ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ವಿಶ್ವಸಂಸ್ಥೆಯಲ್ಲಿ ಜೋರ್ಡಾನ್ ದೇಶ ಮಂಡಿಸಿದ ನಾಗರಿಕರ ರಕ್ಷಣೆ ಮತ್ತು ಕದನ ವಿರಾಮದ ಕುರಿತ ನಿರ್ಣಯಕ್ಕೆ ಮತಚಲಾಯಿಸದೆ ದೂರ ಉಳಿದ ಭಾರತದ ನಿಲುವಿನ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಘಾತ ವ್ಯಕ್ತಪಡಿಸಿದ್ದಾರೆ.
ಪ್ಯಾಲೆಸ್ತೀನ್ನಲ್ಲಿ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ನಿರ್ನಾಮವಾಗುತ್ತಿರುವುದನ್ನು ಮೌನವಾಗಿ ನೋಡುವುದು ಭಾರತದ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಕದನ ವಿರಾಮ ಮತ್ತು ಗಾಝಾ ಪಟ್ಟಿಯ ಜನರಿಗೆ ಮಾನವೀಯ ನೆರವು, ನಾಗರಿಕರ ರಕ್ಷಣೆ , ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಗಳನ್ನು ಎತ್ತಿಹಿಡಿಯುವ ಶೀರ್ಷಿಕೆಯಡಿ ಜೋರ್ಡಾನ್ ದೇಶವು ಕರಡು ನಿರ್ಣಯವನ್ನು ಮಂಡಿಸಿತ್ತು. ಆದರೆ ಭಾರತ ಮತದಾನದಿಂದ ದೂರ ಉಳಿದಿತ್ತು.
193 ಸದಸ್ಯ ಬಲದ ಜನರಲ್ ಅಸೆಂಬ್ಲಿಯು ಬಹುಮತದಿಂದ ಜೋರ್ಡಾನ್ ದೇಶವು ಮಂಡಿಸಿದ ಕರಡು ಮಸೂದೆಯನ್ನು ಅಂಗೀಕರಿಸಿದೆ. ನಿರ್ಣಯದ ಪರವಾಗಿ 120 ರಾಷ್ಟ್ರಗಳು ಮತ ಚಲಾಯಿಸಿದೆ. ಅದರ ವಿರುದ್ಧ 14 ರಾಷ್ಟ್ರಗಳು ಮತಚಲಾಯಿಸಿದರೆ 45 ದೇಶಗಳು ಗೈರುಹಾಜರಾಗಿದ್ದವು. ಅದರಲ್ಲಿ ಭಾರತ, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್, ಉಕ್ರೇನ್ ಮತ್ತು ಯುಕೆ ದೇಶಗಳು ಸೇರಿದೆ.
ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಪ್ರಿಯಾಂಕಾ ಗಾಂಧಿಯವರು, ಮಹಾತ್ಮ ಗಾಂಧಿಯವರ ಕಣ್ಣಿಗೆ ಒಂದು ಕಣ್ಣು ಇಡೀ ಜಗತ್ತನ್ನು ಕುರುಡನನ್ನಾಗಿಸುತ್ತದೆ ಎಂಬ ವಾಕ್ಯವನ್ನು ಉಲ್ಲೇಖ ಮಾಡಿದ್ದಾರೆ.
ಗಾಝಾದಲ್ಲಿ ಕದನ ವಿರಾಮಕ್ಕೆ ನಮ್ಮ ದೇಶವು ಮತದಾನ ಮಾಡದೆ ದೂರ ಉಳಿದಿರುವುದಕ್ಕೆ ನನಗೆ ಆಘಾತವಾಗಿದೆ ಮತ್ತು ನಾಚಿಕೆಯಾಗಿದೆ. ನಮ್ಮ ದೇಶವು ಅಹಿಂಸೆ ಮತ್ತು ಸತ್ಯದ ತತ್ವಗಳ ಮೇಲೆ ಸ್ಥಾಪಿಸಲ್ಪಟ್ಟಿದೆ. ನಮ್ಮದು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಅರ್ಪಿಸಿದ ತತ್ವಗಳು, ಈ ತತ್ವಗಳು ನಮ್ಮ ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸುವ ಸಂವಿಧಾನದ ಆಧಾರವಾಗಿದೆ ಎಂದು ಹೇಳಿದ್ದಾರೆ.
ಪ್ಯಾಲೆಸ್ತೀನ್ನಲ್ಲಿ ಲಕ್ಷಾಂತರ ಜನರಿಗೆ ಆಹಾರ, ನೀರು, ವೈದ್ಯಕೀಯ ಸೇವೆ ಮತ್ತು ವಿದ್ಯುತ್ ಕಡಿತಗೊಂಡಿರುವಾಗ, ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ನಿರ್ನಾಮವಾಗುತ್ತಿರುವುದನ್ನು ಮೌನವಾಗಿ ವೀಕ್ಷಿಸುತ್ತಿರುವುದು ಮತ್ತು ಆ ಕುರಿತ ನಿಲುವಿಗೆ ವಿರುದ್ಧವಾಗಿರುವುದು ನಮ್ಮ ದೇಶವು ಈವರೆಗೆ ನಿಂತಿರುವ ಎಲ್ಲ ಆಶಯಕ್ಕೂ ವಿರುದ್ಧವಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಇದನ್ನು ಓದಿ: ಇಸ್ರೇಲ್- ಪ್ಯಾಲೆಸ್ತೀನ್ ಸಂಘರ್ಷ: UN ಜನರಲ್ ಅಸೆಂಬ್ಲಿಯಲ್ಲಿ ನಾಗರಿಕರ ರಕ್ಷಣೆಯ ಕುರಿತ ನಿರ್ಣಯ ಅಂಗೀಕಾರ: ದೂರ ಉಳಿದ ಭಾರತ