ಉತ್ತರಪ್ರದೇಶದ ಕಾನ್ಪುರದಲ್ಲಿ ಬೀದಿ ವ್ಯಾಪಾರಿಯೋರ್ವನಿಗೆ ಗುಂಪೊಂದು ಥಳಿಸಿ ಹತ್ಯೆ ಮಾಡಿದ್ದು, ಬಿಜೆಪಿ ‘ಆಡಳಿತ’ದಲ್ಲಿ ದೇಶಕ್ಕೆ ‘ಮಾಡಲ್ ರಾಜ್ಯ’ ಎಂದು ಬಿಂಬಿಸುತ್ತಿರುವ ಉತ್ತರಪ್ರದೇಶದಲ್ಲಿ ಕ್ರಿಮಿನಲ್ಗಳ ಅಟ್ಟಹಾಸ ಮುಂದುವರಿದಿದೆ.
40 ವರ್ಷದ ಪ್ರೇಮಚಂದ್ರ ನಿಶಾದ್ ಮೃತ ವ್ಯಾಪಾರಿ. ಉಚಿತವಾಗಿ ಪಾನಿ ಪೂರಿ ನೀಡಿಲ್ಲ ಎಂಬ ಕಾರಣಕ್ಕೆ ಈತನ ಮೇಲೆ ಗುಂಪೊಂದು ಗಂಭೀರವಾಗಿ ಹಲ್ಲೆ ನಡೆಸಿದ್ದು, ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಚಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವ್ಯಾಪಾರಿ ತನ್ನ ತಳ್ಳುಗಾಡಿಯೊಂದಿಗೆ ಮನೆಗೆ ತೆರಳುತ್ತಿರುವಾಗ ತಡೆದ ಗುಂಪು ಈ ಕೃತ್ಯವನ್ನು ಎಸಗಿದೆ. ಆರೋಪಿಗಳು ಸಫೀಪುರ ಬಳಿ ತಳ್ಳುಗಾಡಿಯನ್ನು ತಡೆದು ಪಾನಿಪುರಿ ನೀಡುವಂತೆ ಪ್ರೇಮಚಂದ್ರ ನಿಶಾದ್ ಕೇಳಿದ್ದಾರೆ. ಆತ ಪಾನಿಪುರಿ ಉಚಿತವಾಗಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಗ್ಯಾಂಗ್ ಆತನಿಗೆ ಥಳಿಸಿದೆ.
ಪ್ರೇಮಚಂದ್ರ ನಿಶಾದ್ ಪತ್ನಿ ಶಶಿ ದೇವಿ ಮತ್ತು ನಾಲ್ವರು ಮಕ್ಕಳೊಂದಿಗೆ ಕಾನ್ಪುರ ದೇಹತ್ನ ಮೂಸಾನಗರದಲ್ಲಿ ವಾಸಿಸುತ್ತಿದ್ದರು ಎಂದು ಹಿಂದೂಸ್ತಾನ್ ವರದಿ ಮಾಡಿದೆ. ಅವರು 15 ವರ್ಷಗಳಿಂದ ಸಫಿಪುರದಲ್ಲಿ ವಾಸಿಸುತ್ತಿದ್ದು, ಬೀದಿ ಬದಿ ಪಾನಿಪುರಿ ವ್ಯಾಪಾರ ಮಾಡಿ ಜೀವನವನ್ನು ಸಾಗಿಸುತ್ತಿದ್ದರು.
ವರದಿಗಳ ಪ್ರಕಾರ, ಹಲ್ಲೆಗೊಳಗಾದ ಪ್ರೇಮಚಂದ್ರ ನಿಶಾದ್ನನ್ನು ರಕ್ಷಿಸಿ ಅಲ್ಲಿದ್ದವರು ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿದ್ದ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳಿ ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಮೃತನ ಕುಟುಂಬಸ್ಥರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಕುಟುಂಬಸ್ಥರ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಚಕೇರಿ ಠಾಣೆಯ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ದುಬೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಮೃತನ ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತ ವರದಿ ಆಧಾರದಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನು ಓದಿ: ಎಲ್ಡಿಎಫ್ ಸರ್ಕಾರದ ಜನಪ್ರಿಯತೆ ಕಡಿಮೆ ಮಾಡಲು ಕೇಂದ್ರದಿಂದ ಪ್ರಯತ್ನ: ಸಿಪಿಐ(ಎಂ)