ಬಿಜೆಪಿ ಭಾರತಾದ್ಯಂತ ಭರ್ಜರಿ ಜಯ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಚೌಕಿದಾರ್ ರಾಮ್ಸಂಘಿ ಎಂಬಾತನಿಂದ ಬೇರೆ ರೀತಿಯ ಕೃತ್ಯ ನಡೆದಿದೆ. ಬಿಜೆಪಿ ಬಹುಮತ ಪಡೆದ ಭರಾಟೆಯಲ್ಲಿ ಮೋದಿ ಬೆಂಬಲಿಗನೊಬ್ಬ ನಿರ್ದೇಶಕ ಅನುರಾಗ್ ಕಶ್ಯಪ್ ಮಗಳಿಗೆ ಟ್ವಿಟ್ಟರ್ ನಲ್ಲಿ ಅತ್ಯಚಾರದ ಬೆದರಿಕೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದ್ದು, ವ್ಯಾಪಕ ಟೀಕೆಗೆ ಒಳಗಾಗಿದೆ.
ಎಲ್ಲರಿಗೂ ಗೊತ್ತಿರುವ ಹಾಗೆ ಬಿಜೆಪಿ ಬಹುದೊಡ್ಡ ವಿಜಯ ಸಾಧಿಸಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬಾಲಿವುಡ್ನ ಖ್ಯಾತನಾಮರೆಲ್ಲಾ ಅಭಿನಂದಿಸಿದ್ದಾರೆ. ಆದರೆ ನಿರ್ದೇಶಕ ಅನುರಾಗ್ ಕಶ್ಯಪ್ ಸಹ ಮೋದಿಯವರನ್ನು ಅಭಿನಂದಿಸುತ್ತಲೇ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಭಿನ್ನಮತದ ದನಿ ಎತ್ತುವುದನ್ನು ನಿಮ್ಮ ತಂದೆ ಮುಂದುವರೆಸಿದರೆ ನಿನ್ನ ಮೇಲೆ ಅತ್ಯಾಚಾರ ಮಾಡಬೇಕಾಗುತ್ತದೆ’ ಎಂದು ಚೌಕಿದಾರ್ ರಾಮ್ಸಂಘಿ ಎಂಬುವವನು ಟ್ವೀಟ್ ಮಾಡಿದ್ದಾನೆ. ಇದನ್ನು ಉಲ್ಲೇಖಿಸಿ ಅನುರಾಗ್ ಕಶ್ಯಪ್ರವರು ‘ಪ್ರಿಯ ನರೇಂದ್ರ ಮೋದಿ ಸರ್, ಗೆಲುವು ಸಾಧಿಸಿದ್ದಕ್ಕೆ ಮತ್ತು ದೇಶದ ಎಲ್ಲರನ್ನು ಒಳಗೊಳ್ಳಬೇಕೆನ್ನುವ ನಿಮ್ಮ ಸಂದೇಶಕ್ಕೆ ಧನ್ಯವಾದಗಳು. ಹಾಗೆಯೇ ನಾನು ನಿಮ್ಮ ಜೊತೆ ಭಿನ್ನಮತ ಹೊಂದಿರುವ ಕಾರಣಕ್ಕೆ, ನನ್ನ ಮಗಳ ಮೇಲೆ ಕೆಟ್ಟದಾಗಿ ಬೆದರಿಕೆ ಹಾಕುವ ಮೂಲಕ ವಿಜಯೋತ್ಸವ ಆಚರಿಸುವ ನಿಮ್ಮ ಬೆಂಬಲಿಗರ ಜೊತೆ ಹೇಗೆ ವ್ಯವಹರಿಸಬೇಕು ಎಂಬುದನ್ನು ತಿಳಿಸಿ” ಎಂದು ಟ್ವೀಟ್ ಮಾಡಿದ್ದಾರೆ.