ನಾವು ಬಿಜೆಪಿಯವರಂತೆ ಸಾವರ್ಕರ್ ಮಕ್ಕಳಲ್ಲ, ಬದಲಿಗೆ ನಮ್ಮ ಇಡೀ ಪಕ್ಷ ಬ್ರಿಟಿಷರೆದುರು ನಡುಬಗ್ಗಿಸದೆ ನೇಣುಗಂಬಕ್ಕೆ ಕೊರಳೊಡ್ಡಿದ ವೀರ ಭಗತ್ಸಿಂಗ್ರವರ ಸಂತತಿ. ಹಾಗಾಗಿ ಜೈಲಿಗೆ ಹೋಗಲು ಹೆದರುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಮೇಲೆ ಲಿಕ್ಕರ್ ಟೆಂಡರ್ನಲ್ಲಿ ಅಕ್ರಮ ಆರೋಪದ ಮೇಲೆ ಲೆಫ್ಟಿನೆಂಟ್ ವಿನಯ್ ಕುಮಾರ್ ಸಕ್ಸೇನಾ ಸಿಬಿಐ ತನಿಖೆಗೆ ಆದೇಶಿಸಿರುವುದಕ್ಕೆ ಕೇಜ್ರಿವಾಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಲಿಕ್ಕರ್ ಮಾಫಿಯಾದ ಎಲ್ಲಾ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ನಿರಾಧಾರದಿಂದ ಕೂಡಿವೆ. ನಾನು ಬಹಳ ಹಿಂದಿನಿಂದಲೂ ಸಿಸೋಡಿಯರವರನ್ನು 22 ವರ್ಷಗಳಿಂದ ಹತ್ತಿರದಿಂದ ಬಲ್ಲೆ. ಅವರು ಕಡು ಪ್ರಾಮಾಣಿಕರು ಮತ್ತು ಶ್ರಮ ಜೀವಿಗಳು. ದೆಹಲಿಯ ಶಿಕ್ಷಣ ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೇರಿಸಿ ಶ್ಲಾಘನೆ ಪಡೆದಿದ್ದಾರೆ. ಹಾಗಾಗಿ ಜನ ನಮ್ಮ ಪಕ್ಷಕ್ಕೆ ಮತ ಹಾಕುತ್ತಿದ್ದಾರೆ. ಇದರಿಂದ ಹತಾಶೆಗೆ ಒಳಗಾಗಿರುವ ಕೇಂದ್ರ ಸರ್ಕಾರ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಕಿಡಿಕಾರಿದ್ದಾರೆ.
ಸಿಸೋಡಿಯ ಮೇಲಿನ ಆರೋಪಗಳಲ್ಲಿ ಎಳ್ಳಷ್ಟು ಸತ್ಯವಿಲ್ಲ. ಅದು ಶುದ್ದ ಸುಳ್ಳು ಕೇಸ್. ಆದರೂ ಸಿಬಿಐ ಅವರನ್ನು ಬಂಧಿಸಲು ಯತ್ನಿಸುತ್ತಿದೆ. ಆ ಮೂಲಕ ನಾವು ಕೆಲಸ ಮಾಡಲು ಕೇಂದ್ರ ಸರ್ಕಾರ ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಂಗಾಪುರ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಬಾರದೆಂಬ ರಾಜ್ಯದ ಲೆಫ್ಟಿನೆಂಟ್ ಗವರ್ನರ್ ಆಜ್ಞೆಯನ್ನು ಕೇಜ್ರಿವಾಲ್ ಉಲ್ಲಂಘಿಸಿದ ಬೆನ್ನಲ್ಲೆ ಅವರ ಪಕ್ಷದ ವಿರುದ್ದ ಲಿಕ್ಕರ್ ವಿಷಯಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶಿಸಲಾಗಿದೆ.
ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ನೇರವಾಗಿ ಹೆಸರಿಸಿರುವ ಲೆಫ್ಟಿನೆಂಟ್ ಗವರ್ನರ್, ವರದಿಯು ಉನ್ನತ ರಾಜಕೀಯ ಮಟ್ಟದಲ್ಲಿ “ಗಣನೀಯ” ಹಣಕಾಸಿನ ಅನುಕೂಲಗಳನ್ನು ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ.
“ವಿಶ್ವ ನಗರಗಳ ಶೃಂಗಸಭೆ”ಗಾಗಿ ಕೇಜ್ರಿವಾಲ್ ಅವರನ್ನು ಸಿಂಗಾಪುರದ ಹೈ ಕಮಿಷನರ್ ಸೈಮನ್ ವಾಂಗ್ ಅವರು ಆಹ್ವಾನಿಸಿದ್ದರು. ಅವರು ಆಗಸ್ಟ್ 1 ರಂದು ನಡೆಯುವ ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಆದರೆ ಆ ಕಾರ್ಯಕ್ರಮ ಮೇಯರ್ಗಳದ್ದಾಗಿದ್ದು, ಮುಖ್ಯಮಂತ್ರಿಗಳು ಅದಕ್ಕೆ ಹೋಗಬಾರದು ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಈ ವಾದವೆ ಸರಿಯೆಂದಾದರೆ, ಪ್ರಧಾನಿ ಮೋದಿ ಅವರು ಕೂಡ ಎಲ್ಲಿಗೂ ಹೋಗಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿ ಸಭೆಗೆ ಹೋಗುವುದಾಗಿ ಘೋಷಿಸಿದ್ದಾರೆ.
ದೆಹಲಿ ಮಾದರಿ ಕುರಿತು ಸಿಂಗಾಪುರ್ನಲ್ಲಿ ನಾನು ಮಾತನಾಡಲಿದ್ದೇನೆ. ಇದನ್ನು ತಡೆಯುವ ಸಲುವಾಗಿ ವಿನಾಕಾರಣ ತಡೆ ನೀಡಲಾಗುತ್ತಿದೆ ಎಂದು ಕೇಜ್ರಿವಾಲ್ ದೂರಿದ್ದರು.
2019 ರಲ್ಲಿ, ಮೇಯರ್ಗಳಿಗೆ ಮೀಸಲಾದ ಸಭೆಯಲ್ಲಿ ಮುಖ್ಯಮಂತ್ರಿ ಭಾಗವಹಿಸುವುದು ಯೋಗ್ಯವಲ್ಲ ಎಂದು ಹೇಳುವ ಮೂಲಕ ಒಕ್ಕೂಟ ಸರ್ಕಾರವೂ ಕೇಜ್ರಿವಾಲ್ಗೆ ಇದೇ ರೀತಿಯ ಭೇಟಿಗೆ ಅನುಮತಿಯನ್ನು ತಡೆಹಿಡಿದಿತ್ತು. ಅಂತಿಮವಾಗಿ ಕೇಜ್ರಿವಾಲ್ ಅವರು ಆನ್ಲೈನ್ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಾಯಿತು.
ಇದನ್ನೂ ಓದಿ: ತನ್ನ ಆಜ್ಞೆ ಉಲ್ಲಂಘಿಸಿದ ಕೇಜ್ರಿವಾಲ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ ದೆಹಲಿ ಲೆಫ್ಟಿನೆಂಟ್ ಗವರ್ನರ್