ್ಗಳೊಂದಿಗೆ ಸಂಸತ್ ಆವರಣಕ್ಕೆ ಆಗಮಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಲೋಕಸಭೆಯ ಶೂನ್ಯ ವೇಳೆಯಲ್ಲಿ ಚರ್ಚೆ ನಡೆಯುವಾಗ, ಸಾರ್ವಜನಿಕ ಗ್ಯಾಲರಿಯಿಂದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಸದನಕ್ಕೆ ಜಿಗಿದಿದ್ದಾರೆ. ಸದನದ ಡಯಾಸ್ಗಳ ಮೇಲೆಲ್ಲಾ ಅಡ್ಡಾಡಿದ ಇಬ್ಬರೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಡಬ್ಬಿಗಳಿಂದ ಹಳದಿ ಹೊಗೆಯನ್ನು ಬಿಡುಗಡೆ ಮಾಡಿದರು.
ಅದೇ ಸಮಯದಲ್ಲಿ ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಇಬ್ಬರೂ ಸಂಸತ್ತಿನ ಹೊರಗಡೆ ಮಾಧ್ಯಮಗಳ ಎದುರು ಹಳದಿ ಹೊಗೆ ಸೂಸುವ ಕ್ಯಾನ್ ಸ್ಪೋಟಿಸಿ ‘ತನಾಶಾಹಿ ನಹೀ ಚಲೇಗಿ’ ಎಂದು ಘೋಷಣೆ ಕೂಗಿದರು. ಪ್ರಕರಣದ ಐದನೇ ಆರೋಪಿ ಲಲಿತ್ ಝಾ ಅವರು ಸಂಸತ್ ಕಟ್ಟಡದ ಹೊರಗೆ ನಡೆದ ಪ್ರತಿಭಟನೆಯ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೇರ ಪ್ರಸಾರ ಮಾಡಿದ್ದಾರೆ.
‘ಈ ಎಲ್ಲ ಯೋಜನೆಯನ್ನು ಅಂತಿಮಗೊಳಿಸುವ ಮೊದಲು (ಲೋಕಸಭಾ ಸದನಕ್ಕೆ ಜಿಗಿಯಲು), ಆರೋಪಿಗಳು ಸರ್ಕಾರಕ್ಕೆ ತಮ್ಮ ಸಂದೇಶವನ್ನು ಕಳುಹಿಸುವಲ್ಲಿ ‘ಪ್ರಭಾವ’ ಬೀರುವ ಕೆಲವು ಮಾರ್ಗಗಳನ್ನು ಅನ್ವೇಷಿಸಿದ್ದಾರೆ’ ಎಂದು ತಿಳಿದುಬಂದಿದೆ. ತಮ್ಮ ದೇಹಕ್ಕೆ ಅಗ್ನಿಶಾಮಕ ಜೆಲ್ ಹಚ್ಚಿಕೊಳ್ಳುವ ಮೂಲಕ ತಮ್ಮನ್ನು ತಾವು ಸುಟ್ಟುಕೊಳ್ಳುವ ಬಗ್ಗೆ ಅನ್ವೇಷಿಸಿದ್ದರು. ಅದರಿಂದ ಅಪಾಯ ಎದುರಾಗಬಹುದು ಎಂಬ ಕಾರಣಕ್ಕೆ ಆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಮತ್ತೊಂದು ಯೋಜನೆ ರೂಪಿಸಿದ್ದ ಯುವಕರ ತಂಡ, ಸಂಸತ್ತಿನ ಒಳಗೆ ಕರಪತ್ರಗಳನ್ನು ಹಂಚುವುದರ ಬಗ್ಗೆಯೂ ಚರ್ಚಿಸಿದ್ದಾರೆ. ಅಂತಿಮವಾಗಿ ಅವರು ಬುಧವಾರ ತಾವು ಕಾರ್ಯಗತಗೊಳಿಸಿದ ಯೋಜನೆಯನ್ನೇ ಎಲ್ಲರೂ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ; ಲೋಕಸಭೆ ಭದ್ರತಾ ಲೋಪ ಪ್ರಕರಣ: ‘ಸಂದೇಶ’ ರವಾನಿಸುವುದೆ ಏಕೈಕ ಉದ್ದೇಶವಾಗಿತ್ತಾ?