Homeಮುಖಪುಟತೆಲಂಗಾಣ ಚುನಾವಣಾ ಹೊಸ್ತಿಲಲ್ಲಿ ಕೆಸಿಆರ್‌ಗೆ ಆಘಾತ; ಬಿಆರ್‌ಎಸ್‌ನ 35 ನಾಯಕರು ಕಾಂಗ್ರೆಸ್ ಸೇರ್ಪಡೆಗೆ ಸಿದ್ದತೆ

ತೆಲಂಗಾಣ ಚುನಾವಣಾ ಹೊಸ್ತಿಲಲ್ಲಿ ಕೆಸಿಆರ್‌ಗೆ ಆಘಾತ; ಬಿಆರ್‌ಎಸ್‌ನ 35 ನಾಯಕರು ಕಾಂಗ್ರೆಸ್ ಸೇರ್ಪಡೆಗೆ ಸಿದ್ದತೆ

- Advertisement -
- Advertisement -

ತೆಲಂಗಾಣ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ರಾಜ್ಯದಲ್ಲಿ ಭಾರೀ ಬದಲಾವಣೆ ನಡೆಯುತ್ತಿದೆ. 35 ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕರು ಕಾಂಗ್ರೆಸ್ ಸೇರಲು ಸಿದ್ದರಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಮಧ್ಯೆ ಬಿಆರ್‌ಎಸ್ ನಾಯಕರು ಕೆಸಿಆರ್‌ಗೆ ಬಿಗ್‌ ಶಾಕ್ ನೀಡಿದ್ದಾರೆ.

ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ತೆಲಂಗಾಣ ಸರ್ಕಾರದ ಮಾಜಿ ಸಚಿವ ಜೂಪಲ್ಲಿ ಕೃಷ್ಣರಾವ್ ಸೇರಿದಂತೆ 35 ಬಿಆರ್‌ಎಸ್ ನಾಯಕರು ಕಾಂಗ್ರೆಸ್ ಸೇರಲಿದ್ದು ಸೋಮವಾರ ಪಕ್ಷದ ಉನ್ನತ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜುಲೈ ಮೊದಲ ವಾರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಉಪಸ್ಥಿತಿಯೊಂದಿಗೆ ತೆಲಂಗಾಣದ ಖಮ್ಮಮ್‌ನಲ್ಲಿ ನಡೆಯಲಿರುವ ಸಾರ್ವಜನಿಕ ರ್ಯಾಲಿಯಲ್ಲಿ ಬಿಆರ್‌ಎಸ್ ನಾಯಕರು ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರಲಿದ್ದಾರೆ. ರೆಡ್ಡಿ ಅವರು ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಖಮ್ಮಂನಿಂದ ಬಿಆರ್‌ಎಸ್ ಸಂಸದರಾಗಿದ್ದರು.

ಕಾಂಗ್ರೆಸ್ ಸೇರಲಿರುವ ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ಮಾಜಿ ಸಚಿವ ಜೂಪಲ್ಲಿ ಕೃಷ್ಣರಾವ್ ಅವರು ಸೋಮವಾರ ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದರು.

35 Bharat Rashtra Samithi leaders join Congress months ahead of Telangana polls

ಕಾಂಗ್ರೆಸ್ ನಾಯಕ ಪವನ್ ಖೇರಾ ಈ ಬೆಳವಣಿಗೆಯನ್ನು “ಬದಲಾವಣೆಯ ಗಾಳಿ” ಎಂದು ಬಣ್ಣಿಸಿದ್ದಾರೆ. ”ಈ ಬದಲಾವಣೆಯ ಗಾಳಿಯು ‘ಭಾರತ್ ಜೋಡೋ ಯಾತ್ರೆ’ಯಿಂದ ಪ್ರಾರಂಭವಾಯಿತು, ಅದರ ಪರಿಣಾಮವನ್ನು ನೀವು ಕರ್ನಾಟಕದಲ್ಲಿ ನೋಡಿದ್ದೀರಿ. ಇಂದು, ತೆಲಂಗಾಣದ ಹಲವು ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ ಮತ್ತು ಅವರೆಲ್ಲರೂ ಪಕ್ಷದ ಉನ್ನತ ನಾಯಕರನ್ನು ಭೇಟಿಯಾದ ನಂತರ ಸುದೀರ್ಘ ಮಾತುಕತೆ ನಡೆಸಿದ್ದಾರೆ” ಎಂದು ಖೇರಾ ಹೇಳಿದರು.

ಈ ಬೆಳವಣಿಗೆಯನ್ನು ಸ್ವಾಗತಿಸಿದ ರಾಹುಲ್ ಗಾಂಧಿ, ”ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ತನ್ನ ಯಶಸ್ಸನ್ನು ಮುಂದುವರೆಸುತ್ತದೆ” ಎಂದು ಹೇಳಿದರು.

”ಒಗ್ಗೂಡಿದ ಕಾಂಗ್ರೆಸ್ ಅನ್ನು ತಡೆಯಲಾಗದು” ಎಂದು ಗಾಂಧಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಕರ್ನಾಟಕದಲ್ಲಿ 224 ವಿಧಾನಸಭಾ ಸ್ಥಾನಗಳ ಪೈಕಿ 136 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿತ್ತು. ತೆಲಂಗಾಣದಲ್ಲಿ, 2014 ರಿಂದ ರಾಜ್ಯವನ್ನು ಆಳುತ್ತಿರುವ ಭಾರತ್ ರಾಷ್ಟ್ರ ಸಮಿತಿಯಿಂದ ಅಧಿಕಾರವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.

ಮೂಲಗಳ ಪ್ರಕಾರ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ಜೂಪಲ್ಲಿ ಕೃಷ್ಣರಾವ್ ಇಬ್ಬರೂ ತಮ್ಮ ಬೆಂಬಲಿಗರೊಂದಿಗೆ ಜುಲೈ ಮೊದಲ ವಾರದಲ್ಲಿ ಔಪಚಾರಿಕವಾಗಿ ಕಾಂಗ್ರೆಸ್ ಸೇರಲಿದ್ದಾರೆ. ಖಮ್ಮಂನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಲ್ಲೇ ಕಾಂಗ್ರೆಸ್ ಮುಖಂಡ ಭಟ್ಟಿ ವಿಕ್ರಮಾರ್ಕ ತಮ್ಮ ಪಾದಯಾತ್ರೆಯನ್ನು ಮುಕ್ತಾಯಗೊಳಿಸಲಿದ್ದಾರೆ. ಏಪ್ರಿಲ್‌ನಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ಜೂಪಲ್ಲಿ ಕೃಷ್ಣರಾವ್ ಅವರನ್ನು ಬಿಆರ್‌ಎಸ್‌ನಿಂದ ಅಮಾನತುಗೊಳಿಸಲಾಗಿತ್ತು. ಇದಾದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಇವರಿಬ್ಬರನ್ನು ಓಲೈಸಲು ಪ್ರಯತ್ನಿಸಿದ್ದವು. ಆದರೂ ಇಬ್ಬರೂ ಕಾಂಗ್ರೆಸ್ ಆಯ್ಕೆ ಮಾಡಿದ್ದಕ್ಕೆ ಅವರದ್ದೇ ಆದ ರಾಜಕೀಯ ಕಾರಣಗಳಿವೆ.

ಜೂಪಲ್ಲಿ ಕೃಷ್ಣರಾವ್ ಕೊಲ್ಲೂರಿನಿಂದ ಐದು ಬಾರಿ ಶಾಸಕರಾಗಿದ್ದು ಮಹೆಬೂಬ್‌ನಗರದಿಂದ ಮಾಜಿ ಸಚಿವರಾಗಿದ್ದಾರೆ, ಅಲ್ಲಿ ಅವರ ದೀರ್ಘಕಾಲದ ರಾಜಕೀಯ ಪ್ರತಿಸ್ಪರ್ಧಿ ಡಿಕೆ ಅರುಣಾ ರಾಜ್ಯ ಬಿಜೆಪಿಯಲ್ಲಿ ಉದಯೋನ್ಮುಖ ತಾರೆಯಾಗಿದ್ದಾರೆ. ಹಾಗಾಗಿ ಬಿಜೆಪಿಗೆ ಹೋಗುವುದು ಸೂಕ್ತವಲ್ಲ.

ಬಿಆರ್‌ಎಸ್ ದುರ್ಬಲವಾಗಿರುವ ಖಮ್ಮಂನಲ್ಲಿ ರೆಡ್ಡಿ ಪ್ರಬಲ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು 2014ರಲ್ಲಿ ವೈಎಸ್‌ಆರ್‌ಸಿಪಿ ಸಂಸದರಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಪಕ್ಷಕ್ಕೆ ಮೂರು ಎಂಎಲ್‌ಎ ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡಿದರು. ಆದರೆ 2018ರ ಚುನಾವಣೆಯಲ್ಲಿ ಸಚಿವ ಪುವ್ವಾಡ ಅಜಯ್ ಕುಮಾರ್ ಅವರನ್ನು ಸೋಲಿಸಲು ಅವರು ಕೆಲಸ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಇದಾದ ನಂತರ ಅವರಿಗೆ ಸಂಸದ ಟಿಕೆಟ್ ನಿರಾಕರಿಸಲಾಗಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಸುಳಿವು ನೀಡುತ್ತಿರುವ ಬಿಎಸ್‌ಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...