ತಮಿಳುನಾಡಿನ ವಿಡುದಲೈ ಚಿರುದೈಗಳ್ ಕಚ್ಚಿ (ವಿಸಿಕೆ) ಪ್ರತಿ ವರ್ಷ ನೀಡುವ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗೆ ಕರ್ನಾಟಕ ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ಸಿದ್ದರಾಮಯ್ಯ ಅವರು, “ವಿಡುದಲೈ ಚಿರುದೈಗಳ್ ಪಕ್ಷ ನೀಡುವ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗೆ ಈ ಬಾರಿ ನನ್ನನ್ನು ಆಯ್ಕೆ ಮಾಡಿದ್ದು, ಅವರಿಗೆ ನನ್ನ ಧನ್ಯವಾದಗಳು. ಪಕ್ಷದ ಸಂಸದರಾದ ತಿರುಮಾವಲವನ್ ಅವರು ಇಂದು ನನ್ನನ್ನು ಭೇಟಿ ನೀಡಿ ಪ್ರಶಸ್ತಿ ಸ್ವೀಕರಿಸಲು ಜುಲೈ 30ರಂದು ಚೆನ್ನೈಗೆ ಆಗಮಿಸುವಂತೆ ಆಹ್ವಾನ ನೀಡಿದರು” ಎಂದು ತಿಳಿಸಿದ್ದಾರೆ.
ವಿಡುದಲೈ ಚಿರುದೈಗಳ್ ಪಕ್ಷವು (ಲಿಬರೇಶನ್ ಪ್ಯಾಂಥರ್ ಪಾರ್ಟಿ) ದಲಿತ ಪ್ಯಾಂಥರ್ಸ್ ಚಳವಳಿಯಿಂದ ಹುಟ್ಟಿಕೊಂಡಿತು. ಭಾರತದಲ್ಲಿನ ಅಸಮಾನತೆ ವಿರುದ್ಧ ಈ ಪಕ್ಷ ಹೋರಾಡುತ್ತಿದೆ. ಜಾತಿ ಆಧಾರಿತ ತಾರತಮ್ಯದ ವಿರುದ್ಧ ತಮಿಳುನಾಡಿನಲ್ಲಿ ಸಕ್ರಿಯವಾಗಿದೆ.
1970ರಲ್ಲಿ ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡ ದಲಿತ್ ಪ್ಯಾಂಥರ್ಸ್ ಆಫ್ ಇಂಡಿಯಾದಿಂದ ಪ್ರೇರೇಪಣೆಯಾಗಿ 1982ರಲ್ಲಿ ತಮಿಳುನಾಡಿನ ಮಧುರೈನಲ್ಲಿ ದಲಿತ ಪ್ಯಾಂಥರ್ಸ್ ರಚನೆಯಾಯಿತು. ಜಾತಿ ದೌರ್ಜನ್ಯಗಳಿಂದ ದಲಿತರ ರಕ್ಷಣೆ ಮಾಡುವಲ್ಲಿ ಸಕ್ರಿಯವಾಯಿತು. 1999 ರಲ್ಲಿ ವಿಸಿಕೆ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿತು. ಅಂದಿನಿಂದ ಎರಡು ದಶಕಗಳಲ್ಲಿ, ಪಕ್ಷವು ಹಲವಾರು ಏರಿಳಿತಗಳನ್ನು ಎದುರಿಸಿದೆ.
ವಿಸಿಕೆ ಈಗ ತನ್ನ ರಾಜಕೀಯ ಜೀವನದಲ್ಲಿ ಪರಿವರ್ತನೆಯ ಹಂತವನ್ನು ತಲುಪಿದೆ. ಇಬ್ಬರು ಸಂಸದರು ಮತ್ತು ನಾಲ್ವರು ಶಾಸಕರನ್ನು ಹೊಂದಿದೆ. ವಿಧಾನಸಭಾ ಚುನಾವಣೆಯಲ್ಲಿ ವಿಸಿಕೆ ಸ್ಪರ್ಧಿಸಿದ ಆರು ಸ್ಥಾನಗಳಲ್ಲಿ, ಎರಡು ಸಾಮಾನ್ಯ ಕ್ಷೇತ್ರಗಳನ್ನು ಒಳಗೊಂಡಂತೆ ನಾಲ್ಕು ಸ್ಥಾನಗಳಲ್ಲಿ ಗೆದ್ದಿದೆ.
ತಮಿಳುನಾಡಿನ ವಿಡುದಲೈ ಚಿರುದೈಗಳ್ (ವಿಸಿಕೆ) ಪಕ್ಷ ಪ್ರತಿ ವರ್ಷ ನೀಡುವ ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿಗೆ ಈ ಬಾರಿ ನನ್ನನ್ನು ಆಯ್ಕೆ ಮಾಡಿದ್ದು, ಅವರಿಗೆ ನನ್ನ ಧನ್ಯವಾದಗಳು. ಪಕ್ಷದ ಸಂಸದರಾದ ತಿರುಮಾವಲವನ್ ಅವರು ಇಂದು ನನ್ನನ್ನು ಭೇಟಿ ನೀಡಿ ಪ್ರಶಸ್ತಿ ಸ್ವೀಕರಿಸಲು ಜುಲೈ 30ರಂದು ಚೆನ್ನೈಗೆ ಆಗಮಿಸುವಂತೆ ಆಹ್ವಾನ ನೀಡಿದರು. pic.twitter.com/2wDvgZTKD5
— Siddaramaiah (@siddaramaiah) July 22, 2022
ಕಳೆದ ಕೆಲವು ವರ್ಷಗಳಿಂದ ಈ ಪಕ್ಷವು ಬಿಜೆಪಿಯ ಹಿಂದೂ ಬಹುಸಂಖ್ಯಾತ ರಾಜಕೀಯ, ಮನುಸ್ಮೃತಿಯ ಬ್ರಾಹ್ಮಣ ಪಿತೃಪ್ರಭುತ್ವ ಮತ್ತು ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ)ಯ ಅಸ್ಪಷ್ಟ ಜಾತಿವಾದದ ವಿರುದ್ಧ ಹೋರಾಡುವಲ್ಲಿ ವಿಸಿಕೆ ಮುಂಚೂಣಿಯಲ್ಲಿದೆ.
ವಿಸಿಕೆ ನಡೆಸಿದ ‘ಸೇವ್ ದಿ ನೇಷನ್’ ಸಮಾವೇಶಗಳಿಗೆ 80,000ಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಡಿಎಂಕೆಯು ಹಿಂದೂ ಬಹುಸಂಖ್ಯಾತ ರಾಜಕೀಯದ ವಿರುದ್ಧ ಮೃದುವಾದಾಗ, ವಿಸಿಕೆ ಹಿಂದುತ್ವ ವಿರೋಧಿ ರಾಜಕೀಯದ ಹೊಸ ಮುಖವಾಗಿ ಹೊರಹೊಮ್ಮಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಯ ಭಾಗವಾಗಿತ್ತು ಎಂದು ವರದಿಯಾಗಿದೆ.
ಇದನ್ನೂ ಓದಿ: ನಾವು ಬಿಜೆಪಿಯವರಂತೆ ಸಾವರ್ಕರ್ ಮಕ್ಕಳಲ್ಲ, ಜೈಲಿಗೆ ಭಯಪಡುವುದಿಲ್ಲ: ಕೇಜ್ರಿವಾಲ್